Advertisement

State Govt: ಗ್ರಾಮೀಣರ ಆರೋಗ್ಯ ಸುರಕ್ಷೆ ಮಹತ್ವಾಕಾಂಕ್ಷೆ ಈಡೇರಲಿ

01:08 AM Oct 25, 2024 | Team Udayavani |

ರಾಜ್ಯ ಸರಕಾರದ ಬಲು ನಿರೀಕ್ಷಿತ ಮತ್ತು ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಉತ್ತಮ ಆರೋಗ್ಯ ಸೇವೆಯನ್ನು ತಲುಪಿಸುವ ಮತ್ತು ಜನರನ್ನು ಸಾಮಾನ್ಯವಾಗಿ ಕಾಡುವ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ನಿರ್ವಹಣೆಯ ಮಹತ್ತರ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

Advertisement

ಮೊದಲ ಹಂತದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಮುಂದಿನ 3 ತಿಂಗಳ ಒಳಗಾಗಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಸರಕಾರ ಹಾಕಿ ಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಾರ್ಯಕರ್ತೆಯರ ತಂಡ ತೆರಳಿ 30 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಿದೆ.

ಅದರಲ್ಲೂ ಮುಖ್ಯವಾಗಿ ಮಧುಮೇಹ, ರಕ್ತದೊತ್ತಡಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಿ, ವೈದ್ಯರ ಸಲಹೆಯಂತೆ ನಿರಂತರ ಉಚಿತ ಔಷಧಗಳ ವಿತರಣೆ ನಡೆಸಲಾಗುವುದು. ಇನ್ನು ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಹೆಚ್ಚಿನ ಸಂಖ್ಯೆಯ ಜನರನ್ನು ಬಾಧಿಸುತ್ತಿರುವ ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್‌ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತಪಾಸಣೆ ನಡೆಸಿ, ಪಡೆಯಬೇಕಾದ ಚಿಕಿತ್ಸೆ, ಔಷಧೋಪಚಾರದ ಬಗೆಗೆ ವೈದ್ಯರ ಮಾರ್ಗದರ್ಶನ ದಂತೆ ರೋಗಿಗಳಿಗೆ ತಿಳಿ ಹೇಳಲಾಗುವುದು. ಅವಶ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ದಾಖಲಿಸುವ ವ್ಯವಸ್ಥೆಯನ್ನು ಕೂಡ ತಂಡ ಮಾಡಲಿದೆ.

ಗೃಹ ಆರೋಗ್ಯ ಯೋಜನೆಯ ಉದ್ದೇಶ ಮತ್ತು ಕಾರ್ಯವಿಧಾನಗಳು ಪರಿಣಾಮಕಾರಿಯಾಗಿ ಜಾರಿಯಾಗಿದ್ದೇ ಆದಲ್ಲಿ ಗ್ರಾಮೀಣ ಜನರ ಪಾಲಿಗೆ ಸಂಜೀವಿನಿಯಾಗಲಿರುವುದು ನಿಶ್ಚಿತ. ಅಸಾಂಕ್ರಾಮಿಕ ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಔಷಧೋಪಚಾರ, ಚಿಕಿತ್ಸೆ, ಆಹಾರಸೇವನೆ ಕ್ರಮ ಮತ್ತು ಜೀವನಶೈಲಿಯಲ್ಲಿ ಬದಲಾವಣೆಯಂತಹ ಕ್ರಮಗಳಿಂದ ಅಕಾಲಿಕ ಮರಣ ಮತ್ತು ಮಾಹಿತಿಯ ಕೊರತೆಯಿಂದ ಬೇಕಾಬಿಟ್ಟಿ ಔಷಧಗಳನ್ನು ಸೇವಿಸುವುದರಿಂದ ಎದುರಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಇವೆಲ್ಲದಕ್ಕಿಂತ ಮುಖ್ಯ ವಾಗಿ ಗ್ರಾಮೀಣ ಜನರ ಆರೋಗ್ಯ ರಕ್ಷಣೆಯನ್ನು ಖಾತರಿಪಡಿಸಿದಂತಾಗಲಿದೆ.

ಗೃಹ ಆರೋಗ್ಯ ಯೋಜನೆಯ ಉದ್ದೇಶ ಅತ್ಯಂತ ದೂರದೃಷ್ಟಿಯಿಂದ ಕೂಡಿದ್ದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲವಾದರೂ ಇದು ಕೇವಲ ಆರಂಭಶೂರತನಕ್ಕೆ ಸೀಮಿತವಾಗದಂತೆ ಎಚ್ಚರ ವಹಿಸಬೇಕು. ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಬಾಹುಳ್ಯದಿಂದ ನಲುಗಿ ಹೋಗಿದ್ದು ಈಗ ಮತ್ತೂಂದು ಹೆಚ್ಚುವರಿ ಕರ್ತವ್ಯವನ್ನು ಇವರಿಗೆ ವಹಿಸುವುದರಿಂದ ಇವರ ಮೇಲಾಗುವ ಪರಿಣಾಮವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈ ಕಾರ್ಯಕರ್ತರ ಕೊರತೆಯನ್ನು ನೀಗಿಸಲು ಮತ್ತು ಹೆಚ್ಚುವರಿ ಕೆಲಸಕ್ಕೆ ಸೂಕ್ತ ಸಂಭಾವನೆ ನೀಡುವ ಕನಿಷ್ಠ ಔದಾರ್ಯವನ್ನಾದರೂ ಸರಕಾರ ತೋರಬೇಕು.

Advertisement

ಜನರ ತಪಾಸಣೆಗಾಗಿ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಮತ್ತು ಸಮರ್ಪಕ ವೈದ್ಯಕೀಯ ಪರಿಕರಗಳನ್ನೊಳಗೊಂಡ ಕಿಟ್‌ ಪೂರೈಕೆ ಹಾಗೂ ಪರೀಕ್ಷೆ, ತಪಾಸಣೆ ಸಂದರ್ಭದಲ್ಲಿ ವೈದ್ಯಕೀಯ ನಿಯಮಾವಳಿಗಳು ಮತ್ತು ಮಾರ್ಗದರ್ಶಿ ಸೂತ್ರ ಗಳು ಪಾಲನೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಯೋಜನೆಯ ಮೂಲೋದ್ದೇಶಕ್ಕೇ ಕೊಡಲಿಯೇಟು ಬೀಳುವ ಸಾಧ್ಯತೆ ಇದೆ. ಅನುಷ್ಠಾನ ಹಂತದಲ್ಲಿ ಕಂಡುಬರುವ ಎಲ್ಲ ಲೋಪದೋಷ ಮತ್ತು ಕಾರ್ಯ ವಿಧಾನದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯ ಕಂಡುಕೊಂಡು ಆ ಬಳಿಕ ಯೋಜನೆಯನ್ನು ಇತರೆಡೆೆ ವಿಸ್ತರಿಸಿದಲ್ಲಿ ಯೋಜನೆ ನಿರೀಕ್ಷಿತ ಗುರಿ ತಲುಪಿ ಉದ್ದೇಶಿತ ಸಾಧನೆ ಕಾರ್ಯಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next