ಹೊಸದಿಲ್ಲಿ : ನಾಳೆ ಬುಧವಾರ ಜೂನ್ 12ರಂದು ಗುಜರಾತ್ ಕರಾವಳಿಗೆ ಅಪ್ಪಳಿಸುವ ‘ವಾಯು’ ಚಂಡಮಾರುತದ ಪರಿಣಾಮವಾಗಿ ದೇಶದಲ್ಲಿ ಮುಂಗಾರು ಮಳೆ ನೆಲೆಗೊಳ್ಳುವುದು ಇನ್ನಷ್ಟು ವಿಳಂಬಗೊಳ್ಳಲಿದೆ.
ಚಂಡಮಾರುತದಿಂದ ಆಗಬಹುದಾದ ನಾಶ ನಷ್ಟ, ಹಾನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗುಜರಾತ್ ಸರಕಾರ ಈಗಾಗಲೇ ಕಟ್ಟೆಚ್ಚರ ಘೋಷಿಸಿದೆ ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಸಾಮಾನ್ಯವಾಗಿ ಜೂನ್ 15ರ ವೇಳೆಗೆ ದೇಶದಲ್ಲಿ ಮುಂಗಾರು ಮಳೆ ನೆಲೆಗೊಳ್ಳುವುದು ವಾಡಿಕೆ. ಆದರೆ ‘ವಾಯು’ ಚಂಡಮಾರುತದ ಪರಿಣಾಮವಾಗಿ ಮುಂಗಾರು ಮಳೆ ನೆಲೆಗೊಳ್ಳುವುದು, ಮುನ್ನಡೆ ಸಾಧಿಸುವುದು, ದೇಶವ್ಯಾಪಿಯಾಗುವುದೇ ಮೊದಲಾದ ಪ್ರಕ್ರಿಯೆಗಳು ವಿಳಂಬವಾಗಲಿದೆ. ಮುಂಗಾರು ಮಳೆ ಈಗಾಗಲೇ ಒಂದು ವಾರ ತಡವಾಗಿ ಕೇರಳ ಪ್ರವೇಶಿಸಿದೆ.
ಭಾರತೀಯ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ವಾಯು ಚಂಡಮಾರುತ ಸೋಮವಾರ ರಾತ್ರಿ 11.30ರ ವೇಳೆಗೆ ಮುಂಬಯಿಯಿಂದ 630 ಕಿ.ಮೀ. ದಕ್ಷಿಣ ನೈಋತ್ಯದಲ್ಲಿ ಸ್ಥಿತವಾಗಿದೆ.
ವಾಯು ಚಂಡಮಾರುತ ಗುಜರಾತ್ ಕರಾವಳಿಗೆ ಅಪ್ಪಳಿಸುವ ಹೊತ್ತಿಗೆ ಅದು ತೀವ್ರ ಸ್ವರೂಪವನ್ನು ಪಡೆಯಲಿದೆ. ಅದು ಉತ್ತರಾಭಿಮುಖವಾಗಿ ಗುಜರಾತ್ ಕರಾವಳಿಯನ್ನು ದಾಟಲಿದೆ.
ಹಾಗೆ ಮುನ್ನುಗ್ಗುವ ತನ್ನ ಪಥದಲ್ಲಿ ಅದು ಪೋರಬಂದರ್, ಮಹಉವಾ, ವೆರಾವಲ್ ಮತ್ತು ದೀವ್ ಮೂಲಕ ಸಾಗುವಾಗ ತೀವ್ರತಮ ಚಂಡಮಾರುತವಾಗಿ ಗಂಟೆಗೆ 110 ರಿಂದ 120 ಕಿ.ಮೀ ವೇಗವನ್ನು ಪಡೆದುಕೊಂಡು ಜೂನ್ 13ರ ನಸುಕಿನ ವೇಳಗೆ 135 ಕಿ.ಮೀ. ವೇಗದಲ್ಲಿ ಮುನ್ನುಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.