Advertisement

Kota Srinivas Poojary; ಎಸ್ಸಿ, ಎಸ್ಟಿ , ದಲಿತರನ್ನು ಕತ್ತಲಲ್ಲಿಡುವ ಪ್ರಯತ್ನ

01:01 AM Jan 31, 2024 | Team Udayavani |

ಉಡುಪಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್‌ ಅವರ ಅವಧಿಯಲ್ಲಿ ಸಿದ್ಧಪಡಿಸಿದ್ದ ಜಾತಿ ಗಣತಿ ವರದಿ (ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ)ಯನ್ನು ಅಂಗೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಮೇಷ ಎಣಿಸುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು ಹಾಗೂ ದಲಿತರನ್ನು ಕತ್ತಲಲ್ಲಿ ಇಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.


Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತ ಶೈಲಿ, ನಿರಂತರ ವೈಫ‌ಲ್ಯ ಹಾಗೂ ಗೊಂದಲಮಯ ರಾಜಕಾರಣವು ಜನರಲ್ಲಿ ಆತಂಕ ಸೃಷ್ಟಿಸಿದೆ.ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2015ರಲ್ಲಿ ಆಯೋಗದ ಮೂಲಕ ಸುಮಾರು 165 ಕೋ.ರೂ. ವೆಚ್ಚ ಮಾಡಿ ಜಾತಿ ಗಣತಿ ವರದಿ ಸಿದ್ಧಪಡಿಸಿದ್ದರು. ಅವರ ಮೊದಲ ಅವಧಿ ಮುಗಿದು, ಸಮ್ಮಿಶ್ರ ಸರಕಾರ ಬಂದು, ಇದೀಗ ಅವರದ್ದೇ ಸರಕಾರ ಇದ್ದರೂ ವರದಿ ಅಂಗೀಕಾರ ಮಾಡಿಲ್ಲ. ಬದಲಾಗಿ ವರದಿ ಅಂಗೀಕಾರಕ್ಕಾಗಿಯೇ ಸಮಾವೇಶ ನಡೆಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಅಲ್ಪಸಂಖ್ಯಾಕರಿಗೆ ಹೆಚ್ಚಿನ ಅನುದಾನ
ಅಹಿಂದ ನಾಯಕರಾಗಿದ್ದ ಸಿದ್ದರಾಮಯ್ಯ ಇದೀಗ ಅಲ್ಪಸಂಖ್ಯಾಕರ ನಾಯಕರಾಗಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಸ್ಟೆಲ್‌ ಸೀಟ್‌ ಹೆಚ್ಚಿಸಲು ಮನವಿ ಮಾಡಿದ್ದರೂ ಹೆಚ್ಚಳ ಮಾಡಿಲ್ಲ, ವಿದ್ಯಾರ್ಥಿವೇತನ ಕಡಿತ ಮಾಡಿದ್ದಾರೆ. ಆದರೆ ಅಲ್ಪಸಂಖ್ಯಾಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ದೂರಿದರು.

ಗ್ಯಾರಂಟಿ ವಿಫ‌ಲ: ರಾಜ್ಯ ಸರಕಾರದ ಗ್ಯಾರಂಟಿ ಸಂಪೂರ್ಣ ವಿಫ‌ಲವಾಗಿದೆ. ಯುವನಿಧಿ ಯಾರಿಗೆ ಅಗತ್ಯ ವಿದೆಯೋ ಅವರಿಗೆ ನೀಡುತ್ತಿಲ್ಲ. 40 ಲಕ್ಷ ಪದವೀಧರರಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಪದವಿ ಪೂರೈಸಿದವರಿಗೆ ಮಾತ್ರ ಎನ್ನುತ್ತಿದ್ದಾರೆ. ಚುನಾವಣೆ ಮೊದಲು ಹೇಳಿದ್ದು ಒಂದು ಈಗ ಮಾಡುತ್ತಿರುವುದು ಇನ್ನೊಂದು ಎಂದು ಆರೋಪಿಸಿದರು.

ಗಂಗಾಕಲ್ಯಾಣ ಸ್ಥಗಿತ: ಬಿಜೆಪಿ ಸರಕಾರ ಇದ್ದಾಗ 16 ಸಾವಿರ ಕೊಳವೆ ಬಾವಿ ಕೊರೆಯಲು ಗಂಗಾಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳ ಮೂಲಕ ಅವಕಾಶ ಮಾಡಿಕೊಟ್ಟಿದ್ದೆವು. ಈ ಸರಕಾರ ಬಂದ ಅನಂತರದಲ್ಲಿ ಎಲ್ಲ ಕಾಮಗಾರಿಗಳು ನಿಂತಿವೆ. ಕೊಳವೆ ಬಾವಿ ತೆರೆಯುವ ಕಾಮಗಾರಿಗಳಿಗೆ ವೇಗ ಸಿಗಬೇಕು ಎಂದು ಆಗ್ರಹಿಸಿದರು.

Advertisement

ರಾಷ್ಟ್ರಪತಿಯವರಿಗೆ ಏಕವಚನ!
ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಕರೆದಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರನ್ನು ಏಕವಚನದಲ್ಲಿ ಕರೆಯುವ ಧೈರ್ಯ ಮಾಡುತ್ತಾರೆಯೇ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಮನೆ ಮನೆ ಕೇಸರಿ ಧ್ವಜ ಅಭಿಯಾನ
ಕುಂದಾಪುರ: ಮಂಡ್ಯದಲ್ಲಿ ಅನುಮತಿ ಪಡೆದು ಹಾಕಿದ ಓಂಕಾರದ ಕೇಸರಿ ಧ್ವಜವನ್ನು ಇಳಿಸುವ ಮೂಲಕ ಪ್ರಜಾಸತ್ತಾತ್ಮಕ ಸರಕಾರವೊಂದು ಮಾಡಬಾರದ ಉದ್ಧಟತನ ತೋರಿಸಿದೆ. ಟಿಪ್ಪು ಜಯಂತಿ ಆಚರಿಸುವ ಸರಕಾರ ಕೇಸರಿ ಧ್ವಜ ಇಳಿಸಿ ಅಟ್ಟಹಾಸ ಮೆರೆದಿದೆ. ಇದರ ಪರಿಣಾಮ ಮಂಡ್ಯದ ಮನೆ ಮನೆಗಳಲ್ಲಿ ಕೇಸರಿ ಧ್ವಜ ಹಾರಾಡಲಿದೆ. ಇದು ರಾಜ್ಯಾದ್ಯಂತ ಅಭಿಯಾನ ರೂಪದಲ್ಲಿ ವಿಸ್ತರಿಸುವ ಚಿಂತನೆಯಿದೆ ಎಂದು ಶ್ರೀನಿವಾಸ ಪೂಜಾರಿ ಕುಂದಾಪುರದಲ್ಲಿ ಹೇಳಿದರು.

40 ವರ್ಷಗಳಿಂದ ಖಾಸಗಿ ಕಟ್ಟೆಯಲ್ಲಿ ಧ್ವಜ ಹಾರಿಸಲಾಗುತ್ತಿತ್ತು. ನವೀಕರಣಕ್ಕೆ ಅನುಮತಿ ಪಡೆದು ಹನುಮಾನ್‌ ಧ್ವಜ ಹಾರಾಟಕ್ಕೆ ಪಂಚಾಯತ್‌ ಸರ್ವಾನುಮತದ ನಿರ್ಣಯ ಮಾಡಿ ಅನುಮೋದಿಸಿತ್ತು. ಹಾಗಿದ್ದರೂ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಧ್ವಜ ಇಳಿಸಲಾಗಿದೆ. ಜಿಲ್ಲಾಧಿಕಾರಿ ಬೆಂಬಲಿಸಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next