Advertisement

ಲಿಂಗಾಯತ ಎಂದಿಗೂ ಪ್ರಸ್ತುತ

06:00 PM Aug 26, 2017 | Team Udayavani |

ಬೀದರ: ಲಿಂಗಾಯತ ಧರ್ಮದಲ್ಲಿ ಮೇಲು-ಕೀಳಿಲ್ಲ, ಬಡವ-ಬಲ್ಲಿದ ಎಂಬ ಭೇದವಿಲ್ಲ, ಉತ್ಛ- ನೀಚವೆಂಬ ತಾರತಮ್ಯವಿಲ್ಲ. ಇಂಥ ಲಿಂಗಾಯತ ಧರ್ಮ ಎಂದೆಂದಿಗೂ ಪ್ರಸ್ತುತ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಚ್‌. ಬಸವರಾಜ ಕರೆ ನೀಡಿದರು. ನಗರದ ಬಸವ ಕೇಂದ್ರದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ “ಶರಣತತ್ವ ದರ್ಶನ’ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕಲ್ಯಾಣ ರಾಜ್ಯದ ಕಲ್ಪನೆ ಸಾಕಾರಕ್ಕೆ ಬಸವ ಭಕ್ತರೆಲ್ಲರೂ ಕಾಯಕ ಜೀವಿಗಳಾಗಬೇಕು ಎಂದರು. ಶರಣೆ ಸತ್ಯಕ್ಕಳ ಕಾಯಕವನ್ನು ಇಂದು ನಾವೆಲ್ಲರೂ ಅವಲೋಕಿಸಬೇಕು. ಶರಣರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಿ ಆಲಸ್ಯ ಹೊಡೆದೋಡಿಸಬಹುದಾಗಿದೆ. ಕಾಯಕ ಮಾಡಿದರೆ ಸಾಲದು, ದಾಸೋಹ ಕೂಡ ಮಾಡಲೇಬೇಕು. ಸಂಗ್ರಹ ಸಂಸ್ಕೃತಿಗೆ ತಿಲಾಂಜಲಿ ನೀಡಿ ಶ್ರಮ ಸಂಸ್ಕೃತಿಗೆ ಉತ್ತೇಜನ ನೀಡಿದ ಶರಣರು ಇಂದಿಗೂ ನಮಗೆಲ್ಲಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಇಂದು ಸೊಪ್ಪು, ಉಪ್ಪು ಬಿಟ್ಟವರಿದ್ದಾರೆ. ಆದರೆ ತಪ್ಪು ಬಿಟ್ಟವರಾರೂ ಇಲ್ಲ. ವೇಷ-ಭಾಷೆ ಬಿಟ್ಟವರಿದ್ದಾರೆ, ಆದರೆ
ಆಶೆ ಬಿಟ್ಟವರಾರೂ ಕಾಣುತ್ತಿಲ್ಲ. ಇದಕ್ಕೆಲ್ಲ ಮಿಗಿಲಾಗಿ ಶರಣರು ಬದುಕಿ ಬಾಳಿದ್ದಾರೆ. ಶರಣರ ತತ್ವ ಅವಲೋಕಿಸಿ ನಡೆದರೆ ಸುಂದರ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿಗಳು ಸನ್ಮಾನ ಸ್ವೀಕರಿಸಿ ಮಾತನಾಡಿ, ಲಿಂಗ, ವಿಭೂತಿ, ರುದ್ರಾಕ್ಷಿ ಇವುಗಳು ಧಾರ್ಮಿಕ ಚಿಹ್ನೆಗಳಾದರೂ ವೈಜ್ಞಾನಿಕ ತಳಹದಿಮೇಲೆ ಬಸವಣ್ಣನವರು ಅವುಗಳನ್ನು ಕೊಡಮಾಡಿದ್ದಾರೆ. ತಾವು ಕಾಕು-ಪೋಕು ದೇವರುಗಳ ಪೂಜೆ ಮಾಡಿ ಕೈ ಸುಟ್ಟುಕೊಳ್ಳದೇ ಪ್ರತಿಯೊಬ್ಬರು ಇಷ್ಟಲಿಂಗಧಾರಿಗಳಾಗಿ ಶಾಂತಿ ಸಮಧಾನದ ಜೀವನ ನಡೆಸಬೇಕು ಎಂದು ಹೇಳಿದರು. ಬಸವ ಮುಕ್ತಿ ಮಂದಿರದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ನಮಗೆ ಎರಡು ಹಸಿವುಗಳು ಇವೆ. ಒಂದು ಹೊಟ್ಟೆ ಹಸಿವು ಇನ್ನೊಂದು ಜ್ಞಾನದ ಹಸಿವು. ಹೊಟ್ಟೆ ಹಸಿವು ಕ್ಷಣಮಾತ್ರ ಆದರೆ ಜ್ಞಾನದ ಹಸಿವು ನಿವಾರಿಸಿಕೊಳ್ಳಲು ಪ್ರವಚನ, ಶರಣ ಚಿಂತನೆ ಇಂದು ಅನಿವಾರ್ಯಎಂದರು. ಇದೇ ವೇಳೆ ಡಾ| ಶಿವಾನಂದ ಮಹಾಸ್ವಾಮಿಗಳು, ಡಾ| ಜಯದೇವಿ ಗಾಯಕವಾಡ ಮತ್ತು ಮಾತೆ ಸತ್ಯಕ್ಕ ಅವರನ್ನು ಬಸವಕೇಂದ್ರದಿಂದ ಗೌರವಿಸಲಾಯಿತು. ಲಿಂ| ಚಂದ್ರಪ್ಪ ಜಾಬಾ, ನಗರ ಸಭೆ ಮಾಜಿ ಸದಸ್ಯೆ ಶ್ರೀದೇವಿ ಕರಂಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಅಧ್ಯಕ್ಷ ಎಂ.ಎಸ್‌. ಮನೋಹರ, ನಿರ್ಮಲಾ ಯದಲಾಪುರೆ, ಚಂದ್ರಕಲಾ ಸ್ವಾಮಿ, ರುಕ್ಮಿಣಿ ಸೂರ್ಯಕಾಂತ ಕೋಟೆ, ಚನ್ನಬಸವ ಹೊಡೆ ಮತ್ತಿತರರು ಇದ್ದರು. ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಗಣೇಶ ಶೀಲವಂತ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next