Advertisement

ಅವಶೇಷಗಳಡಿ ಅಳಿದ ಬದುಕು!

12:51 PM Feb 16, 2018 | Team Udayavani |

ನಾಲ್ಕೇ ತಿಂಗಳ ಅಂತರದಲ್ಲಿ ನಗರದಲ್ಲಿ ನಿರ್ಮಾಣ ಹಂತದ ಮತ್ತೂಂದು ಕಟ್ಟಡ ನೆಲಕಚ್ಚಿದೆ. ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿ 9 ಮಂದಿ ಗಾಯಗೊಂಡಿದ್ದಾರೆ. ಹಾಗೇ ಇನ್ನೂ 15 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಮೃತರ ಕುಟುಂಬಗಳಿಗೆ ಪಾಲಿಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

Advertisement

ಬೆಂಗಳೂರು: ಕೇವಲ ನಾಲ್ಕು ತಿಂಗಳ ಅಂತರದಲ್ಲಿ ನಗರದಲ್ಲಿ ಮತ್ತೂಂದು ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಅಸುನೀಗಿ, 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಕಟ್ಟಡ ಅಕ್ರಮವಾಗಿ ತಲೆಯೆತ್ತಿದ್ದು, ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.

ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಯ ವಾಣಿಜ್ಯ ಕಟ್ಟಡ ಕುಸಿದಿದೆ. ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಒಂಬತ್ತು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಸುಮಾರು 15 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ಪೊಲೀಸರು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಮೃತಪಟ್ಟವರನ್ನು ರಾಯಚೂರು ಮೂಲದ ರಾಜು (25) ಉತ್ತರ ಪ್ರದೇಶ ಗೋರಖ್‌ಪುರದ ಅನ್ವರ್‌ (24) ಹಾಗೂ ಶೇಕ್‌ (25) ಎಂದು ಗುರುತಿಸಲಾಗಿದೆ. ಗಾಯಗೊಂಡವರೆಲ್ಲರೂ ರಾಯಚೂರು, ಕಲಬುರಗಿ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಬಿಹಾರ, ಒರಿಸ್ಸಾ ಮೂಲದವರಾಗಿದ್ದಾರೆ. ಅವರೆಲ್ಲರಿಗೂ ಸಮೀಪದ ಸೇಂಟ್‌ಜಾನ್‌ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

ಕಸವನಹಳ್ಳಿಯಲ್ಲಿ 30*40 ಅಡಿ ನಿವೇಶನದಲ್ಲಿ ದಿನಸಿ ವ್ಯಾಪಾರಿ ರಫೀಕ್‌ ಎಂಬುವರು ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದು, ಉತ್ತರಪ್ರದೇಶ, ಒಡಿಶಾ ಹಾಗೂ ಕಲಬುರಗಿ ಮೂಲದ ಸುಮಾರು 25 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಆವರಣದಲ್ಲಿ ತಾತ್ಕಾಲಿಕ ಶೆಡ್‌ನ‌ಲ್ಲಿ ಕಾರ್ಮಿಕರು ವಾಸವಾಗಿದ್ದರು. ಸಂಜೆ 4.30ರ ಸುಮಾರಿಗೆ ಏಕಾಏಕಿ ಕಟ್ಟಡದ ನೆಲಕ್ಕುರಳಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.

Advertisement

ಅರಿವಿಗೆ ಬರುವಷ್ಟರಲ್ಲಿ ಅವಶೇಷಗಳಡಿ!: ತಳಪಾಯದ ಸಮಸ್ಯೆಯಿಂದ ಕಟ್ಟಡ ಸಂಜೆ 4 ಗಂಟೆ ಸುಮಾರಿಗೆ ಅಲುಗಾಡಿದೆ. ಏನಾಯ್ತು ಎಂಬುದು ಅರಿವಿಗೆ ಬರುವಷ್ಟರಲ್ಲಿ ಕಾರ್ಮಿಕರು ಅವಶೇಷಗಳಡಿ ಹುದುಗಿಹೋದರು. ಉದ್ದೇಶಿತ ಕಟ್ಟಡವು ರಸ್ತೆಯ ಕಡೆಗೆ ಕುಸಿದುಬಿದ್ದಿತು. ಪಕ್ಕದಲ್ಲಿದ್ದ “ಸಿಂಪಲ್‌ ಪ್ರಾವಿಜನ್‌ ಸ್ಟೋರ್‌’ ಮೇಲೂ ಕೆಲ ಭಾಗ ಬಿದ್ದು, ಅದು ಕೂಡ ನೆಲಕಚ್ಚಿದೆ.

ಆದರೆ, ಪಕ್ಕದ ಕಟ್ಟಡ ಕಣ್ಮುಂದೆ ಕುಸಿಯುತ್ತಿದ್ದಂತೆ ಆ ಅಂಗಡಿ ಮಾಲಿಕರು ತಮ್ಮ ಮಗು ಮತ್ತು ಅಂಗಡಿಯಲ್ಲಿದ್ದ ಆಳನ್ನು ತಕ್ಷಣ ದೂರ ಕರೆದೊಯ್ದಿದ್ದಾರೆ. ಇನ್ನು ಅದೇ ರಸ್ತೆಯಲ್ಲಿ ಓರ್ವ ಬೈಕ್‌ ಸವಾರ ನೀರು ತೆಗೆದುಕೊಂಡು ಹೋಗುತ್ತಿದ್ದ. ಮೇಲೆ ನೋಡುವಷ್ಟರಲ್ಲಿ ಕುಸಿದಿದ್ದು, ಅದೃಷ್ಟವಶಾತ್‌ ಆ ಸವಾರ ಪಾರಾಗಿದ್ದಾನೆ. ಆದರೆ, ಬೈಕ್‌ ಅವಶೇಷಗಳಡಿ ಸಿಲುಕಿ ನುಜ್ಜುಗುಜ್ಜಾಗಿದೆ. 

ಕಟ್ಟಡ ಬಿದ್ದ ಕೂಡಲೇ ಆ ಪ್ರದೇಶದಲ್ಲಿ ದಟ್ಟಹೊಗೆ ಆವರಿಸಿದೆ. ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ಹಾಗೂ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ಪಡೆಗಳು, ಕಟ್ಟಡ ಅವಶೇಷಗಳಡಿ ಸಿಲುಕಿದ ಕಾರ್ಮಿಕರಿಗೆ ನೆರವಿನ ಹಸ್ತ ಚಾಚಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಅನ್ವರ್‌, ರಾಜು ಹಾಗೂ ಶೇಕ್‌ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. 

ಮೂಲ ಮಾಲೀಕ ಕೇರಳದವರು: ಉದ್ದೇಶಿತ ಕಟ್ಟಡದ ನಿವೇಶನ ಮೂಲತಃ ಕೇರಳದ ಕಣ್ಣುರಿನ ಅಬ್ದುಲ್‌ ರೆಹಮಾನ್‌ ಎಂಬುವರಿಗೆ ಸೇರಿದ್ದು, ರೆಹಮಾನ್‌ ತಮ್ಮ ಅಳಿಯ ರಫೀಕ್‌ಗೆ ನೀಡಿದ್ದರು. ಕಸವನಹಳ್ಳಿಯಲ್ಲಿ “ಐಶ್ವರ್ಯ ಮಾರ್ಕೆಟ್‌’ ದಿನಸಿ ಸಗಟು ಮಳಿಗೆ ನಡೆಸುತ್ತಿರುವ ರಫೀಕ್‌, ಮೂರು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಆದರೆ, ನೆಲ ಮತ್ತು ಮೊದಲ ಮಹಡಿ ಕಟ್ಟಿದ ಬಳಿಕ ಅವರು, ಆರ್ಥಿಕ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಳಿಸಿದ್ದರು.

ಎಂಟು ತಿಂಗಳ ಹಿಂದೆ ಮತ್ತೆ ಕಾಮಗಾರಿಯನ್ನು ರಫೀಕ್‌ ಪುನರಾರಂಭಿಸಿದ್ದರು ಎಂದು ತಿಳಿದು ಬಂದಿದೆ. ಕಾಮಗಾರಿ ಸ್ಥಗಿತಗೊಂಡ ಎಂಟು ತಿಂಗಳ ಅಂತರದಲ್ಲಿ ಮಳೆ ನೀರು ಕಟ್ಟಡಕ್ಕೆ ನುಗ್ಗಿ, ಮೂರ್‍ನಾಲ್ಕು ಅಡಿ ನೀರು ನಿಂತಿತ್ತು. ಈ ಮಧ್ಯೆ ಸರಿಯಾಗಿ ಕ್ಯೂರಿಂಗ್‌ ಕೂಡ ಮಾಡದೆ, ಮತ್ತೆ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿದಿತ್ತು. ಕಟ್ಟಡ ಕುಸಿಯಲು ಇದು ಕೂಡ ಕಾರಣ ಎನ್ನಲಾಗಿದೆ. 

ಎಂಜಿನಿಯರ್‌ ಬಂಧನ; ಮಾಲಿಕ ನಾಪತ್ತೆ: ಪ್ರಕರಣ ಸಂಬಂಧ ಕಾರ್ಯನಿರ್ವಹಣಾ ಎಂಜಿನಿಯರನ್ನು ಬಂಧಿಸಿದ್ದು, ಕಟ್ಟಡ ಮಾಲಿಕರ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ. ಉದ್ದೇಶಿತ ಕಟ್ಟಡ ಅಕ್ರಮವಾಗಿ ತಲೆಯೆತ್ತಿದ್ದು, ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.

ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಇಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಹಾಗೂ ಈಗ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಮುನಿರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಮಾಲಿಕ ರಫೀಕ್‌ ಪತ್ನಿ ಸಮೀರಾ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಐಪಿಸಿ 304ರ ಅಡಿ ಪ್ರಕರಣ ದಾಖಲಾಗಿದೆ.

ದುರಂತ ಸಂಭವಿಸಿದ ಬೆನ್ನಲ್ಲೇ ಕಟ್ಟಡ ಮಾಲಿಕ ರಫೀಕ್‌ ಪರಾರಿಯಾಗಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ನಿರ್ಲಕ್ಷ್ಯತನ ಹಾಗೂ ಉದ್ದೇಶಿತವಲ್ಲದ ಕೊಲೆ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಟ್ಟಡಗಳ ಸರಣಿ ಕುಸಿತ: 2017ರಲ್ಲಿ ಬೆಳ್ಳಂದೂರು ಗೇಟ್‌ ಬಳಿ ಕಟ್ಟಡ ಕುಸಿದು ಏಳು ಕಾರ್ಮಿಕರು ಅಸುನೀಗಿದ್ದರು. 2017ರ ಅಕ್ಟೋಬರ್‌ನಲ್ಲಿ ಈಜಿಪುರದಲ್ಲಿ ಮತ್ತೂಂದು ಕಟ್ಟಡ ಕುಸಿದು, ಅಲ್ಲೂ ಏಳು ಕಾರ್ಮಿಕರು ಮೃತಪಟ್ಟಿದ್ದರು. ಇದಾದ ಮರುದಿನವೇ ಯಶವಂತಪುರದಲ್ಲಿ ಕಟ್ಟಡ ನೆಲಕಚ್ಚಿತ್ತು. ಈ ವೇಳೆ ನಾಲ್ವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಅಷ್ಟೇ ಅಲ್ಲ, ಕೇವಲ ನಾಲ್ಕು ದಿನಗಳ ಹಿಂದೆ ಯಶವಂತಪುರ ಮತ್ತು ಜಯನಗರದ 5ನೇ ಬ್ಲಾಕ್‌ನಲ್ಲಿ ಎರಡು ಕಟ್ಟಡಗಳು ವಾಲಿದ್ದವು. ಈ ವೇಳೆ ಕಟ್ಟಡದಲ್ಲಿದ್ದ ಹಾಗೂ ಅಕ್ಕಪಕ್ಕದ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

ಕಟ್ಟಡ ಬೀಳಲು ಕಾರಣ ತಿಳಿಯಲು ತನಿಖೆ: ಸಚಿವ ಜಾರ್ಜ್‌: ಸರ್ಜಾಪುರ ಸಮೀಪದ ಕಸವನಹಳ್ಳಿಯಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿರುವ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಘಟ ನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆ ದರು. ನಂತರ ಮಾತನಾಡಿದ ಅವರು, “ಮೊದಲ ಹಂತವಾಗಿ ರಕ್ಷಣಾ ಕಾರ್ಯಕ್ಕೆ ಆದ್ಯತೆ ನೀಡಲಾ ಗಿದ್ದು, ನಂತರದಲ್ಲಿ ಕಟ್ಟಡ ಬೀಳಲು ಕಾರಣ ತಿಳಿಯಲು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ. ಹಾಗೇ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ನಿಯಮ ಉಲ್ಲಂ ಸಿವೆಯೇ ಎಂದು ಪರಿಶೀಲಿಸಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದರು. 

ಕಟ್ಟಡ ನಿರ್ಮಾಣ ಸಾಮಗ್ರಿ ಪರೀಕ್ಷೆ: ಗುರುವಾರ ಕುಸಿದ ಕಟ್ಟಡದ ನಿರ್ಮಾಣಕ್ಕೆ ಬಳಸಲಾದ ಸಿಮೆಂಟ್‌, ಕಬ್ಬಿಣ, ಇಟ್ಟಿಗೆ ಸೇರಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಗುಣ ಮ ಟ್ಟ ವನ್ನು ಸಿವಿಲ್‌ ಏಯ್ಡ ಸಂಸ್ಥೆಯ ಮೂಲಕ ಪರೀಕ್ಷೆ ನಡೆ ಸಲಾ ಗು ವುದು. ಜತೆಗೆ ಕಟ್ಟಡ ಕುಸಿ ತದ ಕುರಿತು ವರದಿ ನೀಡು ವಂತೆ ಅಧಿ ಕಾ ರಿ ಗ ಳಿಗೆ ತಿಳಿ ಸ ಲಾ ಗಿದೆ ಎಂದು ಸಚಿವ ಜಾರ್ಜ್‌ ಹೇಳಿದರು.

ಮೇಯರ್‌ ಸಂಪತ್‌ರಾಜ್‌ ಮಾತನಾಡಿ, ದುರಂತದಲ್ಲಿ ಮೂವರು ಮೃತಪಟ್ಟಿದ್ದು, 9 ಮಂದಿಯನ್ನು ರಕ್ಷಿಸಲಾಗಿದೆ. ಕಟ್ಟಡದಲ್ಲಿ ಎಷ್ಟು ಜನ ಇದ್ದಾರೆ ಎಂಬ ನಿಖರ ಮಾಹಿತಿ ಈವ ರೆಗೆ ಸಿಕ್ಕಿಲ್ಲ. ರಕ್ಷಣಾ ಕಾರ್ಯ ಮುಂದು ವ ರಿ ಸಿದ್ದು, ಸಿಬ್ಬಂದಿಗೆ ಅಗತ್ಯ ಸೌಲ ಭ್ಯ ಗ ಳನ್ನು ಕಲ್ಪಿ ಸ ಲಾ ಗಿದೆ ಎಂದರು. 
ಕ್ರಿಮಿನಲ್‌ ಮೊಕದ್ದಮೆ

ಕಟ್ಟಡದ ನಕ್ಷೆ ಬಗ್ಗೆ ಈಗಾಗಲೇ ಪಾಲಿಕೆಯ ಹಿರಿಯ ಅಧಿಕಾರಿಗಳಿಂದ ವರದಿ ಕೇಳಲಾಗಿದ್ದು, ಶುಕ್ರವಾರ ಬೆಳಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುವುದಾಗಿ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ. ಬಿಪಿಎಂಪಿ ವ್ಯಾಪ್ತಿಯಲ್ಲಿ ಯಾರು ನಿಯಮ ಉಲ್ಲಂ ಸಿ ಕಟ್ಟಡ ನಿರ್ಮಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿ, ತಪ್ಪಿತಸ್ಥ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಕಳೆದ ವರ್ಷ ಬೆಳಂದೂರು ಗೇಟ್‌ ಬಳಿ ಕಟ್ಟಡ ಕುಸಿದು 7 ಮಂದಿ ಸಾವನ್ನಪ್ಪಿದರು. ಇತ್ತೀಚೆಗೆ ಮತ್ತೀಕರೆ ಮತ್ತು ಜಯನಗರ ವಾರ್ಡ್‌ನಲ್ಲಿ ನಿಯಮ ಮೀರಿ ನಿರ್ಮಾಣವಾಗಿದ್ದ ಕಟ್ಟಡಗಳು ವಾಲಿ ಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.

ಕಟ್ಟಡದ ನಕ್ಷೆ ಪರಿಶೀಲನೆ: ಮೂರು ಅಂತಸ್ಥಿನ ಕಟ್ಟಡ ಇದಾಗಿದ್ದು, ಬಿಬಿಎಂಪಿಯಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಮೊದಲು ಈ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದರು. ಇದಾದ ನಂತರ ಪಿಜಿ ಮಾಡುವುದಕ್ಕೆ ಇದನ್ನು ನವೀಕರಣ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಕಟ್ಟಡಕ್ಕೆ ಯಾವಾಗ ಅನುಮತಿ ನೀಡಲಾಗಿತ್ತು. ಎಷ್ಟು ಫ್ಲೋರ್‌ಗೆ ಅನುಮತಿ ನೀಡಿದ್ದಾರೆ. ಉದ್ದೇಶ ಏನಿತ್ತು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡದ ನಕ್ಷೆ ಬಗ್ಗೆ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. 

ರಾತ್ರಿ ಕಾರ್ಯಾಚರಣೆ: ರಕ್ಷಣಾ ಕಾರ್ಯದಲ್ಲಿ ತೊಡಗಿರುವಂತಹ ಎಲ್ಲ ಸಿಬ್ಬಂದಿಗೆ ಊಟದ ವ್ಯವಸ್ಥೆ, ಕಾಫಿ ಟೀ, ರಾತ್ರಿ ಪೂರ್ತಿ ಪ್ರತಿ ಗಂಟೆಗೆ ಒಂದು ಸಾರಿ ಸಿಬ್ಬಂದಿಗೆ ಕಾಫಿ, ಟೀ ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗೃಹಸಚಿವ ರಾಮಲಿಂಗಾರೆಡ್ಡಿ, ಶಾಸಕ ಅರವಿಂಂದ ಲಿಂಬಾವಳಿ, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್‌, ವಿಜಯ್‌ ಶಂಕರ್‌, ಮಹಾದೇವ ಪುರ ಜಂಟಿ ಆಯುಕ್ತೆ ವಾಸಂತಿ ಭೇಟಿ ನೀಡಿದರು.

ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವುದು ಆಘಾತಕಾರಿ ಸಂಗತಿ. ಬೆಂಗಳೂರಿನಂಥ ಮಹಾನಗರದಲ್ಲಿ ಇಂತಹ ದುರ್ಘ‌ಟನೆಗಳು ಮರುಕಳಿಸುತ್ತಿರುವುದು ನಗರಾಡಳಿತ, ಇಲಾಖೆಗಳ ಕಾರ್ಯಕ್ಷಮತೆ ಪ್ರಶ್ನಿಸುವಂತೆ ಮಾಡಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಈ ಕಟ್ಟಡದಲ್ಲಿ ಪ್ರತಿನಿತ್ಯ ಇಬ್ಬರು ಪುಟ್ಟ ಮಕ್ಕಳು ಆಡುತ್ತಿದ್ದರು. ಆ ಮಕ್ಕಳ ಕುಟುಂಬ ಇಲ್ಲಿ ವಾಸವಾಗಿತ್ತು. ದುರಂತದಲ್ಲಿ ಈ ಕುಟುಂಬದವರೇ ಮೃತಪಟ್ಟಿರಬಹುದು ಎಂಬ ಶಂಕೆ ಇದೆ.
-ಪ್ರದೀಶ್‌, ಸ್ಥಳೀಯ ನಿವಾಸಿ

ಐದನೇ ಮಹಡಿಯಲ್ಲಿ ಪ್ಲಾಸ್ಟಿಂಗ್‌ ಕೆಲಸ ಮಾಡುವಾಗ ಕಟ್ಟಡ ಏಕಾಏಕಿ ಕುಸಿದು ಬಿದ್ದಿತು. ಸಮೀಪದ ಕಟ್ಟಡದ ಮೇಲೆ ಉರುಳಿದ ಪರಿಣಾಮ ಪ್ರಣಾಪಾಯದಿಂದ ಪಾರಾಗಿದ್ದು, ನಮ್ಮ ತಂಡದಲ್ಲಿದ್ದ  ಮತ್ತೂಬ್ಬ ಕಾರ್ಮಿಕ ನ್ನೂ ಪತ್ತೆಯಾಗಿಲ್ಲ.
-ಬಿಕಾವೋ ಮಾತೋ, ಗಾಯಾಳು

ನಾಲ್ಕು ಗಂಟೆ ಸುಮಾರಿಗೆ ಕಾಫಿ ಕುಡಿದು ಕೆಲಸಕ್ಕೆ ಮರಳುವಾಗ ಕಟ್ಟಡ ಕುಸಿಯಿತು. ಕೇವಲ ಒಂದು ಅಡಿ ದೂರದಲ್ಲಿ ಕಟ್ಟಡದ ಚಾವಣಿಯ ಬೃಹತ್‌ ಅವಶೇಷ ಬಿದ್ದಿತ್ತು. ಕೂಡಲೇ ಕಟ್ಟಡ ವಾಲಿದ ವಿರುದ್ಧ ದಿಕ್ಕಿಗೆ ಜಿಗಿದ ಪರಿಣಾಮ ಪ್ರಾಣ ಉಳಿಯಿತು.
-ದೇವೇಂದ್ರಪ್ಪ, ಗಾಯಾಳು 

* ಮೋಹನ್ ಭದ್ರಾವತಿ/ವೆಂ.ಸುನೀಲ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next