Advertisement

Kolar City Transport: ನನಸಾಗದ ಕೋಲಾರ ನಗರ ಸಾರಿಗೆ ಕನಸು!

03:47 PM Jan 24, 2024 | Team Udayavani |

ಕೋಲಾರ:  ಜಿಲ್ಲಾ ಕೇಂದ್ರ ಕೋಲಾರಕ್ಕೆ ನಿರಂತರವಾಗಿ ಸಮರ್ಪಕವಾದ ರೀತಿಯಲ್ಲಿ ನಗರ ಸಾರಿಗೆ ವ್ಯವಸ್ಥೆ ಬೇಕು ಎಂಬ ಬೇಡಿಕೆ ಮೂರು ದಶಕಗಳನ್ನು ದಾಟಿದೆ. ಆದರೆ, ಇಂದಿಗೂ ನಗರ ಸಾರಿಗೆ ವ್ಯವಸ್ಥೆ ಆರಂಭವಾಗಿಲ್ಲ.

Advertisement

ಈ ಮೂರು ದಶಕಗಳಲ್ಲಿ ದಿವಂಗತ ಬೈರೇಗೌಡರು ಮಂತ್ರಿಯಾದಾಗಿನಿಂದಲೂ ಹಲವು ಬಾರಿ ನಗರ ಸಾರಿಗೆಯನ್ನು ಆರಂಭಿಸಲಾಗಿದೆ, ಆದರೆ, ಅಷ್ಟೇ ವೇಗವಾಗಿ ನಷ್ಟದ ನೆಪವೊಡ್ಡಿ ನಗರ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.

2012ರಲ್ಲಿ ಚಾಲನೆ: 2012ರಲ್ಲಿ ಕೋಲಾರ ಜಿಲ್ಲೆಗೆ ನರ್ಮ್ ಯೋಜನೆಯಡಿ ಬಸ್ಸುಗಳು ಬಂದಿದ್ದರಿಂದ, ಇವುಗಳನ್ನು ಬಳಸಿಪೂರ್ಣ ಪ್ರಮಾಣದ ನಗರ ಸಾರಿಗೆಯನ್ನು ಆರಂಭಿಸಲಾಗಿತ್ತು. ಅಂದಿನ ಸಾರಿಗೆ ಸಚಿವ ಆರ್‌.ಅಶೋಕ್‌ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಆರ್‌.ವರ್ತೂರು ಪ್ರಕಾಶ್‌ ನಗರ ಸಾರಿಗೆಗೆ 2012 ಜು. 28 ರಂದು ವಿದ್ಯುಕ್ತ ಚಾಲನೆ ನೀಡಿದ್ದರು. 10 ಬಸ್‌ಗಳನ್ನು ಬಳಸಿಕೊಂಡು ಕೋಲಾರದಿಂದ ವಡಗೂರು ಗೇಟ್‌ 4 ಬಸ್‌ 30 ಟ್ರಿಪ್‌, ಸಂಗೊಂಡಹಳ್ಳಿಯಿಂದ ಹಸಾಳ ಗೇಟ್‌ 4 ಬಸ್‌ 35 ಟ್ರಿಪ್‌ ಮತ್ತು ಕೋಲಾರ ಬಸ್‌ ನಿಲ್ದಾಣದಿಂದ ಪೂಜಾ ಕಲ್ಯಾಣ ಮಂಟಪಕ್ಕೆ 2 ಬಸ್‌ 26 ಟ್ರಿಪ್‌ ನಗರ ಸಾರಿಗೆಯನ್ನು ಆರಂಭಿಸಲಾಗಿತ್ತು. ಟಿಕೆಟ್‌ ಧಾರಣೆಯನ್ನು 9 ಮತ್ತು 5 ರೂ. ನಿಗದಿಪಡಿಸಲಾಗಿತ್ತು. ನಿತ್ಯವೂ 10 ಬಸ್‌ಗಳು 91 ಟ್ರಿಪ್‌ಗಳನ್ನು ನಿಗದಿತ ಮಾರ್ಗದಲ್ಲಿ ಸಂಚರಿಸಬೇಕಾಗಿತ್ತು. ಆದರೆ, ಕರ್ನಾಟಕ ಸಾರಿಗೆ ಸಂಸ್ಥೆ ಈ ನಗರ ಸಾರಿಗೆ ಸೇವೆಯನ್ನು ಕೆಲವೇ ದಿನಗಳಿಗೆ ಮಿತಿಗೊಳಿಸಿ, ಗ್ರಾಮಾಂತರ ಸೇವೆಗೆ ಇವೇ ನರ್ಮ್ ಬಸ್‌ಗಳನ್ನು ಬಳಸಿಕೊಂಡಿತ್ತು.

ಬೈರೇಗೌಡರ ಕಾಲದಲ್ಲಿ: ದಿವಂಗತ ಬೈರೇಗೌಡರು ಜಿಲ್ಲಾ ಮಂತ್ರಿಯಾಗಿದ್ದ ವೇಳೆಯಲ್ಲೂ ಇದೇ ರೀತಿ ಎರಡು  ನಗರ ಸಾರಿಗೆ ಬಸ್‌ಗಳನ್ನು ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಾಲನೆ ನೀಡಿದ್ದರು. ಆದರೆ, ಈ ಸೇವೆಯನ್ನು ಕೆಲವೇ ದಿನಗಳಲ್ಲಿ ನಿಲ್ಲಿಸಲಾಗಿತ್ತು. ಮಿನಿ ಬಸ್‌ಗಳಲ್ಲಿ ನಗರ ಸಾರಿಗೆ ಸೇವೆ ನೀಡಲಾಗುವುದು ಎಂಬ ಭರವಸೆಯೂ ಈಡೇರಿಲ್ಲ.

ಕೋಲಾರ ನಗರಕ್ಕೆ ನಗರ ಸಾರಿಗೆ ಅಗತ್ಯ ಎಂದು ವರ್ತಕ ನಾಗರಾಜ ಶೆಣೈ, ಈಗ ದಿವಂಗತರಾಗಿರುವ ನಗರಸಭಾ ಸದಸ್ಯರಾಗಿದ್ದ ಕೆ.ಎನ್‌.ತ್ಯಾಗರಾಜು, ಟೈರ್‌ ವ್ಯಾಪಾರಿ ನರಸಿಂಹರಾಜು ವಿವಿಧ ಹಂತಗಳಲ್ಲಿ ನಗರ ಸಾರಿಗೆ ಬೇಡಿಕೆ ಹಸಿರಾಗಿರುವಂತೆ ನೋಡಿಕೊಂಡಿದ್ದರು.

Advertisement

ನಷ್ಟದ ನೆಪ: ನಗರ ಸಾರಿಗೆ ನಿಲ್ಲಿಸಲು ಕೊಟ್ಟ ನೆಪವೇ ನಷ್ಟ ಎಂದು. ಸಂಸ್ಥೆಗೆ ಸುಮಾರು 3 ಕೋಟಿ ರೂ. ನಷ್ಟವಾಯಿತೆಂದು ಆರ್‌ಟಿಐ ಮಾಹಿತಿಯಲ್ಲಿ ಒಪ್ಪಿಕೊಂಡಿದೆ. ಈಗ ಜಿಲ್ಲಾಧಿಕಾರಿ ಅಕ್ರಂಪಾಷಾ ಕೋಲಾರ ಬಸ್‌ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಬಂದು ಹೋಗಲು ಅನುಕೂಲವಾಗುವಂತೆ ನಗರ ಸಾರಿಗೆಯನ್ನು ಆರಂಭಿಸುವಂತೆ ಮಾಡಿದ್ದಾರೆ. ಈ ಬಸ್‌ ಕೋಲಾರ ಬಸ್‌ ನಿಲ್ದಾಣದಿಂದ ವಡಗೂರು ಗೇಟ್‌ವರೆಗೂ ಹೋಗಿ ಮತ್ತದೇ ಮಾರ್ಗದಲ್ಲಿ ವಾಪಸ್‌ ಬರುತ್ತಿದೆ. ಇದು ಪೂರ್ಣ ಪ್ರಮಾಣದ ನಗರ ಸಾರಿಗೆಯಲ್ಲ. ಈ ಹಿನ್ನೆಲೆಯಲ್ಲಿ ನಗರವಾಸಿಗಳು ಮೂರು ದಶಕ ಕಳೆದರೂ ನಗರ ಸಾರಿಗೆ ಸೇವೆಯಿಂದ ವಂಚಿತರಾಗಬೇಕಾಗಿದೆ.

ದುಬಾರಿ ಆಟೋ ಸೇವೆ: ನಗರದಲ್ಲಿ ಸೂಕ್ತ ಸಾರಿಗೆಯಿಲ್ಲದ ಕಾರಣ ಜನ ಆಟೋದಲ್ಲಿ ಸಾಗಬೇಕಿದೆ. ಆಟೋ ಸಂಚಾರ ಬಲುದುಬಾರಿ. ಆದರೂ, ಅದೇ ಅನಿವಾರ್ಯ ಎಂಬಂತಾಗಿದೆ. ರಾಜ್ಯದಲ್ಲಿ ಕೆಲವು ತಾಲೂಕು ಕೇಂದ್ರಗಳು ನಗರ ಸಾರಿಗೆ ಸೇವೆಯನ್ನು ಹೊಂದಿರುವಾಗ ಕೋಲಾರ ಜಿಲ್ಲಾ ಕೇಂದ್ರ ಸ್ವಾತಂತ್ರ್ಯಬಂದು 75 ವರ್ಷ ಕಳೆದರೂ ಆಟೋ ಸೇವೆಯಲ್ಲಿ ಜನ ಓಡಾಟ ನಡೆಸಬೇಕಿದೆ.

ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ: 3 ದಶಕಗಳಲ್ಲಿ ನಡೆದಿರುವ ವಿವಿಧ ಸಾರಿಗೆ ಪ್ರಾಧಿಕಾರದ ಸಭೆಗಳಲ್ಲಿ ಹಾಗೂ ನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಜನರ ಪರವಾಗಿ ನಗರ ಸಾರಿಗೆ ಕುರಿತಂತೆ ಹಲವಾರು ಮನವಿಗಳನ್ನು ನೀಡಲಾಗಿದೆ. ಯಾವುದಕ್ಕೂ ಗಂಭೀರ ಸ್ಪಂದನೆ ದೊರೆತಿಲ್ಲ. ಕೋಲಾರ ನಗರ ಸಾರಿಗೆ ಪ್ರತ್ಯೇಕ ಬಣ್ಣದ ಬಸ್‌ಗಳಿಂದ ಕೋಲಾರ ವರ್ತುಲ ದಿಕ್ಕಿನಲ್ಲಿ ಸಂಚರಿಸುವಂತೆ ಆರಂಭಿಸಬೇಕು, ಪ್ರತ್ಯೇಕ ನಿಲ್ದಾಣ ಮತ್ತು ನಿಲುಗಡೆ ವೇಳಾಪಟ್ಟಿ ಅಳವಡಿಸಿಕೊಳ್ಳಬೇಕು, ನಿಗದಿತ ವೇಳಾಪಟ್ಟಿ ಪ್ರಕಾರ ಬಸ್‌ ಸಂಚರಿಸಬೇಕು, ಈಗ ಕೋಲಾರ ನಗರಸಭೆಯನ್ನು ಐದು ಗ್ರಾಪಂಗಳನ್ನು  ಸೇರಿಸಿಕೊಂಡು ಮಹಾನಗರಪಾಲಿಕೆಯನ್ನಾಗಿಸುವ ಪ್ರಸ್ತಾಪನೆ ಇರುವುದರಿಂದ 5 ಪಂಚಾಯ್ತಿಗಳ ಕೇಂದ್ರದಿಂದ ನಗರ ಸಾರಿಗೆ ಆರಂಭವಾಗಬೇಕು. ಆಗ ನಷ್ಟವಾಗುವ ಸಾಧ್ಯತೆ ಇರುವುದಿಲ್ಲ. ಸಾರಿಗೆ ಸಂಸ್ಥೆಗೆ ನಗರಸಾರಿಗೆಯಿಂದ ನಷ್ಟವಾಗುವುದಾದರೆ ಆಟೋ ಸೇವೆಯಂತೆ ನಗರ ಸಾರಿಗೆ ಸೇವೆಯನ್ನು ಖಾಸಗಿಗೆ ನೀಡಬೇಕೆಂಬ ಬೇಡಿಕೆಯೂ ಇದೆ.

ಜಿಲ್ಲೆಗೆ ವಿದ್ಯುತ್‌ ಚಾಲಿತ ಬಸ್‌ ಸೇವೆ! :

ಕೋಲಾರ ಸಾರಿಗೆ ಸಂಸ್ಥೆಗೆ ಗಣರಾಜ್ಯೋತ್ಸವ ಅಂಗವಾಗಿ 45 ಎಲೆಕ್ಟ್ರಿಕ್‌ ಬಸ್‌ಗಳು ಬರುತ್ತಿದ್ದು, ಈ ಬಸ್‌ಗಳನ್ನು ಸದ್ಬಳಕೆ ಮಾಡಿಕೊಂಡು ನಗರ ಸಾರಿಗೆಯನ್ನು ಈಗಲಾದರೂ ವ್ಯವಸ್ಥಿತವಾಗಿ, ನಿರಂತರವಾಗಿ, ಸಮರ್ಪಕವಾಗಿ ನಡೆಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಲು ಅವಕಾಶವಿದೆ. ಇತ್ತ ಸಾರಿಗೆ ಸಂಸ್ಥೆ, ಡಿಸಿ, ಜನಪ್ರತಿನಿಧಿಗಳು ಗಮನಹರಿಸಬೇಕಷ್ಟೆ. ಈ ಕುರಿತು ಹೆಚ್ಚಿನ ಪ್ರಚಾರ ನೀಡಿ, ಬಸ್‌ ನಿಲ್ದಾಣದಲ್ಲಿ ಪ್ರತ್ಯೇಕ ನಿಲ್ದಾಣಕ್ಕೆ ವ್ಯವಸ್ಥೆ ಮಾಡಿ, ಕೋಲಾರ ನಗರದಲ್ಲಿ ವರ್ತುಲಾಕಾರದಲ್ಲಿ ನಗರದ ಒಳಗೆ ಮತ್ತು ಹೊರಭಾಗದ ಗ್ರಾಮಾಂತರ ಪ್ರದೇಶದಲ್ಲಿ ಬಸ್‌ ಸಂಚಾರ ಆರಂಭಿಸಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಡಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂಬ ಒತ್ತಾಯ ಜನರಿಂದ ಕೇಳಿಬರುತ್ತಿದೆ.

ಕೋಲಾರ ನಗರಕ್ಕೆ ವ್ಯವಸ್ಥಿತ ನಗರ ಸಾರಿಗೆ ಬೇಕೆಂಬುದು ಮೂರು ದಶಕಗಳ ಬೇಡಿಕೆ. ಕೋಲಾರವನ್ನು ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಪ್ರಾಧಿಕಾರವು ನಗರವನ್ನಾಗಿ ಒಪ್ಪಿಕೊಳ್ಳದ ಮೇಲೆ ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಇರುವುದಾದರೂ ಏಕೆ? ನಗರಸಭೆ ಕಂದಾಯದಲ್ಲಿ ನಗರ ಸಾರಿಗೆ ಸೆಸ್‌ ವಸೂಲು ಮಾಡುತ್ತಿರುವುದೇಕೆ? ಎನ್ನುವುದಕ್ಕೆ  ಸರ್ಕಾರ ಕೋಲಾರ ಜನತೆಗೆ ವಿವರಣೆ ನೀಡಬೇಕಿದೆ. ಜಿಲ್ಲೆಗೆ ವಿದ್ಯುತ್‌ ಚಾಲಿತ ಬಸ್‌ಗಳು ಬರುತ್ತಿರುವಾಗ‌ಲಾದರೂ ನಿರಂತರ ನಗರ ಸಾರಿಗೆ ಸೇವೆ ಕೋಲಾರ ನಗರಕ್ಕೆ ಸಿಗುವಂತಾಗಲಿ.-ನಾಗರಾಜ ಶೆಣೈ, ನಗರಸಾರಿಗೆ ಹೋರಾಟಗಾರ, ಕೋಲಾರ.   

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next