Advertisement

ಮಕ್ಕಳ ಹಕ್ಕು ಸಂರಕ್ಷಣೆ ಆದ್ಯತೆಯಾಗಲಿ

10:12 PM Nov 08, 2019 | mahesh |

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಎಂದಾಕ್ಷಣ ನೆನಪಾಗುವುದು ಶಾಲೆ, ಆಟ, ಪಾಠ, ಶಾಲೆಯಲ್ಲಿ ಮಾಡಿದ ಗಲಾಟೆ, ಪಡೆದ ಬಹುಮಾನ, ಸಿಹಿತಿಂಡಿ ಹಾಗೂ ನಮ್ಮ ನೆಚ್ಚಿನ ಚಾಚಾ ನೆಹರೂ ಸಹಿತ ಹಲವಾರು ವಿಷಯಗಳು ಹಾಗೇ ಕಣ್ಣು ಮುಂದೆ ಹಾದುಹೋಗುತ್ತವೆ.

Advertisement

ಆದರೆ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ನೆಹರೂ ಜನ್ಮದಿನವಾದ ನವೆಂಬರ್‌ 14ರಂದು ಮಕ್ಕಳ ದಿನಾಚರಣೆ ಪ್ರಾರಂಭಿಸಿದ್ದು, ಅವರ ಉದ್ದೇಶ ಪೂರ್ಣವಾಗಿದೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ.

ಪ್ರಸುತ್ತ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳ ಮುಗ್ಧತನ, ನಿಷ್ಕಲ್ಮಷ ಪ್ರೀತಿ ಕಣ್ಮರೆಯಾಗುತ್ತಿದೆ. ಇನ್ನೂ ಕೆಲವರಿಗೂ ಮಕ್ಕಳಿಗಿರುವ ಸಾಮಾನ್ಯ ಹಕ್ಕುಗಳ ಕುರಿತು ಮಾಹಿತಿ ಕೊರತೆ ಇದ್ದು, ಇದರ ಬಗ್ಗೆ ಅರಿವು ಮೂಡಿಲು ಇದ್ದು, ಸಕಾಲ ಅನ್ನಿಸುತ್ತದೆ.

ವಿಶ್ವಸಂಸ್ಥೆ 1992ರಲ್ಲಿ ರೂಪಿಸಿದ ಈ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿದ್ದು, ನಮ್ಮ ಸಂವಿಧಾನದಲ್ಲಿ ಸಹ ಮಕ್ಕಳ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವಿದೆ. ಮಕ್ಕಳಿಗಾಗಿ ಸಹಾಯವಾಣಿ ಸಹ ರೂಪಿಸಲಾಗಿದೆ (1098). ಕಡ್ಡಾಯ ಶಿಕ್ಷಣ ಜಾರಿಗೆ ಸಹ ತರಲಾಗಿದೆ. ಆದರೂ ಮಕ್ಕಳ ಶೋಷಣೆ ನಿಂತಿಲ್ಲ ಎನ್ನುವುದು ಖೇದದ ಸಂಗತಿ.

1954ರಿಂದ ಪ್ರಾರಂಭ
ಮಕ್ಕಳ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯು 1954ರಿಂದ ನವೆಂಬರ್‌ 20ರಂದು ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದು, ಪ್ರಪಂಚದ ಬಹುತೇಕ ದೇಶಗಳು ಈ ದಿನದಂದೇ ಮಕ್ಕಳ ದಿನವನ್ನು ಆಚರಿಸುತ್ತಿವೆ. ನವೆಂಬರ್‌ 1989ರಲ್ಲಿ ಮಕ್ಕಳ ಹಕ್ಕುಗಳ ಸಮಾವೇಶವನ್ನು (Convention on the Rights of the Child – CRC) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದು, 190 ದೇಶಗಳು ಇದನ್ನು ಅನುಮೋದಿಸಿವೆ.

Advertisement

ದೇಶದಲ್ಲಿ ಮಕ್ಕಳ ಕಾನೂನು ಮತ್ತು ಸಾಂವಿಧಾನಿಕ ನಿಬಂಧನೆಗಳು
ಭಾರತದ ಸಂವಿಧಾನವು ಎಲ್ಲ ಮಕ್ಕಳ ಮೂಲಭೂತ ಹಕ್ಕುಗಳನ್ನು ಮತ್ತು ಅಗತ್ಯಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿಯನ್ನು ರಾಜ್ಯ ಸರಕಾರಕ್ಕೆ ವಿಧಿಸಿದೆ. ಅವುಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಮಕ್ಕಳಿಗೆ ಅನ್ವಯಿಸುವ ಕಾರ್ಮಿಕ ಕಾನೂನುಗಳ ಕಾಯ್ದೆ, ಬಾಲಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಸಂಬಂಧಿಸಿದ ಜುವೆನೈಲ್‌ ಜಸ್ಟಿಸ್‌ ಆ್ಯಕr… ಭಾರತದ ದಂಡ ಸಂಹಿತೆಯಲ್ಲಿ ಮಕ್ಕಳಿಗೆ ಅನ್ವಯಿಸುವ ಪ್ರಮುಖ ಕಾನೂನುಗಳು. ಇವುಗಳ ಜತೆಗೆ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ರಕ್ಷಿಸಲು ಆಯೋಗವನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚಿಸಿದ್ದು, ಅದಕ್ಕೆ ನಿರ್ದಿಷ್ಟ ಕಾರ್ಯ ಮತ್ತು ಅಧಿಕಾರಗಳನ್ನು ಸೂಚಿಸಿದೆ.

ದೇಶದ ಹೊಣೆಗಾರಿಕೆ
ಮಕ್ಕಳ ಹಕ್ಕುಗಳ ಸಮ್ಮೇಳನ ಇತಿಹಾಸದಲ್ಲಿಯೇ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲಾದ ಮಾನವ ಹಕ್ಕುಗಳ ಒಪ್ಪಂದವಾಗಿದೆ. ಇದು ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯ, ಕುಟುಂಬ ಪರಿಸರ, ಮೂಲಭೂತ ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳ ವಿಶೇಷ ಸಂರಕ್ಷಣಾ ಕ್ರಮಗಳನ್ನು ಒಳಗೊಂಡಿದೆ. ಈ ಸಮಾವೇಶವು ಮಕ್ಕಳ ಹಕ್ಕುಗಳ ಆಧಾರದ ಮೂಲತಣ್ತೀಗಳನ್ನು ಹೊಂದಿದ್ದು, ಯಾವುದೇ ತಾರತಮ್ಯವಿಲ್ಲದೆ ಮಕ್ಕಳ ಸಕ್ರಿಯ, ಮುಕ್ತ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆ ಮತ್ತು ನಿರ್ಣಯಿಸುವಿಕೆಯನ್ನು ದೇಶಗಳು ಉತ್ತೇಜಿಸಬೇಕು ಎಂಬುದಾಗಿದ್ದು. ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು, ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವುದು ಹಾಗೂ ಅವರ ಪಾಲನೆ ಪೋಷಣೆ ಮಾಡುವುದು ಪ್ರತಿಯೊಂದು ದೇಶದ ಹೊಣೆಗಾರಿಕೆಯಾಗಿದೆ.

ಹೆತ್ತವರ ಪಾತ್ರವೇನು?
ಸ್ಪರ್ಧಾತ್ಮಕ ಯುಗದಲ್ಲಿ ಸ್ಟೇಟಸ್‌ ಎಂಬ ಗೀಳಿಗೆ ಬಿದ್ದ ಹೆತ್ತವರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದು, ಆಧುನಿಕತೆ ಜೀವನ ಶೈಲಿಗೆ ಬಲಿಯಾಗಿ ಮಕ್ಕಳ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ. ಭವಿಷ್ಯ ಎಂಬ ಕಾರಣವನ್ನು ಇಟ್ಟುಕೊಂಡು ಇಂದಿನ ಸಹಜ ಖುಷಿಯನ್ನು ಕಸಿದುಕೊಳ್ಳುತ್ತಿರುವ ಎಷ್ಟೋ ಹೆತ್ತವರು ಮಕ್ಕಳಿಗೆ ಆಸೆ-ಇಚ್ಛೆಗಳನ್ನು ಹೇಳಿಕೊಳ್ಳುವ ಸಾಮಾನ್ಯ ಹಕ್ಕು ಇದೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ.

ಮುಂದಿನ ಜೀವನಕ್ಕಾಗಿ ಕೂಡಿಡಬೇಕು ಎಂಬ ಧೋರಣೆಯನ್ನು ಅಳವಡಿಸಿಕೊಂಡು ಯಂತ್ರಗಳಂತೆ ಓಡುತ್ತಿರುವ ಅವರಿಗೆ ಮಗುವಿನ ಬೆಳವಣಿಗಗೆ ಪೂರಕವಾದ ವಾತಾವರಣ ಸಿಗುತ್ತಿದೆಯೇ ಎಂದು ಯೋಚಿಸುವಷ್ಟು ವ್ಯವಧಾನವೂ ಇಲ್ಲವಾಗಿದೆ. ಪರಿಣಾಮ ಮಕ್ಕಳು ಎಲ್ಲ ಇದ್ದು ಏನೂ ಇಲ್ಲದವರಂತೆ ಬದುಕುತ್ತಿದ್ದು, ಹೆತ್ತವರು ಈ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ಮಕ್ಕಳ ಆಸೆ, ಭಾವನೆಗಳನ್ನು ಅರಿತುಕೊಳ್ಳುವುದರೊಂದಿಗೆ ಅವರ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅವರ ಕನಸುಗಳನ್ನು ಸಾಕಾರಗೊಳಿಸುವತ್ತ ಶ್ರಮಿಸಬೇಕಿದೆ.

ಶಾಲೆಗಳೇನು ಮಾಡಬೇಕು?
ಓರ್ವ ವಿದ್ಯಾರ್ಥಿಯ ಯಶಸ್ಸು-ಸೋಲು ಶಾಲೆಗಳಲ್ಲೇ ನಿರ್ಧಾರವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಹಾಕಿಕೊಡುವ ಬುನಾದಿ ಭದ್ರವಾಗಿದ್ದರೆ ಮಾತ್ರ ಆ ವಿದ್ಯಾರ್ಥಿ ಸಾಧನೆಯ ಶಿಖರವನ್ನು ಏರಲು ಸಾಧ್ಯ. ಈ ನಿಟ್ಟಿನಲ್ಲಿ ಕೇವಲ ಪಠ್ಯಗಳಿಗೆ ಸೀಮಿತವಾಗಿರುವ ಹಕ್ಕು-ಕಾನೂನುಗಳನ್ನು ದೈನಂದಿನ ಜೀವನಕ್ಕೆ ಅಳವಡಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳು ರೂಪಿಸಬೇಕು. ಅವರ ಜೀವನ ಕಟ್ಟಿಕೊಳ್ಳಲು ಇರುವ ಸದವಕಾಶಗಳನ್ನು ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮೊಬೈಲ್‌ ಎಂಬ ಆಧುನಿಕ ತಂತ್ರಜ್ಞಾನಕ್ಕೆ ಮಾರುಹೋಗಿ ಆನ್‌ಲೈನ್‌ ಗೇಮಿಂಗ್‌ ಗೀಳಿಗೆ ಬಲಿಯಾಗಿರುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಹೆತ್ತವರೊಂದಿಗೆ ಶಿಕ್ಷಣ ಸಂಸ್ಥೆಗಳು ಮುತುವರ್ಜಿ ತೆಗೆದುಕೊಳ್ಳಬೇಕು.

ಮಕ್ಕಳೇ ದೇಶದ ಸಂಪತ್ತು
ಒಟ್ಟಾರೆ ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು, ಮಕ್ಕಳೇ ಆಸ್ತಿ ಎಂಬ ಮಾತುಗಳನ್ನು ಆಡುವುದು ಮಾತ್ರವಲ್ಲದೇ ಎಲ್ಲ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ತಂದೆ, ತಾಯಿ, ಶಿಕ್ಷಕ ಮತ್ತು ಸಮಾಜ ತೆಗೆದುಕೊಳ್ಳಬೇಕು. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಮಾನ ಅವಕಾಶ ನೀಡಬೇಕು. ಮಕ್ಕಳನ್ನು ದೇಶದ ಆಸ್ತಿ ಎಂದು ಪ್ರತಿಬಿಂಬಿಸುವ ನಾವು ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು, ಮಕ್ಕಳಿಗೆ ಆಸ್ತಿ ಮಾಡುವ ಪೋಷಕರಿಗಿಂತ ಮಕ್ಕಳನ್ನು ಆಸ್ತಿಯನ್ನಾಗಿ ಬೆಳೆಸುವ ಹೆತ್ತವರನ್ನು ದೇಶ ಬೆಂಬಲಿಸಬೇಕು.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next