Advertisement

ಲಾಕ್‍ಡೌನ್ ಮ್ಯಾರೇಜ್ ಸ್ಟೋರಿ

07:53 AM Jun 19, 2020 | Lakshmi GovindaRaj |

ಲಾಕ್ ಡೌನ್‍ನಲ್ಲಿ ಅನೇಕರು ಕೃಷಿ, ಬರವಣಿಗೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೆ ಇನ್ನು ಕೆಲವರು ಸಂಸಾರಿಗಳಾಗಿದ್ದಾರೆ, ಮತ್ತೆ ಕೆಲವರು ಸಂಸಾರಿಗಳಾಗುವ ಬಗ್ಗೆ ಹೇಳಿಕೊಂಡಿದ್ದಾರೆ. ಈಗಾಗಲೇ ನಿರ್ದೇಶಕ ಎ.ಪಿ.ಅರ್ಜುನ್ ಲಾಕ್ ಡೌನ್‍ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಈಗ ನಟಿಮಣಿಯರ ಸರದಿ. ಈಗಾಗಲೇ ನಟಿ ಮಯೂರಿ ಕ್ಯಾತರಿ ತಮ್ಮ ಬಹುವರ್ಷದ ಗೆಳೆಯ ಅರುಣ್ ಅವರನ್ನು ಸರಳವಾಗಿ ವಿವಾಹವಾಗಿದ್ದಾರೆ.

Advertisement

ಈಗ ನಟಿ ಶುಭಾ ಪೂಂಜಾ ತಮ್ಮ ಮದುವೆ ಸುದ್ದಿಯನ್ನು ಘೋಷಿಸಿಕೊಂಡಿದ್ದಾರೆ. ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಈಗ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ.  ಜಯಕರ್ನಾಟಕ ಸಂಘಟನೆಯ ಮುಖಂಡ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ವಿವಾಹವಾಗಲು ನಟಿ ಶುಭಾ ಪೂಂಜಾ ನಿರ್ಧರಿಸಿದ್ದಾರೆ.

ಇವರಿಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಲಿದ್ದು, ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಇನ್ನು ಶುಭಾ ಅವರನ್ನು ವರಿಸುತ್ತಿರುವ ಸುಮಂತ್ ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಈ ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈ ಡಿಸೆಂಬರ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ತ್ರಿದೇವಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಬಡ್ತಿ ಪಡೆದಿರುವ ನಟಿ ಶುಭಾ ಪೂಂಜಾ ಸದ್ಯ ರೈಮ್ಸ್ ಚಿತ್ರದಲ್ಲಿ ಟಿವಿ ವಾಹಿನಿಯೊಂದರ ನಿರೂಪಕಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಶುಭಾ ಪೂಂಜಾ ಅವರೇ ತಮ್ಮ ಮದುವೆಯ ವಿಷಯವನ್ನು ಬಹಿರಂಗಪಡಿಸಿದ್ದು, ಶೀಘ್ರದಲ್ಲಿಯೇ ಮದುವೆಯ ದಿನಾಂಕ ತಿಳಿಸುವುದಾಗಿ ಹೇಳಿದ್ದಾರೆ. ಇದು ಶುಭಾ ಕಥೆಯಾದರೆ, ಇನ್ನೊಂದಿಷ್ಟು ಮಂದಿಯ ಮದುವೆ ಮಾತುಕತೆ ನಡೆಯುತ್ತಿರಬಹುದು. ಸದ್ಯದಲ್ಲೇ ಆ ಸುದ್ದಿ ಹೊರಬೀಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next