ಸುಳ್ಯ: ಚುನಾವಣೆ ಸಂದರ್ಭದಲ್ಲಿ ಪರವಾನಿಗೆದಾರ ಕೋವಿಗಳನ್ನು ಠೇವಣಾತಿ ಇಡಬೇಕೆಂಬುದರ ವಿರುದ್ಧ ಹಾಗೂ ಠೇವಣಾತಿಯಿಂದ ವಿನಾಯಿತಿ ನೀಡಬೇಕೆಂದು ಎಂಬುದನ್ನು ತಿರಸ್ಕಾರ ಮಾಡಿದ ಸ್ಕ್ರೀನಿಂಗ್ ಸಮಿತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಜಿಲ್ಲೆಯ 196 ಕೋವಿ ಪರವಾನಿಗೆದಾರರಿಗೆ ವಿನಾಯಿತಿ ನೀಡಲಾಗಿದೆ.
ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಕ್ರೀನಿಂಗ್ ಸಮಿತಿಗೆ ಅರ್ಜಿ ಸಲ್ಲಿಸಿದ್ದ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ಜಿಲ್ಲೆಯ 196 ಮಂದಿಗೆ ವಿನಾಯಿತಿ ನೀಡಿ ಸ್ಕ್ರೀನಿಂಗ್ ಸಮಿತಿ ಮತ್ತು ಹೈಕೋರ್ಟ್ ಆದೇಶ ಮಾಡಿದೆ. ಈಗಾಗಲೇ ಪೋಲೀಸ್ ಠಾಣೆಗಳಲ್ಲಿ ಕೋವಿ ಠೇವಣಾತಿ ಇರಿಸಿದವರು ಕೋವಿಗಳನ್ನು ಹಿಂದಿರುಗಿ ಪಡೆಯಬಹುದಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಕೋವಿ ಡೆಪಾಸಿಟ್ ಇಡುವ ಬಗ್ಗೆ ಸುಳ್ಯದಲ್ಲಿ ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್ ನೇತೃತ್ವದಲ್ಲಿ ಸುಳ್ಯದಲ್ಲಿ ಸಭೆ ನಡೆಸಿ ಸಹಾಯಕ ಚುನಾವಣಾಧಿಕಾರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಮಾಡಿದ್ದರು. ಬಳಿಕ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ ಮತ್ತು ಪ್ರದೀಪ್ ಕೆ.ಎಲ್. ಮಾರ್ಗದರ್ಶನದಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದರು. ರೈತರ ಪರವಾಗಿ ಹೈಕೊರ್ಟ್ನಲ್ಲಿ ನ್ಯಾಯವಾದಿಗಳಾದ ಪಿ. ಪಿ. ಹೆಗ್ಡೆ ಹಾಗೂ ಸರಿಲ್ ಪ್ರಸಾದ್ ಪಾಯಸ್ ವಾದಿಸಿದ್ದರು.
ರೈತರ ಅರ್ಜಿಗಳನ್ನು ಪಡೆದು ಠೇವಣಾತಿ ವಿನಾಯಿತಿಗೆ ಸೂಕ್ತ ಆದೇಶ ಮಾಡುವಂತೆ ನ್ಯಾ| ನಾಗಪ್ರಸನ್ನರವರ ಏಕಸದಸ್ಯ ಪೀಠವು ನೀಡಿದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದ ಸ್ಕ್ರೀನಿಂಗ್ ಸಮಿತಿಯು ರೈತರಿಂದ ಪುನಃ ಅರ್ಜಿ ಪಡೆದು ಅರ್ಜಿ ನೀಡಿದ 196 ಮಂದಿಗೆ ವಿನಾಯಿತಿ ನೀಡಿ ಆದೇಶ ಮಾಡಿದೆ. ಈ ಮೊದಲೂ ಕೆಲವರು ಕೋರ್ಟ್ ಮೂಲಕ ವಿನಾಯಿತಿ ಪಡೆದಿದ್ದರು.