Advertisement

ಹೊಸಬರ ಹಿಂದೆ ಹೊರಟ ಕಿರಣ್‌

10:18 AM Apr 12, 2019 | Lakshmi GovindaRaju |

ನಿರ್ದೇಶಕ ಕಿರಣ್‌ ಗೋವಿ “ಯಾರಿಗೆ ಯಾರುಂಟು’ ಚಿತ್ರದ ನಂತರ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇತ್ತೀಚೆಗೆ ತೆರೆಕಂಡ ಅವರ “ಯಾರಿಗೆ ಯಾರುಂಟು’ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಅದೇ ಖುಷಿಯಲ್ಲಿರುವ ಕಿರಣ್‌ಗೋವಿ ಈಗ ಸಂಪೂರ್ಣ ಹೊಸ ಪ್ರತಿಭೆಗಳ ಹಿಂದೆ ಹೊರಟಿದ್ದಾರೆ.

Advertisement

ಹೌದು, ಈ ಬಾರಿ ಕಿರಣ್‌ಗೋವಿ ಹೊಸ ತಂಡದ ಜೊತೆಗೊಂದು ಹೊಸತರಹದ ಚಿತ್ರ ಕೊಡಲು ಅಣಿಯಾಗುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಪಕ್ಕಾ ಸ್ವಮೇಕ್‌ ಕಥೆ ಹೆಣೆದಿರುವ ಕಿರಣ್‌ಗೋವಿ, ಮೂವರು ಹೊಸ ಹೀರೋಗಳ ಜೊತೆಗೆ ಒಬ್ಬಳೇ ಹೊಸ ನಾಯಕಿಯನ್ನು ಇಟ್ಟುಕೊಂಡು ಚಿತ್ರ ಮಾಡಲು ಹೊರಟಿದ್ದಾರೆ.

ಸದ್ಯಕ್ಕೆ ಮೂವರು ಹೀರೋಗಳ ಆಯ್ಕೆ ಪ್ರಕ್ರಿಯೆಯಲ್ಲಿರುವ ಕಿರಣ್‌ಗೋವಿ, ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಕೊಡಲು ಉತ್ಸಾಹದಲ್ಲಿದ್ದಾರೆ. ಈ ಬಾರಿಯೂ ಸಹ ಹೊಸ ಆಯಾಮದೊಂದಿಗೆ ಕಥೆ ಕಟ್ಟಿಕೊಡುವ ಪ್ರಯತ್ನ ಅವರದು.

ಕಿರಣ್‌ಗೋವಿ ಅವರ ಹಿಂದಿನ ಎಲ್ಲಾ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದರೆ, ಅಲ್ಲಿ ಸಂಗೀತ ಮತ್ತು ಹಾಡುಗಳಿಗೆ ಪ್ರಾಧಾನ್ಯತೆ ಇರುತ್ತಿತ್ತು. ಅದು ಈ ಚಿತ್ರದಲ್ಲೂ ಮುಂದುವರೆಯಲಿದೆ ಎಂಬುದು ಕಿರಣ್‌ಗೋವಿ ಅವರ ಮಾತು.

ಇನ್ನು, ಇದು ಕನ್ನಡ ಮಾತ್ರವಲ್ಲ, ತೆಲುಗು ಹಾಗು ತಮಿಳು ಭಾಷೆಯಲ್ಲೂ ಸಿದ್ಧಗೊಳ್ಳುತ್ತದೆ ಎಂದು ವಿವರ ಕೊಡುವ ಕಿರಣ್‌ಗೋವಿ, ತನ್ನ ಗೆಳೆಯರ ಜೊತೆ ಸೇರಿ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಈಗ ಹೊಸಬರ ಚಿತ್ರಗಳು ಅದರಲ್ಲೂ ಕಂಟೆಂಟ್‌ ಇರುವ ಸಿನಿಮಾಗಳನ್ನು ಜನರು ಇಷ್ಟಪಡುತ್ತಿದ್ದಾರೆ.

Advertisement

ಆ ಸಾಲಿಗೆ ಸೇರುವಂತಹ ಚಿತ್ರ ಕೊಡುವ ನಿಟ್ಟಿನಲ್ಲಿ ಹೊಸದೊಂದು ಕಥೆ ಮಾಡಿ ಚಿತ್ರ ಮಾಡಲು ಹೊರಟಿರುವ ಅವರ ಕಥೆ ಹಾಗು ಹೊಸ ಯೋಚನೆ ಮೆಚ್ಚಿಕೊಂಡ ಗೆಳೆಯರು ನಿರ್ಮಾಣಕ್ಕೆ ಸಾಥ್‌ ಕೊಡುತ್ತಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಇಷ್ಟರಲ್ಲೇ ಪೂಜೆ ನೆರವೇರಲಿದ್ದು, ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸುವುದಾಗಿ ಹೇಳುತ್ತಾರೆ ಕಿರಣ್‌ಗೋವಿ.

Advertisement

Udayavani is now on Telegram. Click here to join our channel and stay updated with the latest news.

Next