Advertisement

ಪರಕೀಯರಂತೆ ಕಾಂಗ್ರೆಸ್‌ನಿಂದ ಲೂಟಿ: ಬಚ್ಚೇಗೌಡ

09:20 AM Apr 09, 2019 | Team Udayavani |

ನೆಲಮಂಗಲ: ಸ್ವಾತಂತ್ರ್ಯ ಪೂರ್ವದಲ್ಲಿ ಪರಕೀಯರು ದೇಶದ ಸಂಪತ್ತನ್ನು ಲೂಟಿ ಮಾಡಿದರೇ, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಮುಖಂಡರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಕಿಡಿಕಾರಿದರು.

Advertisement

ತಾಲೂಕು ಪೊಲೀಸ್‌ ಉಪಭಾಗ ವ್ಯಾಪ್ತಿಯ ಮಾದನಾಯಕನಹಳ್ಳಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನ 50 ವರ್ಷದ ಆಳ್ವಿಕೆಯಲ್ಲಿ ದೇಶ ಪಾರ್ಶ್ವವಾಯುಗೆ ಬಲಿಯಾಗಿತ್ತು, ಇದರಿಂದ ಅನಾರೋಗ್ಯವಾಗಿದ್ದ ಜನರು ಕಾಂಗ್ರೆಸ್‌ ಬದಲಿಸಿ ದೇಶದ ನಾಯಕನಾಗಿ ಮೋದಿ ಅವರನ್ನು ಪ್ರಧಾನಿ ಮಾಡಿದ ನಂತರ ಆರೋಗ್ಯವಂತರಾದರು ಎಂದರು.

ಯಲಹಂಕ ಕ್ಷೇತ್ರದಲ್ಲಿ ಮೋದಿಯಂತೆ ವಿಶ್ವನಾಥ್‌ ಅಭಿವೃದ್ಧಿ ಕೆಲಸ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ತಾನು ಜಯಗಳಿಸಿದರೆ ಯಲಹಂಕ ಕ್ಷೇತ್ರಕ್ಕೆ ತಾನೂ ಮತ್ತು ವಿಶ್ವನಾಥ್‌ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆಂದರು.

ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್‌ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವೀರಪ್ಪಮೊಯ್ಲಿ 10 ವರ್ಷದಿಂದ ಸಂಸದರಾಗಿ ಎತ್ತಿನಹೊಳೆ ಯೋಜನೆಯಲ್ಲಿ ಕೋಟಿ ಕೋಟಿ ಹಣ ನೀರು ಪಾಲು ಮಾಡಿದ್ದಾರೆ. ಈ ಬಾರಿ ಮಂಗಳೂರಿಗೆ ಪಲಾಯನ ಮಾಡುವುದು ನೂರಕ್ಕೆ ನೂರು ಸತ್ಯ. ಹಗರಣವಿಲ್ಲದ ಮೋದಿ ಆಡಳಿತವನ್ನು ಬೆಂಬಲಿಸಲು ಬಚ್ಚೇಗೌಡರಿಗೆ ಮತ ನೀಡಿ ಎಂದರು.

Advertisement

ಜೆಡಿಎಸ್‌ ಮುಖಂಡರ ಸೇರ್ಪಡೆ: ದಾಸನಪುರ ಹೋಬಳಿಯ ಕಾರ್ಯಕರ್ತರ ಸಭೆಯಲ್ಲಿ ಮಾಚೋಹಳ್ಳಿ ಗ್ರಾಪಂ ಜೆಡಿಎಸ್‌ ಬೆಂಬಲಿತ ಅಧ್ಯಕ್ಷ ಮುರಳಿ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಲಕ್ಷ್ಮೀರಾಜಣ್ಣ ಹಾಗೂ 10 ಜನ ಸದಸ್ಯರು ಸೇರಿದಂತೆ ಹೋಬಳಿಯ 65ಕ್ಕೂ ಹೆಚ್ಚು ಮಂದಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಶಾಸಕ ವಿಶ್ವನಾಥ್‌ ಹಾಗೂ ಬಿ.ಎನ್‌. ಬಚ್ಚೇಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಬೆಂಗಳೂರು ನಗರ ಉಪಾಧ್ಯಕ್ಷ ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ರಾಜಣ್ಣ, ಸಮನ್ವಯ ಸಮಿತಿ ಸಂಚಾಲಕ ರಾಮಮೂರ್ತಿ, ಹೋಬಳಿ ಅಧ್ಯಕ್ಷ ರಾಮಚಂದ್ರಮೂರ್ತಿ, ಜಿಪಂ ಸದಸ್ಯರಾದ ಉದ್ದಂಡಯ್ಯ, ಸುಧಾ, ಶಾಂತಲಕ್ಷ್ಮೀ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next