Advertisement

ಎಸ್‌ಎಸ್‌ಎಲ್‌ಸಿ ಮಕ್ಕಳಿಗೊಂದು ಪರೀಕ್ಷಾ ಪತ್ರ

12:30 AM Mar 16, 2019 | |

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿರುವ ಪ್ರೀತಿಯ ಮಕ್ಕಳೇ…ನಿಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಕೆಲವೇ ದಿನಗಳಿವೆ. ಈ ಸಂದರ್ಭದಲ್ಲಿ ನಿಮಗೆ ಉಪಯೋಗವಾಗಬಹುದಾದ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ. ಎಸ್‌ಎಸ್‌ಎಲ್‌ಸಿ  ಏನೋ ಮಹಾ ದೊಡ್ಡ ಪರೀಕ್ಷೆ, ಅದರಲ್ಲಿ ಸಿಕ್ಕಾಪಟ್ಟೆ ಅಂಕಗಳನ್ನು ತೆಗೆಯಲೇಬೇಕು. ಇಲ್ಲದಿದ್ದರೆ ಮರ್ಯಾದೆಗೆ ಕಮ್ಮಿ ಅಂತಲೋ, ಗೌರವಕ್ಕೆ ಕುಂದು ಅಂತಲೋ ಭಾವಿಸುವುದು ಬೇಡ. ಪರೀಕ್ಷೆ ನಾವು ವರ್ಷದಲ್ಲಿ ಓದಿದ್ದನ್ನ ಗ್ರಹಿಸಿ, ಅರ್ಥಮಾಡಿಕೊಂಡು, ನೆನಪಿಟ್ಟುಕೊಂಡು ಅದನ್ನು  ಒಂದು ನಿಗದಿತ ಸಮಯದಲ್ಲಿ ಮತ್ತೆ ಬರೆಯುವ ಒಂದು ಪ್ರಕ್ರಿಯೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದುದು: ಹೊಸ ಜಾಗದಲ್ಲಿ ಬರೆಯುವುದು, ಆತ್ಮವಿಶ್ವಾಸದಿಂದ ಇರುವುದು, ವಿಷಯವನ್ನು ನೆನೆಪಿಸಿ ಕೊಳ್ಳು ವುದು, ಹೆದರದೆ ನಿರಾಳವಾಗಿ ರುವುದು, ಬೇಗ ಬೇಗ (ವೇಗವಾಗಿ) ಬರೆಯುವುದು, ಬರೆಯು ವುದನ್ನು ಸ್ಪಷ್ಟವಾಗಿ ಗೊಂದಲವಿಲ್ಲದಂತೆ ಬರೆಯುವುದು ಇಷ್ಟೇ! 

Advertisement

ನಿಮಗೆ ಎಕ್ಸಾಮ್‌ ಬರೆಯಲು ಹೆದರಿಕೆ ಇರುವುದಿಲ್ಲ. ಯಾಕೆಂದರೆ
1.ನಿಮಗೆ ನಿಮ್ಮ ಮೇಲೆ, ನಿಮ್ಮ ಶ್ರಮದ ಮೇಲೆ, ಪ್ರಯತ್ನದ ಮೇಲೆ ಅಗಾಧವಾದ ನಂಬಿಕೆಯಿದೆ. ಜೊತೆಗೆ ದೇವರ ಮೇಲೆಯೂ ನಂಬಿಕೆ ಇದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲವನ್ನು ದೇವರು ಕೊಡುತ್ತಾನೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿರಲಿ
2.ನೀವು ಈಗಾಗಲೇ ಸಾಕಷ್ಟು ಪರೀಕ್ಷೆ ಬರೆದಿದ್ದೀರಿ. ಇದೂ ಅದೇ ತರಹದ ಒಂದು ಪರೀಕ್ಷೆ ಅಷ್ಟೇ!
3.ಹಿಂದಿನ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ದ್ದೀರಿ ಮತ್ತು ಅದರಲ್ಲಿ ಉತ್ತಮ ಫ‌ಲಿತಾಂಶ ಪಡೆದಿದ್ದೀರಿ!
4.ಪರೀಕ್ಷೆಯ ಪ್ರಶ್ನೆಪತ್ರಿಕೆಯ ಮಾದರಿ  ಹೇಗಿರುತ್ತದೆ ಎಂಬುದನ್ನು ಈಗಾಗಲೇ ನೀವು ತಿಳಿದುಕೊಂಡಿರುವಿರಿ.
5.ಯಾರೋ ಬೇರೆಯವರು ಬೇಗ ಬರೆಯುತ್ತಾರೆ, ಹೆಚ್ಚು ಓದಿದ್ದಾರೆ, ಹೆಚ್ಚು ಅಡಿಶನಲ್‌ ಶೀಟ್‌ ತೆಗೆದುಕೊಳ್ಳುತ್ತಾರೆ ಎಂಬ ಯಾವ ಅಳುಕೂ ನಿಮಗಿಲ್ಲ. ಅವರ ಬಗ್ಗೆ ನೀವು ಪರೀಕ್ಷಾ ಕೋಣೆಯಲ್ಲಿ ಯೋಚಿಸುವುದೇ ಇಲ್ಲ.

ಇನ್ನು ಅಂಕಗಳ ವಿಷಯಕ್ಕೆ ಬರೋಣ.ಅಂಕ ಹೆಚ್ಚು ಪಡೆದವರು ಮಾತ್ರ ಬುದ್ಧಿವಂತರು, ಮಹಾ ಮೇಧಾವಿಗಳು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಕಡಿಮೆ ಅಂಕ ಪಡೆದವರು ದಡ್ಡರೂ ಅಲ್ಲ. ಪರೀಕ್ಷಾ ಪ್ರಕ್ರಿಯೆಯ ಸಿದ್ಧತೆಯಲ್ಲಿ ಹೆಚ್ಚು ಕೌಶಲ ತೋರಿದವರು, ಹೆಚ್ಚು ಮಾರ್ಗದರ್ಶನ, ತರಬೇತಿ ಪಡೆದವರು ಹೆಚ್ಚು ಅಂಕ ಪಡೆಯುತ್ತಾರೆ. ಯಾರಿಗೆ ಪ್ರಶ್ನೆ ಪತ್ರಿಕೆಯ ಮಾದರಿ ಚೆನ್ನಾಗಿ ಗೊತ್ತಿರುತ್ತದೋ ಅವರಿಗೂ ಹೆಚ್ಚು ಅಂಕಗಳು ಸಿಗುತ್ತವೆ. ಕೆಲವೊಮ್ಮೆ ಅದೃಷ್ಟದ ನೆರವೂ ಬೇಕಾಗು ತ್ತದೆ. ಅದು ನಿಮಗೆ ಇದ್ದೇ ಇದೆ. ನೀವೂ ಕೂಡ ಹತ್ತಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೀರಿ, ಬಿಡಿಸುತ್ತಿದ್ದೀರಿ. ಅವುಗಳಲ್ಲಿ ನಿಮಗೆ ಉತ್ತಮ ಅಂಕಗಳೇ ಬಂದಿರುತ್ತವೆ. ಆದರೂ ಈಗ ಈ ಮಹಾ ಪರೀಕ್ಷೆಯಲ್ಲಿ ಶೇ.90ರ ಮೇಲೆ ಅಂಕಗಳನ್ನು ಪಡೆಯಬೇಕು ಅನ್ನೋ ಒತ್ತಡ ನಿಮ್ಮ ಮೇಲಿರುತ್ತದೆ. ಮಕ್ಕಳೇ, ಇದೇ ಆತಂಕಕ್ಕೆ ಕಾರಣ. ನೆನಪಿಡಿ, ಇಂತಹ ಒತ್ತಡವನ್ನು ನಿಮ್ಮ ತಂದೆ, ತಾಯಿ, ಶಿಕ್ಷಕರು ಹಾಕಿದ್ದಾರೆ ಎಂದು ನಿಮಗೆ ಅನಿಸುತ್ತದೆಯೇ? ಹಾಗಿದ್ದರೆ ಇದನ್ನು ಒತ್ತಡ ಎಂದುಕೊಳ್ಳಬೇಡಿ. ನೀವು ಮೊದಲಿನಿಂದಲೂ ಉತ್ತಮ ಸಾಧನೆ ಮಾಡಿದ್ದೀರಿ. ಬಹುಮಾನಗಳನ್ನು ಪಡೆದಿದ್ದೀರಿ. ಅದೇ ಗುಣಮಟ್ಟವನ್ನು ಕಾಪಾಡಿಕೊಳ್ಳುವ, ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ನಿಮ್ಮ ತಂದೆ, ತಾಯಿ, ಶಿಕ್ಷಕರು, ಹಿತೈಷಿಗಳಿದ್ದಾರೆ ಎಂದುಕೊಳ್ಳಿ.

ಈಗಲೂ ಅಂತಹ ಒಂದು ಉತ್ತಮ ಸಾಧನೆ ಮಾಡಬೇಕು ಎನ್ನುವುದು ನಿಮ್ಮ ಮನಸ್ಸಿನ ಹಂಬಲವಾಗಬೇಕೇ ಹೊರತು ಅದು ಯಾರಿಂದಲೋ ಬಂದ ಬಾಹ್ಯ ಒತ್ತಡ ಎಂದು ಭಾವಿ ಸಬೇಡಿ. ನಿಮ್ಮ ಬಗ್ಗೆ ಅಪಾರ ನಿರೀಕ್ಷೆ ಇರುವ ಪೋಷಕರು, ಶಿಕ್ಷಕರು, ಸ್ನೇಹಿತೆಯರು ನೀವು ಶೇ.90 ಅಂಕ ಗಳಿಸುತ್ತೀರಿ ಎಂದು ಕೊಂಡಿರ ಬಹುದು. ಆದರೆ ಅದು ನಿಮ್ಮೊಳಗಿನ ಅದಮ್ಯ ಆಸೆ, ಹಂಬಲ, ಮಹದಾಕಾಂಕ್ಷೆಯೇ ಹೊರತು ಯಾರ ಬಲ ವಂತದ ಮಾಘಸ್ನಾನವಲ್ಲ ಎಂಬುದು ನೆನಪಿರಲಿ. ನಿಮ್ಮದೇ ಗುರಿ, ನಿಮ್ಮದೇ ಆಸೆಯಾದ್ದರಿಂದ ಅದನ್ನು ಒತ್ತಡ ಎಂದು ಕೊಳ್ಳಬೇಡಿ. ಪ್ರೀತಿ ಯಿಂದ ಪರೀಕ್ಷೆಯನ್ನೂ ಒಂದು ಅನುಭವ ಎಂಬಂತೆ ಸ್ವೀಕರಿಸಿ ಹಬ್ಬದಂತೆ ಸಂಭ್ರಮಿಸಿ, ನೀವು ಖಂಡಿತಾ ಗೆಲ್ಲುತ್ತೀರಿ.

ನಿನಗೆ ಉತ್ತಮ ಅಂಕಗಳು ಯಾಕೆ ಬೇಕು?
1.ಅಪ್ಪ, ಅಮ್ಮನನ್ನು ಮೆಚ್ಚಿಸಲಿಕ್ಕೆ ಖಂಡಿತಾ ಅಲ್ಲ ಅಥವಾ ಯಾರೋ ಬೈತಾರೆ, ಅವಹೇಳನ ಮಾಡ್ತಾರೆ ಅನ್ನೋ ಕಾರಣಕ್ಕೆ ಅಂಕಗಳನ್ನ ಪಡೆಯಬೇಕಿಲ್ಲ. ಪೋಷಕರಿಗೆ ಉತ್ತಮ ಅಂಕಗಳ ನಿರೀಕ್ಷೆ ಏನೋ ಇರುತ್ತದೆ. ಆದರೆ ಅದಕ್ಕಾಗಿ ಅವರು ನಿನ್ನ ಮೇಲೆ ಒತ್ತಡ ಹಾಕಬಾರದು ಎಂದು ತಿಳಿದಿದ್ದಾರೆ. ನೀವು ಬುದ್ಧಿವಂತರು, ಯಾವುದೋ ಕಾರಣಕ್ಕೆ ಸ್ವಲ್ಪ ಕಡಿಮೆ ಅಂಕ ಬಂದರೂ ಅದಕ್ಕಾಗಿ ಅವರು ಬೇಸರಿಸುವುದಿಲ್ಲ, ಕೊರಗುವು ದಿಲ್ಲ ಅಂತ ನಿಮಗೆ ಗೊತ್ತಿರಲಿ. ಆದರೂ ನಿಮಗೆ ಒಳ್ಳೇ ಅಂಕ ಬಂದರೆ ಪೋಷಕರಿಗೆ ಸಂತೋಷವೇ!

Advertisement

2.ಮುಂದಿನ ಓದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನಿಮಗೆ ಉತ್ತಮ ಅಂಕಗಳು ಬೇಕು

3.ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು/ನಿಮ್ಮ ಇಷ್ಟದ ವಿಷಯಗಳನ್ನು ಅಭ್ಯಸಿಸಲು ಈ ಅಂಕಗಳು ಮಾನದಂಡ ಆಗಬಹುದು. (ನೆನಪಿಡಿ: ಅದೂ ನಿಮ್ಮ ಇಚ್ಛೆಯೇ! ಸಲಹೆ, ಮಾರ್ಗದರ್ಶನ ಮಾತ್ರ ಪೋಷಕರದ್ದಾಗಿರಲಿ)

4.ಗ್ರಾಮೀಣ ಪ್ರದೇಶದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸೀಮಿತ ಸೌಲಭ್ಯಗಳ ನಡುವೆಯೂ ದೊಡ್ಡ ಸಾಧನೆ ಮಾಡಿದ ಅನುಕರಣೀಯ ಮಾದರಿ ಆಗಲಿಕ್ಕೆ, ಬೇರೆ ಮಕ್ಕಳಿಗೆ ಸ್ಫೂ³ರ್ತಿ ತುಂಬಲಿಕ್ಕೆ ನಿಮಗೆ ಹೆಚ್ಚಿಗೆ ಅಂಕಗಳು ಬೇಕಾಗಬಹುದು.

5.ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಎಸ್‌ಎಸ್‌ಎಲ್‌ಸಿ/ಪಿಯುಸಿ ಕೆರಿಯರ್‌, ಶಾಲಾ ದಿನಗಳು, ನಿಮ್ಮ ಪ್ರಯತ್ನ ಎಲ್ಲವೂ ಸಿಹಿ ನೆನ ಪಾಗಿ ಉಳಿಯಲು ಒಂದಿಷ್ಟು ಉತ್ತಮ ಅಂಕಗಳು ಬೇಕು.ಎಲ್ಲಾ ಮಕ್ಕಳಿಗೆ, ಅವರ ಪೋಷಕರಿಗೆ, ಶಿಕ್ಷಕರಿಗೆ ಉತ್ತಮ ಅಂಕಗಳೇನೋ ಬರಬೇಕು ಎಂದು ಆಸೆಯಿರುತ್ತದೆ. ಆದರೆ ಬೋಧನೆಯಲ್ಲಿ ಗುಣಮಟ್ಟದ ಕೊರತೆ,  ಪರೀಕ್ಷಾ ಸಿದ್ಧತೆ ಕೊರತೆ, ಅನಾರೋಗ್ಯ, ಕೌಟುಂಬಿಕ ಸಮಸ್ಯೆಗಳು, ಪರೀಕ್ಷಾ ಕೋಣೆ ಯಲ್ಲಿನ ಗೊಂದಲ, ಭಯ ಹೀಗೆ ಯಾವುದೋ ಕಾರಣಕ್ಕೆ ಕಡಿಮೆ ಅಂಕಗಳು ಬರಬಹುದು. 

ನಿರೀಕ್ಷೆಗಿಂತ ಒಂದಿಷ್ಟು ಕಡಿಮೆ ಅಂಕಗಳು ಬಂದರೆ?
ಕಡಿಮೆ ಅಂಕ ಸೋಲಲ್ಲ. ನಿನ್ನ ಪೋಷಕರಿಗೆ ನೀನು ಗರಿಷ್ಠ ಹಾಗೂ ಪ್ರಾಮಾಣಿಕ  ಪ್ರಯತ್ನ ಮಾಡಿರುವುದು ಗೊತ್ತಿರು ವುದರಿಂದ ಅವರಿಗೆ ನಿನ್ನ ಪ್ರಯತ್ನದ ಬಗ್ಗೆ ಗೌರವ, ಸಂತೃಪ್ತಿ ಖಂಡಿತಾ ಇರುತ್ತದೆ. ಅವರು ಆ ಬಗ್ಗೆ ಎಲ್ಲರಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.(ಪೋಷಕರು ಇದನ್ನು ಗಮನಿಸಬೇಕು)

ತಲೆ ಮೇಲೆ ಆಕಾಶ ಬಿದ್ದ ಹಾಗೆ ಒದ್ದಾಡುವ ಅಗತ್ಯವಿಲ್ಲ. ಹತಾಶರಾಗುವುದೂ ಬೇಕಿಲ್ಲ.

ಅವಶ್ಯಕತೆ ಇದೆ ಎನಿಸಿದರೆ ಮರು ಎಣಿಕೆ/ಮರು ಮೌಲ್ಯ ಮಾಪನಕ್ಕೆ ಹಾಕಬಹುದು. ಎಲ್ಲಾ  ಪ್ರಯತ್ನಗಳ ನಂತರವೂ ಅದೇ ಅಂಕಗಳು ಉಳಿದರೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಬರೀ ಪುಸ್ತಕದ ಹುಳುವಾಗಿ ಕುಳಿತು ಕೊಳ್ಳಲಿಲ್ಲ, ಎಲ್ಲಾ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೆ. ಹಾಗಾಗಿ ಈ ಫ‌ಲಿತಾಂಶ ನನಗೆ ತೃಪ್ತಿಕರವೇ ಎಂದು ಸಮಾಧಾನ ಪಟ್ಟುಕೊಳ್ಳುವುದು

ಬೇರೆ ವಿದ್ಯಾರ್ಥಿಗಳ ಅಂಕ ಗಳಿಕೆಯೊಂದಿಗೆ ಹೋಲಿಸುವ ಅಗತ್ಯವಿಲ್ಲ. ಯಾವುದೇ ಇಬ್ಬರು ವಿದ್ಯಾರ್ಥಿಗಳು ಒಂದೇ ಪಡಿಯಚ್ಚಲ್ಲ. ನಿಮ್ಮ ಪ್ರತಿಭೆ, ಸಾಧನೆಯ ಕ್ಷೇತ್ರ ಬೇರೆಯೇ ಇರಬಹುದು. ಅದನ್ನು ಅಂಕಗಳಲ್ಲಿ ಅಳೆಯಲಾಗದಿರ ಬಹುದು ಅಷ್ಟೇ!

ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ತರಗತಿಯಲ್ಲಿ (ಪಿಯುಸಿ ಯಲ್ಲಿ/ ಪದವಿಯಲ್ಲಿ/ ವೃತ್ತಿ ಶಿಕ್ಷಣದಲ್ಲಿ) ಇನ್ನೂ ಹೆಚ್ಚು ಅಂಕ ಗಳಿಸುತ್ತೇನೆಂದು ಸಂಕಲ್ಪ ಮಾಡಲು ಸಕಾಲ!

ಕಡಿಮೆ ಅಂಕ ಯಾವ ವಿಷಯದಲ್ಲಿ, ಯಾವ ಕಾರಣಕ್ಕೆ ಬಂದಿದೆ ಎಂದು ಪೋಷಕರ, ಶಿಕ್ಷಕರ, ಗೆಳೆಯರ  ಜೊತೆ ಚರ್ಚಿಸಿ ಮನಸ್ಸನ್ನು ಹಗುರವಾಗಿಸಿ ಕೊಳ್ಳುವುದು. ಇದರಿಂದ ಮುಂದಿನ ಗುರಿ ನಿರ್ಧರಿಸಲು ಅನುಕೂಲ

ಯಾರೊಂದಿಗೂ ಅಂಕಗಳನ್ನು ಮುಚ್ಚಿಡಲು ಪ್ರಯತ್ನಿಸದೆ ಇದ್ದದ್ದನ್ನು ಇದ್ದ ಹಾಗೇ ಹೇಳುವುದು. ಇದರಿಂದ ಅನವಶ್ಯಕ ಸುಳ್ಳುಗಳು, ಗೊಂದಲ, ಕೀಳರಿಮೆ ತಪ್ಪುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಇತಿಮಿತಿಯಲ್ಲಿ ನಾನು ಶ್ರೇಷ್ಠ ಸಾಧನೆ ಮಾಡಿದ್ದೇನೆ ಎಂದು ನಿಮಗೆ ನೀವೇ ಹೆಮ್ಮೆ ಪಡಿ ಆದರೆ ಯಾವುದೇ ಕಾರಣಕ್ಕೂ ಕಡಿಮೆ ಅಂಕ ಬಂದರೆ ಅದು ನಿಮ್ಮ ಸೋಲು ಅಂದುಕೊಳ್ಳಬೇಡಿ. ಅದು ಸೋಲಾದರೆ ಅದಕ್ಕೆ ಕೊಡುವ ಕಾರಣಗಳೆಲ್ಲಾ ನೆವವಾಗುತ್ತವೆ. ನೆನಪಿಡಿ: success requires no explanations; Failure permits no alibis. ಈಗ ನಿಮಗೆ ಪರೀಕ್ಷೆ ಎದುರಿಸಲು ಇನ್ನಷ್ಟು ಧೈರ್ಯ ಬಂದಿರಬಹುದು. ಇನ್ನು ಧೈರ್ಯವಾಗಿ, ಖುಷಿಯಾಗಿ ಸಂಭ್ರಮದಿಂದ ಯುಗಾದಿಯ ಮುಂಚೆ ಬರುತ್ತಿರುವ ಪರೀಕ್ಷೆಯ ಹಬ್ಬಕ್ಕೆ ಸಿದ್ಧರಾಗಿ ನಿಮಗೆ ಶುಭವಾಗಲಿ.

ತುರುವೇಕೆರೆ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next