Advertisement

ಮಾದರಿಯಾದ ಹಸಿದವರತ್ತ ನಮ್ಮ ಚಿತ್ತ ಅಭಿಯಾನ

04:09 PM Apr 30, 2020 | Suhan S |

ಬೆಳಗಾವಿ:  ಕೋವಿಡ್ 19 ವೈರಸ್‌ ಎಲ್ಲ ಕಡೆ ದಿನೇ ದಿನೇ ಅತಂಕ ಸೃಷ್ಟಿಮಾಡುತ್ತಲೇ ಇದ್ದರೆ ವೈರಸ್‌ ಹಾವಳಿ ನಿಯಂತ್ರಿಸಬೇಕು ಎಂದು ಜಾರಿ ಮಾಡಲಾಗಿರುವ ಲಾಕ್‌ ಡೌನ್‌ ಆದೇಶ ಹಲವಾರು ಸಮಸ್ಯೆಗಳನ್ನು ತಂದಿಟ್ಟಿದೆ. ಇದು ಯಾವ ವರ್ಗವನ್ನೂ ಬಿಟ್ಟಿಲ್ಲ. ಆದರೆ ಇದರ ಮಧ್ಯೆ ಸದ್ದಿಲ್ಲದೆ ನಡೆದಿರುವ ಸಾಮಾಜಿಕ ಕಾರ್ಯಗಳು ಸಮಾಜ ಸೇವೆಗೊಂದು ಹೊಸ ವ್ಯಾಖ್ಯಾನ ಬರೆದಿವೆ.

Advertisement

ಇದಕ್ಕೆ ಬೆಳಗಾವಿ ಜಿಲ್ಲೆಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮಠಾಧೀಶರು ಹಾಗೂ ದಾನಿಗಳ ನೈತಿಕ ಬಲದಿಂದ ಹಮ್ಮಿಕೊಂಡಿರುವ ನಮ್ಮ ಚಿತ್ತ ಹಸಿದವರತ್ತ ಅಭಿಯಾನವೇ ಸಾಕ್ಷಿ. ಕೋವಿಡ್ 19  ವೈರಸ್‌ ಹಿನ್ನಲೆಯಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗಿರುವ ಈ ತಂಡದ ನೆರವಿನ ಅಭಿಯಾನ ಒಂದು ತಿಂಗಳು ಯಶಸ್ವಿಯಾಗಿ ಪೂರೈಸಿದೆ. ಜಿಲ್ಲೆಯಲ್ಲಿ ಕಷ್ಟದಲ್ಲಿರುವ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ನೀಡಿ ಧನ್ಯವಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಸಮಿತಿಯ ಉತ್ಸಾಹಿ ಸದಸ್ಯರು ಯಾವುದೆ ಜಾತಿ, ವರ್ಗ, ಭಾಷೆಯ ಬೇಧ ಎಣಿಸದೆ ನೆರವಿನ ಹಸ್ತ ಚಾಚಿದೆ. ಲಾಕ್‌ಡೌನ್‌ದಿಂದಾಗಿ ಎಲ್ಲ ಕಡೆಗಳಿಂದಲೂ ಅಸಹಾಯಕರಾಗಿರುವ ದುರ್ಬಲ ವರ್ಗದ ಜನರನ್ನು ಈ ಸಮಿತಿ ಮುಟ್ಟಿದೆ. ಕೋವಿಡ್ 19 ವೈರಸ್‌ ಭೀತಿ ಇದ್ದರೂ ಸಮಾಜ ಸೇವೆಗೆ ಇದು ಅಡ್ಡಿಮಾಡಿಲ್ಲ. 1991ರಲ್ಲಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಾಡು,ನುಡಿ, ಗಡಿ ಹಿತಾಸಕ್ತಿಗೆ ಸಂಬಂಧಿಸಿದ ನೂರಾರು ಹೋರಾಟಗಳನ್ನು ಮಾಡುತ್ತ ಅನೇಕ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಶ್ರಮಿಸಿದೆ. ನೆರೆ ಹಾವಳಿ, ಬರಗಾಲ ಮತ್ತಿತರ ನೈಸರ್ಗಿಕ ವಿಕೋಪದ ಕಾಲಕ್ಕೂ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತ ಬಂದಿದೆ.

ಹೋರಾಟದ ಜೊತೆಗೆ ಸಮಾಜ ಸೇವೆಯನ್ನು ತನ್ನ ಮುಖ್ಯ ಕಾಯಕವನ್ನಾಗಿ ಮಾಡಿಕೊಂಡಿರುವ ಕ್ರಿಯಾ ಸಮಿತಿಯ ಸದಸ್ಯರು ಬೆಳಗಾವಿಯ ಕಿಲ್ಲಾ ಕೆರೆಯ ಬಳಿ ಒರಳು, ಬೀಸುವ ಕಲ್ಲುಗಳನ್ನು ಕಟೆಯುವ 20 ಗುಡಿಸಲುವಾಸಿಗಳ ಕಷ್ಟಕ್ಕೆ ಧಾವಿಸಿ ಅವರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಕೋವಿಡ್ 19  ವೈರಸ್‌ ಹಾವಳಿ ವಿರುದ್ಧ ಹೋರಾಡಲು ಮುಂದಾಯಿತು.

ಕ್ರಿಯಾ ಸಮಿತಿಯ ಸಮಾಜ ಕಾರ್ಯಕ್ಕೆ ಬೆಳಗಾವಿಯ ಎರಡು ಪ್ರತಿಷ್ಠಿತ ಮಠಗಳಾದ ನಾಗನೂರು ರುದ್ರಾಕ್ಷಿ ಮಠ ಮತ್ತು ಹುಕ್ಕೇರಿ ಹಿರೇಮಠ ಬೆಂಬಲವಾಗಿ ನಿಂತವು. ನಾಗನೂರು ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹಾಗೂ ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿ ಅವರು ನೈತಿಕ ಸ್ಥೈರ್ಯ ತುಂಬಿದರು. ನಂತರ ಹಸಿದವರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ಕೆ ದಾನಿಗಳೂ ಮುಂದೆ ಬಂದರು. ದಾನಿಗಳಿಂದ ಆಹಾರ ಧಾನ್ಯ ಸಂಗ್ರಹವಾಗುತ್ತಿದ್ದಂತೆ ತೀವ್ರ ತೊಂದರೆಯಲ್ಲಿರುವ ಮನೆ ಮನೆಗಳಿಗೆ ಈ ಕಿಟ್‌ಗಳು ತಲುಪಿದವು.ಕ್ರಿಯಾ ಸಮಿತಿ ಮುಖ್ಯವಾಗಿ ಆಯ್ಕೆ ಮಾಡಿಕೊಂಡಿದ್ದು ಬಡಕುಟುಂಬಗಳು, ಆಲೆಮಾರಿ ಗುಡಿಸಲು ವಾಸಿಗಳು, ದುರ್ಗಮುರ್ಗಿ, ಸುಡುಗಾಡು ಸಿದ್ಧರು, ಲಂಬಾಣಿ ತಾಂಡಾಗಳ ಕೂಲಿಕಾರರು. ಬೆಳಗಾವಿ ನಗರಕ್ಕೆ ಕೆಲಸಕ್ಕೆ ಬಂದಿರುವ ಇವರ ಬಿಪಿಎಲ್‌ ಕಾರ್ಡುಗಳು ಅವರ ಸ್ವಂತ ಊರಿನಲ್ಲಿವೆ. ಲಾಕ್‌ಡೌನ್‌ ಇರುವದರಿಂದ ಅಲ್ಲಿಗೆ ಹೋಗುವಂತಿಲ್ಲ. ಹೋದರೂ ಗ್ರಾಮದ ಒಳಗೆ ಬಿಡುವುದಿಲ್ಲ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಅನೇಕ ಲಂಬಾಣಿ ತಾಂಡಾಗಳಿಂದ ಬೆಳಗಾವಿಗೆ ದುಡಿಯಲು ಬಂದಿರುವ ನೂರಾರು ಪುರುಷರು, ಮಹಿಳೆಯರು, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ಸಮಿತಿ ಸ್ಪಂದಿಸಿದೆ.

Advertisement

ಶಾಹೂನಗರ, ಅಜಮ್‌ ನಗರ ಮತ್ತು ನೆಹರೂ ನಗರ, ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದು ಈಗ ಯಾವುದೇ ಕೆಲಸವಿಲ್ಲ. ಕೈಗೆ ಸಂಬಳವಿಲ್ಲ. ಮನೆ ನಡೆಸಲು ಕಾಳು, ಕಡಿ ಇಲ್ಲ. ಇಂತಹ ಹಲವಾರು ಕುಟುಂಬಗಳಿಗೆ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯಿಂದ ಆಹಾರ ಧಾನ್ಯಗಳ ಕಿಟ್‌ ಸೇರಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕ್ರಿಯಾ ಸಮಿತಿ ಸದಸ್ಯರು ಬೆಳಗಾವಿ ಬಳಿಯ ಕಾಕತಿಯಿಂದ ಹಿಡಿದು ಪೀರನವಾಡಿ, ಹುಂಚಾನಟ್ಟಿ, ಕಣಬರ್ಗಿ, ಲಕ್ಷ್ಮೀ ಟೇಕಡಿ, ಶಹಾಪೂರ, ವೈಭವ ನಗರ, ಶಾಹೂನಗರ, ಸದಾಶಿವನಗರ, ಹನುಮಾನನಗರ, ವಡಗಾವಿ, ಹುಕ್ಕೇರಿ, ಖಾನಾಪುರ ತಾಲೂಕುಗಳಿಗೆ ಸಹ ಹೋಗಿ ಬಂದಿದ್ದಾರೆ. ಅಲ್ಲಿನ ನೂರಾರು ಬಡ ವರ್ಗದ ಜನರಿಗೆ ನೆರವಾಗಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳ ಪಟ್ಟಿಯು ದಿನೇ ದಿನೇ ಬೆಳೆಯುತ್ತಿದೆ. ಎಲ್ಲರನ್ನೂ ಸಮಾಧಾನಪಡಿಸುವದು ಸಾಧ್ಯವಿಲ್ಲ. ಸರಕಾರ ರೇಶನ್‌ ಅಂಗಡಿಗಳಲ್ಲಿ ಬಿಪಿಎಲ್‌ ಜೊತೆಗೆ ಎಪಿಎಲ್‌ ಕುಟುಂಬದವರಿಗೂ ಅಕ್ಕಿ ಕೊಡಲು ಆರಂಭಿಸಿದೆ. ಆದರೆ ಎಣ್ಣೆ, ಸಕ್ಕರೆ, ಚಹಾಪುಡಿ, ತೊಗರಿ ಬೇಳೆಯೂ ಅವಶ್ಯ. ಈ ಸಾಮಾನುಗಳನ್ನು ಕೊಡುವ ಯತ್ನವನ್ನೂ ನಮ್ಮ ಸಂಘಟನೆ ಮಾಡುತ್ತಿದೆ ಎನುತ್ತಾರೆ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

ಈ ನಮ್ಮ ಅಭಿಯಾನಕ್ಕೆ ದಾನಿಗಳು ಮುಂದೆ ಬರಬೇಕು. ಹಸಿದ ಹೊಟ್ಟೆಗಳಿಗೆ ಅನ ಹಾಕುವ ಸತ್ಕಾರ್ಯಕ್ಕೆ ಮುಂದಾಗಬೇಕು. ದಾನಿಗಳು ಬೆಳಗಾವಿಯ ಯಾವುದೇ ಅಂಗಡಿಗಳಲ್ಲಿ ಆಹಾರಧಾನ್ಯ ಖರೀದಿಸಿಟ್ಟರೂ ನಮ್ಮ ವಾಹನಗಳು ಅಲ್ಲಿಗೆ ಬಂದು ಸಂಗ್ರಹಿಸುತ್ತವೆ. ಬಡವರಿಗೆ ಸಹಾಯ ಮಾಡುವ ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂಬುದು ಸಮಿತಿಯ ಸದಸ್ಯರ ಅಭಯ.

ಕಳೆದ ವರ್ಷ ಎದುರಾದ ನೆರೆ ಹಾವಳಿ ಹಾಗೂ ಈಗ ಬಂದಿರುವ ಕೋವಿಡ್ 19 ನಮಗೆ ಬಹಳ ದೊಡ್ಡ ಸವಾಲುಗಳು. ಎರಡೂ ಸಮಯದಲ್ಲೂ ಬಡ ವರ್ಗದ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡಿದ ತೃಪ್ತಿ ಇದೆ. ನಮ್ಮ ಸಹಾಯದಿಂದ ತೊಂದರೆಗಳು ಶಾಶ್ವತವಾಗಿ ಮುಗಿಯುವದಿಲ್ಲ ಎಂಬುದು ನಮಗೆ ಗೊತ್ತು. ಆದರೆ ಈ ಸಂದರ್ಭದಲ್ಲಿ ಎದುರಾದ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇದರಲ್ಲಿ ಸವಿತಿಯ ಸದಸ್ಯರ ಸಹಕಾರ ಬಹಳ ಇದೆ. -ಅಶೋಕ ಚಂದರಗಿ, ಜಿಲ್ಲಾ ಕ್ರಿಯಾ ಸಮಿತಿ ಅಧ್ಯಕ

 

­-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next