Advertisement

Mangaluru: ಕರ್ಕಶ ಹಾರ್ನ್ ಗೆ ನಿರ್ಬಂಧ; ಎಲ್ಲವೂ ನಾಮ್‌ ಕೇ ವಾಸ್ತೆ !

12:37 PM Feb 20, 2024 | Team Udayavani |

ನಿಯಮಗಳಿರುವುದು ಪಾಲಿಸುವುದಕ್ಕಾಗಿ. ನಾಗರಿಕರಾದ ನಾವು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು. ಎಲ್ಲ ನಿಯಮಗಳನ್ನು ದಂಡ, ಶಿಕ್ಷೆಯಿಂದ ಜಾರಿಗೊಳಿಸಲಾಗದು. ಅದು ಒಳ್ಳೆಯ ಆಡಳಿತವೂ ಎನಿಸದು. ಹಾಗಾಗಿ ನೋ ಹಾರ್ನ್ ಪ್ರತಿಜ್ಜೆಯನ್ನು ನಾವೇ ಸ್ವಯಂ ಪ್ರೇರಣೆಯಿಂದ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು. ಅದುವೇ ಈ ಸರಣಿಯ ಉದ್ದೇಶ.

Advertisement

ಮಹಾನಗರ: ಕರ್ಕಶ ಹಾರ್ನ್ ಗೆ ಕಡಿವಾಣ ಹಾಕಬೇಕೆಂಬ ಜನತೆಯ ಆಗ್ರಹ ಈ ಹಿಂದಿನಿಂದಲೂ ಇದ್ದರೂ ನಗರದಲ್ಲಿ ಇನ್ನೂ ಕಠಿನ ಕ್ರಮ ಜಾರಿಯಾಗಿಲ್ಲ. ಸಂಚಾರ ಪೊಲೀಸರ ಕಾರ್ಯಾಚರಣೆ ಒಂದೆರಡು ದಿನಗಳಿಗೆ ಸೀಮಿತವಾಗುತ್ತಿದ್ದು, ಹಾರ್ನ್‌ ಗಳ
ಕಿರಿ ಕಿರಿ ನಿರಂತರ !

ನಗರದಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡುವ ಸಲುವಾಗಿ ಹಾರ್ನ್ ರಹಿತ ವಲಯಗಳನ್ನು ನಿಗದಿಗೊಳಿಸಿ ಅನುಷ್ಠಾನಗೊಳಿಸಲು ಕೆಲವು ವರ್ಷಗಳ ಹಿಂದೆ ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಆದೇಶಿಸಿದ್ದರು. “ಹಾರ್ನ್
ನಿಷೇಧ’ ಎಂಬ ಬೋರ್ಡ್‌ ಇದ್ದರೂ, ಅಲ್ಲಿ ಸೂಚನೆ ಪಾಲನೆಯಾಗುತ್ತಿಲ್ಲ. 1993 ರಲ್ಲಿ ನಗರದ ಹಂಪನಕಟ್ಟೆಯಿಂದ ಕ್ಲಾಕ್‌ಟವರ್‌ ವರೆಗೆ ಹಾಗೂ 2000ನೇ ಇಸವಿಯಲ್ಲಿ ಅತ್ತಾವರ ಕೆಎಂಸಿಯಿಂದ ಮಿಲಾಗ್ರಿಸ್‌ ವರೆಗಿನ ರಸ್ತೆಯನ್ನು ಹಾರ್ನ್ ರಹಿತ ವಲಯಗಳನ್ನಾಗಿ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

ಆ ಅಧಿಸೂಚನೆ ಪಾಲನೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಐದು ವರ್ಷಗಳ ಹಿಂದೆ ಮತ್ತೆ ಮರು ಜಾರಿಗೊಳಿಸಲಾಗಿತ್ತು. ಪ್ರಾರಂಭದಲ್ಲಿ ಒಂದು ವಾರ ಈ ವಲಯಗಳಲ್ಲಿ ಶಾಲಾ ಮಕ್ಕಳಿಂದ ಭಿತ್ತಿಪತ್ರಗಳ ಮೂಲಕ ಈ ಪ್ರದೇಶಗಳಲ್ಲಿ ಹಾರ್ನ್ ಹಾಕದಿರುವಂತೆ ಅರಿವು ಮೂಡಿಸಲಾಗಿತ್ತು. ಆದರೆ ಹಾರ್ನ್ ಕಿರಿ ಕಿರಿ ಇಂದಿಗೂ ತಪ್ಪಿಲ್ಲ !

ಸಂಚಾರ ನಿಯಮ ಪಾಲನೆಯ ಬಗ್ಗೆ ಮುಖ್ಯವಾಗಿ ಸಿಟಿ ಬಸ್‌ ಚಾಲಕರಿಗೆ, ನಿರ್ವಾಹಕರಿಗೆ ಮಾರ್ಗದರ್ಶನ ಶಿಬಿರ ಸೇರಿದಂತೆ
ಪೊಲೀಸ್‌ ಇಲಾಖೆಯಿಂದಲೂ ಅರಿವು ಮೂಡಿಸುತ್ತಿದ್ದರೂ ನಿಯಮ ಉಲ್ಲಂಘನೆ ಪದೇ ಪದೇ ಹೆಚ್ಚಾಗುತ್ತಿದೆ. ಪೊಲೀಸರು
ಕಾರ್ಯಾಚರಣೆಗೆ ಇಳಿಯುವ ವೇಳೆ ಕರ್ಕಶ ಹಾರ್ನ್ಗಳನ್ನು ತೆಗೆದು ಬಸ್‌ ಸಂಚಾರಕ್ಕೆ ತಿಳಿಸುತ್ತಾರೆ. ಆದರೆ, ಅದೇ ಬಸ್‌ಗಳಲ್ಲಿ
ಒಂದೆರಡು ದಿನಗಳಲ್ಲಿ ಬೇರೆ ಹಾರ್ನ್ ಜೋಡಿಸಿ ಹಾರ್ನ್ಮಯವಾಗುತ್ತದೆ.

Advertisement

ಕೇವಲ ಬಸ್‌ಗೆ ಮಾತ್ರ ಇದು ಸೀಮಿತವಲ್ಲ, ಖಾಸಗಿ ವಾಹನ ಸವಾರರು ಆವಶ್ಯಕತೆ ಇಲ್ಲದಿದ್ದರೂ ಹಾರ್ನ್ ಬಳಸುತ್ತಾರೆ. ಇದರಿಂದ ಹೆಚ್ಚಿನ ಶಬ್ದ ಮಾಲಿನ್ಯವಾಗುತ್ತಿದೆ ಎಂಬುದರ ಕುರಿತಂತೆ ಹಲವು ಬಾರಿ ಪೊಲೀಸ್‌ ಫೋನ್‌ ಇನ್‌ನಲ್ಲೂ ದೂರುಗಳು ಕೇಳಿಬಂದಿತ್ತು. ಆ ಕಾರಣಕ್ಕಾಗಿ ಅನಗತ್ಯ ಹಾರ್ನ್ ಹಾಕುವವರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದರು. ಇದೂ ಕೆಲವು ದಿನ ಮಾತ್ರ ಅನ್ವಯ.

ವಿದೇಶಗಳ ನೀತಿ ಮಾದರಿಯಾಗಬೇಕು ವಾಹನಗಳು ಹಾರ್ನ್ ಹಾಕುವ ಕುರಿತಂತೆ ವಿದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮ ಕೈಗೊಳ್ಳ ಲಾಗುತ್ತಿದೆ. ಇಂಗ್ಲೆಂಡ್‌ನ‌ಲ್ಲಿ ಸಂಭವನೀಯ ಅಪಘಾತವನ್ನು ತಪ್ಪಿಸಲು ಮಾತ್ರ ಹಾರ್ನ್ ಮಾಡ ಬೇಕು ಎಂದಿದೆ. ರಾತ್ರಿ 11.30 ರಿಂದ ಬೆಳಗ್ಗೆ 7 ಗಂಟೆಯವರೆಗೆ ಹಾರ್ನ್ ನಿಷೇಧ ಮಾಡಲಾಗಿದೆ. ಆಸ್ಟ್ರೇಲಿಯದಲ್ಲಿ ಪಾದಚಾರಿಗಳನ್ನು, ಚಾಲಕರನ್ನು ಎಚ್ಚರಿಸಲು ಮಾತ್ರ ಹಾರ್ನ್ ಬಳಸಬಹುದು, ಅನಗತ್ಯವಾಗಿ ಬಳಸುವಂತಿಲ್ಲ ಎಂದಿದ್ದು, ಸನ್ನಿಹಿತ ಅಪಾಯದ ಸಂದರ್ಭ
ಹೊರತುಪಡಿಸಿ ಯಾವುದೇ ಬೇರೆ ಉದ್ದೇಶಕ್ಕೆ ಹಾರ್ನ್ ಬಳಸಿದರೆ 161 ಡಾಲರ್‌ವರೆಗೆ ದಂಡ ವಿಧಿಸಲಾಗುತ್ತದೆ. ಅದೇ ರೀತಿ, ನಮ್ಮ ದೇಶಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಏರ್‌ ಹಾರ್ನ್, ಹಾರ್ನ್ ಮಾದರಿಯ ಧ್ವನಿವರ್ಧಕ, ಆಂಪ್ಲಿಫೈಯರ್‌ಗಳ ಬಳಕೆ ನಿಷೇಧಿಸಲಾಗಿದೆ.

80 ಡೆಸಿಬೆಲ್‌ ಕಡಿಮೆ ಸಾಂದ್ರತೆಯ ಹಾರ್ನ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ನಿಷೇಧಿತ ಹಾರ್ನ್ ಬಳಕೆಗೆ ಕೇರಳದಲ್ಲಿಯೂ 1,000 ರೂ.ನಿಂದ 2,000 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಮಂಗಳೂರಿನಲ್ಲಿಯೂ ಇದೇ ರೀತಿಯ ನಿಯಮ ಇದ್ದರೂ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಹಾರ್ನ್ ನಿಯಂತ್ರಣಕ್ಕೆ ವಿದೇಶಗಳಲ್ಲಿರುವ ಕ್ರಮಗಳನ್ನು ಮಂಗಳೂರು
ಸಿಟಿಯಲ್ಲಿಯೂ ಅಳವಡಿಸಿ ಮಾದರಿ ಸಿಟಿಯಾಗಿ ರೂಪುಗೊಳ್ಳಬೇಕು.

“ನೋ ಹಾರ್ನ್ ಡೇ’: ಆರಂಭದಲ್ಲಿ ಮಾತ್ರ !

ಪ್ರಧಾನಿಯವರ ಸ್ವತ್ಛ ಭಾರತ ಪರಿಕಲ್ಪನೆಯ ಮಾದರಿಯಲ್ಲೇ “ನೋ ಹಾರ್ನ್ ವೆಡ್ನೆಸ್‌ ಡೇ’ ಅಭಿಯಾನವೊಂದು ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಐದು ವರ್ಷಗಳ ಹಿಂದೆ ನಡೆದಿತ್ತು. ಸಿಟಿ ಬಸ್‌ ಮಾಲಕರು ಸಹಿತ ಆಟೋ ರಿಕ್ಷಾ ಸಂಘಟನೆಗಳು ಇದಕ್ಕೆ ಕೈ ಜೋಡಿಸಿದ್ದವು. ಮಂಗಳಾದೇವಿ ಸಹಿತ ಕೆಲವೊಂದು ರೂಟ್‌ ಬಸ್‌ಗಳಲ್ಲಿ ವಾರದಲ್ಲಿ ಒಂದು ದಿನ ಅನಗತ್ಯ ಹಾರ್ನ್ ಹಾಕುವುದನ್ನು ನಿಲ್ಲಿಸಲಾಗಿತ್ತು. ಆದರೆ, ಕೆಲವು ತಿಂಗಳ ಬಳಿಕ ಈ ಅಭಿಯಾನ ಮೂಲೆ ಗುಂಪಾಗಿತು.

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next