Advertisement

Air pollution: ವಾಯುಮಾಲಿನ್ಯ ತಡೆಗೆ ದೀರ್ಘಾವಧಿ ಪರಿಹಾರ ಅಗತ್ಯ

12:12 AM Aug 31, 2023 | Team Udayavani |

ಭಾರತದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಪರಿಣಾಮ ದೇಶದ ಜನರ ಜೀವಿತಾವಧಿ ಸರಾಸರಿ 5 ವರ್ಷಗಳಷ್ಟು ಮತ್ತು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಜನರ ಜೀವಿತಾವಧಿ ಸರಾಸರಿ 12 ವರ್ಷಗಳಷ್ಟು ಕಡಿಮೆ ಯಾಗುತ್ತಿದೆ ಎಂಬ ಕಳವಳಕಾರಿ ವರದಿಯೊಂದನ್ನು ಅಮೆರಿಕದ ಚಿಕಾಗೊ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌(ಎಪಿಕ್‌) ಬಿಡುಗಡೆ ಮಾಡಿದೆ.

Advertisement

ವರ್ಷಗಳ ಹಿಂದೆಯೇ ದೇಶದ ಪ್ರಮುಖ ನಗರಗಳ ಸಹಿತ 35 ನಗರಗಳಲ್ಲಿನ ವಾಯು ಗುಣಮಟ್ಟ ಕಳಪೆಯಾಗಿದ್ದು ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಈಗ ಎಪಿಕ್‌ ಬಿಡುಗಡೆ ಮಾಡಿ ರುವ ಪರಿಷ್ಕೃತ ವಾಯು ಗುಣಮಟ್ಟ ಜೀವನ ಸೂಚ್ಯಂಕ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿರುವುದರತ್ತ ಬೆಟ್ಟು ಮಾಡಿದ್ದು ಇದು ಜನರ ಪ್ರಾಣಕ್ಕೇ ಕುತ್ತು ತಂದೊಡ್ಡುತ್ತಿರುವ ಆತಂಕಕಾರಿ ವಿಷಯವನ್ನು ಹೊರಗೆಡಹಿದೆ. ಅಲ್ಲದೆ ಕಳಪೆ ಗುಣ ಮಟ್ಟದ ಗಾಳಿಯ ಸೇವನೆಯಿಂದ ಜನರು ಹೃದಯ, ಶ್ವಾಸಕೋಶ, ಚರ್ಮ ಮತ್ತು ಉಸಿರಾಟ ಸಂಬಂಧಿ ವಿವಿಧ ಅನಾರೋಗ್ಯಗಳಿಂದ ಬಳಲುತ್ತಿರುವ ಕುರಿತಂತೆಯೂ ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ದಿಲ್ಲಿ ಮತ್ತು ಸುತ್ತಮುತ್ತಲಿನ ನಗರಗಳ ವಾಯು ಗುಣಮಟ್ಟ ತೀರಾ ಕಳಪೆಯಾಗಿದ್ದು ವರ್ಷದ ಮೂರ್‍ನಾಲ್ಕು ತಿಂಗಳುಗಲ್ಲಂತೂ ಇಲ್ಲಿ ಉಸಿರಾ ಡುವುದೇ ಕಷ್ಟಸಾಧ್ಯ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಗರಗಳಲ್ಲಿ ಒಂದೇ ಸಮನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಇವು ಹೊರ ಸೂಸುವ ಇಂಗಾಲಯುಕ್ತ ಹೊಗೆ ಇಡೀ ವಾತಾವರಣವನ್ನು ಕುಲಗೆಡಿಸಿ ಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದೊಂದು ವಾರ್ಷಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಶಕಗಳಿಂದೀಚೆಗೆ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ತಾಪಮಾನದ ಏರಿಕೆಗೂ ಕಾರಣವಾಗುತ್ತಿದೆ.

ವಾಯುಮಾಲಿನ್ಯವನ್ನು ನಿಯಂತ್ರಿಸುವ ದಿಸೆಯಲ್ಲಿ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಹಲವಾರು ತಾತ್ಕಾಲಿಕ ಉಪಕ್ರಮಗಳನ್ನು ಕೈಗೊಂಡರೂ ಇವು ನಿರೀಕ್ಷಿತ ಫ‌ಲಿತಾಂಶವನ್ನು ನೀಡಿಲ್ಲ. ಕೈಗಾರಿಕೆಗಳು, ವಿವಿಧ ಅಭಿವೃದ್ಧಿ ಕಾಮ ಗಾರಿಗಳು, ರಸ್ತೆಗಳಲ್ಲಿನ ವಾಹನದಟ್ಟಣೆ, ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲು ಮತ್ತಿತರ ಸಾಂಪ್ರದಾಯಿಕ ಇಂಧನಗಳ ಮಿತಿಮೀರಿದ ಬಳಕೆ, ನಗರೀಕ ರಣದ ಭರದಲ್ಲಿ ಮರಗಳಿಗೆ ಕೊಡಲಿ ಮತ್ತಿತರ ಕಾರಣಗಳಿಂದಾಗಿ ನಗರ ಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಲೇ ಸಾಗಿದೆ. ಇದೇ ವೇಳೆ ಕೈಗಾರಿಕೆ ಮತ್ತು ನಗರೀಕರಣ ಗ್ರಾಮೀಣ ಪ್ರದೇಶಗಳಿಗೂ ಧಾಂಗುಡಿ ಇಟ್ಟಿದ್ದು ಇಲ್ಲಿನ ಗಾಳಿಯನ್ನೂ ಕಲುಷಿತಗೊಳಿಸುತ್ತಿದೆ. ಇವೆಲ್ಲವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆಯಾದರೂ ಅದಿನ್ನೂ ಅಷ್ಟೊಂದು ಜನಪ್ರಿಯವಾಗಿಲ್ಲ.

ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆ, ಅಧ್ಯಯ ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನವೀಕರಿ ಸಬಹುದಾದ ಇಂಧನಗಳ ಬಳಕೆಗೆ ಪ್ರೋತ್ಸಾಹ ನೀಡುವ ಜತೆಯಲ್ಲಿ ಇಂತಹ ಮತ್ತಷ್ಟು ಪರ್ಯಾಯ ಇಂಧನ ಮೂಲಗಳ ಸಂಶೋಧನೆಯ ದಿಸೆಯಲ್ಲಿ ಕಾರ್ಯೋನ್ಮುಖ ವಾಗಬೇಕು. ಇದೇ ವೇಳೆ ಸಾರ್ವಜನಿಕರೂ ಈ ವಿಚಾರದಲ್ಲಿ ಸರಕಾರದೊಂದಿಗೆ ಕೈಜೋಡಿಸಬೇಕಾದುದು ಇಂದಿನ ತುರ್ತು ಕೂಡ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next