Advertisement

ಹೋರಾಟದ ಬದುಕು ನಾನ್‌ ಕಮರ್ಷಿಯಲ್‌ ಖನನ

06:00 AM Sep 21, 2018 | |

ನಿರ್ದೇಶಕ ರಾಧಾಕೃಷ್ಣ ಅವರಿಗೆ ನಿರ್ಮಾಪಕರು ಪರಿಚಯವಾಗಿ ಅವರಿಗೆ ಕಥೆ ಹೇಳಿದಾಗ, “ಒಮ್ಮೆ ನನ್ನ ಮಗನನ್ನು ನೋಡಿ, ನಿಮ್ಮ ಪಾತ್ರಕ್ಕೆ ಓಕೆಯಾದರೆ ಅವನನ್ನೇ ಹೀರೋ ಮಾಡಿ’ ಎಂದರಂತೆ. ರಾಧಾಕೃಷ್ಣ ಅವರಿಗೆ ಒಮ್ಮೆಗೆ, “ಏನಪ್ಪಾ ಇದು ನಿರ್ಮಾಪಕರ ಮಗನನ್ನು ಹಾಕಿದರೆ ಮುಂದೆ ಎಲ್ಲದಕ್ಕೂ ಕಾಂಪ್ರಮೈಸ್‌ ಆಗುತ್ತಾ ಹೋಗಬೇಕಾಗುತ್ತದಲ್ಲ’ ಎಂಬ ಭಯದೊಂದಿಗೆ ನಿರ್ಮಾಪಕರ ಮಗನನ್ನು ನೋಡಿದರಂತೆ. ಹೀರೋನ ನೋಡಿದ ಮೇಲೆ, ಅದರಲ್ಲೂ ಫ‌ಸ್ಟ್‌ ಶಾಟ್‌ ತೆಗೆದ ಮೇಲಂತೂ ಎಲ್ಲಾ ಭಯ, ಗೊಂದಲ ದೂರವಾಯಿತಂತೆ. ಏಕೆಂದರೆ, ಆ ಹುಡುಗ ಸಿನಿಮಾಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಫಿಟ್‌ ಆಗಿದ್ದಾರಂತೆ. ಹೀಗೆ ತಮ್ಮ “ಖನನ’ ಸಿನಿಮಾ ಆರಂಭವಾದ ಬಗ್ಗೆ ಹೇಳಿಕೊಂಡರು ನಿರ್ದೇಶಕ ರಾಧಾಕೃಷ್ಣ. “ಖನನ’ ಮೂಲಕ ನಿರ್ಮಾಪಕ ಶ್ರೀನಿವಾಸ್‌ ರಾವ್‌ ಅವರ ಪುತ್ರ ಆರ್ಯವರ್ಧನ್‌ ನಾಯಕರಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. 

Advertisement

“ನನಗಿದು ಚೊಚ್ಚಲ ಸಿನಿಮಾ. “ಮಾರ್ಚ್‌-22′ ಸಿನಿಮಾ ಸಮಯದಲ್ಲಿ ನನಗೆ ನಿರ್ಮಾಪಕರು ಪರಿಚಯವಾದರು. ಅವರ ಮಗನನ್ನೇ ಹೀರೋ ಮಾಡಿ ಎಂದಾಗ ಆರಂಭದಲ್ಲಿ ಸ್ವಲ್ಪ ಭಯವಾಗಿದ್ದು ಸುಳ್ಳಲ್ಲ. ಆದರೆ, ಆರ್ಯವರ್ಧನ್‌ ತುಂಬಾ ಪ್ರತಿಭೆ ಇರುವ ಹುಡುಗ. ಸಿನಿಮಾಕ್ಕೆ ಬೇಕಾದ ವಿಭಾಗಗಳಲ್ಲಿ ಅವರು ತರಬೇತಿ ಪಡೆದಿದ್ದಾರೆ. ಜೊತೆಗೆ ಅವರಿಗೆ ನಿರ್ಮಾಪಕರ ಮಗ ಎಂಬ ಅಹಂ ಕೂಡಾ ಇಲ್ಲ’ ಎನ್ನುವುದು ರಾಧ ಅವರ ಮಾತು. ಇನ್ನು “ಖನನ’ ಕಮರ್ಷಿಯಲ್‌ ಸಿನಿಮಾವಲ್ಲ ಎಂದು ನೇರವಾಗಿ ಹೇಳುತ್ತಾರೆ. “ಇದು ಕಮರ್ಷಿಯಲ್‌ ಸಿನಿಮಾವಲ್ಲ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾ. ಹಾಗಂತ ಪ್ರೇಕ್ಷಕರಿಗೆ ಖುಷಿ ಕೊಡುವ, ಕುತೂಹಲ ಹೆಚ್ಚಿಸುವ ಅಂಶಗಳು ಈ ಸಿನಿಮಾದಲ್ಲಿವೆ. ಇಲ್ಲಿ ಯಾವೊಂದು ಅಂಶವನ್ನು ಅನಾವಶ್ಯಕವಾಗಿ ಸೇರಿಸಿಲ್ಲ. ಎಲ್ಲವೂ ಕಥೆಗೆ ಪೂರಕವಾಗಿಯೇ ಬಂದು ಹೋಗುತ್ತವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ರಾಧ. ಚಿತ್ರದಲ್ಲಿ ನಾಯಿ ಕೂಡಾ ಪ್ರಮುಖ ಪಾತ್ರ ಮಾಡಿದೆಯಂತೆ. 

ನಿರ್ಮಾಪಕ ಶ್ರೀನಿವಾಸ್‌ ರಾವ್‌ ಅವರಿಗೆ ತಮ್ಮ ಹೋಂಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಬೇಕೆಂಬುದು ಬಹಳ ವರ್ಷಗಳ ಕನಸಾಗಿತ್ತಂತೆ. ಅದು “ಖನನ’ ಮೂಲಕ ಈಡೇರಿದೆ. “ಕಥೆ ತುಂಬಾ ಚೆನ್ನಾಗಿದೆ. ತಂಡ ಕೂಡಾ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು. ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ಸಿನಿಮಾ ನೋಡುವಂತಾಗಬೇಕೆಂದು ಮೂವಿ ಕೂಪನ್‌ ಎಂಬ ಆಫ‌ರ್‌ ಕೂಡಾ ಕೊಟ್ಟಿದ್ದೇವೆ’ ಎನ್ನುವುದು ನಿರ್ಮಾಪಕ ಶ್ರೀನಿವಾಸ್‌ ಮಾತು.

ಚಿತ್ರದಲ್ಲಿ ನಾಯಕರಾಗಿರುವ ಆರ್ಯವರ್ಧನ್‌ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಹೀರೋ ಆಗಿ “ಖನನ’ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಐದು ಶೇಡ್‌ ಇರುವ ಪಾತ್ರ ಸಿಕ್ಕಿದೆಯಂತೆ. ಜೀವನದುದ್ದಕ್ಕೂ ಹೋರಾಟ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಇಲ್ಲಿ ಬದುಕೋದು ಕಷ್ಟ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ಕರೀಷ್ಮಾ ನಾಯಕಿ. ಅವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next