Advertisement

ಅಭ್ಯರ್ಥಿಗಳು ಅಭಿವೃದ್ಧಿಗೆ ನಿಲುವು ಸ್ಪಷ್ಟಪಡಿಸಲಿ

05:34 PM Apr 23, 2018 | Team Udayavani |

ಹೊನ್ನಾವರ: 35 ವರ್ಷದಿಂದ ರಾಜಕೀಯದಲ್ಲಿರುವ ಜಿಲ್ಲೆಯ ಹಿರಿಯ ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ ಮತ್ತು 5ನೇ ಅವಧಿಗೆ ಲೋಕಸಭೆಯಲ್ಲಿ ಜಿಲ್ಲೆ ಮತ್ತು ಕಿತ್ತೂರ, ಖಾನಾಪುರ ಸಹಿತ 15 ತಾಲೂಕುಗಳನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಹಿತ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿದವರು ಜಿಲ್ಲೆಯ ಅಭಿವೃದ್ಧಿ ಕುರಿತು ಪ್ರತ್ಯೇಕ ಪ್ರಣಾಳಿಕೆ ಹೊರಡಿಸಿ ತಮ್ಮ ನಿಲುವು ಸ್ಪಷ್ಟಪಡಿಸಬೇಕಾಗಿದೆ.

Advertisement

6 ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖ ಪಕ್ಷದಿಂದ ಸ್ಪರ್ಧಿಸುತ್ತಿರುವ ಸುಮಾರು 20 ಅಭ್ಯರ್ಥಿಗಳಲ್ಲಿ ಇಬ್ಬರ ಹೊರತು ಉಳಿದವರೆಲ್ಲಾ ಹಿಂದೆ ಆರಿಸಿ ಬಂದವರು. ಮೋದಿ-ಯಡಿಯೂರಪ್ಪ ಹೆಸರು, ಗಾಂಧಿ ಪರಿವಾರ ಮತ್ತು ಸಿದ್ಧರಾಮಯ್ಯ ಹೆಸರು, ಅವರ ಕೆಲಸಗಳ ಕುರಿತು ಹೇಳಿದರೆ ಸಾಲದು. ನಿಮ್ಮಿಂದ ಜಿಲ್ಲೆಗೆ ಏನಾಗಿದೆ, ಮುಂದೆ ಏನಾಗಲಿದೆ ಎಂಬುದನ್ನು ಹೇಳಿ ಎಂದು ಜನಕೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸ್ವಾಗತಿಸಿದ ಯೋಜನೆಗಳನ್ನು 
ಅಧಿ ಕಾರ ಹೋದಾಗ ವಿರೋಧಿ ಸುತ್ತಾ ಬಂದ ರಾಜಕಾರಣಿಗಳು ಜಿಲ್ಲೆಯ ಬಹುಜನಕ್ಕೆ ಉಪಯೋಗವಾಗುವ ಏನು ಬೇಕು ಎಂಬುದನ್ನು ನಿರ್ಧರಿಸಲಾಗದೆ ಅವಧಿ ಮುಗಿಸಿದ್ದಾರೆ. ಮತ್ತೆ ಅದೇ ಆಟ ಆರಂಭವಾಗಿದೆ.

ಕಾರವಾರ ಬಂದರು ವಿಸ್ತರಣೆ ಯೋಜನೆ, ತದಡಿ ಸರ್ವಋತು ಬಂದರು, ಹಳದೀಪುರ, ಹೊನ್ನಾವರ, ಮಂಕಿ ಬಂದರು ಯೋಜನೆ ವಿರೋಧಿಸಿದವರು ಈಗ ಚುನಾವಣಾ ಕಣದಲ್ಲಿದ್ದಾರೆ. ಪರಿಸರದ ಕಾರಣ ಒಡ್ಡಿ ತಾಳಗುಪ್ಪಾ-ಹೊನ್ನಾವರ, ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ವಿರೋಧಿ ಸಿದ ಕೆಲವು ಪರಿಸರ ಪಂಡಿತರನ್ನು ಬೆಂಬಲಿಸಿದವರು ಚುನಾವಣಾ ಕಣದಲ್ಲಿ ದ್ದಾರೆ. ಈ ಯೋಜನೆಯ ಸುದ್ದಿ ಎತ್ತದೆ ತಾಳಗುಪ್ಪಾ -ಸಿದ್ದಾಪುರ, ಕಲಘಟಗಿ-ಹುಬ್ಬಳ್ಳಿ ಯೋಜನೆ ಪ್ರಸ್ತಾಪ ಮಾಡಿದ ನಾಯಕರಿದ್ದಾರೆ. ಈ ನಾಯಕರಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಮತ್ತು ರಾಜಧಾನಿಯಿಂದ ಒಂದು ರೈಲನ್ನು ಕಡಿಮೆ ಅವಧಿಯಲ್ಲಿ ಜಿಲ್ಲೆಗೆ ಬರುವಂತೆ ಮಾಡಲು ಸಾಧ್ಯವಾಗಿಲ್ಲ. ಸಾವಿರ ರೂ. ತೆತ್ತು ಬೆನ್ನುನೋವು ಮಾಡಿಕೊಳ್ಳುವ ಗತಿ ತಪ್ಪಲಿಲ್ಲ.

ಹೊನ್ನಾವರ ಮೀನುಗಾರಿಕಾ ಬಂದರು ಸಹಿತ ನೂರಾರು ಎಕರೆ ಖಾಸಗಿಯವರಿಗೆ ಹಸ್ತಾಂತರ ಮಾಡುವಾಗ ಮೀನುಗಾರ ರಹಿತ ಗಮನಿಸದೆ ಬಾಯಿಮುಚ್ಚಿಕೊಂಡಿದ್ದವರು ಈಗ ಕಣದಲ್ಲಿದ್ದಾರೆ. ದೊಡ್ಡ ಯೋಜನೆಗಳು ಬೇಡ ಎಂದು ಜನವಿರೋಧಿ ಸಿದರೂ ರಾಷ್ಟ್ರೀಯ ಹಿತಾಸಕ್ತಿ ಎಂದು ಜನರ ಬಾಯಿಮುಚ್ಚಿಸಿ, ನ್ಯಾಯಯುತ ಪರಿಹಾರಕ್ಕಾಗಿ ಬಡನಿರಾಶ್ರಿತರು 20ವರ್ಷ ಹೋರಾಟ ನಡೆಸಬೇಕಾಯಿತು. ಸರ್ವೋಚ್ಚ ನ್ಯಾಯಾಲಯ ಹೇಳಿದ ಮೇಲೆ ಪರಿಹಾರ ವಿತರಣೆ ಆರಂಭವಾಗಿದೆ. ಈ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಗೆದ್ದವರೇ ಈಗ ಮತ್ತೆ ಕಣದಲ್ಲಿದ್ದಾರೆ. ಸೀಬರ್ಡ್‌, ಕೈಗಾ ವಿಸ್ತರಣೆಯಾಗುತ್ತಿದೆ, ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.

ನಾಲ್ಕು ದಶಕಗಳಿಂದ ಹಿರೇಗುತ್ತಿಯ ಸಾವಿರಾರು ಎಕರೆ ಭೂಮಿ ಬರಡು ಬಿದ್ದಿದೆ. ಜಿಲ್ಲೆಯ 5 ನದಿಗಳು ತುಂಬಿ ಹರಿಯುತ್ತಿದ್ದರೂ ಒಂದೇ ಒಂದು ನೀರಾವರಿ ಯೋಜನೆ ಇಲ್ಲ, ಕುಡಿಯಲು ನೀರಿಲ್ಲ. ಶೇ.99.99 ನೀರು ಸುಮ್ಮನೆ ಸಮುದ್ರ ಸೇರುತ್ತಿದೆ. ನಗರ ಪ್ರದೇಶಕ್ಕೆ ಬಂದು ಜೀವಿಸುವ ಆಸೆ ಇದ್ದರೂ ಆರ್ಥಿಕ ಸಾಮರ್ಥ್ಯವಿಲ್ಲದೆ ಅನ್ನಗಳಿಸಲು ಕಾಡು ಸೇರಿ, ಅತಿಕ್ರಮಣ ಮಾಡಿ ಅಡಕೆ, ತೆಂಗಿನ ತೋಟ ಬೆಳೆಸಿದ ಅಸಂಖ್ಯ ಕುಟುಂಬಗಳಿಗೆ ಚುನಾವಣೆ ಬರುವಾಗ ಭೂಮಿ ಕೊಡಿಸುವ ಭರವಸೆ ನೀಡಿದ ರಾಜಕೀಯ ಪಕ್ಷಗಳು ಶೇ. 1ರಷ್ಟು ಅತಿಕ್ರಮಣದಾರರಿಗೆ ಭೂಮಿ ಕೊಡಿಸಿಲ್ಲ. ಈ ಕುರಿತು ಪಕ್ಷಗಳ ನಿಲುವು ಏನು?,

Advertisement

ನಗರ ಪ್ರದೇಶದಲ್ಲಿ ಬದುಕುವ ಅವಕಾಶ ನಿರ್ಮಿಸಲು ಮೌಲ್ಯಾಧಾರಿತ ಗುಡಿ ಕೈಗಾರಿಕೆಗಳನ್ನು ಯಾಕೆ ಸ್ಥಾಪಿಸಲಿಲ್ಲ. ಈ ಕುರಿತು ಅರಣ್ಯ ಭೂಮಿ ಕೊಡುತ್ತಿರೋ, ಪರ್ಯಾಯ ವ್ಯವಸ್ಥೆ ಮಾಡುತ್ತಿರೋ ರಾಜಕೀಯ ಪಕ್ಷಗಳು ಸ್ಪಷ್ಟಪಡಿಸಬೇಕಾಗಿದೆ. ಖಾಸಗಿಯವರಿಗೆ ಕೊಟ್ಯಾಂತರ ರೂ. ವೆಚ್ಚಮಾಡಿ ಮುರ್ಡೇಶ್ವರವನ್ನು ಬೆಳೆಸಲು ಸಾಧ್ಯವಿರುವಾಗ ಉಳಿದ ಕ್ಷೇತ್ರಗಳ ಅಧಿಕಾರ ಪಡೆಯಲು ಪರದಾಡುವ ರಾಜಕೀಯ ಪಕ್ಷಗಳು ಅಭಿವೃದ್ಧಿಗೆ ಕಣ್ಣುಮುಚ್ಚಿಕೊಂಡಿರಲು ಕಾರಣವೇನು ? ಪುರಾಣ ಪ್ರಸಿದ್ಧ ಜಿಲ್ಲೆಯ ಗೋಕರ್ಣ, ಯಾಣ, ಇಡಗುಂಜಿ, ಮೊದಲಾದ ಕ್ಷೇತ್ರಗಳನ್ನು ಬೆಳೆಸಲು ಒಂದು ರೂ.ವನ್ನು ವಿಶೇಷವಾಗಿ ಕೊಡಿಸಲಿಲ್ಲ ಏಕೆ?.

ದ್ವಂದ್ವ ನಿಲುವಿನಿಂದ ಹಿನ್ನಲೆ 
ಉತ್ತರ ಕನ್ನಡದಂತಹ ಪರಿಸರ ನೆರೆಯ ಗೋವಾ ಮತ್ತು ದಕ್ಷಿಣದ ಜಿಲ್ಲೆಗಳಲ್ಲೂ ಇದೆ. ಅಲ್ಲಿ ಕಾಡು, ನಾಡು ಉಳಿಸಿಕೊಂಡು ಅಭಿವೃದ್ಧಿ ಹೊಂದಿದವು. ರಾಜಕೀಯ ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯವಿದೆ. ಉಚಿತ ಅಕ್ಕಿ, ಸಾಲ ಮನ್ನಾ, ಹತ್ತಾರು ಭಾಗ್ಯವನ್ನು ಕಾಂಗ್ರೆಸ್ಸಿಗರು, ಮೋದಿ ಹೆಸರು ನೋಟು ರದ್ದತಿ, ಸ್ಟಾರ್ಟ್‌ ಆ್ಯಪ್‌ ಗಳನ್ನು ಬಿಜೆಪಿಗರು ಹೇಳಿದರೆ ಸಾಲದು ಜಿಲ್ಲೆಯ ಅಭಿವೃದ್ಧಿಗಾಗಿ ನಿಮ್ಮ ನಿಲುವು, ಭದ್ಧತೆ ಏನು ಎಂಬುದನ್ನು ಜಿಲ್ಲೆಯ ರಾಜಕೀಯ ಧುರೀಣರು ಹೇಳಬೇಕು. ವಿವಿಧ ಪಕ್ಷದ ರಾಜಕಾರಣಿಗಳ ದ್ವಂದ್ವ ನಿಲುವು ಜಿಲ್ಲೆಯ ಹಿನ್ನೆಡೆಗೆ ಕಾರಣ. ಈಗ ನೇತೃತ್ವವಹಿಸಿ ತಮ್ಮ ಪಕ್ಷದ ಪರವಾಗಿ ಮತಕೇಳಲು ಬರುವಾಗ ಜಿಲ್ಲೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಬೇಕಾಗಿದೆ.

„ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next