Advertisement

ಕೊಯಿಲ, ಮುಂಡೂರು ಬಳಿ ಸ್ಥಳ ಗುರುತು

09:49 AM Jun 02, 2022 | Team Udayavani |

ಪುತ್ತೂರು: ಗೋಶಾಲೆ ನಿರ್ಮಾಣ ಮಾಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಪೂರಕ ಎಂಬಂತೆ ಕಡಬ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಹಾಗೂ ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ತಾಲೂಕು ಮಟ್ಟದ ಗೋ ಶಾಲೆ ತೆರೆಯಲು ಜಾಗ ಗುರುತು ಪ್ರಕ್ರಿಯೆ ನಡೆದಿದೆ.

Advertisement

ಪುತ್ತೂರು ತಾಲೂಕು ಮಟ್ಟದಲ್ಲಿ ಒಂದು ಸುಸಜ್ಜಿತ ಗೋಶಾಲೆ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಪಶು ಸಂಗೋಪನ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಮುಂಡೂರು ಸಮೀಪದ 8.5 ಎಕ್ರೆ ಜಾಗ ಗುರುತಿಸಲಾಗಿದೆ. ಇದು ಗೋಮಾಳ ಜಾಗವಾಗಿದ್ದು, ಗೋಶಾಲೆ ನಿರ್ಮಿಸಲು ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಈ ಜಾಗವನ್ನು ಆಯ್ಕೆ ಮಾಡಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ತಹಶೀಲ್ದಾರ್‌ ಇದನ್ನು ಸರ್ವೇ ಮಾಡಲು ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ವೇ ಕಾರ್ಯ ಮುಗಿದ ಬಳಿಕ ಈ ಜಾಗವನ್ನು ಗೋಶಾಲೆಗಾಗಿ ಮೀಸಲಿಡುವ ಕಾರ್ಯ ನಡೆಯಲಿದೆ. ಇದಾದ ಬಳಿಕ ಸರಕಾರದಿಂದ ಅನುದಾನ ಮಂಜೂರುಗೊಂಡು ಗೋಶಾಲೆ ನಿರ್ಮಾಣವಾಗಲಿದೆ.

ಜಿಲ್ಲಾ ಮಟ್ಟದ ಗೋ ಶಾಲೆ

ದ.ಕ. ಜಿಲ್ಲಾ ಮಟ್ಟದ ಗೋ ಶಾಲೆಯನ್ನು ಕಡಬ ತಾಲೂಕಿನ ಕೊಯಿಲದ ಜಾನುವಾರು ತಳಿ ಸಂವರ್ಧನ ಕೇಂದ್ರದ ಸಮೀಪ ನಿರ್ಮಿ ಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 89 ಎಕ್ರೆ ವಿಶಾಲ ಜಮೀನು ಗುರುತಿಸಲಾಗಿದೆ. ಈಗಾಗಲೇ ಅಲ್ಲಿ ಕೊಳವೆಬಾವಿ ಕೊರೆಯ ಲಾಗಿದೆ. ಪ್ರಸ್ತುತ ಜಮೀನಿಗೆ ಬೇಲಿ ರಚನ ಕಾರ್ಯ ಪ್ರಗತಿಯಲ್ಲಿದೆ.

Advertisement

ಪುತ್ತೂರು ದೇಗುಲದಿಂದ ಗೋಶಾಲೆ ಯೋಜನೆ

ಪಶುಸಂಗೋಪನ ಇಲಾಖೆಯ ಯೋಜನೆ ಜಾರಿಯಲ್ಲಿರುವಾಗಲೇ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವತಿಯಿಂದ ಒಂದು ಸ್ವತಂತ್ರ ಗೋಶಾಲೆ ನಡೆಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕುರಿಯ ಗ್ರಾಮದಲ್ಲಿ 19 ಎಕ್ರೆ ಜಮೀನು ಗುರುತಿಸಲಾಗಿದೆ. ಜಾಗ ಪರಿಶೀಲನೆ ಮಾಡಿದ ಬಳಿಕ ಪ್ರಸ್ತಾವನೆಯನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಲಾಗಿದ್ದು, ಅಲ್ಲಿಂದ ಎ.ಸಿ. ಕಚೇರಿಗೆ, ಅನಂತರ ಜಿಲ್ಲಾಧಿಕಾರಿ ಕಚೇರಿಗೆ ಕಡತ ತಲುಪಿದೆ. ಇದೀಗ ಜಿಲ್ಲಾಧಿಕಾರಿ ಕಚೇರಿಯಿಂದ ಮತ್ತೆ ಕಡತ ತಾಲೂಕು ತಹಶೀಲ್ದಾರ್‌ ಕಚೇರಿಗೆ ಬಂದಿದೆ. ಈ ಜಾಗದ ವಿಚಾರದಲ್ಲಿ ಒಂದಷ್ಟು ತಾಂತ್ರಿಕ ಗೊಂದಲ ಇರುವ ಕಾರಣ ಮರು ಪರಿಶೀಲನೆಗೆ ಸೂಚಿಸಲಾಗಿದೆ. ಸರಕಾರದಿಂದ ಜಾಗ ಮಂಜೂರಾದರೆ ದೇಗುಲದ ವತಿಯಿಂದ ಸ್ವತಂತ್ರವಾಗಿ ಗೋಶಾಲೆ ನಿರ್ವಹಣೆ ಮಾಡುವ ಇರಾದೆಯಿದೆ.

ಒಂದೇ ಗೋಶಾಲೆ ಸಚಿವರ ಸೂಚನೆ

ಒಂದೇ ತಾಲೂಕಿನಲ್ಲಿ ಎರಡೆರಡು ಗೋಶಾಲೆ ನಿರ್ಮಿಸುವ ಅಗತ್ಯವಿಲ್ಲ. ಎರಡೂ ಪ್ರಸ್ತಾವನೆಗಳನ್ನು ಸೇರಿಸಿ ಒಂದು ಕಡೆ ಕೇಂದ್ರೀಕರಿಸಿ ಗೋಶಾಲೆ ನಿರ್ಮಿಸುವುದು ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹಿಂದಿನ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಷ್ಟು ಬೇಕಾದರೂ ಗೋಶಾಲೆ ನಿರ್ಮಾಣ ಮಾಡಬಹುದು. ಆದರೆ ಅದರ ನಿರ್ವಹಣೆ ಅಷ್ಟು ಸುಲಭವಲ್ಲ. ವರ್ಷಪೂರ್ತಿ ಜಾನುವಾರುಗಳ ಸಾಕಣಿಕೆ, ಉಪಚಾರ, ನಿರ್ವಹಣೆ ಮಾಡಬೇಕು. ಇದು ಕಷ್ಟದ ಕೆಲಸ. ಹೀಗಾಗಿ ಎರಡು ಪ್ರಸ್ತಾವನೆಗಳನ್ನು ವಿಲೀನ ಮಾಡುವುದು ಉತ್ತಮ. ಪಶು ಸಂಗೋಪನಾ ಇಲಾಖೆಯಿಂದ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಯೋಜನೆಯ ಜಾರಿಯಲ್ಲಿ ದೇವಸ್ಥಾನವೂ ಸೇರಿದಂತೆ ನಾನಾ ಸಂಘಟನೆಗಳನ್ನು ಸೇರಿಸಿಕೊಂಡು ಅತ್ಯುತ್ತಮ ಗೋಶಾಲೆ ನಿರ್ಮಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸರ್ವೇ ಕಾರ್ಯ

ಮುಂಡೂರು ಗ್ರಾಮದ ಗೋಮಾಳ ಪ್ರದೇಶವನ್ನು ಸರ್ವೇ ಮಾಡಿ ನಕ್ಷೆ ತಯಾರಿಸಲು ಸರ್ವೇ ಇಲಾಖೆಗೆ ತಿಳಿಸಲಾಗಿದೆ. ಕುರಿಯ ಗ್ರಾಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋಮಾಳಕ್ಕೆ ಸಂಬಂಧಿಸಿ ಈಗಾಗಲೇ ಕಡತ ಡಿಸಿ ಕಚೇರಿಯಿಂದ ಬಂದಿದೆ. ಪರಿಶೀಲನೆಗೆ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ. -ರಮೇಶ್‌ ಬಾಬು, ತಹಶೀಲ್ದಾರ್‌, ಪುತ್ತೂರು

734 ಎಕ್ರೆ ಗೋಮಾಳ

ಕಂದಾಯ ಇಲಾಖೆ ನೀಡಿದ ಪಟ್ಟಿಯ ಪ್ರಕಾರ ಪುತ್ತೂರು ತಾಲೂಕಿನಲ್ಲಿ 734 ಎಕ್ರೆ ಗೋಮಾಳ ಪ್ರದೇಶವಿದೆ. ಸೂಕ್ತ ಜಾಗವನ್ನು ಆರಿಸಿ ಗೋಶಾಲೆಗೆ ಶಿಫಾರಸು ಮಾಡುವ ಉದ್ದೇಶ ಇಟ್ಟುಕೊಂಡು ಮುಂಡೂರು ಗ್ರಾಮದ ಜಮೀನನ್ನು ಆರಿಸಲಾಗಿದೆ. -ಡಾ| ಪ್ರಸನ್ನ ಕುಮಾರ್‌ ಹೆಬ್ಬಾರ್‌, ಮುಖ್ಯ ಪಶುವೈದ್ಯಾಧಿಕಾರಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next