Advertisement

Karnataka: ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್‌: ಜಾರ್ಜ್‌

11:52 PM Sep 05, 2023 | Team Udayavani |

ಬೆಂಗಳೂರು: ಒಂದೆಡೆ ಕೈಕೊಟ್ಟ ಮಳೆ. ಮತ್ತೂಂದೆಡೆ ಸಾಮಾನ್ಯವಾಗಿ ಬೇಸಗೆಯಲ್ಲಿ ಇರುವಷ್ಟು ವಿದ್ಯುತ್‌ ಬೇಡಿಕೆ ಈಗಲೇ ಎದುರಾಗಿದೆ. ಇದೇ ಸ್ಥಿತಿ ಮುಂದುವರಿದರೆ, ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್‌ ಅನಿವಾರ್ಯ ಆಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Advertisement

ಮಳೆಯೂ ಬಾರದೆ, ವಿದ್ಯುತ್‌ ಕೊರತೆ ಹೀಗೇ ಮುಂದುವರಿದರೆ ಅಧಿಕೃತವಾಗಿ ಲೋಡ್‌ಶೆಡ್ಡಿಂಗ್‌ ಮಾಡಬೇಕಾಗುತ್ತದೆ. ಆದರೆ, ಆ ಸಂದರ್ಭ ಸದ್ಯಕ್ಕಿಲ್ಲ. ಅಂತಹ ಸ್ಥಿತಿ ಬಾರದಿರಲಿ ಅಂತ ನಾವು ಕೂಡ ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದರು.

ನಗರದ ಮಲ್ಲೇಶ್ವರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭೂಗತ ಪರಿವರ್ತಕ ಕೇಂದ್ರಕ್ಕೆ ಚಾಲನೆ ನೀಡಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದ ಅನಿರೀಕ್ಷಿತವಾಗಿ ಬೇಡಿಕೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ಸಮಸ್ಯೆ ಆಗಿದ್ದು ನಿಜ. ಉತ್ಪಾದನೆಯಲ್ಲಿ 17 ಮಿ.ಯೂ. ಕಡಿಮೆ ಆಗಿತ್ತು. ಇಂತಹ ಸಂದರ್ಭದಲ್ಲಿ ಇದನ್ನು ನಮ್ಮ ಎಂಜಿನಿಯರ್‌ಗಳು ಸಮತೋಲನ ಮಾಡಬೇಕಾಗುತ್ತದೆ. ಆಗ ತಾತ್ಕಾಲಿಕ ವಾಗಿ ಕಡಿತಗೊಂಡಿರುತ್ತದೆ ಎಂದವರು ಹೇಳಿದರು.

ವಿದ್ಯುತ್‌ ಕಡಿತ; ಅಭಿವೃದ್ಧಿಗೆ ಹಿನ್ನಡೆ
ಸ್ವತಃ ಇಂಧನ ಸಚಿವರು ಕರೆಂಟ್‌ ಕಣ್ಣಾಮುಚ್ಚಾಲೆ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕೃತಿ, ಪರಿಸರ ಅಂತಹ ಅಸಹಾಯಕತೆ ತೋಡಿಕೊಂಡಿದ್ದಾರೆ. ಎಲ್ಲಿ ಹೆಚ್ಚುವರಿ ಇರುತ್ತದೆಯೋ ಅಲ್ಲಿಂದ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮಾಜಿ ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್‌ ಕಡಿತ ತುಂಬಾ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೇವಲ ಮೂರು ತಾಸು ಮಾತ್ರ ರೈತರಿಗೆ ಕರೆಂಟ್‌ ಸಿಗುತ್ತಿದೆ. ನಗರ ಭಾಗದಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ವಿದ್ಯುತ್‌ ಕಡಿತದಿಂದ ಹೂಡಿಕೆದಾರರಿಗೆ, ತಂತ್ರಜ್ಞಾನ ಕ್ಷೇತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಸರಕಾರದಿಂದ ಕತ್ತಲೆ ಭಾಗ್ಯ
ಬೆಂಗಳೂರು: ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆ ಮಾಡುವಲ್ಲಿ ವಿಫ‌ಲವಾಗಿರುವ ರಾಜ್ಯ ಸರಕಾರ, ದುಬಾರಿ ಬೆಲೆ ತೆತ್ತು ವಿದ್ಯುತ್‌ ಖರೀದಿಸಿದರೂ ಕತ್ತಲೆ ಕರ್ನಾಟಕದ ಭಾಗ್ಯವನ್ನು ನೀಡುತ್ತಿದೆ ಎಂದು ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಆರೋಪಿಸಿದರು. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಿಂದೆ ನಮ್ಮ ಸರಕಾರ ಇದ್ದಾಗ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದಿಸಿ ಗ್ರಿಡ್‌ಗೆ ನೀಡುವಷ್ಟು ಸಾಮರ್ಥ್ಯವಿತ್ತು. ಇದೀಗ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯೂ ಆಗುತ್ತಿಲ್ಲ, ಬೇಡಿಕೆ ಹಾಗೂ ಪೂರೈಕೆ ನಡುವೆಯೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next