Advertisement

ಬದುಕು ಸುಂದರವಷ್ಟೇ ಅಲ್ಲ; ಬದುಕಲು ಸುಂದರ ನಗರ ಬೇಕು

07:50 AM Mar 03, 2018 | Harsha Rao |

ಜಗತ್ತಿನಲ್ಲೇ ಅತ್ಯಂತ ಸಂತೋಷವಾದ ಬದುಕನ್ನು ಕಳೆಯಲು ನಾರ್ವೆ ಯೋಗ್ಯವಂತೆ. ಅಂಥದೊಂದು ಸ್ಥಾನ ಅಮರಾವತಿಗೂ ಸಿಗಲಿ ಎಂಬ ನಿರೀಕ್ಷೆಯಿದೆ. ಕಾದು ನೋಡುವುದೊಂದೇ ಉಳಿದಿರುವಂಥದ್ದು.

Advertisement

ಅಮರಾವತಿ ಇಂದ್ರನ ರಾಜಧಾನಿಗಿಂತ ಚೆನ್ನಾಗಿ ಆಗಬಹುದೇ? ಇಂಥದೊಂದು ಪ್ರಶ್ನೆ ಉದ್ಭವಿಸಿರುವುದು ಸುಳ್ಳಲ್ಲ. ಆದರೆ ಲಭ್ಯ ಮಾಹಿತಿ ಹಾಗೂ ಯೋಜನೆ ಪ್ರಕಾರ ದೇಶದ ರಾಜಧಾನಿಗಳಿಗೆ ಮಾದರಿಯಾಗಬಹುದು. ಅದಕ್ಕಿಂತ ಹೆಚ್ಚಾಗಿ ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ರೂಪುಗೊಳ್ಳುವ 100 ಸ್ಮಾರ್ಟ್‌ ನಗರಗಳಿಗಿಂತ ಚೆನ್ನಾಗಿ ಆಗಬಹುದೇನೋ?

ಅದಕ್ಕೂ ಕಾರಣಗಳು ಬಹಳಷ್ಟಿವೆ. ಮೊದಲನೆಯದಾಗಿ ಸ್ಮಾರ್ಟ್‌ ನಗರವಾಗಿಯೇ ಅಮರಾವತಿಯನ್ನು ರೂಪಿಸಲಾಗುತ್ತಿದೆ. ಅಂದರೆ ಈಗಿರುವ ನಗರಗಳನ್ನು ಸ್ಮಾರ್ಟ್‌ಗೊಳಿಸುವುದಲ್ಲ. ತೇಪೆ ಹಾಕಿ ಹೊಸ ರೂಪ ಕೊಡುವುದಲ್ಲ. ಹೊಸದನ್ನೇ ಸೃಷ್ಟಿಸುವುದು. ನಮ್ಮ ಸ್ಮಾರ್ಟ್‌ ಸಿಟಿ ಯೋಜನೆಯಡಿ ಈಗಿರುವ ನಗರಗಳ ಎಲ್ಲ ಅವಲಕ್ಷಣಗಳನ್ನು ಉಳಿಸಿಕೊಂಡು ಇಲ್ಲವೇ ಕಡಿಮೆ ಮಾಡಿ ಸ್ಮಾರ್ಟ್‌ಗೊಳಿಸುವುದು. ಆದ ಕಾರಣ ಸರ್ವೇ ಸಾಮಾನ್ಯವಾಗಿ ಎಲ್ಲರ ಕುತೂಹಲದ ಕೇಂದ್ರ ಬಿಂದು ಅಮರಾವತಿಯಾಗಿದೆ.

ಥೀಮ್‌ ನಗರಗಳು
ನವ ನಗರವೆಂದು ಹೇಳಬಹುದಾದ ಮಾದರಿ ಇದು. ಒಂದು ಅಮರಾವತಿಯೊಳಗೆ ಒಂಬತ್ತು ನಗರಗಳಿರಲಿವೆ. ವಾಣಿಜ್ಯ ನಗರ, ಆರೋಗ್ಯ ನಗರ, ಜ್ಞಾನ ನಗರ, ತಂತ್ರಜ್ಞಾನ ನಗರ, ಆರ್ಥಿಕ ನಗರ, ಮಾಧ್ಯಮ ನಗರ, ಕ್ರೀಡಾ ನಗರ, ಪ್ರವಾಸೋದ್ಯಮ ನಗರ ಹಾಗೂ ಸರಕಾರಿ ನಗರ.

ಆರೋಗ್ಯ ನಗರದಲ್ಲಿ ಹೆಸರೇ ಹೇಳುವಂತೆ ಎಲ್ಲ ಆರೋಗ್ಯ ಸೌಲಭ್ಯಗಳೂ ಲಭ್ಯವಾಗಲಿದೆ. ಉದ್ಯಮಿ ಬಿ.ಆರ್‌. ಶೆಟ್ಟಿಯವರ ಬಿಆರ್‌ಎಸ್‌ ಮೆಡಿಸಿಟಿಯೂ ಅಲ್ಲೇ ರೂಪುಗೊಳ್ಳಲಿದೆ. ಅತ್ಯಾಧುನಿಕ ಆಸ್ಪತ್ರೆ ಗಳು, ಆರೋಗ್ಯ ವಿಶ್ವವಿದ್ಯಾಲಯವೆಲ್ಲವೂ ಬರಲಿದೆ. ಇದರೊಂದಿಗೆ ಎಐಎಂಎಸ್‌ನಂಥ ಶಿಕ್ಷಣ ಸಂಸ್ಥೆಯನ್ನು ಒಳಗೊಂಡ ಹಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳು ಕಾರ್ಯ ನಿರ್ವಹಿಸುವುದು ಶಿಕ್ಷಣ ನಗರಿಯಲ್ಲಿ. ಐನೂರು ಕೋಟಿ ವೆಚ್ಚದಲ್ಲಿ ಹೈದರಾಬಾದ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ ಅಸ್ತಿತ್ವ ಕಾಣುತ್ತಿರುವುದು ವಾಣಿಜ್ಯ ನಗರದಲ್ಲಿ.

Advertisement

ಇಷ್ಟೇ ಅಲ್ಲ
ಇಂಥ ಪ್ರತ್ಯೇಕ ನಗರಗಳಿಗಷ್ಟೇ ಅಮರಾವತಿ ಕಾರಣವಾಗುತ್ತಿಲ್ಲ. ಆಧುನಿಕ ನಗರಗಳಲ್ಲಿ ಅತ್ಯಂತ ದೊಡ್ಡ ಸವಾಲಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ನೋಡುತ್ತಿರುವುದು. ಹೈಕೋರ್ಟ್‌ ಒಂದು ಬಗೆಯಲ್ಲಿ ಬೌದ್ಧ ಸ್ತೂಪ ಮಾದರಿಯಲ್ಲಿರುತ್ತದೆಯಂತೆ. ಇನ್ನುಳಿದ ಕಟ್ಟಡಗಳೂ ಪರಿಸರ ಸ್ನೇಹಿಯಾಗಿರುತ್ತವೆ ಎಂಬುದು ಎಲ್ಲರ ನಿರೀಕ್ಷೆ.

ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಹೇಳಲೇಬೇಕು. ಪ್ರಸ್ತುತ ಇರುವ ಹಲವು ನಗರಗಳಲ್ಲಿ ಒಂದಕ್ಕೊಂದು ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಹು ವಿಧಾನಗಳನ್ನು ಬಳಸುತ್ತಿಲ್ಲ. ಈ ಹಿಂದೆಯೇ ಉಲ್ಲೇಖೀಸಿದಂತೆ, ಬಸ್ಸು, ಸಬರ್ಬನ್‌ ರೈಲು ಇತ್ಯಾದಿಗಳೆಲ್ಲವೂ ಪರ್ಯಾಯವಾಗಿಯೇ ಸಂಚರಿಸುತ್ತವೆ. ಇಲ್ಲಿ ಆ ವ್ಯವಸ್ಥೆಯಲ್ಲಿ ಸಣ್ಣದೊಂದು ವ್ಯತ್ಯಾಸ ಮಾಡುವ ಸಾಧ್ಯತೆ ಕಂಡು ಬಂದಿದೆ. ಇಲ್ಲಿ ರೂಪುಗೊಳ್ಳುತ್ತಿರುವುದು ಏಕೀಕೃತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಅಂದರೆ ಒಂದಕ್ಕೊಂದು ಪೂರಕವಾಗಿರುತ್ತದೆಂದು ಅರ್ಥ.

ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ರೈಲು ಕಾರ್ಯ ನಿರ್ವಹಿಸಿದರೆ, ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಬಸ್‌ಗಳು ಲಭ್ಯವಿರುತ್ತವೆ. ಹಾಗೆಯೇ ಇಲ್ಲಿ ನಿರ್ಮಾಣವಾಗುವ ಬಹುಪಾಲು ಮುಖ್ಯ ರಸ್ತೆಗೆ ಪರ್ಯಾಯವಾಗಿ ಜಲಮಾರ್ಗಗಳನ್ನೂ ರೂಪಿಸಲಾಗುತ್ತದೆ. ಅದರಲ್ಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಉದ್ದೇಶವಿದೆ. ಅರ್ಮ್ಸ್ಟರ್ಡಾಂ, ನ್ಯೂಯಾರ್ಕ್‌ನಲ್ಲಿ ಇಂಥ ಸೇವೆ ಲಭ್ಯವಿದೆ. ಇದು ನಿಜಕ್ಕೂ ಕುತೂಹಲದ ಸಂಗತಿಯೇ.

ಉದ್ಯಾನಗಳು
ಕಾಂಕ್ರೀಟ್‌ ಕಟ್ಟಡ, ರಸ್ತೆಗಳು, ವಾಹನ ದಟ್ಟಣೆ ಇತ್ಯಾದಿಗಳಿಂದ ನಲುಗಿರುವ ನಗರಗಳಲ್ಲಿ ಉಸಿರಾಡಲು ಇರುವ ಸಣ್ಣ ಅವಕಾಶವೆಂದರೆ ಉದ್ಯಾನಗಳು. ನಗರ ಬದುಕಿನ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳುವಲ್ಲಿ ಉದ್ಯಾನಗಳು ವಹಿಸುವ ಪಾತ್ರ ಸಣ್ಣದಲ್ಲ. ಅದರ ಮಹತ್ವ ಎಲ್ಲರಿಗೂ ತಿಳಿದದ್ದೇ. ಇತ್ತೀಚೆಗೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲೂ ಉದ್ಯಾನಗಳು ತಲೆ ಎತ್ತುತ್ತಿರುವುದು ಇದೇ ಕಾರಣಕ್ಕಾಗಿ. ಸ್ವಲ್ಪ ನಗರ ಪ್ರದೇಶದ ಲಕ್ಷಣವನ್ನು ಹೊಂದುತ್ತಿರುವ ಸ್ಥಳೀಯ ಸಂಸ್ಥೆಗಳೆಲ್ಲಾ ಉದ್ಯಾನಕ್ಕೆ ಜಾಗ ಮೀಸಲಿಡುತ್ತಿವೆ. ಹೀಗಿರುವಾಗ ಅಮರಾವತಿಯ ಶೇ. 51ರಷ್ಟು ಭಾಗ ಹಸಿರುಮಯವಾಗಿರುತ್ತದಂತೆ. ಶೇ.10ರಷ್ಟು ಭಾಗ ಕೆರೆ, ಕೊಳಗಳಿಂದ ಆವೃತ್ತವಾಗಿರುತ್ತದಂತೆ. ಜತೆಗೆ ಸುಮಾರು 25 ಕಿ.ಮೀ.ನಷ್ಟು ಸೈಕ್ಲಿಂಗ್‌ ಟ್ರ್ಯಾಕ್‌ ಹಾಗೂ ವಾಯು ವಿಹಾರ ಟ್ರ್ಯಾಕ್‌ಗಳನ್ನು ರೂಪಿಸಲಾಗುತ್ತಿದೆ. ಇವೆಲ್ಲವೂ ಮಾಡುತ್ತಿರುವುದು ಜನರು ಖುಷಿಯಾಗಿರಬೇಕೆಂದು ಎಂಬುದು ಸರಕಾರದ ಹೇಳಿಕೆ.

ಆಂಧ್ರ ಪ್ರದೇಶ ಸರಕಾರ ಸುಮಾರು 16 ಸಾವಿರ ಕೋಟಿ ರೂ. ಗಳನ್ನು ಇಂಧನ ವ್ಯವಸ್ಥೆಗೆ ವೆಚ್ಚ ಮಾಡುತ್ತಿದೆ. ಇಂಧನ ದಕ್ಷತೆಯಲ್ಲಿ ಎಲ್ಲರಿಗಿಂತಲೂ ಮುಂದಿರಬೇಕೆಂಬ ಮಹಾತ್ವಾಕಾಂಕ್ಷೆ ಇದರ ಹಿಂದೆ ಕೆಲಸ ಮಾಡುತ್ತಿದೆ. ಹಾಗಾಗಿ ಕಟ್ಟಡಗಳ ನಿರ್ಮಾಣ ಹಂತದಿಂದಲೂ ಇಂಧನ ದಕ್ಷತೆಗೆ ಗಮನ ನೀಡಲಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಗಾಳಿ, ಬೆಳಕು ಹಾಗೂ ಹವಾಮಾನದ ಅಧ್ಯಯನವನ್ನೂ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಯಥೇತ್ಛವಾಗಿ ಇಲ್ಲಿ ಬಳಸಿಕೊಳ್ಳುತ್ತಿರುವುದು ಉಲ್ಲೇಖನೀಯ.

ಇಂಥದೊಂದು ಅಮರಾವತಿ?
ಹೌದು, ಇಂಥದೊಂದು ಅಮರಾವತಿ ಸಂಪೂರ್ಣವಾಗಿ ನಮ್ಮ ಕಣ್ಣೆದುರು ನಿಲ್ಲಲು ಕನಿಷ್ಠ 10 ವರ್ಷಗಳು ಬೇಕು. ಎಲ್ಲವೂ ಅಂದುಕೊಂಡಂತೆ ನಡೆದರೆ, 2029ರೊಳಗೆ ಈ ಅಮರಾವತಿ ನಿರ್ಮಾಣ ಪೂರ್ಣಗೊಳ್ಳಬಹುದು. ಈಗಾಗಲೇ ಸಾಕಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಆರು ವರ್ಷಗಳಲ್ಲಿ ಅಂದರೆ 2024ರಲ್ಲಿ ಎರಡನೇ ಹಂತದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬಹುದು. ಆಗ ಇಡೀ ಸರಕಾರಿ ಆಡಳಿತ ವ್ಯವಸ್ಥೆ, ವಿಶ್ವವಿದ್ಯಾಲಯಗಳು, ವಾಣಿಜ್ಯ ವ್ಯವಹಾರ ಪ್ರದೇಶಗಳೆಲ್ಲವೂ ಕಾರ್ಯ ಆರಂಭಿಸಬಹುದು. ಅಷ್ಟರೊಳಗೆ ಆಡಳಿತಾತ್ಮಕವಾಗಿ ಎಷ್ಟು ಸರಕಾರಗಳು ಬಂದು ಹೋಗುವುದೋ? ಕಾದು ನೋಡಬೇಕು. ಅಮರಾವತಿ ಕನಸು ಸುಂದರವಾಗಿದೆ. ನಗರಗಳೆಂಬ ಎಲ್ಲ ಕನಸುಗಳೂ ಹೀಗೆಯೇ ಇರಬೇಕೆಂದು ಬಯಸುವುದು ತೀರಾ ಸಹಜ. ಆದರೆ ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಬದುಕು ಸುಂದರವಷ್ಟೇ ಅಲ್ಲ !
ಅಮರಾವತಿಯನ್ನು ಜಗತ್ತಿನ ಅತ್ಯಂತ ಸುಂದರ ಬದುಕಿನ ನಗರವಾಗಿ ರೂಪಿಸಬೇಕೆಂಬ ಅಭಿಲಾಷೆ ಅಲ್ಲಿಯ ಸರಕಾರದ್ದು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಸಂಪರ್ಕ ಜಾಲವು ಕೈಗೊಂಡ 2017ರ ಹೆಚ್ಚಿನ ಸಂತೋಷ ನೀಡುವ ರಾಷ್ಟ್ರಗಳ ಸಮೀಕ್ಷೆಯಲ್ಲಿ ಭಾರತಕ್ಕೆ ಸಿಕ್ಕಿರುವುದು 122ನೇ ಸ್ಥಾನ. ನಾರ್ವೆಗೆ ಮೊದಲ ಸ್ಥಾನ ಸಿಕ್ಕಿದೆ. ಈ ವಿಷಯದಲ್ಲಿ ಖಂಡಿತಾ ನಾವು ಬೇಸರಿಸುವಂತಿಲ್ಲ. ಯಾಕೆಂದರೆ ಪಾಕಿಸ್ಥಾನ 80ನೇ ಸ್ಥಾನದಲ್ಲಿದ್ದರೆ, ನೇಪಾಳ 99ರಲ್ಲಿದೆ. ಭೂತಾನ್‌ 97ಕ್ಕೆ ತೃಪ್ತಿ ಪಟ್ಟಿದ್ದರೆ, ಬಾಂಗ್ಲಾದೇಶ 110ನೇ ಸ್ಥಾನದಲ್ಲಿದೆ. ಶ್ರೀಲಂಕಾ ಸಹ 120ನೇ ಸ್ಥಾನ ಪಡೆದಿದೆ.
ಯುವಜನರ ಕಣ್ಮಣಿಯಂತೆ ತೋರುವ ಮಾಲ್ಡೀವ್ಸ್‌ಗೆ 155ರೊಳಗೆ ಒಂದೂ ಸ್ಥಾನ ಸಿಕ್ಕಿಲ್ಲ ಎನ್ನುವುದು ಬೇರೆ ಮಾತು. ಉಳಿದಂತೆ ಡೆನ್ಮಾರ್ಕ್‌, ಐಸ್‌ಲ್ಯಾಂಡ್‌, ಸ್ವಿಜರ್‌ಲ್ಯಾಂಡ್‌ ಹಾಗೂ ಫಿನ್‌ಲಾÂಂಡ್‌ ಮೊದಲ ನಂತರದ ನಾಲ್ಕು ಸ್ಥಾನಗಳನ್ನು ಪಡೆದಿವೆ.

ಸುಸ್ಥಿರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಸಂಬಂಧ ಈ ಸಂಸ್ಥೆಯು ಪ್ರತಿ ವರ್ಷವೂ ರಾಷ್ಟ್ರಗಳನ್ನು ಅಧ್ಯಯನ ಮಾಡುತ್ತದೆ. ಅಲ್ಲಿ ಬಹಳ ಮುಖ್ಯವಾಗಿ ಗಮನಿಸುವ ಅಂಶಗಳೆಂದರೆ, ಆಯಾ ದೇಶಗಳಲ್ಲಿ ಜನರು ಸಂತೋಷವಾಗಿ ಬಾಳಲು ಯಾವ ರೀತಿಯ ವಾತಾವರಣವನ್ನು ನಿರ್ಮಿಸಲಾಗಿದೆ ಎಂಬುದು. ಜನರ ಖರ್ಚಿನ ಮಟ್ಟ, ಬಗೆ, ಆರೋಗ್ಯದ ಗುಣಮಟ್ಟ, ವಸತಿ ಸೌಕರ್ಯದ ಸ್ಥಿತಿ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಇದರೊಂದಿಗೆ ಸಂತೋಷ ಎನ್ನುವುದರ ಕುರಿತು ಜನರನ್ನು ಪ್ರಶ್ನಿಸಿ, ಅವರ ವ್ಯಾಖ್ಯಾನಗಳನ್ನು ಜೀವನಮಟ್ಟಕ್ಕೆ ಹೋಲಿಸಲಾಗುತ್ತದೆ. ಸ್ಥಳೀಯ ಸರಕಾರಗಳು ಜನರ ಸಂತೋಷದ ವ್ಯಾಖ್ಯಾನವನ್ನು ನಿಜದ ನೆಲೆಯಲ್ಲಿ ಸಾಧ್ಯವಾಗಿಸಲು ಕೈಗೊಳ್ಳುವ ತೀರ್ಮಾನಗಳು, ನೀತಿಗಳೂ ಪರಿಗಣನೆಗೆ ಒಳಗಾಗುತ್ತವೆ.

ಅದಕ್ಕೇ ಬದುಕಷ್ಟೇ ಸುಂದರವಲ್ಲ; ಬದುಕಲು ಸುಂದರ ನಗರವೂ ಬೇಕು. ಸಂತೋಷವೆಂಬುದು ಬರೀ ಬದುಕಿನಲ್ಲಲ್ಲ; ಜೀವನ ಶೈಲಿಯಲ್ಲೂ ಇದೆ.
ಇಂಥ ಸುಂದರ ಬದುಕನ್ನು ನೀಡಬಹುದಾದ ನಗರ ಅಮರಾವತಿಯಾಗಬಹುದೆಂಬುದು ಎಲ್ಲರ ನಿರೀಕ್ಷೆ.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next