Advertisement

ಇಂದು ಮಹಾಲಿಂಗೇಶ್ವರ ಕಂಬಿ ಐದೇಶಿ ಉತ್ಸವ

02:58 PM Apr 21, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಆರಾಧ್ಯ ದೈವ ಮಹಾಲಿಂಗೇಶ್ವರ ಕಂಬಿ ಐದೇಶಿ ಉತ್ಸವವು ಏ.21ರ ಗುರುವಾರ ಸಂಭ್ರಮ ಸಡಗರದಿಂದ ನಡೆಯಲಿದೆ.

Advertisement

ಭಾರತ ಹುಣ್ಣಿಮೆಯಿಂದ ಹೋಳಿಹುಣ್ಣಿಮೆ ವರೆಗೂ ಕಂಬಿ ಮಲ್ಲಯ್ಯ ಪಟ್ಟಣದ ಪ್ರತಿ ಮನೆಗೆ ತೆರಳಿ ಭಕ್ತರಿಂದ ಪೂಜೆಗೊಳ್ಳುತ್ತಾನೆ. ಹೋಳಿ ಹುಣ್ಣಿಮೆಯ ಮರುದಿನ (ಮಾ.18ರಂದು) ಕಂಬಿ ಮಲ್ಲಯ್ಯನ ಶ್ರೀಶೈಲ ಪಾದಯಾತ್ರೆ ಪ್ರಾರಂಭವಾಗುತ್ತದೆ. ಅಂದಿನಿಂದ 15ದಿನಗಳ ಪಾದಯಾತ್ರೆಯ ಮೂಲಕ ಯುಗಾದಿ ಅಮವಾಸ್ಯೆ ಮುನ್ನಾದಿನ ಸುಕ್ಷೇತ್ರ ಶ್ರೀಶೈಲವನ್ನು ತಲುಪಿ, ಶ್ರೀಕ್ಷೇತ್ರ ದರ್ಶನ ಮುಗಿಸಿ ಯುಗಾದಿ ಪಾಡ್ಯ ಮರುದಿನ ಅಲ್ಲಿಂದ ಪಾದಯಾತ್ರೆ ಮೂಲಕ ಮಹಾಲಿಂಗಪುರಕ್ಕೆ ಮರಳುತ್ತಾನೆ.

ವಿಶಿಷ್ಟ ಆಚರಣೆ: ಕಂಬಿ ಪಟ್ಟಣದ ಪ್ರವೇಶದ ನಂತರ ಬರುವ ಗುರುವಾರದಂದು ಐದೇಶಿಯನ್ನು ಆಚರಿಸಲಾಗುತ್ತದೆ. ಈ ಒಂದುವರೆ ತಿಂಗಳ ಅವಧಿಯಲ್ಲಿ ಇಲ್ಲಿಯ ಜನತೆ ಆಚರಿಸುವ ವಿಶಿಷ್ಟ ಪದ್ಧತಿ ಏನೆಂದರೆ ಮದುವೆ, ಸೀಮಂತ, ಗೃಹಪ್ರವೇಶ, ಗರ್ಭಿಣಿಯರನ್ನು ತವರು ಮನೆಗೆ ಕಳಿಸುವಂತಿಲ್ಲ, ಹೊಸ ಪಾದರಕ್ಷೆಗಳ ಖರೀದಿ ಹಾಗೂ ಚರ್ಮದ ಪಾದುಕೆಗಳಿಗೆ ಎಣ್ಣೆಹಾಕುವಂತಿಲ್ಲ ಮತ್ತು ಕಸಗುಡಿಸುವ ಪೊರಕೆಗಳನ್ನು ಖರೀದಿಸುವ ಹಾಗಿಲ್ಲ, ಮನೆಯಲ್ಲಿ ಹೊಸ ಒಲೆಗಳನ್ನು ಹಾಕುವುದಿಲ್ಲ.

ಮುಖ್ಯವಾಗಿ ಐದೇಶಿ ಆಚರಣೆ ಒಂದುವರೆ ತಿಂಗಳಲ್ಲಿ ಅವಧಿಯಲ್ಲಿ ಯಾರಾದರೂ ಪರ ಊರಿಗೆ ಹೋಗಿದ್ದರೆ ಐದೇಶಿ ಸಂಜೆ ಕಡ್ಡಾಯವಾಗಿ ಊರಿಗೆ ಮರಳಿ ಬರಲೇಬೇಕೆಂಬ ವಾಡಿಕೆ ಇದೆ. ಇದು ಇಲ್ಲಿಯ ಭಕ್ತರು ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ವಿಶಿಷ್ಟ ಆಚರಣೆಯಾಗಿದೆ. ಇದನ್ನು ಕಡಗಣಿಸಿದವರಿಗೆ ಕೆಡು ಕಟ್ಟಿಟ್ಟ ಬುತ್ತಿ ಎಂಬುದು ಭಕ್ತರ ನಂಬಿಕೆಯಾಗಿದೆ. ವಿಭಿನ್ನ ನಿಯಮ: ಕಂಬಿಯೊಂದಿಗೆ ಪಾದಯಾತ್ರೆ ಕೈಗೊಂಡ ಭಕ್ತರು ಸುಕ್ಷೇತ್ರ ಶ್ರೀಶೈಲ ದರ್ಶನ ನಂತರ ನೇರವಾಗಿ ಊರಿಗೆ ಮರಳುವಂತಿಲ್ಲ.

ಕಂಬಿಯು ಪಾದಯಾತ್ರೆಯ ಮೂಲಕ ಊರಿಗೆ ಬರುವರೆಗೂ ಊರಿನ ಗಡಿ (ಸೀಮೆ) ಆಚೆಯ ರನ್ನಬೆಳಗಲಿ, ರಬಕವಿ, ಕೆಸರಗೊಪ್ಪ, ಢವಳೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೇ ವಾಸವಿರಬೇಕು. ಮುಖ್ಯವಾಗಿ ಮಲ್ಲಯ್ಯ ಕಂಬಿಯು ದವನದ ಹುಣ್ಣಿಮೆಯ ನಂತರ ಬರುವ ರವಿವಾರವೇ ಪುರ ಪ್ರವೇಶವಾಗಬೇಕು ಮತ್ತು ಪುರ ಪ್ರವೇಶದ ನಂತರ ಸ್ಮಶಾನದಲ್ಲಿ ಅಡ್ಡಹಾಯ್ದು ಚನ್ನಗೀರೇಶ್ವರ ದೇವಸ್ಥಾನ ತಲುಪಬೇಕೆಂಬ ನಿಯಮವಿದೆ. ಈ ಪದ್ಧತಿಯು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

Advertisement

ಶುಭಕಾರ್ಯಗಳಿಗೆ ನಿಷೇಧ: ಮುಖ್ಯವಾಗಿ ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ತೆರಳಿದ ನಂತರ (18-3-2022ರಿಂದ) ಮರಳಿ ಊರಿಗೆ ಬಂದು ಐದೇಶಿ ಆಚರಿಸುವರೆಗೂ (21-4-2022) ವರೆಗೂ ಪಟ್ಟಣದಲ್ಲಿ ನಿಶ್ಚಿತಾರ್ಥ, ಮದುವೆ, ಸೀಮಂತ, ಗೃಹ ಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಪಾದರಕ್ಷೆ ಖರೀದಿಸುವಂತಿಲ್ಲ, ಮನೆಯಲ್ಲಿ ಹೊಸ ಒಲೆ ಅಳವಡಿಕೆ ಮತ್ತು ಪೊರಕೆ ಖರೀದಿಸುವಂತಿಲ್ಲ. ಮುಖ್ಯವಾಗಿ ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ಹೋಗುವ ದಿನ ಊರಲ್ಲಿ ಇದ್ದವರು, ಪರಸ್ಥಳಕ್ಕೆ ಹೋಗಿದ್ದರೆ ಐದೇಶಿ ಸಮಾರೋಪದ ದಿನ ಕಡ್ಡಾಯವಾಗಿ ಊರಿಗೆ ಮರಳಿ ಬಂದು ಮಲ್ಲಯ್ಯನಿಗೆ ಪೂಜೆ ಸಲ್ಲಿಸಬೇಕೆಂಬುದು ವಾಡಿಕೆ. ಇದನ್ನು ಕಡೆಗಣಿಸಿದವರಿಗೆ ಕೇಡು ಕಟ್ಟಿಟ್ಟ ಬುತ್ತಿ ಎಂಬುದು ಭಕ್ತರ ಅಚಲ ನಂಬಿಯಾಗಿದೆ.

ಇಂದು ಐದೇಶಿ ಉತ್ಸವ: ಕಂಬಿ ಮಲ್ಲಯ್ಯ ಪುರ ಪ್ರವೇಶದ ನಂತರ ಬರುವ ಗುರುವಾರ ಏ.21ರಂದು ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರೆಲ್ಲರೂ ಸಾಗರೋಪಾದಿಯಲ್ಲಿ ಮಹಾಲಿಂಗೇಶ್ವರ ದೇವಾಲಯಕ್ಕೆ ಬಂದು ಬೆಲ್ಲ ಹಂಚಿ, ಕಾಯಿ ಕರ್ಪೂರವನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ. ಈ ವೈಶಿಷ್ಟ್ಯಪೂರ್ಣ ಐದೇಶಿಯು ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜರುಗುತ್ತದೆ. ಐದೇಶಿ ನಿಮಿತ್ತ ರಾತ್ರಿ ಬೈಲಾಟ ಹಾಗೂ ಕರಡಿ ಮಜಲು ಕಾರ್ಯಕ್ರಮ ನಡೆಯಲಿವೆ.

ಮನೆ-ಮನೆಗೆ ಕಂಬಿ ಮಲ್ಲಯ್ಯನ ಪೂಜೆ, ಶ್ರೀಶೈಲ ಪಾದಯಾತ್ರೆಗೆ ಬೀಳ್ಕೊಡುಗೆ, ಮರಳಿ ಬಂದಾಗ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅದ್ಧೂರಿ ಸ್ವಾಗತ, ಐದೇಶಿ ಸಮಾರೋಪ ಸೇರಿದಂತೆ ಪ್ರತಿಯೊಂದು ಆಚರಣೆಗಳಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ-ಭಾವವಿಲ್ಲದೇ ಪಟ್ಟಣದ ಎಲ್ಲ ಸಮಾಜದವರು ಶ್ರದ್ಧಾ-ಭಕ್ತಿಯಿಂದ ಉತ್ಸವದಲ್ಲಿ ಭಾಗವಹಿಸುವುದು ಮಹಾಲಿಂಗಪುರದ ಧಾರ್ಮಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ, ಭಾವೈಕ್ಯತೆಯ ಸಹಬಾಳ್ವೆಗೆ ಮಾದರಿಯಾಗಿದೆ.

 „ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next