Advertisement

ಶಾಸಕರ ಖರೀದಿಗೆ ಭಾರೀ ಹಣಾಹಣಿ:ತಲಾ 15 ಕೋ.ರೂ. ಆಮಿಷ; ಗೋಹಿಲ್‌

06:00 AM Jul 31, 2017 | Team Udayavani |

ಬೆಂಗಳೂರು: “ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರತಿ ಶಾಸಕನಿಗೆ 15 ಕೋಟಿ ರೂ. ಆಮಿಷವೊಡ್ಡಿತ್ತು.

Advertisement

ಅಷ್ಟೇ ಅಲ್ಲ, ಪಕ್ಷದ ಶಾಸಕರ ಕುಟುಂಬಕ್ಕೆ ಪ್ರಾಣ ಬೆದರಿಕೆಯನ್ನೂ ಹಾಕಿತ್ತು’ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್‌ ಮಾಡಿದೆ. ನಗರದ ಹೊರವಲಯದ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ತಂಗಿರುವ ಗುಜರಾತ್‌ನ 43 ಶಾಸಕರನ್ನು ಮಾಧ್ಯಮಗಳ ಮುಂದೆ ಪೆರೇಡ್‌ ಮಾಡಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರ ಶಕ್ತಿ ಸಿನ್ಹ ಗೋಹಿಲ್‌, “ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡುವುದರ ಜತೆಗೆ ಬೆದರಿಕೆ ಹಾಕುವ ಕೆಲಸವನ್ನೂ ಮಾಡುತ್ತಿದೆ.

ಶಾಸಕರನ್ನು ಬೆದರಿಸಿ ಅವರು ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿ ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಬೆಂಗಳೂರಿಗೆ ಕರೆತರಲಾಗಿದೆ’ ಎಂದು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲು 45 ಶಾಸಕರ ಅಗತ್ಯವಿದೆ. ಕಾಂಗ್ರೆಸ್‌ನ 57 ಶಾಸಕರ ಪೈಕಿ ಮೂವರನ್ನು ಹಣದ ಆಮಿಷವೊಡ್ಡಿ ಬಿಜೆಪಿಯವರು ರಾಜೀನಾಮೆ ಕೊಡಿಸಿದರೂ, 53 ಮಂದಿ ಶಾಸಕರು ಜೊತೆಗಿದ್ದಾರೆ. ಎಲ್ಲರಿಗೂ ವಿಪ್‌ ಜಾರಿ ಮಾಡಿದ್ದು, ರಾಜ್ಯಸಭೆಯಲ್ಲಿ ಗೆಲ್ಲಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಬಾಕಿ ಇರುವ ಶಾಸಕರಿಗೆ ಸಿಬಿಐ, ಆದಾಯ ತೆರಿಗೆ, ಇಡಿ ಮೂಲಕ ಭಯ ಹುಟ್ಟಿಸಿ ರಾಜೀನಾಮೆ ಕೊಡಿಸದಂತೆ ನೋಡಿಕೊಳ್ಳಲು ಅವರನ್ನು ಗುಜರಾತ್‌ನಿಂದ ಹೊರಗೆ ಕರೆದೊಯ್ಯುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡೆವು ಎಂದರು.

ಶಾಸಕನಿಗೆ 15 ಕೋಟಿ ಬೆಲೆ ಕಟ್ಟಿದರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ವಿರುದಟಛಿ ಕಿಡಿ ಕಾರಿದ ಶಕ್ತಿ
ಸಿನ್ಹ ಗೋಹಿಲ್‌, “ಅಮಿತ್‌ ಶಾ ನೀಡಿದ ಹಣದ ಆಮಿಷಕ್ಕೆ ಮಣಿದ ಮೂವರು ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡಿದರು.

Advertisement

ಅದರಲ್ಲೂ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸಚೇತಕರಾಗಿದ್ದ ವ್ಯಕ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಯಲ್ಲಿ
ಮೂರನೇ ಅಭ್ಯರ್ಥಿಯಾಗುವ ಮೂಲಕ ತಾವು ಒಬ್ಬ ವ್ಯಾಪಾರಿ ಎಂಬುದನ್ನು ಸಾಬೀತುಪಡಿಸಿದರು’ ಎಂದು ಲೇವಡಿ
ಮಾಡಿದರು.

“ಅಮಿತ್‌ ಶಾ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಲ್ಲದೆ, ಖರ್ಚು ಭರಿಸುವ ಆಸೆ ತೋರಿಸಿ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಕರೆಸಿಕೊಳ್ಳುವ ಕೆಲಸ ಮಾಡಿ¨ªಾರೆ’ ಎಂದು ಆರೋಪಿಸಿದರು. ಅಲ್ಲದೆ,
ಒಂದೇ ವರ್ಷದಲ್ಲಿ ಅಮಿತ್‌ ಶಾ ಆದಾಯ ದುಪ್ಪಟ್ಟು ಹೇಗಾಯಿತು? ಯಾವ ಮೂಲದಿಂದ ಅಧಿಕವಾಯಿತು?
ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಒಂದು ಪರಿವಾರ. ಶಾಸಕರ ಸುರಕ್ಷತೆ ನಮಗೆ ಮುಖ್ಯ. ಹೀಗಾಗಿ ಶಾಸಕರ ರೆಸಾರ್ಟ್‌ ವಾಸದ ಖರ್ಚು ವೆಚ್ಚ ಕಷ್ಟದ ವಿಚಾರ ಅಲ್ಲ ಎಂದು ಹೇಳಿದ ಅವರು, ಶಾಸಕರ ಖರೀದಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದಟಛಿ ಪಕ್ಷದ ನಾಯಕರು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ, ಶಾಸಕರಿಗೆ ಬೆದರಿಕೆ ಒಡ್ಡುತ್ತಿರುವ ಬಗ್ಗೆಯೂ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಯಾರನ್ನೂ ಬಲವಂತದಿಂದ ಕರೆತಂದಿಲ್ಲ:
“ಕಾಂಗ್ರೆಸ್‌ ಯಾವುದೇ ಶಾಸಕನನ್ನು ಬೆಂಗಳೂರಿಗೆ ಕರೆತಂದು ಕೂಡಿ ಹಾಕಿಲ್ಲ. ಬಿಜೆಪಿಯವರ ಪ್ರಾಣಬೆದರಿಕೆ ಮತ್ತು
ಹಣದ ಆಮಿಷದಿಂದಾಗಿ ಎಲ್ಲಾ ಶಾಸಕರು ತಮ್ಮ ಕ್ಷೇತ್ರದಿಂದ ದೂರವಿರುವಂತೆ ಅಹ್ಮದ್‌ ಪಟೇಲ್‌ ಅವರು ಸೂಚನೆ
ನೀಡಿದ್ದರು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಶಾಸಕರು ಎಲ್ಲಿ ಹೋದರೂ ಬಿಜೆಪಿಯವರು ಅವರನ್ನು
ಬೆಂಬತ್ತುವ ಸಾಧ್ಯತೆ ಇತ್ತು. ಹೀಗಾಗಿ ಕಾಂಗ್ರೆಸ್‌ ಸರ್ಕಾರ ಇರುವ ಕರ್ನಾಟಕವನ್ನು ಆರಿಸಿಕೊಂಡೆವು. ನಾವಾಗಿ ಯಾವುದೇ ಶಾಸಕರ ಮೊಬೈಲ್‌ ಕಿತ್ತುಕೊಂಡಿಲ್ಲ. ಹೆಚ್ಚಿನ ಒತ್ತಡ ಬಂದಿದ್ದರಿಂದ ಅವರಾಗಿಯೇ ಮೊಬೈಲ್‌ನಿಂದ ದೂರವಿದ್ದಾರೆ’ ಎಂದು ಗೋಹಿಲ್‌ “ರೆಸಾರ್ಟ್‌ ರಾಜಕಾರಣ’ವನ್ನು ಸಮರ್ಥಿಸಿಕೊಂಡರು.

ರೆಸಾರ್ಟ್‌ನಲ್ಲಿ ನಡೆಯಿತು ಹೈಡ್ರಾಮಾ…
ರಾಜ್ಯಸಭೆ ಚುನಾವಣೆಯಲ್ಲಿ ಆಪರೇಷನ್‌ ಕಮಲ ಭೀತಿಯಿಂದ ಬೆಂಗಳೂರಿಗೆ ಆಗಮಿಸಿರುವ ಗುಜರಾತ್‌ ಕಾಂಗ್ರೆಸ್‌ ಶಾಸಕರ ಹೈಡ್ರಾಮಾ ಹೊರವಲಯದ ರೆಸಾರ್ಟ್‌ ನಲ್ಲಿ ಮುಂದುವರಿದಿದ್ದು, ಗುಜರಾತ್‌ ಕಾಂಗ್ರೆಸ್‌ನಲ್ಲಿ ಎಲ್ಲವೂ
ಸರಿಯಾಗಿದೆ ಎಂದು ಹೇಳಲು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ವಾಸ್ಯವ್ಯ ಹೂಡಿರುವ 43 ಸದಸ್ಯರನ್ನು ಪಕ್ಕದಲ್ಲೇ ಇರುವ ಮ್ಯಾಂಗೋಲಿಯನ್‌ ರೆಸಾರ್ಟ್‌ಗೆ ಕಾರಿನಲ್ಲಿ ಕರೆತಂದು ಮಾಧ್ಯಮಗಳ ಮುಂದೆ ಪೆರೇಡ್‌ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕರಿದ್ದ ಕಾರುಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ನಮಗೆ ಯಾವುದೇ ಒತ್ತಡ ಇಲ್ಲ. ಯಾರನ್ನೂ ಒತ್ತಾಯದಿಂದ ಕರೆದುಕೊಂಡು ಬಂದಿಲ್ಲ. ನಮಗೆ ಗುಜರಾತ್‌ನಲ್ಲಿ ರಕ್ಷಣೆ ಇಲ್ಲ ಎಂದು ಇಲ್ಲಿ ಬಂದಿರುವುದಾಗಿ ಶಾಸಕರಿಂದ ಹೇಳಿಸಲಾಯಿತು.

ಬೆಂಗಳೂರಿಗೆ ಬಂದ ಮೇಲೆ ಯಾರೊಂದಿಗೂ ಸಂವಹನ ನಡೆಸದಂತೆ ಶಾಸಕರಿಗೆ ನಿರ್ಬಂಧ ಹೇರಲಾಗಿದೆ ಎಂಬ ವರದಿ ಅಲ್ಲಗಳೆಯಲು ಎಲ್ಲರೂ ಕೈಯ್ಯಲ್ಲಿ ಮೊಬೈಲ್‌ ಹಿಡಿದುಕೊಂಡೇ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಎಲ್ಲಾ ಶಾಸಕರಿಗೂ ಗುರುತಿನ ಚೀಟಿ ನೀಡಲಾಗಿತ್ತು. ಕಾರಿನಿಂದ ಇಳಿಸಿ ಮಾನವ ಸರಪಳಿ ರಚಿಸಿ ಸುದ್ದಿಗೋಷ್ಠಿ ಇದ್ದ ಸ್ಥಳಕ್ಕೆ ಕರೆತರಲಾಗಿತ್ತು.

ಮಾಧ್ಯಮಗೋಷ್ಠಿ ಆರಂಭವಾಗಿ, ಅದು ಮುಗಿದು ಎಲ್ಲಾ ಶಾಸಕರು ತಮ್ಮ ಕಾರು ಹತ್ತಿ ಅಲ್ಲಿಂದ ತೆರಳುವವರೆಗೆ
ಮಾಧ್ಯಮ ಪ್ರತಿನಿಧಿಗಳನ್ನು ನಿಗದಿತ ಸ್ಥಳದಿಂದ ಹೊರಗೆ ಹೋಗಲು ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರು ಅವಕಾಶ ನೀಡಲಿಲ್ಲ. ಒಂದೊಂದು ಬಾಗಿಲಿಗೆ ಇಬ್ಬಿಬ್ಬರು ಬೆಂಬಲಿಗರು ನಿಂತು ಶಾಸಕರು ಪ್ರತ್ಯೇಕವಾಗಿ ಮಾಧ್ಯಮದವರಿಗೆ ಸಿಗದಂತೆ ನೋಡಿಕೊಳ್ಳಲಾಯಿತು. ಅದರ ಮಧ್ಯೆಯೂ ಒಂದಿಬ್ಬರು ಶಾಸಕರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಮುಂದಾದಾಗ ಅವರನ್ನು ತಡೆದ ಬೆಂಬಲಿಗರು, ಶಾಸಕರನ್ನು ಕಾರು ಹತ್ತಿಸಿದರು. ರೆಸಾರ್ಟ್‌ನಲ್ಲಿರುವ ಶಾಸಕರ ಖರ್ಚು ಭರಿಸುವವರು ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಒಬ್ಬ ಶಾಸಕ, ನಾನು ಭರಿಸುವುದಾಗಿ ಹೇಳಿದಾಗ ಅವರನ್ನು ತಡೆದ ಡಿ.ಕೆ. ಶಿವಕುಮಾರ್‌, ಸುಮ್ಮನಿರುವಂತೆ ಸೂಚಿಸಿದರು.

ಇಂದಿನಿಂದ ಶಾಸಕರ ಪ್ರವಾಸ?
ಗುರುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ತಂಗಿರುವ ಗುಜರಾತ್‌ನ 43 ಕಾಂಗ್ರೆಸ್‌ ಶಾಸಕರು ಸೋಮವಾರದಿಂದ ಪ್ರವಾಸ ತೆರಳುವ ಸಾಧ್ಯತೆ ಇದೆ.

ಭಾನುವಾರದಿಂದಲೇ ಶಾಸಕರು ಪ್ರವಾಸ ಆರಂಭಿಸಬೇಕಾಗಿತ್ತಾದರೂ ರೆಸಾರ್ಟ್‌ ವಾಸ್ತವ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದರಿಂದ ಅವರನ್ನು ಮಾಧ್ಯಮದವರ ಮುಂದೆ ಪೆರೇಡ್‌ ಮಾಡಿಸಲು ಇಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕರ ವಾಸ್ತವ್ಯದ ಉಸ್ತುವಾರಿ ನೋಡಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್‌, ಎಲ್ಲಾ ಶಾಸಕರು ಒಗ್ಗಟ್ಟಿನ ಪ್ರದರ್ಶನ ತೋರಿದ್ದಾರೆ. ಎಲ್ಲಿಯವರೆಗೆ ಬೆಂಗಳೂರಿನಲ್ಲಿ ಇರಬೇಕು ಎನ್ನುತ್ತಾರೋ ಅಲ್ಲಿಯವರೆಗೆ ಇಲ್ಲೇ ಇರುತ್ತಾರೆ ಎಂದರೆ, ಅವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್‌, ಶಾಸಕರು ರಾಜ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಆನಂದದಿಂದ ಇದ್ದಾರೆ. ಸೋಮವಾರದಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಆದರೆ, ಶಾಸಕರ ಪೈಕಿ ಕೆಲವರು ಶ್ರವಣಬೆಳಗೊಳಕ್ಕೆ ಹೋಗಬೇಕು, ಇನ್ನು ಕೆಲವರು ಮಡಿಕೇರಿಗೆ ತೆರಳಬೇಕು
ಎಂದು ಹೇಳುತ್ತಿದ್ದರೆ, ಕೆಲ ಮಂದಿ ಇನ್ಫೋಸಿಸ್‌ ಕ್ಯಾಂಪಸ್‌ ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ
ಶಾಸಕರನ್ನು ಯಾವ ರೀತಿ ಪ್ರವಾಸ ಕರೆದೊಯ್ಯಬೇಕು ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಎಲ್ಲಾ ಶಾಸಕರ
ಅಭಿಪ್ರಾಯ ಪಡೆದ ಬಳಿಕ ಪ್ರವಾಸಕ್ಕೆ ತೆರಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮತದಾನದ ತನಕ ಬೆಂಗಳೂರಲ್ಲೇ
ಆಪರೇಷನ್‌ ಕಮಲದ ಭೀತಿಯಿಂದ ಬೆಂಗಳೂರಿಗೆ ಆಗಮಿಸಿರುವ ಗುಜರಾತ್‌ನ 43 ಕಾಂಗ್ರೆಸ್‌ ಶಾಸಕರು ಆಗಸ್ಟ್‌ 7ರವರೆಗೂ ಕರ್ನಾಟಕದಲ್ಲೇ ಇರಲಿದ್ದಾರೆ. ಆ. 8ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಬೆಂಗಳೂರಿನಿಂದ ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಲಿದ್ದಾರೆ. ಅದುವರೆಗೆ ಈ ಶಾಸಕರನ್ನು ಬೇರೆ ಯಾರೂ ಸಂಪರ್ಕಿಸದಂತೆ ಎಚ್ಚರ ವಹಿಸಲಾಗಿದೆ. ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆಯವರೊಂದಿಗೆ ಮಾತನಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲಿ ಪ್ರವಾಹ, ಇಲ್ಲಿ ಮಸ್ತಿ
ಅತ್ತ ಗುಜರಾತ್‌ನಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಜನಪ್ರತಿನಿಧಿಗಳು ರೆಸಾರ್ಟ್‌ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಶಾಸಕರು ಕರ್ನಾಟಕದ ರೆಸಾರ್ಟ್‌ಗಳಲ್ಲಿ ಮೋಜು- ಮಸ್ತಿಯಲ್ಲಿ ತೊಡಗಿರುವ ಕುರಿತು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಸೇರಿದಂತೆ ವಿವಿಧೆಡೆಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿರುವಾಗ ರಾಜಕಾರಣಿಗಳಿಗೆ ಮಾತ್ರ ತಮ್ಮ ಅಧಿಕಾರ, ಕುರ್ಚಿಯಾಸೆಯೇ ಮುಖ್ಯವಾಯಿತೇ ಎಂದು ಪ್ರಶ್ನಿಸುತ್ತಿದ್ದಾರೆ. ಬನಸ್ಕಾಂತಾ, ಪಠಾನ್‌ ಮತ್ತಿತರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದೆ. ಆದರೆ, ಕಾಂಗ್ರೆಸ್‌ನ ಶಾಸಕರ್ಯಾರೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡುವು ದಾಗಲೀ, ಜನರಿಗೆ ಸಾಂತ್ವನ ಹೇಳುವುದಾಗಲೀ ಮಾಡಿಲ್ಲ. ಈ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಅಹ್ಮದ್‌ ಪಟೇಲ್‌ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ದುರಾಸೆ. ಅದಕ್ಕಾಗಿಯೇ ಅವರು ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಮಗನ ಮೇಲಿನ ವ್ಯಾಮೋಹದಿಂದ ಸೋನಿಯಾ ಗಾಂಧಿ ಅವರು ಹೇಗೆ ದೇಶದಲ್ಲಿ ಕಾಂಗ್ರೆಸ್‌ನ ನಾಶಕ್ಕೆ ಕಾರಣರಾದರೋ, ಹಾಗೆಯೇ ಪಟೇಲ್‌ ಅವರ ಅತಿಯಾಸೆ ಮತ್ತು ಹತಾಶೆಯು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ನಿರ್ಮೂಲನೆಗೆ ನಾಂದಿ ಹಾಡಲಿದೆ.
– ವಿಜಯ್‌ ರೂಪಾನಿ, ಗುಜರಾತ್‌ ಮುಖ್ಯಮಂತ್ರಿ

ಬಿಜೆಪಿ ಅನೈತಿಕ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ “ಆಪರೇಷನ್‌ ಕಮಲ’ ಮಾಡಿದ್ದರು. ಈಗ ಗುಜರಾತ್‌ ರಾಜ್ಯದ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಮಾಡಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಪ್ರಧಾನಿಯವರ ಸ್ವಂತ ರಾಜ್ಯದಲ್ಲೇ ಈ ರೀತಿಯ ವಿದ್ಯಮಾನ ನಡೆಯುತ್ತಿರುವುದು ಬೇಸರ ಮೂಡಿಸಿದೆ.
– ಆಂಜನೇಯ,ಸಚಿವ

Advertisement

Udayavani is now on Telegram. Click here to join our channel and stay updated with the latest news.

Next