Advertisement

ಮೂಡಬಿದಿರೆಯಲ್ಲಿ ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ

10:13 AM Oct 16, 2017 | Team Udayavani |

ಮೂಡಬಿದಿರೆ: ಹಿಂದುಳಿದ ವರ್ಗಗಳ ಉದ್ದಾರಕ ಎಂಬ ಮಾತನ್ನೇ ಬಂಡವಾಳವಾಗಿರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ವರ್ಗಗಳನ್ನು ಒಡೆಯುವ ಕೆಲಸ ಮಾಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಕರೆನೀಡಿದರು.

Advertisement

ಭಾರತೀಯ ಜನತಾ ಪಾರ್ಟಿಯ ಮೂಡಬಿದಿರೆ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ, ಪಂ. ದೀನ ದಯಾಳ್‌ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಪದ್ಮಾವತಿ ಕಲಾಮಂದಿರದಲ್ಲಿ ರವಿವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

198 ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳಲ್ಲಿ ಒಂದೆರಡು ಜಾತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲರೂ ಮೂಲೆಗೆ ತಳ್ಳಲ್ಪಟ್ಟಿದ್ದಾರೆ. ಹಿಂದುಳಿದ ವರ್ಗಗಳ ಹಿತ ಕಾಯುವ ಬಿಜೆಪಿಯಡಿ ಈ ಅಲಕ್ಷಿತ ಮಂದಿ ಸೇರಬೇಕಾಗಿದೆ. ಒಗ್ಗಟ್ಟಾಗಿ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯನವರಿಗೆ, ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಸರಕಾರದ ಮೇಲೆ ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯ ಕೊಡ್ತಾ ಇರೋ ಅನ್ನ ಭಾಗ್ಯದ ಅಕ್ಕಿಗೆ ಕೇಂದ್ರದ ಬಿಜೆಪಿ ಸರಕಾರ ಕೆಜಿಗೆ ರೂ. 30 ಕೊಡ್ತಾ ಇದೆ, ರಾಜ್ಯ ಸರಕಾರ ರೂ. 3ನ್ನು ಭರಿಸುತ್ತ ಇದೆ. ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕೊಡೋ ‘ಉಜ್ವಲ’ ಯೋಜನೆಯಲ್ಲಿ ರಾಜ್ಯ ಸರಕಾರ ಕೊಡೋದು ರೆಗ್ಯುಲೇಟರ್‌ ಮಾತ್ರ. ಅಂದರೆ ಹಸು ಕೊಡೋದು ಕೇಂದ್ರ, ಹಗ್ಗ ಕೊಡೋದು ರಾಜ್ಯ ಎಂದಾಗಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಜ್ಞೆ ಒದಗಿಸಲು ಮೂಲ ಕಾರಣ ದೇವರಾಜ ಅರಸು ಎಂಬುದನ್ನು ಸ್ಮರಿಸಿಕೊಂಡ ಅವರು, ಇವತ್ತು ಸ್ಥಳೀಯ ಆಡಳಿತೆಯಲ್ಲಿ ಶೇ.33 ಮೀಸಲಾತಿ, ಸಹಕಾರಿ ರಂಗದಲ್ಲಿ 2 ಬಗೆಯ ಮೀಸಲಾತಿ ಬಂದಿರುವುದು ತಮ್ಮ ಪ್ರಯತ್ನದ ಫಲದಿಂದ ಎಂದರು. ಹಿಂದುಳಿದ ವರ್ಗದವರು ತಮ್ಮನ್ಯಾರೂ ಕೇಳ್ಳೋರಿಲ್ಲ ಎಂಬ ಹತಾಶೆ, ಕೀಳರಿಮೆ ಬಿಟ್ಟು ಪ್ರಾಮಾಣಿಕವಾಗಿ ಒಂದಾಗಿ ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿದರೆ ರಾಜಕೀಯವಾಗಿ ಬೆಳೆಯೋದಕ್ಕೆ ಸಾಧ್ಯ. ಅದಕ್ಕೆ ಬಿಜೆಪಿಯ ಧ್ಯೇಯ ಧೋರಣೆ ಸೂಕ್ತವಾಗಿದೆ’ ಎಂದರು.

Advertisement

ಕಾಂಗ್ರೆಸ್‌ ಮುಕ್ತ ಜಿಲ್ಲೆ ರೂಪಿಸಲು ಬಿಜೆಪಿ ಸಜ್ಜು
ಸಂಸದ ನಳಿನ್‌ಕುಮಾರ್‌ ಕಟೀಲು ಸಮಾವೇಶ ಉದ್ಘಾಟಿಸಿ, ‘ಮಂಡಲ ಮಟ್ಟದಲ್ಲಿ ಇಷ್ಟೊಂದು ಯಶಸ್ವಿಯಾಗಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಸಾಧ್ಯವಾಗಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ದ.ಕ. ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆ ಮಾಡಲು ಖಂಡಿತಾ ಸಾಧ್ಯವಿದೆ ಎಂಬ ಆತ್ಮವಿಶ್ವಾಸ ಮೂಡುತ್ತಿದೆ. ಹಿಂದುಳಿದ ವರ್ಗಗಳ ಮಂದಿ ತಮ್ಮ ಬದುಕನ್ನು ಕಟ್ಟುವ ಅನಿವಾರ್ಯವಿದೆ; ಬಿಜೆಪಿ ಹಿಂದುಳಿದ ವರ್ಗದವರ ಏಕೈಕ ಆಶಾಕಿರಣವಾಗಿದೆ ‘ ಎಂದರು.

ಒಬಿಸಿ ಹೆಸರು ಹೇಳಿ ಒಡೆಯೋ ಸಿದ್ದರಾಮಯ್ಯ
‘ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವವರೆಗೆ ಹಿಂದುಳಿದವರು ಸ್ವಾಭಿಮಾನಿಗಳಾಗಿ ಬದುಕು ನಡೆಸಲು ಸಾಧ್ಯವಿಲ್ಲ ಎಂದರು. ಆರೆಸ್ಸೆಸ್‌ ಬ್ರಾಹ್ಮಣರು, ಹಣವಂತರ ಕೂಟ ಎಂದು ನಂಬಿಸಿಬಿಟ್ಟಿದ್ರು. ಮಂಕು ಹಿಡಿಸಿಬಿಡುವುದರಲ್ಲಿ ಕಾಂಗ್ರೆಸ್‌ನವರು ಜೆಹಾದಿಗಳಿಗಿಂತ ಏನೇನೂ ಕಡಿಮೆಯಿಲ್ಲ’ ಎಂದು ಟೀಕಿಸಿದರು.

ಯಡಿಯೂರಪ್ಪ ಮತ್ತೆ ಸಿಎಂ: ಅಧಿಕಾರಿ ಭವಿಷ್ಯ
’12 ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ನನ್ನನ್ನು ಬರಮಾಡಿಕೊಂಡ ಯಡಿಯೂರಪ್ಪ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳಿದ್ದೆ-ಇದೇ ಜಾಗದಲ್ಲಿ. 6 ತಿಂಗಳಲ್ಲಿ ಅವರು ಉಪಮುಖ್ಯಮಂತ್ರಿ, ಮತ್ತೆ ಮುಖ್ಯಮಂತ್ರಿ ಆದದ್ದು ನಿಮಗೆ ಗೊತ್ತೇ ಇದೆ. ಇವತ್ತು ಹೇಳ್ತಾ ಇದ್ದೇನೆ- ಮತ್ತೆ ಯಡಿಯೂರಪ್ಪ ಸಿಎಂ ಆಗ್ತಾರೆ, ಪುಟ್ಟಸ್ವಾಮಿಯವರೇ ನೀವು ಮಂತ್ರಿ ಆಗ್ತೀರಿ’ ಎಂದು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ ಭವಿಷ್ಯ ನುಡಿದರು. ಬಿಜೆಪಿಗೆ ವಿವಿಧ ರಾಜಕೀಯ ಪಕ್ಷಗಳಿಂದ ಕಾರ್ಯಕರ್ತರಾಗಿ ಸೇರ್ಪಡೆಗೊಂಡರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್‌, ಸುದರ್ಶನ ಎಂ., ಕಿಶೋರ್‌ ರೈ, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ ಕಟೀಲು, ಹಿಂ.ವ. ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಜಿಲ್ಲಾಧ್ಯಕ್ಷ ಸುರೇಶ್‌ ಕಣಿಮರಡ್ಕ, ಪ್ರ. ಕಾರ್ಯದರ್ಶಿಗಳಾದ ಟಿ. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು ಮುಖ್ಯ ಅತಿಥಿಗಳಾಗಿದ್ದರು. ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ಜಿಲ್ಲಾಧ್ಯಕ್ಷ ಜೋಯ್ಲಸ್‌ ಡಿ’ಸೋಜಾ, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್‌, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ಪ್ರಸಾದ್‌ ಕುಮಾರ್‌, ಪಕ್ಷ ಮುಖಂಡರಾದ ಭುವನಾಭಿರಾಮ ಉಡುಪ, ಕೆ. ಆರ್‌. ಪಂಡಿತ್‌, ಎಂ. ಎಸ್‌. ಕೋಟ್ಯಾನ್‌, ಸೂರಜ್‌ ಜೈನ್‌, ಅಭಿಲಾಷ್‌ ಶೆಟ್ಟಿ, ಬಂಟ್ವಾಳದ ಹಿಂ. ಮೋರ್ಚಾ ಅಧ್ಯಕ್ಷ ವಸಂತ, ಎಸ್‌ಸಿ ಮೋರ್ಚಾದ ಜಿಲ್ಲಾ ಪದಾಧಿಕಾರಿ ಶೀನ ಮಾಸ್ತಿಕಟ್ಟೆ ಮೊದಲಾದವರು ವೇದಿಕೆಯಲ್ಲಿದ್ದರು.

ಬಿಜೆಪಿ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಗೋಪಾಲ ಶೆಟ್ಟಿಗಾರ್‌ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್‌ ಮೂಡುಶೆಡ್ಡೆ ವಂದಿಸಿದರು. ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಗಣೇಶ ಅರ್ಬಿ ನಿರೂಪಿಸಿದರು.

ಸುಮಾರು ಮೂರು ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ ಸ್ವರಾಜ್ಯ ಮೈದಾನದಿಂದ ಪದ್ಮಾವತಿ ಕಲಾಮಂದಿರದವರೆಗೆ ಕಾರ್ಯಕರ್ತರ ಮೆರವಣಿಗೆ ನಡೆಯಿತು.

ಕೆಂಪಯ್ಯ ಸೂಪರ್‌ ಹೋಂ ಮಿನಿಸ್ಟರ್‌
ಸಿದ್ದರಾಮಯ್ಯನವರ ಪಕ್ಕವೇ ಕುಳಿತುಕೊಳ್ಳುವ ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಈ ರಾಜ್ಯದ ಸೂಪರ್‌ ಹೋಂ ಮಿನಿಸ್ಟರ್‌ ಆಗಿಬಿಟ್ಟಿದ್ದಾರೆ. ಹಾಲಿ ಡಿಜಿಪಿ ಕೆಂಪಯ್ಯನವರ ಮಾತು ಕೇಳುವ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ತಂದರೆ ಕೋಲ, ಕಂಬಳ, ದೈವಾರಾಧನೆಗಳಿಗೆ ಅಡ್ಡಿಯಾಗುವ ಅಪಾಯವಿದೆ ಎಂದು ನಳಿನ್‌ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next