Advertisement

ಅಂತಾರಾಜ್ಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಇಚ್ಛಾಶಕ್ತಿಯ ಕೊರತೆ

11:27 AM Dec 24, 2018 | |

ಈಶ್ವರಮಂಗಲ : ಗಡಿನಾಡ ಅಭಿವೃದ್ಧಿಗೆ ಸರಕಾರಗಳು ಹಲವು ರೀತಿಯ ಯೋಜನೆಗಳ ಅನುದಾನಗಳನ್ನು ಇರಿಸಿವೆ. ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದೆ. ಆದರೆ ಈಶ್ವರಮಂಗಲ ಪದಡ್ಕ ಸುಳ್ಯಪದವು ಅಂತರ್‌ ರಾಜ್ಯ ಸಂಪರ್ಕಿಸುವ ರಸ್ತೆ ಕಳೆದ ಕೆಲವು ದಶಕಗಳಿಂದ ನಾದುರಸ್ತಿಯಲ್ಲಿದ್ದು, ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ.

Advertisement

ಈಶ್ವರಮಂಗಲದಿಂದ ಪದಡ್ಕದ ಮೂಲಕ ಸುಳ್ಯಪದವಿಗೆ ಸುಮಾರು 5 ಕಿ.ಮೀ. ದೂರ ಇದೆ. ವರ್ಷ ವರ್ಷ ಕೆಲವು ಅನುದಾನದಿಂದ 50 ಮೀ., 100ಮೀ. ಹೀಗೆ ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಜನರ ಬೇಡಿಕೆಯಂತೆ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಸರಕಾರ ಇದ್ದಾಗ ಸುಮಾರು 58 ಲಕ್ಷ ರೂ. ವೆಚ್ಚದಲ್ಲಿ ಸುಮಾರು 2 ಕಿ.ಮೀ. ಡಾಮರು ಕಾಮಗಾರಿ ಆಗಿದೆ. ಆದರೆ ಕಳೆದ 3 ದಶಕಗಳಿಂದ ಈ ರಸ್ತೆಗೆ ದೊಡ್ಡ ಮೊತ್ತದ ಅನುದಾನ ಒದಗಿ ಬಂದಿಲ್ಲ.

ಪ್ರಧಾನ ಮಂತ್ರಿಗಳ ಕಚೇರಿಗೆ ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ ಮುಂಡ್ಯ ಅವರು ಪತ್ರ ಬರೆದು ರಸ್ತೆ ಅಭಿವೃದ್ಧಿಗೊಳಿಸುವಂತೆ 2 ವರ್ಷಗಳ ಹಿಂದೆ ಆಗ್ರಹಿಸಿದ್ದರು. ಪ್ರಧಾನಿ ಕಾರ್ಯಾಲಯ ಸ್ಪಂದಿಸಿ, ಜಿ.ಪಂ. ಇಲಾಖೆಯಿಂದ ವರದಿಯನ್ನು ಕಳುಹಿಸಿ ಕೊಡಲಾಗಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಈ ರಸ್ತೆಯ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಿದರು. ಪದಡ್ಕದಿಂದ ಶಬರಿನಗರದ ವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಮೂಲಕ ರಸ್ತೆ ಅಭಿವೃದ್ಧಿಗೊಳಿಸಿದರು. ಪದಡ್ಕ-ಈಶ್ವರಮಂಗಲ ಮಧ್ಯೆ 200 ಮೀ. ರಸ್ತೆ ಕಾಂಕ್ರೀಟ್‌ಗೊಳಿಸಿ ಅಭಿವೃದ್ಧಿಗೊಳಿಸಿದರು. ಇದೀಗ ಶಾಸಕ ಸಂಜೀವ ಮಠಂದೂರು ಅವರು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸುವ ಬಗ್ಗೆ ಹಾಗೂ ಈ ರಸ್ತೆಯನ್ನು ನಮ್ಮ – ಗ್ರಾಮ ನಮ್ಮ – ರಸ್ತೆ ಯೋಜನೆಗೆ ಸೇರಿಸಿ ರಸ್ತೆ ಅಭಿವೃದ್ಧಿಗೊಳ್ಳುತ್ತದೆ ಎಂದು ಸಾರ್ವಜನಿಕ ಮಾತು ಕೇಳಿ ಬರುತ್ತಿದೆ. ಊಹಾಪೋಹಗಳಿಗೆ  ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.

ಅಂತರ್‌ ರಾಜ್ಯ ಸಂಪರ್ಕ ರಸ್ತೆ
ಈಶ್ವರಮಂಗಲ-ಪದಡ್ಕ- ಸುಳ್ಯಪದವು ರಸ್ತೆ ಅಭಿವೃದ್ಧಿಗೊಂಡರೆ ಕೇರಳ ರಾಜ್ಯದ ಮುಳ್ಳೇರಿಯಾ, ಚೆರ್ಕಳ, ಮಧುರೂ, ಕಾಸರಗೋಡು, ಮಲ್ಲ ಕೇತ್ರಗಳಿಗೆ ಹತ್ತಿರವಾಗಲಿದೆ. ಸರಿಯಾದ ಬಸ್‌ನ ವ್ಯವಸ್ಥೆಗಳು ಇಲ್ಲದೇ ಹತ್ತಿರ ದಾರಿಯನ್ನು ಬಿಟ್ಟು ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಇದರಿಂದ ಸಮಯ, ಹಣ ವ್ಯರ್ಥವಾಗುತ್ತದೆ.

Advertisement

ಚರಂಡಿಯಲ್ಲಿ ಮೆಸ್ಕಾಂ ಕಂಬ!
ಪಡುವನ್ನೂರು- ನೆಟ್ಟಣಿಗೆ ಮುಟ್ನೂರು ಗ್ರಾಮಗಳಲ್ಲಿ ಹಾದುಹೋಗುವ ಈ ರಸ್ತೆಯಲ್ಲಿ ಚರಂಡಿ ಮೆಸ್ಕಾಂ ಇಲಾಖೆ ಕಂಬವನ್ನು ಆಳವಡಿಸಿ, ಚರಂಡಿಯನ್ನು ಮುಚ್ಚಲಾಗಿದೆ. ಚರಂಡಿಯಲ್ಲಿ ಬಡಗನ್ನೂರು ಗ್ರಾ.ಪಂ.ನ ಕುಡಿಯುವ ನೀರಿನ ಯೋಜನೆಯ ಕೊಳವೆ ಬಾವಿ ಕೊರೆಸಲಾಗಿದೆ. ಇದರಿಂದ ರಸ್ತೆ ಬದಿಯ ಚರಂಡಿಯನ್ನು ಮುಚ್ಚಲಾಗಿದ್ದು, ರಸ್ತೆಯಲ್ಲಿಯೇ ನೀರು ಹರಿದು ಡಾಮರು ರಸ್ತೆ ಕಿತ್ತು ಹೋಗಿದೆ.

ಖಾಸಗಿಯವರಿಂದ ಅತಿಕ್ರಮಣ
ಖಾಸಗಿಯವರು ರಸ್ತೆಯನ್ನು ಆಕ್ರಮಿಸಿ ಅವರ ಮನೆಗೆ ಹೋಗುವ ರಸ್ತೆಯನ್ನು ಮಾಡುವಾಗ ಚರಂಡಿಯನ್ನು ಮುಚ್ಚಿದ್ದಾರೆ. ಇದರಿಂದ ಮಳೆಯ ನೀರು ರಸ್ತೆಯಲ್ಲಿ ಹರಿದು ರಸ್ತೆ ನಾದುರಸ್ತಿಯಲ್ಲಿದೆ.

ಜಿ.ಪಂ. ಅನುದಾನ ಕಷ್ಟ
ಈಶ್ವರಮಂಗಲ – ಸುಳ್ಯಪದವು ಜಿಲ್ಲಾ ಪಂ. ರಸ್ತೆ ನಾದುರಸ್ತಿಯಲ್ಲಿದೆ. ರಸ್ತೆ ಅಭಿವೃದ್ಧಿಗೆ ಜಿ.ಪಂ.ನಿಂದ ದೊಡ್ಡಮಟ್ಟದ ಅನುದಾನವಿಲ್ಲ. ಶಾಸಕರು ಹೆಚ್ಚು ಅನುದಾನ ನೀಡಲು ಸಾಧ್ಯ.
-ಅನಿತಾ ಹೇಮನಾಥ ಶೆಟ್ಟಿ,
 ಅಧ್ಯಕ್ಷರು, ಜಿ.ಪಂ. ಸ್ಥಾಯೀ ಸಮಿತಿ, ಮಂಗಳೂರು

ತತ್‌ಕ್ಷಣ ಸ್ಪಂದಿಸಬೇಕಾಗಿದೆ
ಸುಳ್ಯಪದವು-ಈಶ್ವರಮಂಗಲ ರಸ್ತೆ ದುರಸ್ತಿಗೊಳಿಸುವಂತೆ ಹಲವಾರು ಮನವಿ ಮಾಡಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ರಿಕ್ಷಾ ಸ್ಟಾಂಡ್‌ ಕೂಡ ಇದೇ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದೆ. ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ ತತ್‌ಕ್ಷಣ ರಸ್ತೆ ಅಭಿವೃದ್ಧಿಗೊಳಿಸಬೇಕು.
-ಉದಯ ಕುಮಾರ್‌ ಕೆ.,
ರಿಕ್ಷಾ ಚಾಲಕ ಸುಳ್ಯಪದವು

ಈಶ್ವರಮಂಗಲ ಪ್ರಮುಖ ವಾಣಿಜ್ಯ ಕೇಂದ್ರ ಪಡುವನ್ನೂರು, ಬಡಗನ್ನೂರು ನೆರೆಯ ಬೆಳ್ಳೂರು ಗ್ರಾ.ಪಂ.ನ ಗ್ರಾಮಸ್ಥರು ಬೆಳೆಯುತ್ತಿರುವ ಈಶ್ವರಮಂಗಲವನ್ನು ಅವಲಂಬಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಾಯ ಇಲಾಖೆ, ಮೆಸ್ಕಾಂ ಇಲಾಖೆ, ವಾಣಿಜ್ಯ ವ್ಯವಹಾರ, ಶೈಕ್ಷಣಿಕ ಕೇಂದ್ರ, ಧಾರ್ಮಿಕ ಕೇಂದ್ರಗಳಿರುವ ಇಲ್ಲಿ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದೇ ಜನರು ಪರದಾಡುತ್ತಿದ್ದಾರೆ.

ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next