Advertisement

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

07:25 AM Sep 27, 2020 | sudhir |

ಅಬುಧಾಬಿ : ಕೋಲ್ಕತಾ ನೈಟ್‌ರೈಡರ್ ಎದುರಿನ ಶನಿವಾರದ ಐಪಿಎಲ್‌ ಮುಖಾಮುಖೀಯಲ್ಲಿ ಸನ್‌ರೈಸರ್ ಹೈದರಾಬಾದ್‌ 4 ವಿಕೆಟಿಗೆ 142 ರನ್‌ ಗಳಿಸಿದೆ. ಕೆಕೆಆರ್‌ನ ಬಿಗಿ ದಾಳಿಗೆ ಸಡ್ಡು ಹೊಡೆದು ನಿಂತ ಮನೀಷ್‌ ಪಾಂಡೆ 51 ರನ್‌ ಬಾರಿಸಿದರು.

Advertisement

ಡೇವಿಡ್‌ ವಾರ್ನರ್‌ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಜಾನಿ ಬೇರ್‌ಸ್ಟೊ ಐದೇ ರನ್ನಿಗೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಆಘಾತವಿಕ್ಕಿತು. ಅವರನ್ನು ಬೌಲ್ಡ್‌ ಮಾಡುವ ಮೂಲಕ ಪ್ಯಾಟ್‌ ಕಮಿನ್ಸ್‌ ಕಳೆದ ಪಂದ್ಯದ ವೈಫ‌ಲ್ಯವನ್ನು ಬದಿಗೊತ್ತಿದರು. ಅವರು ಮೊದಲ ಸ್ಪೆಲ್‌ನ 3 ಓವರ್‌ಗಳಲ್ಲಿ ನೀಡಿದ್ದು ಬರೀ 11 ರನ್‌. ಮೊದಲ ವಿಕೆಟ್‌ ಪತನದ ವೇಳೆ ಹೈದರಾಬಾದ್‌ 4 ಓವರ್‌ಗಳಿಂದ 24 ರನ್‌ ಮಾಡಿತ್ತು. ಪವರ್‌ ಪ್ಲೇ ಸ್ಕೋರ್‌ ಒಂದಕ್ಕೆ 40 ರನ್‌.

ಇನ್ನೊಂದು ಬದಿಯಲ್ಲಿ ನಾಯಕ ವಾರ್ನರ್‌ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರೂ ಅವರಿಗೆ ಲೆಗ್‌ಬ್ರೇಕ್‌ ಬೌಲರ್‌ ವರುಣ್‌ ಚಕ್ರವರ್ತಿ ಎಸೆತವೊಂದು ವಂಚಿಸಿತು. 36 ರನ್‌ ಮಾಡಿದ ವಾರ್ನರ್‌ ಕಾಟ್‌ ಆ್ಯಂಡ್‌ ಬೌಲ್ಟ್ ಆಗಿ ವಾಪಸಾದರು. 30 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ವಾರ್ನರ್‌-ಪಾಂಡೆ ದ್ವಿತೀಯ ವಿಕೆಟಿಗೆ 35 ರನ್‌ ಒಟ್ಟುಗೂಡಿಸಿದರು.

ನಿಧಾನ ಗತಿಯ ಟ್ರ್ಯಾಕ್‌ ಆದ ಕಾರಣ ಮುನ್ನುಗ್ಗಿ ಬಾರಿಸುವುದು ಭಾರೀ ಸವಾಲಾಗಿತ್ತು. ಕಮಲೇಶ್‌ ನಾಗರಕೋಟಿ ಅವರಂತೂ 140 ಕಿ.ಮೀ.ಗೆ ಕಡಿಮೆ ಇಲ್ಲದಂತೆ ಎಸೆತಗಳನ್ನಿಕ್ಕುತ್ತಿದ್ದರು. ಹಾಗೆಯೇ 6 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಸುಲಭವಾಗಿರಲಿಲ್ಲ. ಬರೀ ಒಂಟಿ-ಅವಳಿ ರನ್ನುಗಳೇ ಬರುತ್ತಿದ್ದವು. ಅರ್ಧ ಹಾದಿ ಕ್ರಮಿಸುವ ವೇಳೆ ಹೈದರಾಬಾದ್‌ ಕೇವಲ 61 ರನ್‌ ಮಾಡಿತ್ತು.

ವನ್‌ಡೌನ್‌ನಲ್ಲಿ ಬಂದ ಮನೀಷ್‌ ಪಾಂಡೆ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸುತ್ತಿದ್ದರು. ಆರಂಭದಲ್ಲಿ 2 ಸಿಕ್ಸರ್‌ ಎತ್ತಿ ಈ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡರು. 35 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ರಸೆಲ್‌ಗೆ ರಿಟರ್ನ್ ಕ್ಯಾಚ್‌ ನೀಡಿದ ಪಾಂಡೆ 38 ಎಸೆತಗಳಿಂದ 51 ರನ್‌ ಮಾಡಿ ತಂಡದ ಟಾಪ್‌ ಸ್ಕೋರರ್‌ ಎನಿಸಿದರು. ಇದರಲ್ಲಿ 3 ಫೋರ್‌, 2 ಸಿಕ್ಸರ್‌ ಸೇರಿತ್ತು.

Advertisement

ಇನ್ನೊಂದು ತುದಿಯಲ್ಲಿದ್ದ ವೃದ್ಧಿಮಾನ್‌ ಸಾಹಾ ಮಾತ್ರ ಚಡಪಡಿಸುತ್ತಲೇ ಉಳಿದರು. ಅವರು 30 ರನ್ನಿಗೆ 31 ಎಸೆತ ತೆಗೆದುಕೊಂಡರು (1 ಬೌಂಡರಿ, 1 ಸಿಕ್ಸರ್‌). ಪಾಂಡೆ-ಸಾಹಾ ಜೋಡಿಯಿಂದ 3ನೇ ವಿಕೆಟಿಗೆ 51 ಎಸೆತಗಳಿಂದ 62 ರನ್‌ ಒಟ್ಟುಗೂಡಿತು.

ಒಟ್ಟು 5 ಬದಲಾವಣೆ
ಈ ಪಂದ್ಯಕ್ಕಾಗಿ ಎರಡು ತಂಡಗಳಲ್ಲಿ ಒಟ್ಟು 5 ಬದಲಾವಣೆ ಕಂಡುಬಂತು. ಹೈದರಾಬಾದ್‌ ತಂಡದಲ್ಲಿ 3 ಪರಿವರ್ತನೆ ಸಂಭವಿಸಿತು. ಗಾಯಾಳಾಗಿ ಹೊರಬಿದ್ದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಸ್ಥಾನಕ್ಕೆ ಅಫ್ಘಾನಿಸ್ಥಾನದ ಸ್ಪಿನ್ನರ್‌ ಮೊಹಮ್ಮದ್‌ ನಬಿ ಬಂದರು. ವಿಜಯ್‌ ಶಂಕರ್‌ ಬದಲು ವೃದ್ಧಿಮಾನ್‌ ಸಾಹಾ ಹಾಗೂ ಗಾಯಾಳು ಸಂದೀಪ್‌ ಶರ್ಮ ಬದಲು ಖಲೀಲ್‌ ಅಹ್ಮದ್‌ ಸ್ಥಾನ ಪಡೆದರು.

ಕೆಕೆಆರ್‌ ತಂಡದಲ್ಲಿ ಕಮಲೇಶ್‌ ನಾಗರಕೋಟಿ ಮತ್ತು ವರುಣ್‌ ಚಕ್ರವರ್ತಿ ಆಡಲಿಳಿದರು. ಇವರಿಗಾಗಿ ಜಾಗ ಖಾಲಿ ಮಾಡಿದವರು ಸಂದೀಪ್‌ ವಾರಿಯರ್‌ ಮತ್ತು ನಿಖೀಲ್‌ ನಾೖಕ್‌.

Advertisement

Udayavani is now on Telegram. Click here to join our channel and stay updated with the latest news.

Next