Advertisement

Koratagere; 10 “ಕೂಸಿನ ಮನೆ”ಗಳು ಲಾಲನೆ – ಪಾಲನೆಗಾಗಿ ಸಿದ್ದ

09:20 PM Dec 22, 2023 | Team Udayavani |

ಕೊರಟಗೆರೆ: ಕೂಲಿ ಕಾರ್ಮಿಕ ಮಕ್ಕಳ ಲಾಲನೆ  ಪಾಲನೆಗಾಗಿ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಕೂಸಿನ ಮನೆ ( ಶಿಶು ಪಾಲನಾ ಕೇಂದ್ರ ) ಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ.ಅದರಂತೆ ತುಮಕೂರು ಜಿಲ್ಲೆಯಲ್ಲಿ 175 ಕೂಸಿನ ಮನೆ ನಿರ್ಮಾಣವಾಗಲಿವೆ . ಕೊರಟಗೆರೆ ತಾಲೂಕಿನಲ್ಲಿ 24 ಗ್ರಾ.ಪಂಚಾಯಿತಿ ಪೈಕಿ ಮೊದಲ ಹಂತದಲ್ಲಿ 10 ಗ್ರಾ.ಪಂ ಅಯ್ಕೆ ಮಾಡಿ ಅಲ್ಲಿ ಕೂಸಿನ ಮನೆಯನ್ನು ನಿರ್ಮಾಣ ಮಾಡಲಾಗಿದ್ದು ಅವು ಈಗ ಮಕ್ಕಳ ಲಾಲನೆ ಪಾಲನೆಗೆ ಸಿದ್ದವಾಗಿದೆ.

Advertisement

ರಾಜ್ಯದಲ್ಲಿ ಕೂಲಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿರುವ ಹಿನ್ನೆಲೆ ಆ ಕುಟುಂಬದ 3 ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ಕೊರಟಗೆರೆ ತಾಲೂಕಿನ ಬಿ.ಡಿ.ಪುರ, ಬೈಚಾಪುರ, ಬೂದಗವಿ, ತೋವಿನಕೆರೆ, ಮಾವತ್ತೂರು, ನೀಲಗೊಂಡನಹಳ್ಳಿ, ಎಲೆರಾಂಪುರ, ಪಾತಗಾನಹಳ್ಳಿ, ಬುಕ್ಕಾಪಟ್ಟಣ, ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣಗೊಂಡಿವೆ.

ಸರ್ಕಾರದ ಆದೇಶದಂತೆ ಮೊದಲ ಹಂತದಲ್ಲಿತಾಲೂಕಿನ 10 ಗ್ರಾಪಂಗಳಲ್ಲಿ ಮಕ್ಕಳ ಪೋಷಣೆಯ ಬಗ್ಗೆ ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಗ್ರಾಪಂ ವತಿಯಿಂದ 40 ಮಂದಿ ಕೇರ್ ಟೇಕರ್‌ಗಳಿಗೆ ತರಬೇತಿ ನೀಡಿದ್ದು ಪ್ರತಿ ಕೂಸಿನ ಮನೆಯ ಮಕ್ಕಳ ಪೋಷಣೆಗೆ ನಾಲ್ವರು ಕೇರ್ ಟೇಕರ್ಸ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ, ಪೋಷಕರು ಸರ್ಕಾರದ ಮಹತ್ವವಾದ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಶಿಶುಪಾಲನಾ ಕೇಂದ್ರಗಳ ಕುರಿತು ಸಾರ್ವಜನಿಕರ, ಪೋಷಕರ ಕುಂದುಕೊರತೆ ಪರಿಹಾರ ತಿಳಿಸಲು ಸಲಹಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಯಾಗಲಿದೆ ಎಂದು ತಾಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೂಸಿನ ಮನೆ ಮುಖ್ಯ ಉದ್ದೇಶವೇನು?:
ಈ ಶಿಶುಪಾಲನಾ ಕೇಂದ್ರಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖೈಯಲ್ಲಿ ಜನರು ಜಮೀನುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಾರೆ, ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿನಿತ್ಯ ಕೂಲಿ ಕೆಲಸಕ್ಕೆ ಮತ್ತು ನರೇಗಾ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ, ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮನೆಗೆ ಮರಳುವ ವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ, ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ, ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗುತ್ತಾರೆ, ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ, ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಬಹುದು, ಸಮಸ್ಯೆ ನಿವಾರಣೆಗೆ ಸರ್ಕಾರ ಈ ಯೋಜನೆ ಆರಂಭಿಸಿದೆ.

ಪೌಷ್ಠಿಕ ಆಹಾರ ವಿತರಣೆಗೆ ಸಿದ್ಧತೆ:
ಮಕ್ಕಳ ಪ್ರಾರಂಭಿಕ ಬಾಲ್ಯದ ಬೆಳವಣಿಗೆಗೆ ಪೌಷ್ಠಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಕೂಸಿನ ಮನೆಯಲ್ಲಿ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಗಂಜಿ, ಹಾಲು, ಮೊಟ್ಟೆ ಜೊತೆಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಬಿಸಿ ಊಟ, ಸಂಜೆ ಲಘು ಉಪಹಾರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಸಂಖ್ಯೆ ಆಧಾರಿಸಿ ಪೌಷ್ಠಿಕ ಆಹಾರ ವಿತರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

ಕೂಸಿನ ಮನೆಯಲ್ಲಿ ಏನೇನಿದೆ?:
ಕೂಸಿನ ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಶೌಚಾಲಯ ಮತ್ತು ವಯಸ್ಕರ ಶೌಚಾಲಯಗಳು ಪ್ರತ್ಯೇಕವಾಗಿ ಇರುತ್ತವೆ, ಮಕ್ಕಳಿಗೆ ಆಡವಾಡಲು ಆಟಿಕೆ ವಸ್ತುಗಳಿವೆ, ವಿಶೇಷ ಚೇತನ ಮಕ್ಕಳಿಗಾಗಿ ಇಳಿಜಾರು ಮತ್ತು ಕೈ ಹಳಿಗಳ ವ್ಯವಸ್ಥೆ ಇದ್ದು, ಕೇರ್ ಟೇಕರ್ಸ್‌ಗಳು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುವ ವ್ಯವಸ್ಥೆ ಸಹ ಇರುತ್ತದೆ. ಸಂಜೆ ಲಘು ಉಪಹಾರ ನೀಡಿ ಮಕ್ಕಳನ್ನು ತಮ್ಮ ಪೋಷಕರ ಜೊತೆ ಕಳುಹಿಸಿ ಕೊಡುವುದು ಕೇರ್ ಟೇಕರ್ಸ್‌ಗಳ ಜವಾಬ್ದಾರಿಯಾಗಿರುತ್ತದೆ

ನಮ್ಮ ತಾಲ್ಲೂಕಿನಲ್ಲಿ 10 ಗ್ರಾಪಂಗಳಲ್ಲಿ ಈಗಾಗಲೇ ಕೂಸಿನ‌ ಮನೆ ನಿರ್ಮಾಣವಾಗಿದ್ದು ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಉದ್ಘಾಟನೆಗೆ ಸಿದ್ದವಾಗಿದೆ.
-ಅಪೂರ್ವ. ಸಿ ಅನಂತರಾಮು
ತಾಪಂ‌ ಇಒ ಕೊರಟಗೆರೆ.

Advertisement

Udayavani is now on Telegram. Click here to join our channel and stay updated with the latest news.

Next