Advertisement

ಶರಣರ ವಚನ ಸಾಹಿತ್ಯ ಬದುಕಿಗೆ ದಾರಿದೀಪ: ತಿಮ್ಮಪ್ಪ 

05:40 PM Aug 08, 2018 | Team Udayavani |

ಹಾವೇರಿ: ವಚನ ಸಾಹಿತ್ಯವನ್ನು ಇನ್ನಷ್ಟು ಹೊಸ ರೀತಿಯಲ್ಲಿ ಅಧ್ಯಯನ ಮಾಡಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ ಎಂದು ಶತಾಯುಷಿ, ನಿವೃತ್ತ ಶಿಕ್ಷಕ ಎಂ.ಬಿ. ಹಿರೇಮಠ ಅಭಿಪ್ರಾಯಿಸಿದರು. ಸ್ಥಳೀಯ ಹುಕ್ಕೇರಿಮಠ ದಾಸೋಹ ಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕ ವಚನ ಸಾಹಿತ್ಯ ಮತ್ತು ಸಂಶೋಧನ ಪರಿಷತ್ತಿನ ಉದ್ಘಾಟನೆ ಮತ್ತು ‘ಗಮನ- 75 ಗೀತಗಾಯನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕವಿ ಗಂಗಾಧರ ನಂದಿ ಅವರು ನನ್ನ ಶಿಷ್ಯ. ಅವರು ಬೆಳೆದ ರೀತಿ ಮತ್ತು ಬರೆದ ಸಾಹಿತ್ಯ, ಎಂಥ ಗುರುವಿಗೂ ಅಭಿಮಾನ ತರುವ ವಿಷಯ. ತಮ್ಮ ತಂದೆ-ತಾಯಿಯ ಜೊತೆಗೆ ಗುರುಗಳನ್ನು ನೆನೆದು ಸನ್ಮಾನಿಸಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ವಚನ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ತಿಮ್ಮಪ್ಪ ಮಾತನಾಡಿ, ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ವಚನ ಸಾಹಿತ್ಯ ಪರಿಷತ್ತಿನ ಘಟಕಗಳು ಸ್ಥಾಪನೆಯಾಗಿದ್ದು, 134 ತಾಲೂಕು ಕೇಂದ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸಂದರ್ಭಕ್ಕೆ ಶರಣರ ವಚನ ಸಾಹಿತ್ಯ ದಾರಿ ದೀಪಗಳಾಗಿದ್ದು ಅದರ ಅಧ್ಯಯನ ಮತ್ತು ಜನರಿಗೆ ಮುಟ್ಟಿಸುವ ಉದ್ದೇಶ ಪರಿಷತ್ತಿನದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಗಂಗಾಧರ ನಂದಿ ಅವರಿಗೆ 75 ವರ್ಷ ಪೂರೈಸಿದರ ಪ್ರಯುಕ್ತ ಲೇಖಕರನ್ನು ಅನೇಕ ಸಂಘ ಸಂಸ್ಥೆಗಳು, ಗಣ್ಯರು ಅವರ ತಂದೆ-ತಾಯಿಯ ಭಾವಚಿತ್ರಕ್ಕೆ ಹಾರ-ಶಾಲು ಹಾಕುವ ಮೂಲಕ ಸನ್ಮಾನಿಸಿದರು. ಕವಿ ಗಂಗಾಧರ ನಂದಿ ಮಾತನಾಡಿ, ಯಾವ ಫಲಾಪೇಕ್ಷೆ ಇಲ್ಲದೇ ತಂದೆ-ತಾಯಿಯರ ಕೃಪೆಯಿಂದ ಸ್ವಲ್ಪ ಮಟ್ಟಿಗೆ ಸಾಧನೆ ಮಾಡಿರುವೆ. ಗುರುಗಳಾದ ಎಂ.ಬಿ. ಹಿರೇಮಠ ಮಾರ್ಗದರ್ಶನ, ಗುರುಕೃಪೆಯು ನನ್ನನ್ನು ಬೆಳೆಸಿದೆ ಎಂದರು.

ಸಮಾರಂಭವನ್ನುದ್ದೇಶಿಸಿ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಂಜುನಾಥ ತಂಬಾಕದ, ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಪ್ರೊ| ಸಿ.ಸಿ. ಪ್ರಭುಗೌಡರ, ವಿಜಯರೂಪ ತಂಬಾಕದ, ಬಿ. ಬಸವರಾಜ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ 46 ಗಣ್ಯರನ್ನು ಸನ್ಮಾನಿಸಲಾಯಿತು. ಕವಿ ಗಂಗಾಧರ ನಂದಿಯವರು ರಚಿಸಿದ ಕಾವ್ಯ ಗಾಯನವನ್ನು 18 ಗಾಯಕರು ಹಾಡಿದರು. ಬಿ. ಬಸವರಾಜಪ್ಪ ಸ್ವಾಗತಿಸಿದರು. ಪುಷ್ಟಾ ಶೆಲವಡಿಮಠ ಕಾರ್ಯಕ್ರಮ ನಿರ್ವಹಿಸಿದರು. ಜಿ.ಎಂ. ಓಂಕಾರಣ್ಣನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next