Advertisement

ಕೆ.ಸಿ.ವ್ಯಾಲಿ ನೀರು ಅಂತರ್ಜಲ ವೃದ್ಧಿಗಷ್ಟೇ

08:59 PM Jun 01, 2019 | Team Udayavani |

ಕೋಲಾರ: ಕೆ.ಸಿ.ವ್ಯಾಲಿಯ ಸಂಸ್ಕರಿಸಿದ ನೀರು ಅಂತರ್ಜಲ ಮಟ್ಟ ವೃದ್ಧಿಸಲು ಮಾತ್ರ ಉದ್ದೇಶಿಸಿದ್ದು, ನೇರವಾಗಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಸುಪ್ರೀಂ ಕೋಟ್‌ ಸೂಚನೆ ನೀಡಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಎಚ್ಚರಿಸಿದರು.

Advertisement

ಜಿಲ್ಲೆಯ ವಿಶ್ವನಗರ, ಪಜೇìನಹಳ್ಳಿ ಹಾಗೂ ಹೊಲೇರಹಳ್ಳಿಗಳಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ಹಾಗೂ ಕೆ.ಸಿ.ವ್ಯಾಲಿ ನೀರಿನ ಹರಿವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದರು.

ಜಾಗೃತ ದಳ ರಚನೆ: ಕೆ.ಸಿ.ವ್ಯಾಲಿ ನೀರನ್ನು ಅನ್ಯಉದ್ದೇಶಗಳಿಗೆ ಬಳಸದಂತೆ ಮುಂಜಾಗ್ರತೆ ವಹಿಸಲು ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಪಂ ಸೇರಿದಂತೆ ಅಧಿಕಾರಿಗಳ ಜಾಗೃತ ದಳ ರಚಿಸಲಾಗುವುದು. ನರಸಾಪುರ ಗ್ರಾಮದಿಂದ ಕೊಳಚೆ ನೀರು ಕೆರೆಗೆ ಸೇರುತ್ತಿದ್ದು, ಇದರಿಂದ ನೀರು ಕಲುಷಿತವಾಗುತ್ತಿದೆ. ಇದರ ಪ್ರಭಾವ ಕೆ.ಸಿ.ವ್ಯಾಲಿಯ ನೀರಿನ ಗುಣಮಟ್ಟ ಸರಿಯಿಲ್ಲ ಎಂದು ತಪ್ಪು ಮಾಹಿತಿ ಹಬ್ಬಿಸಲಾಗುತ್ತಿದೆ. ಕೂಡಲೇ ನರಸಾಪುರ ಗ್ರಾಪಂ ಕೆರೆ ಹೊರವಲಯದಲ್ಲಿ ಕಾಲುವೆ ನಿರ್ಮಿಸಿ ಕೊಳಚೆ ನೀರನ್ನು ಬೇರೆ ಕಡೆ ಹರಿಸುವಂತೆ ಪಿಡಿಒಗೆ ಸೂಚಿಸಿದರು.

ಹಂತ ಹಂತವಾಗಿ ಹೆಚ್ಚಳ: ಕೆ.ಸಿ.ವ್ಯಾಲಿ ನೀರು ಪ್ರಾರಂಭದಲ್ಲಿ ಜಿಲ್ಲೆಗೆ ಹರಿಯುವಾಗ ಪ್ರತಿದಿನ 100 ಎಂ.ಎಲ್‌.ಡಿ ಹರಿಸಲಾಗುತ್ತಿತ್ತು. ಪ್ರಸ್ತುತ 250 ಎಂ.ಎಲ್‌.ಡಿ ಹರಿಸುತ್ತಿದ್ದು, ಇದನ್ನು ಜೂ.10ರ ವೇಳೆಗೆ 290 ಎಂಎಲ್‌ಡಿ ಹಾಗೂ ಜೂನ್‌ ಅಂತ್ಯಕ್ಕೆ 330 ಎಂಎಲ್‌ಡಿ ಅಷ್ಟು ಹೆಚ್ಚು ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಎರಡನೇ ಹಂತದ ಕಾಮಗಾರಿ: ಕೆ.ಸಿ. ವ್ಯಾಲಿಯ ಮೊದಲನೆ ಹಂತದ ಕಾಮಗಾರಿಯಲ್ಲಿ 136 ಕೆರೆಗಳನ್ನು ಡಿಸೆಂಬರ್‌ ಅಂತ್ಯದ ವೇಳೆಗೆ ತುಂಬಿಸಲಾಗುವುದು. ಇದಲ್ಲದೆ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 450 ಕೋಟಿ ರೂ. ವೆಚ್ಚದಲ್ಲಿ 230 ಕೆರೆಗಳಿಗೆ ನೀರನ್ನು ಪಂಪ್‌ ಮಾಡುವ ಮೂಲಕ ತುಂಬಿಸಲಾಗುವುದು. ಈ ಸಂಬಂಧ ಸಿಎಂ ಅನುಮೋದನೆ ನೀಡಿದ್ದು, ಟೆಂಡರ್‌ ಕರೆಯಲಾಗಿದೆ ಎಂದರು.

Advertisement

ಮೀನುಗಾರಿಕೆಗೆ ಉತ್ತೇಜನ: ಕೆ.ಸಿ.ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬಲಿದ್ದು, ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗೆ ಮೀನುಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಗ್ರಾಪಂನಿಂದ ಮೀನು ಮರಿಗಳನ್ನು ಬಿಟ್ಟು ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಪ್ರತಿ ಕೆರೆಯಿಂದ ಕನಿಷ್ಠ 10 ಕುಟುಂಬಗಳು ಜೀವನ ನಿರ್ವಹಣೆ ಮಾಡಬಹುದಲ್ಲದೆ, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಕೆರೆಯಲ್ಲಿ ಮೀನುಗಳು ಇರುವುದರಿಂದ ನೀರು ಸಹ ಶುದ್ಧವಾಗಿಯೂ ಇರುತ್ತದೆ ಎಂದು ತಿಳಿಸಿದರು.

ಪಾರ್ಕ್‌ಗಳ ನಿರ್ಮಾಣ: ನರಸಾಪುರ ಮತ್ತು ಕೋಲಾರದ ಅಮಾನಿಕೆರೆ ಸುತ್ತ ವಾಕಿಂಗ್‌ ಪಾತ್‌ ನಿರ್ಮಾಣ ಮಾಡಲಾಗುವುದು. ಇದರಿಂದ ಇವು ಪ್ರೇಕ್ಷಣೀಯ ಸ್ಥಳಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪಾರ್ಕ್‌ಗಳಲ್ಲಿ ಸಿಎಸ್‌ಆರ್‌ ಅನುದಾನ ಅಥವಾ ನರೇಗಾ ಯೋಜನೆಯಲ್ಲಿ ನಿರ್ಮಿಸುವಂತೆ ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿಗೆ 3.27 ಕೋಟಿ ರೂ.: ಜಿಲ್ಲೆಯಲ್ಲಿ ಮಳೆಯಿಂದ 1800 ರೈತರ ತೋಟಗಾರಿಕೆ ಬೆಳೆಗಳು ಹಾನಿಯುಂಟಾಗಿದ್ದು, ಈ ಸಂಬಂಧ ಪರಿಹಾರ ವಿತರಿಸಲು ಈಗಾಗಲೇ 3.27 ಕೋಟಿ ರೂ. ಬಿಡುಗಡೆಯಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ ಬಿಡುಗಡೆ ಮಾಡಿದ್ದು, ವಾರದೊಳಗೆ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಮೇವು ವಿತರಣೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗಾಳಿ ಮತ್ತು ಮಿಂಚು ಜಾಸ್ತಿಯಿದೆ. ಏ.18 ರಿಂದ ಏ.24 ರವರೆಗೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು, ಟ್ಯಾಂಕರ್‌ ಸೇವೆಯ ಬಿಲ್ಲುಗಳನ್ನು ಮೇ 15 ರವರೆಗೆ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಒಣಮೇವನ್ನು ತರಿಸಿ ಹೊಗಳಗೆರೆಯಲ್ಲಿ ಶೇಖರಿಸಿ ಈಗಾಗಲೇ ರೈತರಿಗೆ ವಿತರಣೆ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಜಿ.ಜಗದೀಶ್‌ ಮಾತನಾಡಿ, ಜಿಲ್ಲೆಯಲ್ಲಿ ಈ ಆರ್ಥಿಕ ವರ್ಷದ ಅಂತ್ಯಕ್ಕೆ 1400 ಚೆಕ್‌ ಡ್ಯಾಂ ನಿರ್ಮಿಸುವ ಗುರಿಹೊಂದಿದ್ದು, ಈಗಾಗಲೇ 300 ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಪ್ರತಿ 1 ಕಿ.ಮೀ. ವ್ಯಾಪ್ತಿಗೆ 1 ಚೆಕ್‌ಡ್ಯಾಂ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವುದಲ್ಲದೆ ಬರಗಾಲದಲ್ಲಿ ನೀರು ಬಳಕೆಗೆ ಲಭ್ಯವಾಗುತ್ತದೆ ಎಂದರು.

ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿದ್ದು, 40 ಹೆಕ್ಟೇರಿಗಿಂತ ಹೆಚ್ಚಿನ ವಿಸ್ತೀರ್ಣವಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ, ಅದಕ್ಕಿಂತ ಕಡಿಮೆ ವಿಸ್ತೀರ್ಣವಿರುವ ಕೆರೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಬರುತ್ತವೆ. ಬೇತಮಂಗಲ ಮತ್ತು ಮಾರ್ಕಂಡೇಯ ಡ್ಯಾಂಬಳಿ ಮೀನುಮರಿ ಸಾಕಾಣಿಕೆ ಕೇಂದ್ರಗಳಿದ್ದು, ಈ 2 ಕೇಂದ್ರಗಳಿಂದ ಮೀನುಮರಿ ಉತ್ಪಾದಿಸಿ ಟೆಂಡರ್‌ ಮೂಲಕ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ಹರಾಜು ಮೂಲಕ ಟೆಂಡರ್‌ ನೀಡಲಾಗುವುದು. ಗ್ರಾಮ ಪಂಚಾಯತ್‌ಗಳೇ ಕೆರೆಗಳ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರೇ ಅವುಗಳ ಉಸ್ತುವಾರಿ ನೋಡಿಕೊಳ್ಳುವರು ಎಂದು ತಿಳಿಸಿದರು. ಎಸ್ಪಿ ಡಾ.ರೋಹಿಣಿ ಕಟೋಚ್‌ ಸಫೆಟ್‌, ಎಸಿ ಸೋಮಶೇಖರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಸಂಸದೀಯ ನಾಯಕಿ ಸೋನಿಯಾಗೆ ಕೆಎಚ್‌ ಅಭಿನಂದನೆ
ಕೋಲಾರ: ಪಕ್ಷದ ಲೋಕಸಭಾ ನಾಯಕಿಯಾಗಿ ನೇಮಕಗೊಂಡ ಸೋನಿಯಾ ಗಾಂಧಿ ಅವರನ್ನು ಮಾಜಿ ಸಂಸದ, ಸಿ.ಡಬ್ಲೂಸಿ ಸದಸ್ಯ ಹಾಗೂ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತ ಡಾ.ಕೆ.ಎಚ್‌.ಮುನಿಯಪ್ಪ ಯುವ ಕಾಂಗ್ರೆಸ್‌ ಮುಖಂಡರ ಜೊತೆಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.

ಕಾಂಗ್ರೆಸ್‌ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ತಾವು ಲೋಕಸಭಾ ನಾಯಕಿಯಾಗಿ ಆಯ್ಕೆಯಾಗಿರುವುದು ತುಂಬಾ ಸೂಕ್ತವಾಗಿದೆ. ನಾಯಕರು ಹಾಗೂ ಕಾರ್ಯಕರ್ತರಿಗೆ ನವ ಚೈತನ್ಯ ತುಂಬಿದಂತಾಗಿದೆ. ಬಿಜೆಪಿ ಜನ ವಿರೋಧಿ ನೀತಿ ವಿರುದ್ಧ ದಿಟ್ಟತನದಿಂದ ಲೋಕಸಭೆಯಲ್ಲಿ ಒಳಗೆ ಮತ್ತು ಹೊರಗೆ ಹೋರಾಟ ಮಾಡುವಾಗ ತಮ್ಮ ಜೊತೆಯಲ್ಲಿ ಸದಾ ಇರುತ್ತೇವೆ. ದಲಿತರಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ, ಬಡವರಿಗೆ ಅನ್ಯಾಯವಾದಾಗ ಪಕ್ಷ ನಾಯಕರು ತಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಭರವಸೆ ನೀಡಿದರು.

2004, 2009, ಕಾಂಗ್ರೆಸ್‌ ಪಕ್ಷ ತಮ್ಮ ನಾಯಕತ್ವದಲ್ಲಿ ಪಕ್ಷ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಿದೆ. ರೈತರ ಮತ್ತು ಬಡವರ ಕಷ್ಟಗಳಿಗೆ ಮತ್ತು ರೈತರ ಸಾಲಮನ್ನಾ ಮಾಡಿ ಸುಧಾರಣೆ ಮಾಡಿದೆ. ಒಳ್ಳೆಯ ಆಡಳಿತವನ್ನು ಕೊಟ್ಟಿದ್ದೀರಿ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕರಾಗಿ ಬಿಜೆಪಿ ಜನವಿರೋಧಿ ಕಾರ್ಯಕ್ರಮಗಳಿಗೆ ದಿಟ್ಟತನದಿಂದ ಹೋರಾಟ ಮಾಡಿ ಮತ್ತೆ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಲು ಪಕ್ಷವನ್ನು ಬೆಳೆಸಲು ತಾವು ಜವಾಬ್ದಾರಿ ತೆಗೆದುಕೊಂಡಿದ್ದೀರಿ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರನ್ನು ಮನವೊಲಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಲು ತಾವು ಸಹಕರಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು. ತಾವು ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಯಶಸ್ವಿಯಾಗುತ್ತೀರಿ, ನಿಮ್ಮ ಕುಟುಂಬಕ್ಕೆ ಮಾತ್ರ ಈ ಕೆಲಸ ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ಬರುವುದು ಖಚಿತ. ನಾವುಗಳು ತಮ್ಮ ಜೊತೆಯಲ್ಲಿಯೇ ಇರುತ್ತೇವೆ. ದೇಶದ ಸಾಮಾಜಿಕ ನ್ಯಾಯಕ್ಕೆ, ಸಂವಿಧಾನಕ್ಕೆ ಧಕ್ಕೆ ಬಂದಾಗ ಕಾಂಗ್ರೆಸ್‌ ಪಕ್ಷ ಹೋರಾಟ ಮಾಡುವುದಕ್ಕೆ ಎಂದೂ ಸಿದ್ಧವಾಗಿರುತ್ತದೆ ಎಂದು ಘೋಷಿಸಿದರು. ಯುವ ಕಾಂಗ್ರೆಸ್‌ ಮುಖಂಡರಾದ ಮಹಮದ್‌ ಆರೀಫ್‌, ನೇರಳೇಕರ್‌, ಶಾಮ್‌ ಜೊತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next