Advertisement

ಜ್ಞಾನಾಧಾರಿತ, ಕೌಶಲಾಧಾರಿತ ಶಿಕ್ಷಣ ಪದ್ಧತಿ

03:15 PM Oct 04, 2021 | Team Udayavani |

ಪ್ರಸಕ್ತ ಸಾಲಿ ನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ‌ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರಮದಲ್ಲಿನ ಹೊಸ ವಿಷಯಗಳ ಕುರಿತು “ಉದಯವಾಣಿ’ಯು ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..

Advertisement

ಮಕ್ಕಳ ಬದುಕು ಬದಲಿಸುವ ಶಿಕ್ಷಣ ವ್ಯವಸ್ಥೆ
ರಾಯಚೂರು ವಿವಿಯಿಂದ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಎನ್‌ಇಪಿ ಮಾಹಿತಿ ನೀಡಲು ನೋಡಲ್‌ ಆಫೀಸರ್‌ಗಳನ್ನು ನೇಮಿಸಲಾಗುತ್ತಿದೆ. ಕಾಲೇಜುಗಳ ಪ್ರಾಚಾರ್ಯರ ಜತೆ ಸಭೆ ನಡೆಸಲಾಗಿದೆ. ಹೆಲ್ಪ್ಲೈನ್‌ ಆರಂಭಿಸಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

ರಾಯಚೂರು ವಿವಿಯಿಂದ ಅಂಬಾಸಿ­ಡರ್‌­ಗಳನ್ನು ನೇಮಿಸಿ ತಾಲೂಕು ಮಟ್ಟದಲ್ಲಿ ಹೋಗಿ ತರಬೇತಿ ನೀಡಲಾಗುತ್ತಿದೆ. ರಾಯಚೂರು ವಿವಿ ವ್ಯಾಪ್ತಿಗೆ 13 ತಾಲೂಕು ಬರುತ್ತವೆ. ಪ್ರತಿ ತಾಲೂಕಲ್ಲಿ ಲೀಡ್‌ ಕಾಲೇಜ್‌ಗಳನ್ನು ಮಾಡಲಾಗಿದೆ. ಉಳಿದ ಕಾಲೇಜುಗಳ ಸಿಬಂದಿ ಅಲ್ಲಿಗೆ ಬರುತ್ತಾರೆ. ಅವರಿಗೆ ಎನ್‌ಇಪಿ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗುತ್ತಿದೆ. ಪ್ರತೀ ದಿನ 4 ಹಂತಗಳ ತರಬೇತಿ ನೀಡಲಾಗುತ್ತಿದೆ. ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಜತೆಗೆ ಪಾಲಕರ ಸಭೆ ಮಾಡಲಾಗುತ್ತಿದೆ.

ತುಂಬಾ ಬದಲಾವಣೆ ಆಗಲಿದೆ. ಇಲ್ಲಿ ಒಬ್ಬ ವಿದ್ಯಾರ್ಥಿ ತನಗೆ ಬೇಕಾದ ವಿಷಯ ಆಯ್ಕೆ ಮಾಡಿಕೊಂಡು ಓದಬಹುದು. ಇದೇ ವಿಚಾರ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ­ಕೊಡಬೇಕಿದೆ. ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳ­ಬಹುದು. ಯಾವ ವಿಷಯದಲ್ಲಿ ಪರಿಣತಿ ಇರುತ್ತದೆಯೋ ಅದನ್ನು ಓದುವ ಅವಕಾಶ ಇಲ್ಲಿದೆ. ಇದರಿಂದಅಂತಾ­ರಾಜ್ಯ, ಅಂತಾ­ರಾಷ್ಟ್ರೀಯ ಮಟ್ಟದಲ್ಲಿ ಉದ್ಯೋ­ಗಾವಕಾಶಗಳು ತೆರೆದು­ಕೊಳ್ಳಲಿವೆ. ಯಾರು ಬೇಕಾ­ದರೂ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು ಎನ್ನುವ ವಾತಾವರಣ ತಯಾರಾಗಲಿದೆ.
ಶಿಕ್ಷಣದ ಗುಣಮಟ್ಟ ಖಂಡಿತ ಸುಧಾರಿ­ಸಲಿದೆ. ಇಲ್ಲಿ ವಿದ್ಯಾರ್ಥಿ ಆಯ್ಕೆಯೇ ಅಂತಿಮ. ಕಲಾ ವಿಭಾಗ ಓದುವವರು ಅದನ್ನೇ ಓದಬೇಕೆಂದಿಲ್ಲ. ಬೇಡ ಎನ್ನುವುದಾದರೆ ಕೌಶಲಾಧಾರಿತ ವಿಷಯ ಓದಬಹುದು. ಎನ್‌ಇಪಿ ಎನ್ನುವುದು ಜ್ಞಾನಾಧಾರಿತ, ಕೌಶಲಾಧಾರಿತ , ಮೌಲ್ಯಾಧಾರಿತ ಶಿಕ್ಷಣ ಪದ್ಧತಿ. ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬದಲಿಸುವ ಪ್ರಕ್ರಿಯೆ ಎಂದರೆ ತಪ್ಪಾಗಲಿಕ್ಕಿಲ್ಲ.ಹಿಂದೆ ವಿದ್ಯಾರ್ಥಿಗಳ ಡ್ರಾಪ್‌ಔಟ್‌ ಪ್ರಮಾಣ ಶೇ.30­ರಿಂದ 70 ಇತ್ತು. ಆದರೀಗ ಸಂಪೂರ್ಣ ಬದಲಾವಣೆ ಆಗಲಿದೆ. ಒಬ್ಬ ವಿದ್ಯಾರ್ಥಿ ವ್ಯಾಸಂಗ ಮಧ್ಯದಲ್ಲಿ ಬಿಟ್ಟು ಹೋದರೂ ಏಳು ವರ್ಷಗಳ ಬಳಿಕ ಬಂದು ಮತ್ತೆ ಓದಲು ಅವಕಾಶ ಇದೆ. ಜೀವನವಿಡಿ ಕಲಿಕೆಗೆ ಅಡಚಣೆಯಾಗದ ರೀತಿಯಲ್ಲಿ ವ್ಯಾಸಂಗ ಮಾಡುವ ವ್ಯವಸ್ಥೆ ಇದಾಗಿರಲಿದೆ. ಇಲ್ಲಿ ಡ್ರಾಪ್‌ಔಟ್‌ ಎನ್ನುವುದು ಗಂಭೀರ ವಿಷಯ ಆಗಲ್ಲ.
-ಪ್ರೊ| ಹರೀಶ ರಾಮಸ್ವಾಮಿ
ಕುಲಪತಿ, ರಾಯಚೂರು ವಿವಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಎನ್‌ಇಪಿ ದಾರಿ
ದೇಶದ ಪ್ರತಿಷ್ಠಿತ ಕೃಷಿ ವಿವಿಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಧಾರ ವಾಡ ಕೃಷಿ ವಿವಿ ಈ ಹಿಂದಿನಿಂದಲೂ ಹೊಸತನ ಮತ್ತು ಹೊಸ ಆವಿಷ್ಕಾರಗಳನ್ನು ಸದಾ ಸ್ವಾಗತಿಸುತ್ತಲೇ ಬಂದಿದೆ. ಹೀಗಾಗಿ ಸರಕಾರ‌ದ ಉನ್ನತ ಶಿಕ್ಷಣ ನೀತಿಯನ್ನು ಕೂಡ ಸ್ವಾಗತಿಸಿ, ಅದರ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಹೊಸ ವಿಚಾರಗಳ ಅನುಷ್ಠಾನ ಸಂದರ್ಭದಲ್ಲಿ ಎಲ್ಲರಿಗೂ ಅಲ್ಲದೇ ಹೋದರೂ ಕೆಲವರಿಗೆ ಗೊಂದಲಗಳು ಇದ್ದೇ ಇರುತ್ತವೆ. ಅದರಲ್ಲೂ ಕೃಷಿ ಪ್ರಾಯೋಗಿಕ ಮತ್ತು ಸಂಶೋಧನತ್ಮಕ ವಿಷಯ. ಇದರಲ್ಲಿ ಫಲಿತಾಂಶ ಪಡೆಯಲು ತಾಳ್ಮೆಯಿಂದ ಕಾಯಬೇಕು. ನೂತನ ಶಿಕ್ಷಣ ನೀತಿ ಕುರಿತು ಈಗಾಗಲೇ ಬೋಧಕರು, ವಿವಿಯಲ್ಲಿ ಸಂಶೋಧನ ವಿದ್ಯಾರ್ಥಿ­ಗಳು ಹಾಗೂ ಸಂಶೋಧಕರೊಂದಿಗೆ ಅನೇಕ ಬಾರಿ ಸಂವಾದ ನಡೆಸಿ ಈಗಿರುವ ಕಲಿಕಾ ವ್ಯವಸ್ಥೆ ಮತ್ತು ಪಠ್ಯ, ಎನ್‌ಇಪಿ ಅನುಷ್ಠಾನದ ಅನಂತರ ಆಗುವ ಬದಲಾ ವಣೆಗಳ ಕುರಿತು ಚರ್ಚಿಸಲಾಗಿದೆ.

ಕೃಷಿ ಯಾವಾಗಿದ್ದರೂ ಪಠ್ಯಕ್ಕಿಂತ ಪ್ರಾಯೋಗಿಕ­ದಲ್ಲಿಯೇ ವಿದ್ಯಾರ್ಥಿಗಳಿಗೆ ಮನ ಮುಟ್ಟುತ್ತದೆ. ಪಠ್ಯದ ಸ್ವರೂಪದಲ್ಲಿ ಬದ­ಲಾವಣೆಯಾ­ದರೂ ವಿಷಯ ಮತ್ತು ವಿಚಾರಗಳು ಅವೇ ಇರುತ್ತವೆ. ಕಲಿ­ಕೆಯ ವಿಧಾನಗ­ಳಲ್ಲಿ ಕೊಂಚ ಬದಲಾ­ವಣೆ ತರಬೇಕಾಗ­ಬಹುದು. ಆಯಾ ವಿಷಯಗಳಿಗೆ ತಕ್ಕಂತೆ ಹೊಸ ಪರಿಭಾಷಿಕೆಗಳನ್ನು ಕಾಲಾನುಕ್ರಮದಲ್ಲಿ ಕಂಡುಕೊಳ್ಳುವ ಅನಿವಾರ್ಯತೆ­ಯಂತೂ ಇದ್ದೇ ಇದೆ.

ಬದಲಾವಣೆ ಜಗದ ನಿಯಮ. ಶಿಕ್ಷಣದಲ್ಲಿ ಹೊಸತನ ಬರುವುದ­ರಿಂದ ಹೊಸ ವಿಚಾರಗಳನ್ನು ಕಲಿಸುವ ಮತ್ತು ಕಲಿಯುವ ಇಬ್ಬರೂ ಆಸಕ್ತಿಯಿಂದ ನೋಡುತ್ತಾರೆನ್ನುವ ಭರವಸೆ ಇದೆ. ಉಪನ್ಯಾಸಕರ ಕೊರತೆ ಸದ್ಯಕ್ಕೆ ಇರಬಹುದು. ಇದು ನೀಗಿದರೆ, ಎನ್‌ಇಪಿ ಶೇ.100 ಯಶಸ್ವಿ ಅನುಷ್ಠಾನಕ್ಕೆ ಸಹಾಯಕವಾಗುತ್ತದೆ.ಸದ್ಯಕ್ಕೆ ಹಾಗೇನು ಅನ್ನಿಸುವುದಿಲ್ಲ. ಆದರೆ ಎನ್‌ಇಪಿ ಅನುಷ್ಠಾನಗೊಂಡ ಅನಂತರ ಅದರಲ್ಲಿನ ಸಾಧಕ-ಬಾಧಕಗಳು ನೇರವಾಗಿ ಎದುರಾಗುತ್ತವೆ. ಈಗಲೇ ಡ್ರಾಪ್‌ಔಟ್‌ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎನ್‌ಇಪಿ ಉತ್ತಮ ಭವಿಷ್ಯಕ್ಕೆ ದಾರಿ­ಯಾ­ಗಲಿದೆ.
-ಡಾ| ಎಂ.ಬಿ.ಚೆಟ್ಟಿ
ಕುಲಪತಿಗಳು,ಕೃಷಿ ವಿವಿ ಧಾರವಾಡ

ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿದೆ
ಅನುಷ್ಠಾನಕ್ಕೆ ಬೇಕಾದ ಪಠ್ಯ­ಕ್ರಮ ಸಿದ್ಧವಿದೆ. ವಿದ್ಯಾ­ವಿಷಯಕ ಪರಿಷತ್‌ ಸಭೆ, ಪ್ರಾಂಶು­ಪಾಲರ ಸಭೆ ಹಮ್ಮಿಕೊಂಡಿದ್ದೇವೆ. ಕಾಲೇಜು ಹಂತದಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಸೂಚನೆ ನೀಡಿದ್ದೇವೆ. ತರಗತಿ ಆರಂ­ಭಕ್ಕೂ ಪೂರ್ವದಲ್ಲಿ ಕಾಲೇಜುಗಳಿಗೆ ಸೂಚನೆ ನೀಡಲಿದ್ದೇವೆ.

ಎನ್‌ಇಪಿ ಅನುಷ್ಠಾನದಲ್ಲಿ ಉಪನ್ಯಾಸಕರಿಗೆ ಸ್ವಲ್ಪ ಕಷ್ಟ ವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚಿದೆ. ಗೊಂದಲ ನಿವಾರಣೆಗೆ ಕಾಲೇಜುಗಳ ಹಂತದಲ್ಲಿ ಬೇಕಾದ ಎಲ್ಲ ಕ್ರಮ ಆಗಿದೆ. ಸಾರ್ವಜ ನಿಕವಾಗಿ ಚರ್ಚೆ ನಡೆದಿರುವುದರಿಂದ ಬಹುತೇಕ ಸಂಶಯಗಳು ಈಗಾಗಲೇ ಬಗೆಹರಿದಿದೆ.
ಮುಕ್ತ ಆಯ್ಕೆ, ಕೌಶಲ, ಮುಖ್ಯ ವಿಷಯ, ಮೈನರ್‌ ವಿಷಯಗಳು, ಬಹುಶಿಸ್ತೀಯ ಕೋರ್ಸ್‌ ಇತ್ಯಾದಿ ಪ್ರಥಮ ವರ್ಷಕ್ಕೆ ಒಂದೇ ರೀತಿ ಇರುತ್ತದೆ. ಮೇಜರ್‌ ಮತ್ತು ಮೈನರ್‌ ಎರಡೂ ಓದಲು ಅವಕಾಶ ಇರಲಿದೆ. ಆರಂಭದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗ­ದಂತೆ ಕ್ರಮ ತೆಗೆದು ಕೊಂಡಿದ್ದೇವೆ. ಮೂರು ವರ್ಷ ಪದವಿ ಮುಗಿಸುವ ವ್ಯವಸ್ಥೆ ಹಾಗೆ ಇರಲಿದೆ. ಈ ಮಧ್ಯೆ ಒಂದೇ ವರ್ಷದಲ್ಲಿ ಎಕ್ಸಿಟ್‌ಗೂ ಅವಕಾಶವಿದೆ. ಪದವಿ ಅನಂತರವೂ ಆನರ್ಸ್‌ ಓದಲು ಅವಕಾಶವಿದೆ.

ಉಪನ್ಯಾಸಕರ ಕೊರತೆ ಇದೆ. ಎನ್‌ಇಪಿ ಅನುಷ್ಠಾನಕ್ಕೆ ಉಪನ್ಯಾಸಕರು ಹೆಚ್ಚು ಬೇಕಾಗು­ತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಆಯ್ಕೆ ನೀಡಲು ಹೆಚ್ಚೆಚ್ಚು ಉಪನ್ಯಾಸಕರು ಬೇಕಾಗುತ್ತದೆ. ಎಲ್ಲವನ್ನೂ ಅತಿಥಿ ಉಪನ್ಯಾಸಕರಿಂದ ಮಾಡಲು ಸಾಧ್ಯವಿಲ್ಲ.

ಡ್ರಾಪ್‌ಔಟ್‌ ಕಡಿಮೆ ಆಗಲಿದೆ. ಒಂದು ವರ್ಷದ ಪದವಿ ಓದಿ ಕೆಲಸ ಸಿಕ್ಕರೆ, ಅಭ್ಯರ್ಥಿಗೆ ಅನುಕೂಲ ಹೆಚ್ಚಿದೆ. ಉದ್ಯೋಗ ಸಿಗದಿದ್ದಾಗ ಪುನಃ ಬಂದು ಪದವಿ ಮುಂದು ವರಿಸಲು ಅವಕಾಶವಿದೆ. ಓದಲು ಮತ್ತು ಉದ್ಯೋಗ ಎರಡಕ್ಕೂ ಮುಕ್ತ ಅವಕಾಶವಿದೆ.
ಆನ್‌ಲೈನ್‌ ಮೂಲಕ ಓದಲು ಅವಕಾಶ ಮಾಡಿಕೊಡಬೇಕು.
-ಪ್ರೊ.ಕೆ.ಆರ್‌.ವೇಣುಗೋಪಾಲ್‌,
ಕುಲಪತಿ, ಬೆಂಗಳೂರು ವಿವಿ

ಪಂಚ ಪ್ರಶ್ನೆಗಳು
1. ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ?
2.ಎನ್‌ಇಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು?

3. ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು?

4.ಎನ್‌ಇಪಿ ಅನುಷ್ಠಾನದ ಅನಂತರ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸ ಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ?

5.ಎನ್‌ಇಪಿಯಿಂದ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?

Advertisement

Udayavani is now on Telegram. Click here to join our channel and stay updated with the latest news.

Next