Advertisement

ಬುಲೆಟ್ ರೈಲಿಗೆ ಹಣವಿದೆ, ಮೇಲ್ಸೇತುವೆ ರಿಪೇರಿಗೆ ಹಣವಿಲ್ವಾ?ಶಿವಸೇನಾ

08:59 PM Sep 29, 2017 | Team Udayavani |

ಮುಂಬೈ: ಮುಂಬಯಿಯ ಎಲ್ಫಿನ್ ಸ್ಟನ್ ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದ ಪ್ರಕರಣದಲ್ಲಿ 22ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮೈತ್ರಿಕೂಟದ ಶಿವಸೇನಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

Advertisement

ಬಡಪ್ರಯಾಣಿಕರು ಉಪಯೋಗಿಸುವ ಸೇತುವೆಗಾಗಿ ವಿನಿಯೋಗಿಸಲು ಕೇಂದ್ರ ಸರ್ಕಾರದ ಬಳಿ ಹಣ ಇಲ್ಲ, ಆದರೆ ಬುಲೆಟ್ ರೈಲುಗಳಿಗಾಗಿ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂಪಾಯಿ ಕೊಡುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಶಿವಸೇನಾ ಸಂಸದ ಸಂಜಯ್ ರಾವತ್ ಪ್ರತಿಕ್ರಿಯೆ ನೀಡುತ್ತಾ, ಮೇಲ್ಸೇತುವೆ ದುರಸ್ತಿಗಾಗಿ ಶಿವಸೇನಾ ಮುಖಂಡರು ರೈಲ್ವೆ ಸಚಿವಾಲಯಕ್ಕೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು. ನಮ್ಮ ಸಂಸದರು ಎಷ್ಟು ಬಾರಿ ರೈಲ್ವೆ ಸಚಿವಾಲಯಕ್ಕೆ ಹೋಗಿಲ್ಲ, ನಿಮ್ಮ ಬಳಿ ಬುಲೆಟ್ ರೈಲುಗಳಿಗೆ ಕೊಡಲು ಹಣವಿದೆ, ಆದರೆ ಮೇಲ್ಸೇತುವೆ ರಿಪೇರಿ ಮಾಡಲು ಹಣವಿಲ್ಲ ಎಂದು ಹೇಳಿದರು.

ಎಡೆಬಿಡದೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಹಾಗೂ ಸೇತುವೆ ಕುಸಿಯುತ್ತಿದೆ ಎಂಬ ವದಂತಿಯಿಂದಾಗಿ ಶುಕ್ರವಾರ ಬೆಳಗ್ಗೆ ಎಲ್ಫಿನ್ ಸ್ಟನ್ ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 22ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next