Advertisement

ಮಹಿಳಾ ಒಕ್ಕೂಟ ಹೆಚ್ಚು ಕಾರ್ಯೋನ್ಮುಖವಾಗಲಿ

08:13 PM Aug 27, 2019 | Lakshmi GovindaRaj |

ಚಾಮರಾಜನಗರ: ಮಹಿಳೆಯರ ಸಾಮರ್ಥ್ಯ ವೃದ್ಧಿಸಿ, ಅವರನ್ನು ಸಶಕ್ತರಾಗಿಸುವುದು ಮಹಿಳಾ ಒಕ್ಕೂಟಗಳ ಮುಖ್ಯ ಉದ್ದೇಶವಾಗಬೇಕು. ಅದರಂತೆ ಒಕ್ಕೂಟಗಳು ಹೆಚ್ಚು ಕಾರ್ಯೋನ್ಮುಖವಾಗಬೇಕು ಎಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಮಹಿಳಾ ಒಕ್ಕೂಟ ಹಾಗೂ ನಗರ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ನೆಟ್‌ವರ್ಕ್‌ ಸಂಸ್ಥೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಲಾಗಿದ್ದ “ನರೇಗಾ, ವೇತನ ಮತ್ತು ಕಟ್ಟಡ ಕಾರ್ಮಿಕ ಇಲಾಖೆಯ ಸೌಲಭ್ಯಗಳು ಎಂಬ ವಿಷಯ ಕುರಿತು ನಡೆದ “ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಶೋಷಣೆ ವಿರುದ್ಧ ದನಿ ಎತ್ತಿ: ಮಹಿಳೆಯರು ಮಾನಸಿಕವಾಗಿ ಪುರುಷರಿಗಿಂತ ಹೆಚ್ಚು ಸಬಲರು. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಹೆಚ್ಚುತ್ತಲೇ ಇದೆ. ಮಹಿಳೆಯರಿಗೆ ತಮ್ಮ ಹಕ್ಕುಗಳ ಸಂಪೂರ್ಣ ಅರಿವು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಮಹಿಳೆಯರು ಸಂವಿಧಾನ ತಮಗೆ ಒದಗಿಸಿರುವ ಎಲ್ಲಾ ಹಕ್ಕು, ಸೌಲಭ್ಯಗಳ ಬಗ್ಗೆ ಅರಿತುಕೊಂಡು ಶೋಷಣೆಯ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಬಹುದೊಡ್ಡ ಸವಾಲು: ಗ್ರಾಮ ಪಂಚಾಯಿತಿ ಮತ್ತಿತ್ತಿರ ಕ್ಷೇತ್ರಗಳಲ್ಲಿ ಇಂದು ಮಹಿಳೆಯರಿಗೆ ಶೇ.50ರಷ್ಟು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಮಹಿಳೆಯರು ಸಹ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೂ ಆಕೆಯನ್ನು ಸ್ವತಂತ್ರಳು ಎಂದು ಒಪ್ಪಿಕೊಳ್ಳಲು ಸಮಾಜ ಸಿದ್ಧವಿಲ್ಲದಿರುವುದನ್ನ ನೋಡಬಹುದಾಗಿದೆ. ಇಂಥ ಸೀಮಿತ ದೃಷ್ಟಿಯನ್ನು ಹೋಗಲಾಡಿಸುವುದು ಮಹಿಳೆಯರ ಮುಂದಿರುವ ಬಹುದೊಡ್ಡ ಸವಾಲು ಎಂದು ತಿಳಿಸಿದರು.

ಆರೋಗ್ಯದ ಬಗ್ಗೆ ಗಮನಹರಿಸಿ: ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಮಾಡದ ಕೆಲಸವಿಲ್ಲ ಎಂದು ಹೇಳಲಾಗುತ್ತದೆ. ಅಂತೆಯೇ ಮಹಿಳೆಯರು ಉದ್ಯೋಗದಲ್ಲಿದ್ದರೂ, ಅಷ್ಟೇ ಮುತುವರ್ಜಿಯಿಂದ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಾರೆ. ಏತನ್ಮಧ್ಯೆ ತಮ್ಮ ಕುರಿತು ಚಿಂತಿಸುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಎಷ್ಟೋ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಈ ರೀತಿಯ ನಿರ್ಲಕ್ಷ್ಯ ಇರಬಾರದು. ಮಹಿಳೆಯರು ತಮ್ಮ ಆರೋಗ್ಯ ಮತ್ತು ಸ್ವತ್ಛತೆಯ ಬಗೆಗೆ ಹೆಚ್ಚು ಗಮನ ಕೊಡಬೇಕು ಎಂದು ಸಲಹೆ ಮಾಡಿದರು.

Advertisement

ಸರ್ಕಾರದ ಯೋಜನೆಗಳ ಪ್ರಯೋಜ ಪಡೆಯಿರಿ: ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಸತಿ ಶಾಲೆಗಳನ್ನು ತೆರೆದಿದೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣವನ್ನು ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೇ ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಕಾರ್ಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ಎಲ್ಲಾ ಸೌಲಭ್ಯಗಳ ಪ್ರಯೋಜನ ಪಡೆಯುವುದು ತುಂಬಾ ಮುಖ್ಯ ಎಂದು ತಿಳಿಸಿದರು.

ಹೆಚ್ಚೆಚ್ಚು ಉದ್ಯೋಗಗಳಲ್ಲಿ ತೊಡಗಿ: ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗಲಿದೆ. ಹೀಗಾಗಿ ಮಹಿಳೆಯರು ಹೆಚ್ಚೆಚ್ಚು ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಬೇಕು ಎಂದರು.

ಕಷ್ಟದ ದಾರಿ ದಾಟಬೇಕು: ಆರ್ಥಿಕ ಸ್ವಾತಂತ್ರ ಹೊಂದಲು ಶಿಕ್ಷಣ ಪಡೆಯುವುದು ಬಹುಮುಖ್ಯವಾಗುತ್ತದೆ. ಅಂತೆಯೇ ಉನ್ನತ ಸ್ಥಾನವನ್ನು ಗಳಿಸಲು ಸುದೀರ್ಘ‌ವಾದ ಕಷ್ಟದ ದಾರಿಯನ್ನು ದಾಟಬೇಕಾಗುತ್ತದೆ. ಆದ ಕಾರಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳಾಗಿ ರೂಪಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಸಮಸ್ಯೆಗಳು ಶೀಘ್ರ ಪರಿಹಾರ: ಪಂಚಾಯಿತಿಯ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆಯಾ ಗ್ರಾಮ ಪಂಚಾಯಿತಿಗೆ ಅನುಗುಣವಾಗಿ ಕೆಲಸಗಳನ್ನು ವಿಭಾಗಿಸಲಾಗಿದೆ. ಜತೆಗೆ ನರೇಗಾ ಯೋಜನೆಯನ್ನು ಮಹಿಳೆಯರಿಗೆ ಪ್ರಯೋಜನವಾಗುವಂತೆ ಮಾಡಲು ಪಂಚಾಯಿತಿಗಳಿಗೆ ನಿಗದಿತ ಗುರಿ ನೀಡಲಾಗಿದೆ. ಒಂದು ವೇಳೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಅದನ್ನು ಕೂಡಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಅರಿವು ಮೂಡಿಸಲಾಗುವುದು: ಕೋಲಾರ ಗ್ರಾಮೀಣ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಮಹಿಳೆಯ ಸಮಸ್ಯೆಗಳನ್ನು ಬೇರು ಮಟ್ಟದಿಂದ ಹೋಗಲಾಡಿಸಿ, ಅವರನ್ನು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಸಶಕ್ತರನ್ನಾಗಿಸುವುದೇ ನಮ್ಮ ಒಕ್ಕೂಟದ ಧ್ಯೇಯೋದ್ದೇಶ. ಅದರಂತೆ ಎಲ್ಲಾ ಸೂಕ್ಷ್ಮ ವಿಚಾರಗಳ ಬಗೆಗೂ ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸಬಲೀಕರಣವಾಗಬೇಕು: ನಗರ ಸಿಡಿವಿಓಎನ್‌ಐನ ಅಧ್ಯಕ್ಷ ಜೆ.ಆಡಿಸ್‌ ಆರ್ನಾಲ್ಡ್‌ ಮಾತನಾಡಿ, ಮಹಿಳೆಯರು ಸಶಕ್ತರಾಗಲು ಇರುವ ವಿವಿಧ ಅವಕಾಶಗಳ ಬಗ್ಗೆ ಈ ಸಮಾವೇಶದಲ್ಲಿ ಮಾಹಿತಿ ನೀಡಲಾಗಿದೆ. ಜತೆಗೆ ಅವರ ಬೆಳವಣಿಗೆಗೆ ಶಿಕ್ಷಣ ಎಷ್ಟು ಪೂರಕ ಎಂಬುದನ್ನು ತಿಳಿಸಲಾಗಿದೆ. ಅದರಂತೆ ಮಹಿಳೆಯರು ಇದರ ಪ್ರಯೋಜನ ಪಡೆದು ಸಬಲೀಕರಣವಾಗಬೇಕು ಎಂದರು.

ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ: ಕಟ್ಟಡ ಕಾರ್ಮಿಕ ಇಲಾಖೆಯ ರಾಜೇಶ್‌ರವರು ಕಟ್ಟಡ ಕಾಮಿಕರಿಗೆ ಸರ್ಕಾರ ನೀಡುತ್ತಿರುವ ಧನಸಹಾಯ, ಅವರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ಮತ್ತು ಪಿಂಚಣಿಗಳ ಕುರಿತು ಮಾಹಿತಿ ನೀಡಿದರು. ನಗರ ಮಹಿಳಾ ಪೊಲೀಸ್‌ ಠಾಣೆಯ ಮುಖ್ಯ ಪೇದೆ ನಟರಾಜ್‌ ಅವರು ಮಹಿಳೆಯರ ರಕ್ಷಣೆಗೆ ಇರುವ ಸೌಕರ್ಯಗಳು ಹಾಗೂ ಅಗತ್ಯ ಸಂದರ್ಭಗಳಲ್ಲಿ ಕೆಎಸ್‌ಪಿ ಆ್ಯಪ್‌ನ ಪ್ರಯೋಜನ ಪಡೆಯುವಂತೆ ತಿಳಿಸಿದರು.

ನರೇಗಾ ಜಿಲ್ಲಾ ಸಂಯೋಜಕ‌ ನವೀನ್‌ ನರೇಗಾ ಯೋಜನೆಯ ಸೌಲಭ್ಯದ ಮಾಹಿತಿಯನ್ನು ನೀಡಿದರು. ಒಕ್ಕೂಟದ ಸದಸ್ಯೆ ಸುಂದರಮ್ಮ, ಗ್ರಾಮೀಣ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಜಯಲಕ್ಷ್ಮೀ, ಕಾರ್ಯಕ್ರಮದ ಸಂಯೋಜಕಿ ಪುಷ್ಪಲತಾ ಮತ್ತಿತ್ತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next