Advertisement

ನೀರಿನ ಸಮಸ್ಯೆ ಬಾರದಂತೆ ಕಟ್ಟೆಚ್ಚರವಹಿಸಿ

09:18 PM Apr 28, 2019 | Team Udayavani |

ಹುಣಸೂರು: ನಗರ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಶಾಸಕ ಎಚ್‌.ವಿಶ್ವನಾಥ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೂರು ತರಬೇಡಿ: ತಾಲೂಕಿನ ಕೆಲವೆಡೆ ಅಂತರ್ಜಲ ಮಟ್ಟ ಕುಸಿದಿದ್ದರೆ, ಹನಗೋಡು ಹೋಬಳಿಯಲ್ಲಿ ಮಳೆ-ಬಿರುಗಾಳಿಯಿಂದ ವಿದ್ಯುತ್‌ ಕಂಬಗಳು ನೆಲಕ್ಕುರುಳಿರುವ ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡ್ಡಿಯುಂಟಾಗಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯವಿರುವೆಡೆಗಳಲ್ಲಿ ಟ್ಯಾಂಕರ್‌ ಮೂಲಕ ಸರಬರಾಜು ಮಾಡಬೇಕು. ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.

ತರಾಟೆ: ಹುಣಸೂರು ನಗರದಲ್ಲಿ ವರ್ಷದ ಹಿಂದೆಯೇ ಸ್ಥಾಪಿತಗೊಂಡ 7 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ 40 ಲಕ್ಷ ರೂ.ವೆಚ್ಚದಲ್ಲಿ ಬೋರ್‌ವೆಲ್‌ ಕೊರೆಯಿಸಿ ಘಟಕಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು. ಬೋರ್‌ವೆಲ್‌ಗ‌ಳನ್ನು ಕೊರೆಯಿಸಲಾಗಿದೆ. ಆದರೆ 6 ತಿಂಗಳುಗಳೇ ಕಳೆದಿದ್ದರೂ ಈ ಬೋರ್‌ವೆಲ್‌ಗ‌ಳಿಗೆ ವಿದ್ಯುತ್‌ ಸಂಪರ್ಕ ನೀಡಿಲ್ಲ, ಯಾವ ಸೀಮೆ ಕೆಲಸ ಮಾಡುತ್ತೀರಾ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.

ನಿರ್ಲಕ್ಷ್ಯ ಏಕೆ?: ನಗರದ ಹಲವೆಡೆ ಕುಡಿಯುವ ನೀರಿಗೆ ಕೊರತೆಯಿರುವ ಈ ವೇಳೆಯಲ್ಲಿ ಸಂಪರ್ಕ ನೀಡಿದ್ದರೆ ಉಪಯೋಗವಾಗುತ್ತಿತ್ತು. ಏಕೆ ಇಷ್ಟೊಂದು ಬೇಜವಾಬ್ದಾರಿ ಎಂದು ನಗರಸಭೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ತಕ್ಷಣವೇ ಬೋರ್‌ವೆಲ್‌ ಸಂಪರ್ಕ ಕಲ್ಪಿಸುವತ್ತ ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತೆ ವಾಣಿ.ವಿ.ಆಳ್ವಾರಿಗೆ ಸೂಚನೆ ನೀಡಿದರು.

ಸಂಘ ಸಂಸ್ಥೆಗಳ ಸಹಕಾರವಿರಲಿ: ಹೋಬಳಿಯಾದ್ಯಂತ ಘಟಿಸಿದ ಅನಾಹುತದಲ್ಲಿ 500ಕ್ಕೂ ಹೆಚ್ಚು ಮನೆಗಳ ಹೆಂಚುಗಳು, ಕಲಾ°ರ ಶೀಟ್‌ಗಳು ಗಾಳಿಗೆ ತೂರಿಹೋಗಿ ಪುಡಿಪುಡಿಯಾಗಿ ಬಿದ್ದಿವೆ. ಈ ಎಲ್ಲಾ ಮನೆಗಳಿಗೂ ಹೊಸದಾಗಿ ಹೆಂಚುಗಳು, ಕಲಾರ್‌ ಶೀಟ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಸರ್ಕಾರೇತರ ಸೇವಾ ಸಂಘ ಸಂಸ್ಥೆಗಳನ್ನು ಕೋರಲಾಗುವುದು. ಬಡಕುಟುಂಬಗಳಿಗೆ ಸಹಕಾರ ನೀಡಲು ಎಲ್ಲರೂ ಮುಂದೆ ಬರಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಹಾನಿಗೊಳಗಾದ ಪ್ರಮಾಣದ ಸರ್ವೆ: ಬಿರುಗಾಳಿಯಿಂದ ಹಾನಿಗೊಳಗಾಗಿರುವ ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ ನೇತೃತ್ವದಲ್ಲಿ ಹಾನಿ ಸರ್ವೆ ಕಾರ್ಯ ಚುರುಕಾಗಿ ನಡೆದಿದ್ದು, ವರದಿ ಸಿಕ್ಕ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗವುದು. ನೆಲಕ್ಕುರುಳಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಸಂಪೂರ್ಣಗೊಂಡಿದೆ ಎಂದು ತಹಸೀಲ್ದಾರ್‌ ಐ.ಇ.ಬಸವರಾಜು ತಿಳಿಸಿದರು.

ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್‌.ವೈ.ಮಹದೇವ್‌, ನಗರಸಭೆ ಪೌರಾಯುಕ್ತೆ ವೀಣಾ ಆಳ್ವ, ಸೆಸ್ಕ್ ಎಇಇ ಸಿದ್ದಯ್ಯ, ಜಿಪಂ ಕುಡಿಯುವ ನೀರು ಯೋಜನೆಯ ಎಂಜಿನಿಯರ್‌, ನಗರಸಭೆಯ ಕುಡಿಯುವ ನೀರು ನಿರ್ವಹಣಾ ಉಸ್ತುವಾರಿ ಎಂಜಿನಿಯರ್‌ ಅನುಪಮ, ಪರಿಸರ ಎಂಜಿನಿಯರ್‌ ರೂಪಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನೀರಿನ ಸಮಸ್ಯೆಯಿದ್ದರೆ ಕರೆ ಮಾಡಿ: ಹುಣಸೂರು ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಜಲಸೇವಾ ನಿಯಂತ್ರಣ ಕೊಠಡಿ ಸ್ಥಾಪನೆಗೊಂಡಿದ್ದು, ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ 08222-252028ಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದಲ್ಲಿ ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next