ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಸರ್ಕಾರಿ ರಜೆ ದಿನಗಳು ಸೇರಿದಂತೆ ವಿಶೇಷ ಪೂಜೆಯ ದಿನಗಳಲ್ಲಿ ಸಮರ್ಪಕವಾದ ಬಸ್ಗಳು ಹಾಗೂ ಬೆಟ್ಟದಲ್ಲಿ ಬಸ್ ನಿಲ್ದಾಣವಿಲ್ಲದೇ ಭಕ್ತರು ಪರದಾಡುತ್ತಿದ್ದಾರೆ.
ಯಳಂದೂರು ಟು ಬಿಳಿಗಿರಿರಂಗನಬೆಟ್ಟ ಹಾಗೂ ಚಾಮರಾಜನಗರ ಕೆ.ಗುಡಿ ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಪ್ರತಿನಿತ್ಯ 17 ಬಸ್ಗಳು ಸಂಚಾರಿಸುತ್ತದೆ. ಆದರೆ ಶನಿವಾರ ಹಾಗೂ ಭಾನುವಾರ ಸೇರಿದಂತೆ ವಿಶೇಷ ದಿನಗಳಲ್ಲಿ 3 ರಿಂದ 4ಕ್ಕೂ ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಬೆಟ್ಟಕ್ಕೆ ಹೋಗಬೇಕಾದರೆ ಇನ್ನೂ ಹೆಚ್ಚುವರಿ ಬಸ್ಗಳ ವ್ಯವಸ್ಥೆಯ ಮಾಡದ ಕಾರಣ ಭಕ್ತರು ಪರದಾಡುತ್ತಿದ್ದಾರೆ.
ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರ ಆಗಮನ: ಬಿಳಿಗಿರಿರಂಗನಬೆಟ್ಟವು ಹುಲಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ಪ್ರಾಣಿ, ಸಸ್ಯ ಸಂಕುಲಗಳ ಜೊತೆಗೆ ಹಸಿರಿನಿಂದ ಕಂಗೊಳಿಸುವ ಸುಂದರವಾದ ಪ್ರದೇಶವಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ಬಸ್ ಹಾಗೂ ಬೆಟ್ಟದಲ್ಲಿ ನಿಲ್ದಾಣದಲ್ಲಿ ಕಟ್ಟಡವಿಲ್ಲದೇ ಪರದಾಟ ಮಾಡುವುದರ ಜತೆಗೆ ಕುಡಿಯುವ ನೀರು, ಶೌಚಗೃಹ, ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳಲ್ಲಿದೆ ಪರದಾಡಬೇಕಾದ ಸ್ಥಿತಿ ಇದೆ.
ಈ ಬೆಟ್ಟವು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಪ್ರವಾಸೋಧ್ಯಮದಲ್ಲಿ ಹಿಂದುಳಿದಿದೆ. ಜಿಲ್ಲೆಯ ಬಂಡೀಪುರ, ಮಹದೇಶ್ವರಬೆಟ್ಟ ಹಾಗೂ ಗೋಪಾಲಸ್ವಾಮಿಬೆಟ್ಟಕ್ಕೆ ಹೋಲಿಕೆ ಮಾಡಿದರೆ ಬಹಳ ಹಿಂದುಳಿದಿರುವುದನ್ನು ಕಾಣಬಹುದು. ದಿನನಿತ್ಯ ಇಲ್ಲಿಗೆ ರಾಜ್ಯದ ವಿವಿಧ ಮೂಲೆಗಳು, ದೇಶ, ವಿದೇಶಗಳಿಂದ ಪ್ರವಾಸಿಗರು, ಶನಿವಾರ,ಭಾನುವಾರ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸುವ ಸ್ಥಳವಾಗಿದೆ.
Related Articles
ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ: ಬಿಳಿಗಿರಿರಂಗನಬೆಟ್ಟದಲ್ಲಿ ಬಿಸಿಲು, ಮಳೆ ಇರಲಿ ನಿಲ್ಲಲು ಒಂದು ಸೂರು ಇಲ್ಲ, ಬಸ್ ನಿಲ್ಲುವ ಸ್ಥಳದ ಒಂದು ಬದಿಯಲ್ಲಿ ಮರ, ಅಕ್ಕಪಕ್ಕದ ಅಂಗಡಿ ಸ್ಥಳಗಳಲ್ಲಿ ಆಶ್ರಯಿಸಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸುತ್ತ ಮಳೆಗಾಲವಾಗಿರುದರಿಂದ ಬೆಟ್ಟದಲ್ಲಿ ಮಂಜುನಿಂದ ಕೂಡಿರುತ್ತದೆ, ಜತೆಗೆ ಮಳೆಯು ಈ ಪ್ರದೇಶದಲ್ಲಿ ಹೆಚ್ಚು ಸುರಿಯುತ್ತಿದೆ. ಇವುಗಳ ನಡುವೆ ಬಸ್ಗಾಗಿ ಜನರು ಗಂಟೆಗಳ ಕಾಲ ಕಾಯಬೇಕಾಗಿರುವ ಸ್ಥಳದಲ್ಲಿ ಕುಳಿತುಕೊಳ್ಳಲು ಒಂದು ತಾತ್ಕಾಲಿಕವಾಗಿ ಬಸ್ ನಿಲ್ದಾಣವಿಲ್ಲದೇ ಪರದಾಟ ಮಾಡಬೇಕಾಗಿದೆ. ಬೆಟ್ಟದ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅಧಿಕಾರಿಗಳ ಹಿತಾಸಕ್ತಿ ಕೊರತೆಯು ಕಂಡುಬರುತ್ತಿದೆ.
ಸರಿಯಾಗಿ ಬಾರದ ಬಸ್: ಪ್ರಯಾಣಿಕರ ಪರದಾಟ: ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಶನಿವಾರ ಹಾಗೂ ಭಾನುವಾರ ಯಳಂದೂರಿನಿಂದ ತೆರಳುವ ಬಸ್ಗಳು ಬಾರದಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿತ್ತು. ಇಲ್ಲಿರುವ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಶನಿವಾರ ಹಾಗೂ ಭಾನುವಾರ ವಾರದ ದಿನವಾಗಿದ್ದು ಭಕ್ತರ ಸಂಖ್ಯೆ ಏರುಮುಖವಾಗಿರುತ್ತದೆ. ಅಲ್ಲದೆ ದೊಡ್ಡ ಜಾತ್ರೆಯ ಮುಗಿದ ಮೇಲೆ ಜತೆ ಬೇಸಿಗೆ ಸಮಯವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡುವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಪ್ರತಿ ಶನಿವಾರ ಇಲ್ಲಿಗೆ ಕೆಎಸ್ಆರ್ಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಬಸ್ಗಳ ಸಂಖ್ಯೆ ಕಡಿಮೆ ಇದ್ದರಿಂದ ಭಕ್ತರು ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇರುವ ಬಸ್ಗಳಲ್ಲಿ ಕೆಲವರು ಸೀಟುಗಳು ಸಿಗದೆ ನಿಂತುಕೊಂಡೇ ತೆರಳುವಂತಾಯಿತು.
ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಸಮಪರ್ಕವಾದ ನಿಲ್ದಾಣ ಹಾಗೂ ಬಸ್ಗಳ ವ್ಯವಸ್ಥೆ ಇಲ್ಲದೇ ಭಕ್ತರು ಪರದಾಡುವತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಬೆಟ್ಟಕ್ಕೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. -ಮಣಿ, ಕನ್ನಹಳ್ಳಿ ಮೋಳೆ ಗ್ರಾಮ
ಬೆಟ್ಟಕ್ಕೆ ವಾರದ ಶನಿವಾರ ಹಾಗೂ ಭಾನುವಾರ ಸೇರಿದಂತೆ ಸರ್ಕಾರಿ ರಜೆ ದಿನಗಲ್ಲಿ ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸು ವುದರಿಂದ ಕೆಎಸ್ಆರ್ ಟಿಸಿ ಇಲಾಖೆಯವರು ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪತ್ರವನ್ನು ಬರೆದು ತಿಳಿಸಲಾಗಿದೆ. -ಮೋಹನ್ ಕುಮಾರ್, ಇಒ ಬಿಳಿಗಿರಿರಂಗನಬೆಟ್ಟ
-ಫೈರೋಜ್ ಖಾನ್