Advertisement

ಕಾಂಗ್ರೆಸ್ ದಲಿತ ಸಿಎಂ ಮಾಡದಿದ್ದುದಕ್ಕೆ ಡಿಕೆಶಿ ಉತ್ತರಿಸಲಿ: ಕಾರಜೋಳ ಸವಾಲು

08:15 PM Dec 10, 2022 | Team Udayavani |

ವಿಜಯಪುರ : ‘ದಲಿತರು ಮುಖ್ಯಮಂತ್ರಿ ಆಗುವ ಆಗುವ ಅವಕಾಶವಿದೆ’ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಈ ವರೆಗೆ ದಲಿತರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅವಕಾಶ ಕಲ್ಪಿಸಲಿಲ್ಲವೇಕೆ?, ದೇಶದಲ್ಲಿ 60 ವರ್ಷ ಆಡಳಿತ ನಡಸಿದ ಕಾಂಗ್ರೆಸ್ ಪಕ್ಷದವರಿಂದ ದಲಿತರನ್ನು ಮುಖ್ಯಮಂತ್ರಿ ಮಾಡಬೇಡಿ ಎಂದು ಯಾರಾದರೂ ಆಣೆ ಮಾಡಿಸಿಕೊಂಡಿದ್ದರಾ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

Advertisement

ಶನಿವಾರ ನಗರದ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ,’ ದೇಶದಲ್ಲಿ ದಲಿತರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಇಂಗಿತ ವ್ಯಕ್ತಪಡಿಸಿದ್ದರು. ಬಾಬು ಜಗಜೀವನರಾಂ ಅವರಿಗೆ ಪ್ರಧಾನಮಂತ್ರಿ ಹುದ್ದೆಗೆ ಏರುವ ಅವಕಾಶ ಬಂದಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ದಲಿತರಿಗೆ ಉನ್ನತ ಸ್ಥಾನ ತಪ್ಪಿಸುವ ಉದ್ದೇಶದಿಂದ ಜಗಜೀನವರಾಂ ಅವರನ್ನು ಸೋಲಿಸಿದರು. ಇದಕ್ಕೆ ಡಿಕೆ ಶಿವಕುಮಾರ್ ಬಳಿ ಉತ್ತರ ಇದೆಯೇ ಕೇಳಿನೋಡಿ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದಿಂದ ಎಂದಿಗೂ ದಲಿತರ ಉದ್ಧಾರ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ್ದು ಎಂದಿಗೂ ಹೀನ ಮನಸ್ಥಿತಿ. ದಲಿತ ವ್ಯಕ್ತಿಗಳು ವಿದ್ಯಾವಂತರಾಗಬಾರದು, ಸ್ವಂತ ಬಲದ ಮೇಲೆ ದಲಿತರು ನಿಲ್ಲಬಾರದು. ಬದಲಾಗಿ ದಲಿತರು ಕೇವಲ ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಮಾತ್ರವೇ ಆಗಿರಬೇಕು ಎಂಬುದೇ ಆಶಯ ಹಾಗೂ ಮನಸ್ಥಿತಿ ಎಂದು ಟೀಕಾ ಪ್ರಹಾರ ನಡೆಸಿದರು.

ಶಿಕ್ಷಣ ಪಡೆದು ರಾಜಕೀಯ ಜಾಗೃತಿ ಪಡೆದಿರುವ ದಲಿತರು, ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದೇ ಎಂಬುದನ್ನು ಆಮೇಲೆ ಲೆಕ್ಕಾಚಾರ ಮಾಡೋಣ ಎಂದರು.

ಹೊಸ ಪಕ್ಷ ಗಮನಕ್ಕೆ ಬಂದಿಲ್ಲ
ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟು ವಿಷಯ ನನ್ನ ಗಮನಕ್ಕೆ ಬಂದಿಲ್ಲ. ರೆಡ್ಡಿ ಇಂಥ ಪ್ರಯತ್ನಕ್ಕೆ ಕೈಹಾಕಿರಲಾರರು. ಯಾರೇ ಹೊಸ ಪಕ್ಷ ಕಟ್ಟಿದರೂ ಬಲಿಷ್ಠವಾಗಿರುವ ಹಾಗೂ ಓಡುವ ಕುದುರೆ ಬಿಜೆಪಿ ಪಕ್ಷವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಇಂಥ ವಿಷಯಗಳ ಕುರಿತು ಪಕ್ಷದ ವರಿಷ್ಠರು ಗಮನಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

Advertisement

ಗುಜರಾತ್ ಮಾದರಿ ಮಾಧ್ಯಮ ಸೃಷ್ಟಿ
ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ಎದುರಾಗುವ ವಿಧಾನಸಭೆ ಚುನಾವಣೆಯಲ್ಳೂ ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯನಾಗಿರುವ ನನಗೂ ವರಿಷ್ಠ ಮಂಡಳಿ ನಿಲುವು, ನಿರ್ಧಾಗಳ ಮಾಹಿತಿ ಇರುತ್ತದೆ. ಹೀಗಾಗಿ ಗುಜರಾತ್ ಮಾದರಿ ವಿಷಯ ಚರ್ಚೆಯಲ್ಲೇ ಇಲ್ಲ. ಬದಲಾಗಿ ಗೆಲ್ಲುವ ಮಾದರಿ ಅನುಸರಿಸಬೇಕು ಎಂಬುದು ವರಿಷ್ಠರ ಚಿಂತನೆ ಎಂದರು.

ನಿಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳೇ ಗುಜರಾತ್ ಮಾದರಿ ಸೃಷ್ಟಿಸಿಕೊಂಡರೆ ನಾವೇನೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮಗೆ ಇಂಥ ವಿಷಯಗಳೇ ಬೇಕು ಎಂದು ನಗೆಯಾಡಿದರು.

ಆಪರೇಷನ್ ಕಮಲ ಇಲ್ಲ
ದೇಶದ 20 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಭಾರತದಲ್ಲಿ ಬಿಜೆಪಿ ಬಲಿಷ್ಠ ರಾಜಕೀಯ ಪಕ್ಷವಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ವಿಫಲಾಗಿದ್ದು, ಆಪರೇಷನ್ ಕಮಲ ಮಾಡುತ್ತದೆ ಎಂಬುದೆಲ್ಲ ಊಹೆ ಮಾತ್ರ. ಬಹುಮತ ಬಂದ ಬಳಿಕ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕಾಗಿ ತಾವು ತಾವೇ ಕಚ್ಚಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಹಿಮಾಚಲ ಕಾಂಗ್ರೆಸ್ ಮೂರು ಗುಂಪುಗಳಾಗಿದ್ದು, ಅವರವರೇ ಕಿತ್ತಾಡಿಕೊಂಡರೆ ನಾವೇನು ಮಾಡುವುದು. ಹಾಲು ಕುಡಿದೇ ಸಾಯುವವರಿಗೆ ವಿಷ ಹಾಕಿ ಸಾಯಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಶಾ ಸಭೆ ಮಾಹಿತಿ ಇಲ್ಲ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕುರಿತು ಚರ್ಚಿಸಲು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿರುವ ವಿಷಯ ನನಗಂತೂ ತಿಳಿದಿಲ್ಲ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನ್ನ ಗಮನಕ್ಕಂತೂ ಇಂತ ವಿಷಯ ಬಂದಿಲ್ಲ ಗೋವಿಂದ ಕಾರಜೋಳ ಹೇಳಿದರು.

ಇಂತ ವಿಷಯದಲ್ಲಿ ಎಲ್ಲರಿಗಿಂತ ಮೊದಲು ನನಗೆ ಮಾಹಿತಿ ಬರಬೇಕು. ಸಭೆಯ ಕುರಿತು ನೋಟಿಸ್ ಬರಬೇಕು, ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ಮಾಧ್ಯಮಗಳಲ್ಲೇ ಇದು ಸುದ್ದಿ ಆಗುತ್ತಿದೆ. ಈ ತಿಂಗಳ 14 ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಕುರಿತು ನನಗಾಗಲಿ, ನನ್ನ ಕಚೇರಿಗಾಗಲಿ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದರು.

ಕಾಂಗ್ರೆಸ್ಸಿಗರು ಮೋಸ ಮಾಡಿದರು
ಕಲ್ಯಾಣ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ 45 ವರ್ಷಗಳಿಂದ ಅಧಿಕಾರದಲ್ಲಿದ್ದರು. ಆದರೆ ಅಧಿಕಾರ ನೀಡಿದ ಜನರಿಗೆ ಕಲ್ಯಾಣದ ಅಭಿವೃದ್ಧಿ ಕ್ರಾಂತಿ ಮಾಡುವ ಬದಲು ಕಾಂಗ್ರೆಸ್ಸಿಗರು ಮೋಸ ಮಾಡಿದರು. ಪರಿಣಾಮ ಆ ಭಾಗದಲ್ಲಿ ಅಭಿವೃದ್ಧಿ ಹೀನತೆ ಜೊತೆಗೆ ದಲಿತರು, ಶೋಷಿತರ ಜೀವನ ಮಟ್ಟ ಏರಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ 75 ವರ್ಷದ ಬಳಿಕ ದೇಶದಲ್ಲಿ, ರಾಜ್ಯದಲ್ಲಿ 60 ವರ್ಷ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದ್ದು, ಕಲ್ಯಾಣ ಭಾಗದಲ್ಲಿ ಅಭಿವೃದ್ಧಿ ಮಾಡಲು, ಇವರನ್ನು ತಡೆದವರು ಯಾರು, ಬಸವಣ್ಣನವರಂತೆ ಅಭಿವೃದ್ಧಿ ಕ್ರಾಂತಿ ಮಾಡಲು ಅಡ್ಡಿ ಮಾಡಿದವರು ಯಾರು ಎಂದು ಕಿಡಿ ಕಾರಿದರು.

ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಯ ಮಾಡಿದ್ದರಿಂದ ನಮ್ಮ ಸರ್ಕಾರ ಬಂದ ಮೇಲೆ ಅಭಿವೃರ್ದಧಿ ಕೆಲಸಗಳಿಗೆ ಚಾಲನೆ ನೀಡಿದ್ದೇವೆ. ಖರ್ಗೆ ಅವರು ತಮ್ಮ ತವರು ಕಲಬುರ್ಗಿಗೆ ವಿಮಾನ ನಿಲ್ದಾಣ ಮಾಡಿಸಿಕೊಂಡಂತೆ ವಿಜಯಪುರ ಜಿಲ್ಲೆಗೂ ಮಾಡಿಸುವಲ್ಲಿ ನಿರ್ಲಕ್ಷ ತೋರಿದರು. ನಾವು ಅಧಿಕಾರಕ್ಕೆ ಬಂದ ಮೇಲೆ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ಜನರಿಗೆ ಮೋಸ ಮಾಡಿದ್ದರಿಂದಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇದೀಗ ಅಳಿವಿನ ಅಂಚಿನಲ್ಲಿದೆ. ಭವಿಷ್ಯದ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಆಡಳಿತ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next