Advertisement

ಮಕ್ಕಳಲ್ಲಿ ಪಠ್ಯೇತರ ಪುಸ್ತಕ ಓದುವ ಹವ್ಯಾಸ ಬೆಳೆಯಲಿ

09:30 PM Nov 22, 2019 | Lakshmi GovindaRaj |

ಹಾಸನ: ಮಕ್ಕಳಿಗೆ ಪಠ್ಯದ ವಿಷಯದ ಜೊತೆಗೆ ದಿನ ಪತ್ರಿಕೆಗಳು, ಕಥೆ, ಕಾದಂಬರಿ, ಸಣ್ಣ ಕಥೆಗಳು ಸೇರಿದಂತೆ ಆಸಕ್ತಿದಾಯಕ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಬೇಕು ಎಂದು ಟೈಮ್ಸ್‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಅಕ್ಷರ್‌ ಬುಕ್‌ಹೌಸ್‌ ಮಾಲೀಕ ಬಿ.ಕೆ.ಗಂಗಾಧರ್‌ ಹೇಳಿದರು. ನಗರದ ಅಕ್ಷರ ಬುಕ್‌ಹೌಸ್‌ನಲ್ಲಿ ಏರ್ಪಡಿಸಿದ್ದ ಡಾ.ವಿ.ಎಲ್‌.ಶಾಲಿನಿ ಅವರ ಜಯಗಾನ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಯುವಕರು ಪುಸ್ತಕ ಓದುವ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಪ್ರತಿ ಮನೆಯಲ್ಲೂ ಗ್ರಂಥಾಲಯವಿರಬೇಕು, ಆಗ ಮಾತ್ರ ಮನೆ ಕುಟುಂಬದ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ. ಇದರಿಂದ ಮಕ್ಕಳು ಸಮಾಜದಲ್ಲಿ ಸಂಸ್ಕಾರಯುತವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಸಾಹಿತ್ಯಿಕ ವಾತಾವರಣಕ್ಕೆ ಬೆಂಬಲ ನೀಡಿ: ಜಿಲ್ಲೆಯಲ್ಲಿ ಸಾಹಿತ್ಯಿಕ ವಾತಾವರಣಕ್ಕೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಹಾಸನದಲ್ಲಿ ಅಕ್ಷರ ಬುಕ್‌ಹೌಸ್‌ ತೆರೆದಿದ್ದು, ಈ ಪುಸ್ತಕದ ಅಂಗಡಿಯ ವಿಳಾಸ ಇಂದಿಗೂ ಬಹುತೇಕ ಜನಿರಗೆ ಗೊತ್ತಿಲ್ಲ. ಆದರೆ ಬಾರ್‌ಅಂಡ್‌ ರೆಸ್ಟೋರೆಂಟ್‌ಗಳು ಸುಲಭವಾಗಿ ವಿಳಾಸದ ಗುರುತುಗಳಾಗುತ್ತಿವೆ ಎಂದು ವಿಷಾದಿಸಿದದರು.

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಪ್ರತಿ ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲೂ ಒಂದು ಉತ್ತಮ ಗ್ರಂಥಾಲಯ ಇಲ್ಲವೇ ಪುಸ್ತಕದ ಮಳಿಗೆಗಳು ಇರಬೇಕು. ಸಮಾಜದಲ್ಲಿ ಅನಾಗರಿಕತೆ ಹಾಗೂ ಅನಕ್ಷರತೆ ಹೋಗಲಾಡಿಸಬೇಕಾದರೆ ಅದು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಹಾಗಾಗಿ ಗ್ರಾಮೀಣ ಭಾಗದ ಜನರಲ್ಲಿಯೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಾಹಿತಿಗಳು ಗಟ್ಟಿತನ ಸಾಬೀತುಪಡಿಸಿ: ಪುಸ್ತಕಗಳನ್ನು ಓದುವವರಿಲ್ಲ ಎನ್ನುವ ನಾವು ಮಕ್ಕಳಿಗೆ ಮೊಬೈಲ್‌ ಕೊಟ್ಟು ಕೂರಿಸುತ್ತೇವೆ. ಇಂದಿಗೂ ಎಸ್‌.ಎಲ್‌.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಅವರಂತಹ ಮೇರು ಸಾತಿಗಳ ಪುಸ್ತಕಗಳ ಸಾವಿರಾರು ಪ್ರತಿಗಳು ನಿತ್ಯವೂ ಮಾರಾಟವಾಗುತ್ತವೆ. ಲೇಖಕಕರು ಸತ್ವಯುತವಾಗಿ ಬರೆದರೆ ಅದನ್ನು ಓದುವವರು ಇದ್ದೇ ಇರುತ್ತಾರೆ.

Advertisement

ಹಾಗಾಗಿ ಯುವ ಸಾಹಿತಿಗಳು ತಮ್ಮ ಗಟ್ಟಿತನವನ್ನು ಸಾಬೀತು ಮಾಡುವ ಮೂಲಕ ಓದುಗ ವಲಯ ಸೃಷ್ಟಿಸಿಕೊಳ್ಳಬೇಕು ಎಂದು ಹೇಳಿದರು. ಆಲೂರು ತಾಲೂಕು ವೈದ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ಡಾ.ಶಾಲಿನಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರೂ ವೃತ್ತಿ ಒತ್ತಡದ ನಡುವೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಮಕ್ಕಳಿಗೆ ಪುಸ್ತಕ ಪರಿಚಯ: ಕೃತಿ ಕುರಿತು ಸಾಹಿತಿ ಶೈಲಜಾ ಹಾಸನ ಮಾತನಾಡಿ, ಡಾ..ಎಲ್‌.ಶಾಲಿನಿ ತಮ್ಮ ಮೂರನೇ ಕಾದಂಬರಿಯಲ್ಲಿ ಕ್ರೀಡಾಲೋಕದ ಹೋರಾಟವನ್ನು ತೆರೆದಿಟ್ಟಿದ್ದಾರೆ. ಪಾಲಕರು ತಮ್ಮ ಮಕ್ಕಳ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸುವುದರಿಂದ ಅವರು ಹೇಗೆ ಸಾಧಕರಾಗಬಲ್ಲರು ಎನ್ನುವ ಸಾಮಾನ್ಯ ಕತೆಯನ್ನು ಅತ್ಯಂತ ಆಸಕ್ತಿದಾಯಕವಾಗಿ ಓದುಗರ ಮುಂದಿಟ್ಟಿದ್ದಾರೆ.

ಮಕ್ಕಳಿಗೆ ಪುಸ್ತಕಗಳನ್ನು ಪರಿಚುಸುವ ಮೂಲಕ ಮುಂದಿನ ಪೀಳಿಗೆಯನ್ನು ಸಾಹಿತ್ಯದ ಓದುಗರಾಗಿ ರೂಪಿಸಬೇಕಿದೆ ಎಂದರು. ಹಾಸನ ಪ್ರಕಾಶನದ ಪ್ರಕಾಶಕ ಶಿವಕುಮಾರ್‌, ಟೈಮ್ಸ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಂದ್ರ, ಅಕ್ಷರ ಬುಕ್‌ ಹೌಸ್‌ನ ಶ್ರೀನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next