Advertisement

Udupi ಪರಂಪರೆಯ ಕೌಶಲ ಬೆಳೆಯಲಿ: ಪುತ್ತಿಗೆ ಶ್ರೀ

01:09 AM Aug 23, 2024 | Team Udayavani |

ಉಡುಪಿ: ಜಾಗತೀಕರಣದ ಪ್ರಭಾವದಿಂದ ಪಾರಂಪರಿಕ ಕರಕುಶಲತೆ ಕ್ಷೀಣಿಸುತ್ತಿದೆ. ಹೀಗಾಗಿ ಆಧುನಿಕ ಶಿಕ್ಷಣದ ಜತೆಗೆ ಮನೆತನದ ವೃತ್ತಿ ಹಾಗೂ ವಂಶ ಪರಂಪರೆಯ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

Advertisement

ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 7 ದಿನ ನಡೆಯುವ ಶ್ರೀಕೃಷ್ಣ ಸಪ್ತೋತ್ಸವ ಹಾಗೂ ಸಂಜೀವಿನಿ ಸಂಘಗಳ ಸದಸ್ಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ವಿಷಯದಲ್ಲಿ ಕೌಶಲ ಪಡೆಯಬೇಕು ಎಂಬುದು ಕೃಷ್ಣನ ಸಂದೇಶ. ಇದರ ಪ್ರತೀಕವಾಗಿ ಕರಕುಶಲ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೇಂದ್ರ ಸರಕಾರವೂ ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಾಸೋತ್ಸವದ ನಡುವೆ ಸಪ್ತೋತ್ಸವ ನಡೆಯುತ್ತಿದೆ. ಪರಸ್ಪರ ಒಬ್ಬರಿಗೊಬ್ಬರು ಸಮ್ಮಾನ ಮಾಡಿದರೆ ಸಮಾಜದಲ್ಲಿ ಏಕತೆ, ಒಗ್ಗಟ್ಟು ನೆಲೆಸಲು ಸಾಧ್ಯ ಎಂದರು.

ಕೆಲವು ಆಧುನಿಕ ನಿಯಮಾ ವಳಿಗಳಿಂದ ಎಲ್ಲ ಸಮಾಜದ ಮೇಲೂ ಹೊಡೆತ ಬೀಳುತ್ತಿದೆ. ಎಲ್ಲ ಮನೆಯ ಮಕ್ಕಳೂ ಡಾಕ್ಟರ್‌, ಎಂಜಿನಿಯರ್‌ ಆದರೆ ಇತರ ವೃತ್ತಿಯ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಚಿಂತನೆ ನಡೆಸುವ ಕೆಲಸವಾಗಬೇಕು. ಎಲ್ಲ ಉದ್ದಿಮೆಗಳಲ್ಲಿಯೂ ಸಮತೋಲನ ಅತ್ಯಗತ್ಯ. ಹೊಟೇಲ್‌ ಉದ್ಯಮ, ಶಿಲ್ಪಿಗಳ ಕೊರತೆ ಈಗ ಕಂಡುಬರುತ್ತಿದೆ. ಮನೆತನದಲ್ಲಿ ಕಲಿತಿರುವ ವೃತ್ತಿಯನ್ನು ಯಾವತ್ತೂ ಮರೆಯಬಾರದು ಎಂದು ಶ್ರೀಗಳು ತಿಳಿಸಿದರು.

ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.ಶಾಸಕ ಯಶ್‌ಪಾಲ್‌ ಎ.ಸುವರ್ಣ ಮಾತನಾಡಿ, ಕರಕುಶಲ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಿದಾಗ ಮತ್ತಷ್ಟು ಉದ್ದಿಮೆಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.

Advertisement

ಕಟಪಾಡಿ ಕಾಳಿಕಾಂಬಾ ದೇವ ಸ್ಥಾನದ ಧರ್ಮದರ್ಶಿ ಮುರಹರಿ ಆಚಾರ್ಯ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಮಾಜಿ ಶಾಸಕ ಕೆ. ರಘಪತಿ ಭಟ್‌, ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ, ಉದ್ಯಮಿಗಳಾದ ಹರಿಪ್ರಸಾದ್‌ ರೈ, ಭುವನೇಂದ್ರ ಕಿದಿಯೂರು, ಸುರೇಂದ್ರ ಕಲ್ಯಾಣಪುರ, ಪ್ರದೀಪ್‌ ಕಲ್ಕೂರ, ಪ್ರೇಮ್‌ ಮಿನೇಜಸ್‌ ಉಪಸ್ಥಿತರಿದ್ದರು. ಪುತ್ತಿಗೆ ಮಠದ ರಮೇಶ್‌ ಭಟ್‌ ನಿರೂಪಿಸಿದರು.

ಕರಕುಶಲ ವಸ್ತುಗಳ ಪ್ರದರ್ಶನ
ಶ್ರೀಕೃಷ್ಣ ಮಠದ ಗೀತಾಮಂದಿರದಲ್ಲಿ ಆ.30ರವರೆಗೆ ಸಂಜೀವಿನಿ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು, ವಿವಿಧ ಬಗೆಯ ಊದುಬತ್ತಿ, ಸೋಪುಗಳು, ಕಲಶ ಕನ್ನಡಿ, ಗೃಹಪ್ರವೇಶ ಪರಿಕರ, ಹಳದಿ ಕಾರ್ಯಕ್ರಮ ಸಾಮಗ್ರಿ, ದೇವರ ಹರಿವಾಣ, ತೋರಣಗಳು, ವಿವಿಧ ಚಿತ್ತಾರಗಳ ಪೈಟಿಂಗ್‌, ಸೀರೆ, ಕುಂಬಾರಿಕೆ ವಸ್ತುಗಳು ಗಮನಸೆಳೆಯುತ್ತಿವೆ. ಉಡುಪಿ, ಕಾಪು, ಶಿರ್ವ, ಚೇರ್ಕಾಡಿ, ಉದ್ಯಾವರ, ಉತ್ತರಕನ್ನಡ ಸಹಿತ ವಿವಿಧ ಭಾಗದಿಂದ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next