Advertisement

ಮಹಾಕವಿ ಮಿರ್ಜಾ ಗಾಲಿಬ್ 220ನೇ ಜನ್ಮದಿನಾಚರಣೆ; ಗೂಗಲ್ ಡೂಡಲ್ ಗೌರವ

01:19 PM Dec 27, 2017 | Sharanya Alva |

ನವದೆಹಲಿ: ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿರುವ ಪ್ರಸಿದ್ಧ ಕವಿ ಮಿರ್ಜಾ ಗಾಲಿಬ್. ಈತನ ಪುರ್ಣ ಹೆಸರು ಮಿರ್ಜಾ ಅಸದುಲ್ಲಾಹ್ ಬೇಗ್ ಖಾನ್ ಅಲಿಯಾಸ್ ಮಿರ್ಜಾ ನವ್ಷಾಹ್. ಗಾಲಿಬ್ ಎನ್ನುವುದು ಕಾವ್ಯನಾಮ. ಬುಧವಾರ ಗಾಲಿಬ್ ನ 220ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.

Advertisement

ಮಿರ್ಜಾ ಗಾಲಿಬ್ 1797, ಡಿಸೆಂಬರ್ 27ರಂದು ಆಗ್ರಾ ಜನಿಸಿದ್ದರು. ಕೊನೆಯ ಮೊಗಲ್ ಚಕ್ರವರ್ತಿ ಬಹಾದುರ್ ಷಾ ಜಾಫರ್ ಕಾಲದ ಉರ್ದು ಮತ್ತು ಪರ್ಶಿಯನ್ ಭಾಷೆಯ ಪ್ರಸಿದ್ಧ ಕವಿ ಗಾಲಿಬ್. ಬಾಲ್ಯದಲ್ಲಿ ಈತನಿಗೆ ಸಮರ್ಥ ವಿದ್ವಾಂಸನೊಬ್ಬನಿಂದ ಪರ್ಷಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ಶಿಕ್ಷಣ ದೊರೆಯಿತು. ಹದಿಮೂರನೆಯ ವರ್ಷದಲ್ಲಿಯೇ ಲೋಹಾರೂ ರಾಜಮನೆತನದ ಕನ್ಯೆಯೊಬ್ಬಳೊಡನೆ ಈತನಿಗೆ ವಿವಾಹವಾಯಿತು. ಹದಿನಾರನೆಯ ವರ್ಷದ ಹೊತ್ತಿಗೆ ದೆಹಲಿಗೆ ಬಂದು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ.

ಮಹಾಕವಿ:

ಉರ್ದು ಕವಿತೆಗಳು ಈತನಿಗೆ ಉರ್ದು ಸಾಹಿತ್ಯದಲ್ಲಿ ಮಹಾಕವಿಯ ಸ್ಥಾನವನ್ನು ಗಳಿಸಿಕೊಟ್ಟಿವೆ. ಅಷ್ಟೇ ಅಲ್ಲ, ಈತನ ಹಿರಿಮೆ ಮತ್ತು ಖ್ಯಾತಿ ಇತರ ಕವಿಗಳ ಖ್ಯಾತಿಯನ್ನು ನುಂಗಿ ನೀರು ಕುಡಿದುಬಿಟ್ಟವೆ. ತನ್ನ ಸೃಜನಾತ್ಮಕ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಈತ ತನ್ನದೇ ಆದ ಶೈಲಿಯೊಂದನ್ನು ಸೃಷ್ಟಿಸಿದ. ಈ ಶೈಲಿ ಅನನುಕರಣೀಯವಾಗಿದ್ದು ಈತನೊಂದಿಗೇ ಕೊನೆಗೊಂಡಿತು. ಪುರ್ವಕವಿಗಳನ್ನು ಅನುಸರಿಸುವುದು ಈತನಿಗೆ ಒಪ್ಪಿಗೆಯಾಗಿರಲಿಲ್ಲ. ಹೊಸತನವೇ ಈತನ ಕಾವ್ಯದ ಜೀವಾಳ. ಜೀವನವೇ ಈತನ ಕಾವ್ಯದ ವಸ್ತುವಾಗಿದ್ದು, ಜೀವನದ ಉನ್ನತ ಮೌಲ್ಯಗಳನ್ನು ಈತ ತನ್ನ ಕಾವ್ಯದಲ್ಲಿ ಕಂಡರಿಸಿದ್ದಾನೆ. ಕಾವ್ಯ ಸೃಜನಾತ್ಮಕವಾಗಿರಬೇಕೇ ಹೊರತು ಕೇವಲ ಶಬ್ದಾಡಂಬರವಾಗಿ ಬಾರದು ಎಂಬುದೇ ಈತನ ಧ್ಯೇಯ. ಉದಾತ್ತ ಚಿಂತನೆಗಳು, ಉಪಮಾನಗಳ ಅಪುರ್ವತೆ ಮತ್ತು ನವೀನತೆ, ಮೃದುಹಾಸ್ಯ, ಶ್ಲೇಷೆ, ವಸ್ತುವಿನ ನೂತನತೆ, ಅನುಭಾವಿಕತೆ, ಮೃದುಮಧುರ ಶೈಲಿ, ಪ್ರತಿಮಾಯೋಜನೆ, ಸೂಕ್ಷ್ಮ ಪರಿವೀಕ್ಷಣೆ, ಜೀವನದ ಕಟು ಅನುಭವಗಳ ನೈಜನಿರೂಪಣೆ, ಸರಳತೆ, ಅಭಿವ್ಯಕ್ತಿಯ ಪರಿಣಾಮ ರಮಣೀಯತೆ, ಪ್ರೇಮದ ತೀವ್ರತೆ ಇವು ಈತನ ಕವಿತೆಯ ಪ್ರಾಣ ಹಾಗೂ ಸತ್ತ್ವ. ಈತ ನಿರಾಶಾವಾದಿಯೂ ಹೌದು. ಇಷ್ಟಾದರೂ ಈತನ ಕಾವ್ಯ ಸ್ವಾನುಭವದ ಪ್ರತೀಕವಾಗಿದ್ದು, ಓದುಗರೂ ಆ ಅನುಭವಗಳಲ್ಲಿ ಪಾಲ್ಗೊಳ್ಳುವಂತಾಗುತ್ತದೆ.

ಅದುವರೆಗೆ ಸಂಪ್ರದಾಯದ ಜಾಡಿನಲ್ಲಿಯೇ ಹರಿಯುತ್ತಿದ್ದ ಉರ್ದು ಕಾವ್ಯ ಧಾರೆಯ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಈತನದು. ಹೀಗಾಗಿ, ಆಧುನಿಕ ಉರ್ದು ಕವಿತೆಯ ಪ್ರವರ್ತಕನೆಂದು ಈತನನ್ನು ಗೌರವಿಸಲಾಗಿದೆ. ಉರ್ದು ಕಾವ್ಯದ ಮೇಲೆ ಈತ ಬೀರಿರುವ ಪ್ರಭಾವ ಮಹತ್ತರವಾದುದು. ಈತ ದೇಶಾದ್ಯಂತ ಶಿಷ್ಯರನ್ನು ಪಡೆದಿದ್ದ. ಅಂಚೆಯ ಮೂಲಕ ಶಿಕ್ಷಣ ಪಡೆಯುತ್ತಿದ್ದರು.

Advertisement

1869 ಫೆಬ್ರುವರಿ 15ರಂದು ಹಳೇ ದೆಹಲಿಯ ಚಾಂದಿನಿ ಚೌಕ ಸಮೀಪವಿದ್ದ ತನ್ನ ನಿವಾಸದಲ್ಲಿ (ಗಾಲಿಬ್ ಕಿ ಹವೇಲಿ ಎಂದೇ ಚಿರಪರಿಚಿತವಾಗಿತ್ತು) ಕೊನೆಯುಸಿರೆಳೆದಿದ್ದ ಗಾಲಿಬ್. ಈಗ ಆ ಮನೆಯನ್ನು ಗಾಲಿಬ್ ಸ್ಮಾರಕವನ್ನಾಗಿ ಮಾಡಲಾಗಿದೆ. ಅಲ್ಲಿ ಗಾಲಿಬ್ ಬಳಸಿದ ವಸ್ತುಗಳ ಪ್ರದರ್ಶನವಿರುತ್ತದೆ.

ಗಾಲಿಬ್ ನ  ಪದ್ಯಗಳು

ದೈತ್ಯ ಅಲೆಗಳ ಕಡಲಲ್ಲಿ
ಸುಳಿಗೆ ಸಿಕ್ಕಿದೆ ನಾವೆ
ನಾವಿಕ ನಿದ್ದೆ ಹೋಗಿದ್ದಾನೆ
ವಿಧಿಯನ್ನೇಕೆ ಜರಿಯುವೆ ಗಾಲಿಬ್?

***

ಆಹಾ ಸುಖವೇ!
ಅವಳು ನನ್ನಲ್ಲಿಗೆ
ಬರುವ ಸುದ್ದಿಯೊಂದು
ಸುತ್ತೆಲ್ಲ ಹಬ್ಬಿದೆಯಲ್ಲ!
ಅಯ್ಯೋ ನೋವೆ
ಅವಳಿಗಾಗಿ ಹಾಸಲು
ಮನೆಯೊಳಗೆ
ಚಾಪೆಯೂ ಇಲ್ಲವಲ್ಲ!

***

ಸಾವಿನ ನಂತರವೂ ಅವಮಾನ
ನನ್ನ ಹಣೆ ಬರಹವೆಂದು ತಿಳಿದಿದ್ದರೆ
ನೀರಲ್ಲಿ ಮುಳುಗಿ ಸತ್ತುಬಿಡುತ್ತಿದ್ದೆ..
ಸಂಸ್ಕಾರ ಅಗತ್ಯವಿರುತ್ತಿರಲಿಲ್ಲ
ಗುರುತು ತಿಳಿಸುವ ಗೋರಿಕಲ್ಲು ನಿಲ್ಲಿಸಬೇಕಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next