Advertisement

ತೀವ್ರ ಆರ್ಥಿಕ ಬಿಕ್ಕಟ್ಟು: ಸಾಲದ ಕೂಪದಲ್ಲಿ ಕೇರಳರಾಜ್ಯ ರಸ್ತೆ ಸಾರಿಗೆ

08:23 PM Feb 09, 2018 | Team Udayavani |

ಕಾಸರಗೋಡು: ಕೇರಳ ರಾಜ್ಯ ರಸ್ತೆ  ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಪ್ರತಿ ಬಸ್‌ ತಲಾ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಸಾಲದ ಹೊರೆ ಹೊತ್ತಿದೆೆ. ಕಳೆದ ಅನೇಕ ವರ್ಷಗಳಿಂದ ಕೇರಳ ಸರಕಾರಿ ಬಸ್‌ಗಳ ಲಾಭಾಂಶ ಕಡಿಮೆಯಾಗುತ್ತಿದ್ದು, ವೆಚ್ಚದ ಪ್ರಮಾಣ ಅಧಿಕವಾಗುತ್ತಿದೆ. ಆದ್ದರಿಂದ ಸಾಲದ ಮೊತ್ತ  ಹೆಚ್ಚುತ್ತಾ ಹೋಗುತ್ತಿದೆ. ಕೇರಳ ಎಸ್‌ಆರ್‌ಟಿಸಿ ವಿಭಾಗವು ಒಟ್ಟು ಆರು ಸಾವಿರ ಬಸ್‌ಗಳನ್ನು ಹೊಂದಿದ್ದು, ಆ ಪೈಕಿ ಐದು ಸಾವಿರ ಬಸ್‌ಗಳು ಇದೀಗ ದಿನಂಪ್ರತಿ ಸರ್ವೀಸ್‌ ನಡೆಸುತ್ತಿವೆ. ಇದನ್ನೆಲ್ಲ ಅವಲೋಕಿಸುವಾಗ ಕೆಎಸ್‌ಆರ್‌ಟಿಸಿ ಸದ್ಯ 5,079.59 ಕೋಟಿ ರೂ.ಗಳ ಸಾಲ ಹೊಂದಿದೆ. ಅಂದರೆ ಪ್ರತಿ ಬಸ್‌ ತಲಾ ಒಂದು ಕೋಟಿ ರೂ. ಗಿಂತಲೂ ಹೆಚ್ಚು ಸಾಲದ ಹೊರೆಯಲ್ಲಿ ಸಿಲುಕಿಕೊಂಡಿದೆ. ಇದು ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕೃತ ಲೆಕ್ಕಾಚಾರವಾಗಿದೆ.

Advertisement

ಆದಾಯ ಮತ್ತು  ಖರ್ಚುಗಳ ನಡುವಿನ ಅಂತರ ಹೆಚ್ಚಾಗಿರುವುದೇ ಕೆಎಸ್‌ಆರ್‌ಟಿಸಿ ನಷ್ಟದ ಕೂಪದಲ್ಲಿ  ಬೀಳಲು ಪ್ರಧಾನ ಕಾರಣವಾಗಿದೆ. ಕೆಎಸ್‌ಆರ್‌ಟಿಸಿ ವಿಭಾಗದ ಅಂಕಿ ಅಂಶಗಳನ್ನು ಲೆಕ್ಕಹಾಕಿದಾಗ ಈ ವಲಯವು ಹೊಂದಿರುವ ಸಾಲದ ಹೊರೆಯಿಂದ ಸದ್ಯ ಹೊರಬರಲು ಸಾಧ್ಯವೇ ಇಲ್ಲ  ಎಂಬುದು ಸಾಬೀತಾಗುತ್ತಿದೆ. ಕೆಎಸ್‌ಆರ್‌ಟಿಸಿ ಬ್ಯಾಂಕ್‌ಗಳ ಒಕ್ಕೂಟ 1,246.40 ಕೋಟಿ ರೂ., ಪಾಲ್ಗಾಟ್‌ ಜಿಲ್ಲಾ  ಸಹಕಾರಿ ಬ್ಯಾಂಕ್‌ 372.57 ಕೋಟಿ ರೂ., ಹುಡ್ಕೋ 255.36 ಕೋಟಿ ರೂ., ಕೆಡಿಡಿಎಫ್‌ಸಿ 885.38 ಕೋಟಿ ರೂ. ಸಾಲ ನೀಡಿದೆ.

ಕೆಎಸ್‌ಆರ್‌ಟಿಸಿಯ ತಿಂಗಳ ಆದಾಯ 165 ಕೋಟಿ ರೂ. ಆಗಿದ್ದರೆ, ವೆಚ್ಚ 354 ಕೋಟಿ ರೂ. (ಅಂದರೆ ಆದಾಯಕ್ಕಿಂತ ಇಮ್ಮಡಿ ವೆಚ್ಚ) ಆಗಿದೆ. ವೇತನಕ್ಕಾಗಿ 84.5 ಕೋಟಿ ರೂ., ಪಿಂಚಣಿಗಾಗಿ 60 ಕೋಟಿ ರೂ., ಡೀಸೆಲ್‌ಗೆ 90 ಕೋಟಿ ರೂ. ಮತ್ತಿತರ ಖರ್ಚುಗಳಿಗಾಗಿ ಪ್ರತಿ ತಿಂಗಳು ತಲಾ 120.50 ಕೋಟಿ ರೂ. ಮೀಸಲಿರಿಸಬೇಕಾಗಿದೆ. ಡೀಸೆಲ್‌ ಖರೀದಿಸಿದ ವತಿಯಿಂದ ತೈಲ ಸಂಸ್ಥೆಗಳಿಗೆ 128 ಕೋಟಿ ರೂ. ಮತ್ತು ಬಿಡಿಭಾಗಗಳು ಖರೀದಿಸಿದ ವತಿಯಿಂದ 25 ಕೋಟಿ ರೂ. ನೀಡಲು ಬಾಕಿಯಿದೆ. ಇದನ್ನೆಲ್ಲಾ  ಅವಲೋಕಿಸಿದಾಗ ಕೇರಳ ಕೆಎಸ್‌ಆರ್‌ಟಿಸಿ ಸಂಸ್ಥೆಯ ಉಳಿವು ಯಕ್ಷಪ್ರಶ್ನೆಯಾಗಿಯೇ ಮುಂದುವರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next