Advertisement

ತಮಿಳುನಾಡು ಮಹಿಳೆಯರ‌ ಮಲೆ ಪ್ರವೇಶ ಯತ್ನ ವಿಫ‌ಲ

06:00 AM Dec 24, 2018 | Team Udayavani |

ತಿರುವನಂತಪುರಂ: ಶಬರಿಮಲೆ ದೇಗುಲ ಪ್ರವೇಶಿಸಲು ಪೊಲೀಸ್‌ ಭದ್ರತೆಯಲ್ಲಿ ಆಗಮಿಸಿದ್ದ ತಮಿಳುನಾಡಿನ ಮನಿತಿ ಸಂಘಟನೆಯ 11 ಮಹಿಳೆಯರನ್ನು ಪ್ರತಿಭಟನಾಕಾರರು ತಡೆದಿದ್ದು, ಪ್ರವೇಶ ಸಾಧ್ಯವಾಗದೇ ಮಹಿಳೆಯರು ವಾಪಸಾಗಿದ್ದಾರೆ. ಆದರೆ ಅವರು ತಮಿಳುನಾಡಿಗೆ ಇನ್ನೂ ಹಿಂದಿರುಗದೆ, ದರ್ಶನ ಮಾಡಿಯೇ ವಾಪಸಾಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

Advertisement

ಮಹಿಳೆಯರು ಭಾನುವಾರ ಬೆಳಗ್ಗೆ ದೇಗುಲ ಪ್ರವೇಶಿಸಲು ಆಗಮಿಸಿದಾಗ ಪ್ರತಿಭಟನಾಕಾರರು ಅವರನ್ನು ತಡೆದಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದಾಗ ಘರ್ಷಣೆ ಉಂಟಾಗಿದ್ದು, ಜೀವ ಬೆದರಿಕೆಯಿಂದಾಗಿ ಮಹಿಳೆಯರು ನಿರ್ಗಮಿಸಿದ್ದಾರೆ. ಪ್ರತಿಭಟನಾಕಾರರು ಹಿಂಸಾಕೃತ್ಯಕ್ಕೆ ಇಳಿಯಬಹುದಾದ ಸಾಧ್ಯತೆಯಿದ್ದುದರಿಂದ ತಕ್ಷಣವೇ ಮಹಿಳೆಯರಿಗೆ ಸಮೀಪದ ಗಾರ್ಡ್‌ ರೂಮ್‌ನಲ್ಲಿ ರಕ್ಷಣೆ ಒದಗಿಸಲಾಯಿತು. 

ಮನವೊಲಿಸಲು ಪೊಲೀಸರು ಪ್ರಯತ್ನಿಸಿದ್ದರೂ, ಈ ಮಹಿಳೆಯರು ದೇಗುಲ ಪ್ರವೇಶಿಸಲು ನಿರ್ಧರಿಸಿದರು. ನಿಷೇಧಾಜ್ಞೆಯ ನಡುವೆಯೂ ಭಾರೀ ಸಂಖ್ಯೆಯಲ್ಲಿ ನೆರೆ ದಿದ್ದ ಭಕ್ತರು ಮಹಿಳೆಯರನ್ನು ತಡೆದರು. 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದ ನಂತರ ಹಲವು ಬಾರಿ ಮಹಿಳೆಯರು ದೇಗುಲ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ ಪ್ರತಿ ಬಾರಿಯೂ ಪ್ರತಿಭಟನಾಕಾರರು ಇದಕ್ಕೆ ಅಡ್ಡಿ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಮೇಲೆ ಬಿಜೆಪಿ ಆರೋಪ:
ಮಹಿಳೆಯರನ್ನು ದೇಗುಲಕ್ಕೆ ಕಳುಹಿಸುವಲ್ಲಿ ಸಿಪಿಎಂ ನೇತೃತ್ವದ ಸರ್ಕಾರದ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟೇ ಅಲ್ಲ, ಸರ್ಕಾರವೇ ಈ ಮಹಿಳೆಯರನ್ನು ಪೊಲೀಸರ ರಕ್ಷಣೆಯಲ್ಲಿ ದೇಗುಲಕ್ಕೆ ಕಳುಹಿಸುತ್ತಿದೆ ಎಂದು ಪಂದಳಂ ರಾಜಮನೆತನದ ಸದಸ್ಯರು ಆರೋಪಿಸಿದ್ದಾರೆ. ಹೈಕೋರ್ಟ್‌ ನೇಮಿಸಿದ ಮೂವರು ಸದಸ್ಯರ ಸಮಿತಿಯು ಈ ವಿಚಾರವನ್ನು ಪರಿಗಣಿಸಿ ವರದಿ ನೀಡಬೇಕು. ಅದಕ್ಕೆ ಅನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇದೇ ವೇಳೆ, ನಕ್ಸಲ್‌ ಮನಸ್ಥಿತಿಯ ಕೆಲವರು ಮಹಿಳೆಯರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next