Advertisement

BJP ದ್ವಂದ್ವತೆ ಬಗ್ಗೆ ಮೊದಲು ಸ್ಪಷ್ಟನೆ ನೀಡಲಿ: ಶೆಟ್ಟರ್ ಸವಾಲು

08:35 PM May 08, 2023 | Team Udayavani |

ಹುಬ್ಬಳ್ಳಿ: ಪಕ್ಷ ಮುಖ್ಯ ವಿನಃ ವ್ಯಕ್ತಿ ಮುಖ್ಯವಲ್ಲ ಎನ್ನುವ ಬಿಜೆಪಿಯವರು ಮೋದಿ ಅವರ ಹೆಸರಲ್ಲಿ ಯಾಕೆ ಮತಯಾಚನೆ ಮಾಡುತ್ತಾರೆ ಹಾಗೂ ವಯಸ್ಸಾಯಿತು ಎಂದು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಇದೀಗ ಅವರನ್ನೇ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು ಈ ದ್ವಂದ್ವತೆ ಬಗ್ಗೆ ಬಿಜೆಪಿಯವರು ಮೊದಲು ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಹೇಳುವ ತತ್ವ ಸಿದ್ಧಾಂತಕ್ಕೆ, ಆಚರಣೆಗೆ ಏನಾದರೂ ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

ಚುನಾವಣಾ ಪ್ರಚಾರದಲ್ಲಿ ನಮಗೆ ಪಕ್ಷ ಮುಖ್ಯ ವಿನಃ ವ್ಯಕ್ತಿ ಮುಖ್ಯವಲ್ಲ ಎಂದು ಹೇಳುವ ಬಿಜೆಪಿ ನಾಯಕರು ಪದೇಪದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಕರೆಸುವ, ರೋಡ್ ಶೋ ನಡೆಸುವ ಅವರ ಹೆಸರಲ್ಲಿಯೇ ಮತಯಾಚನೆ ಮಾಡುತ್ತಿರುವುದು ಯಾಕೆ ಎಂಬುದನ್ನು ಬಿಜೆಪಿಯವರು ಮೊದಲು ಸ್ಪಷ್ಟಪಡಿಸಲಿ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಪಕ್ಷ ಕಟ್ಟುವಲ್ಲಿ ಸಾಕಷ್ಟು ಶ್ರಮ ಹಾಕಿದ್ದು, ಸರ್ಕಾರ ರಚನೆಗೆ ತಮ್ಮದೇ ಯತ್ನ ಕೈಗೊಂಡು ಮುಖ್ಯಮಂತ್ರಿಯಾಗಿದ್ದರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ವಯಸ್ಸಾಗಿದ್ದಕ್ಕೆ ಸ್ವಯಂ ಪ್ರೇರಣೆಯಿಂದ ರಾಜಿನಾಮೆ ನೀಡಿದ್ದಾಗಿ ಬಿಂಬಿಸಲಾಗಿತ್ತು. ಆದರೆ ವಯಸ್ಸಾದ ಅದೇ ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರಕ್ಕೆ ಸಕ್ರಿಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು ಈಗ ಅವರಿಗೆ ವಯಸ್ಸಾಗಿದೆ ಅನ್ನಿಸುತ್ತಿಲ್ಲವೇ, ಬಿಜೆಪಿಯವರ ದ್ವಂದ್ವ ನಿಲುವಿಗೆ ಇದಕ್ಕಿಂತಲೂ ಸಾಕ್ಷಿ ಬೇಕಾ ಎಂದರು.
ಬಿಜೆಪಿಯಲ್ಲಿ ಹಿರಿಯರನ್ನು ಅದರಲ್ಲೂ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ, ಮುಗಿಸುವ ಸಂಚು ನಡೆದಿದ್ದು ಇದರ ಸೂತ್ರಧಾರಿ ಬಿ .ಎಲ್. ಸಂತೋಷ ಆಗಿದ್ದಾರೆ ಎಂದರು.

ನಮಗೆ ಲಿಂಗಾಯತರು ಬೇಡ ಎಂದು ಬಿ. ಎಲ್. ಸಂತೋಷ್ ಹೇಳಿದ್ದಾರೆ ಎನ್ನಲಾದ ಸುದ್ದಿ ಸುಳ್ಳು ಎಂದು ಹೇಳುತ್ತಿದೆ, ಅದರ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಏನೆಂಬುದನ್ನು ಬಯಲು ಮಾಡಲಿ. ನಿಮ್ಮದೇ ಸರ್ಕಾರ ಇದೆ ತನಿಖೆಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

Advertisement

ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದರನ್ನನಾದ ಆಡಿಯೋದಲ್ಲಿ ಯಡಿಯೂರಪ್ಪನವರನ್ನು ದೂರ ಸರಿಸಿಯಾಯಿತು ಉಳಿದಿರುವುದು ಕೆ. ಎಸ್. ಈಶ್ವರಪ್ಪ , ಜಗದೀಶ್ ಶೆಟ್ಟರ ಅವರನ್ನು ಸಹ ದೂರಸರಿಸುತ್ತೇವೆ ಇಡೀ ಸರ್ಕಾರ, ಪಕ್ಷ ನಮ್ಮ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಿದ್ದರು. ಅದರ ಬಗ್ಗೆಯೂ ಸಹ ಯಾವುದೇ ತನಿಖೆ ಆಗಿಲ್ಲ ಯಾಕೆ ಎಂದರು.

ಬಿಜೆಪಿಯಲ್ಲಿ ಬಲಶಾಲಿ ಲಿಂಗಾಯತ ನಾಯಕತ್ವವನ್ನು ಕುಗ್ಗಿಸುವುದು ಗುಲಾಮಿ ಸಂಸ್ಕೃತಿ ನಾಯಕರಿಗೆ ಆದ್ಯತೆ ನೀಡುವ ಯತ್ನಗಳು ನಡೆಯುತ್ತಿದ್ದು, ಇದು ಸಹ ಸಂತೋಷ ಅವರ ಕಾರ್ಯತಂತ್ರವಾಗಿದೆ ಎಂದರು.

ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು ಕೇಂದ್ರ ಸಚಿವ ಸಂಪುಟದ ಪ್ರಾತಿನಿಧ್ಯ ನೋಡಿದರೆ ದಲಿತ ಸಮುದಾಯಕ್ಕೆ ಸೇರಿದ ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ, ಲಿಂಗಾಯತ ಸಮುದಾಯದ ಭಗವಂತ ಖೂಬಾ ಇವರೆಲ್ಲರಿಗೂ ಸಹಾಯಕ ಸಚಿವ ಸ್ಥಾನ ನೀಡಲಾಗಿದ್ದುದೆ. ಪ್ರಹ್ಲಾದ ಜೋಶಿ ಅವರಿಗೆ ಮಾತ್ರ ಪ್ರಭಾವಶಾಲಿ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ ಯಾರಿಗೆ ಆದ್ಯತೆಯೆಂಬ ಸೂಕ್ಷ್ಮತೆಯನ್ನು ರಾಜ್ಯದ ಜನತೆ ಹಾಗೂ ಸಮುದಾಯ ಅರಿತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಶೆಟ್ಟರ ರಾಡಿಯಂತಿರುವ ಕಾಂಗ್ರೆಸ್ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ 2012ರಲ್ಲಿ ಬೊಮ್ಮಾಯಿಯವರು ಕಾಂಗ್ರೆಸ್ ಕದತಟ್ಟಿ, ಬಿಜೆಪಿ ಮೂರು ಹೋಳಾಗಿದೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ನಾನು ಕಾಂಗ್ರೆಸ್ ಸೇರುತ್ತೇನೆ ಎಂದಿದ್ದರು. ಆದರೆ ಅವರು ಕೇಳಿದ ಕ್ಷೇತ್ರ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯಲ್ಲಿ ಉಳಿದರು ಇದು ನಿಜವೋ ಅಲ್ಲವೋ ಎಂಬುದನ್ನು ಅವರು ಸ್ಪಷ್ಟಪಡಿಸಲಿ.ಹಿಂದೆ ಯಡಿಯೂರಪ್ಪ ಅವರಿಗೆ ಬಿಜೆಪಿ ತೊರೆದು ಕೆಜೆಪಿ ಕಟ್ಟುವಂತೆ ಪ್ರೇರೇಪಿಸಿದ ನಾಲ್ಕೈದು ಜನರಲ್ಲಿ ಬೊಮ್ಮಾಯಿ, ಮುರುಗೇಶ ನಿರಾಣಿ,ಸಿ.ಎಂ.ಉದಾಸಿ ಇತರರು ಇದ್ದು ಕೆಜೆಪಿ ಕಟ್ಟಿದ ಮೇಲೆ ಯಡಿಯೂರಪ್ಪನವರ ಜತೆ ಉದಾಸಿ ಬಿಟ್ಟರೆ ಇವರಾರು ಹೋಗಲಿಲ್ಲ.
ಬಿಜೆಪಿ ತತ್ವ ಸಿದ್ಧಾಂತ ಹಾಗೂ ನಾನು ಕಾಂಗ್ರೆಸ್ ಸೇರಿರುವ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು, ತಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ರಾಯ್ ಸಿದ್ಧಾಂತ ದವರು, ತಂದೆಯ ತತ್ವ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದ್ದ ಬಿಜೆಪಿಗೆ ಸೇರುವಾಗ ವಿರುದ್ಧವಾದ ಸಿದ್ದಾಂತ ಎಂದು ಅನಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಬಜರಂಗದಳ ನಿಷೇಧ 370 ಕಲಂ ರದ್ದತಿ ಬಗ್ಗೆ ಜಗದೀಶ್ ಶೆಟ್ಟರ್ ಏನು ಹೇಳುತ್ತಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಕಾರವಾಗಿ ಪ್ರತಿಕ್ರಿಯಿಸಿದ ಅವರು ಜ್ಯೋತಿ ಅವರೇನು ಅಷ್ಟು ದೊಡ್ಡವರ ಅವರಿಗೆ ನಾನು ಉತ್ತರಿಸಬೇಕು ಪ್ರಜಾಪ್ರಭುತ್ವ ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವವರು ನನ್ನ ಕ್ಷೇತ್ರದಲ್ಲಿ ಹಲವರಿಗೆ ಒತ್ತಡ ಬೆದರಿಕೆ ಹಾಕುತ್ತಿರುವುದು ಯಾವ ಸಿದ್ಧಾಂತದಡಿ ಎಂಬುದನ್ನು ಹೇಳಲಿ ಎಂದರು.
ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ ಇಲ್ಲಿಯೇ ಠಿಕಾಣಿ ಹೂಡಿ ದಮ್ ಕೊಡುವ ಕೆಲಸವನ್ನು ಮಾಡುತ್ತಿದ್ದು ಅವರಿಗೆ ಯಾವ ನೈತಿಕತೆ ಇದೆ ಎಂದರು.

ಆದಾಯ ತೆರಿಗೆ ಇಲಾಖೆ ದಾಳಿ ಮೂಲಕ ವಿಪಕ್ಷಗಳ ವರನ್ನು ಕುಗ್ಗಿಸುವ ಯತ್ನವನ್ನು ಮಾಡಲಾಗುತ್ತಿದೆ ನನ್ನ ಬೆಂಬಲಿಗರಿಗೂ ಸಹ ಈ ತರಹದ ಬೆದರಿಕೆ ಯತ್ನವು ನಡೆದಿದೆ ಇಂತಹ ಕಾರ್ಯಗಳು ತಂತ್ರಗಳು ಬಹಳ ದಿನ ನಡೆಯುವುದಿಲ್ಲ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ನನಗಾಗಿರುವ ಅನ್ಯಾಯದ ಬಗ್ಗೆ ಕ್ಷೇತ್ರದ ಜನತೆ ಅನುಕಂಪ ತರುತ್ತಿದ್ದು ಸಮುದಾಯದಲ್ಲಿ ವಿವಿಧ ಸಮಾಜಗಳಲ್ಲಿ ಅಂಡರ್ ಕರೆಂಟ್ ತನ್ನದೇ ರೀತಿಯಲ್ಲಿ ವ್ಯಾಪಿಸಿದೆ ಕಳೆದ ಆರು ಬಾರಿ ಗೆದ್ದದ್ದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂದರು.

ಏನೇ ಆಗಲಿ ಕೊನೆಯವರೆಗೂ ನಾನು ಕಾಂಗ್ರೆಸ್ ನಲ್ಲಿಯೇ ಉಳಿಯುತ್ತೇನೆ ಇದು ನನ್ನ ಕೊನೆಯ ಚುನಾವಣೆ ಯಾಗಿದ್ದು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಆದರೆ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next