ಶಿವಪುರಿ: ಎರಡು ತಿಂಗಳ ಸತತ ಪ್ರಯತ್ನದ ನಂತರ ಮಾಹಿತಿ ಹಕ್ಕು(ಆರ್ಟಿಐ) ಕಾರ್ಯಕರ್ತ ಮಖಾನ್ ಧಕಡ್ ಅವರು 9,000 ಪುಟಗಳ ಮಾಹಿತಿಯನ್ನು ಡೋಲಿನ ಸದ್ದು ಸಂಭ್ರಮದೊಂದಿಗೆ ಎತ್ತಿನ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೈರಾಡ್ ನಗರದ ನಿವಾಸಿಯಾಗಿರುವ ಮಖಾನ್ ಅವರು, ಆರ್ಟಿಐ ಅಡಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಮಾಹಿತಿ ಬಯಸಿದ್ದರು. ಆದರೆ ಮಾಹಿತಿ ಕೊಡದ ಸ್ಥಳೀಯಾಡಳಿತ, 25 ಸಾವಿರ ರೂ.ಗಳನ್ನು ಪಾವತಿಸುವಂತೆ ಸೂಚಿಸಿತ್ತು.
ತಮ್ಮ ಸ್ನೇಹಿತರು, ಪರಿಚಯಸ್ಥರಿಂದ ಸಾಲ ಮಾಡಿ 25,000 ರೂ.ಗಳನ್ನು ಅವರು ಪಾವತಿಸಿದ್ದರು. ಆದರೆ ಎರಡು ತಿಂಗಳಾದರೂ ಅವರಿಗೆ ಮಾಹಿತಿ ಸಿಕ್ಕಿರಲಿಲ್ಲ.
ನಂತರ ಅವರು ಈ ಬಗ್ಗೆ ಗ್ವಾಲಿಯರ್ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಳಿಕ ಅವರ ಸೂಚನೆಯಂತೆ 9,000 ಪುಟಗಳ ಮಾಹಿತಿಯನ್ನು ಮಖಾನ್ ಅವರಿಗೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಈ ದೊಡ್ಡ ಸಂಖ್ಯೆಯ ಪುಟಗಳನ್ನು ಒಯ್ಯಲೆಂದು ಅವರು ಎತ್ತಿನ ಗಾಡಿಯನ್ನೇ ತಂದಿದ್ದಾರೆ.
ಜತೆಗೆ, ಮಾಹಿತಿ ಸಿಕ್ಕ ಖುಷಿಯನ್ನು ಸಂಭ್ರಮಿಸಲು ಡೋಲಿನೊಂದಿಗೆ ಆಗಮಿಸಿದ್ದಾರೆ. ಮಾಹಿತಿಯ ಪುಟಗಳನ್ನು ಎಣಿಸಲು ನನಗೆ ಮತ್ತು ನನ್ನ ನಾಲ್ವರು ಗೆಳೆಯರಿಗೆ 2 ಗಂಟೆಗಳು ಬೇಕಾದವು ಎಂದೂ ಅವರು ಹೇಳಿದ್ದಾರೆ.