Advertisement

ಯಕ್ಷ ಕಾವ್ಯ ಹಾಡಿತು…ಆಜೇರು ಹುಡುಗಿಯು ಅಜೇಯ ಭಾಗವತಿಕೆ

02:10 PM May 20, 2017 | |

ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. 400ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕಾವ್ಯಶ್ರೀ ಹಾಡುಗಾರಿಕೆ ಮಾಡಿದ್ದಾಳೆ…

Advertisement

ಯಕ್ಷಗಾನದಲ್ಲಿ ಭಾಗವತಿಕೆ ಪ್ರಮುಖ ಭಾಗ. ಇಲ್ಲಿ ಸುಶ್ರಾವ್ಯವಾಗಿ ಹಾಡುವಿಕೆಯ ಮೇಲೆ ಯಕ್ಷಗಾನ, ಪ್ರಸಂಗದ ಯಶಸ್ಸು ನಿಂತಿರುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಅಂದರೆ ಅದರಲ್ಲಿ ಬಹುತೇಕ ಪುರುಷರೇ ಎನ್ನಬಹುದು. ಇಲ್ಲೊಬ್ಬಳು ಹುಡುಗಿ ಇದ್ದಾಳೆ, ಕಾವ್ಯಶ್ರೀ ನಾಯಕ್‌ ಆಜೇರು. ಈಕೆಯ ಭಾಗವತಿಕೆಯನ್ನು ನೀವೂ ಒಮ್ಮೆ ಕೇಳಬೇಕು…

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆಜೇರು ಎಂಬ ಕುಗ್ರಾಮದ ಸಾಮಾನ್ಯ ಕೃಷಿಕ ಕುಟುಂಬದ ಶ್ರೀಪತಿ ನಾಯಕ್‌ ಮತ್ತು ಉಮಾ ನಾಯಕ್‌ ದಂಪತಿಯ ಜೇಷ್ಠ ಪುತ್ರಿ ಈಕೆ. ತಂದೆಯವರು ಮಾಂಬಾಡಿ ಸುಬ್ರಮಣ್ಯ ಭಟ್‌ ಅವರಲ್ಲಿ ಭಾಗವತಿಕೆ ಕಲಿಯುತ್ತಿದ್ದಾಗ ಪುಟಾಣಿ ಕಾವ್ಯಶ್ರೀ ಕುತೂಹಲಕ್ಕಾಗಿ ಅವರೊಂದಿಗೆ ಹೋಗುತ್ತಿದ್ದಳು. ಭಾಗವತಿಗೆ ಕಲಿಕೆಗಾಗಿ ಬಹಳಷ್ಟು ಮಕ್ಕಳು ಮಾಂಬಾಡಿಯವರಲ್ಲಿಗೆ ಬಂದರೂ ಈಕೆ ಮನೆಯ ಹೊರಗಡೆಯೇ ಕುಳಿತು ಹಾಡುಗಳನ್ನು ಕೇಳಿಸಿಕೊಳ್ಳುತ್ತಾ ತನ್ನಷ್ಟಕ್ಕೆ ತಾನೇ ಅವುಗಳನ್ನು ಗುನುಗುತ್ತಿದ್ದಳು. ಇದನ್ನು ಗಮನಿಸಿದ ಮಾಂಬಾಡಿಯವರು “ನೀನೇಕೆ ಒಮ್ಮೆ ಹಾಡಬಾರದು?’ ಎಂದು ತಮಾಷೆಗೆ ಹೇಳಿದ್ದೇ, ಈಕೆ 5ನೇ ತರಗತಿಗೇ ಭಾಗವತಿಗೆ ಕಲಿಯಲು ಪ್ರೇರಣೆಯಾಯಿತು.

ಯಕ್ಷಗಾನದಲ್ಲಿ ಪ್ರೇಕ್ಷಕರು ಪಾತ್ರಧಾರಿಯನ್ನು ಹೇಗೆ ಗಮನಿಸುತ್ತಾರೋ ಅದೇ ರೀತಿ ಚಂಡೆ, ಮದ್ದಲೆ ವಾದಕರನ್ನು ಮತ್ತು ಭಾಗವತರನ್ನು ವಿಶೇಷವಾಗಿ ಗಮನಿಸುತ್ತಿರುತ್ತಾರೆ. ಭಾಗವತರು ಪ್ರತೀಕ್ಷಣವೂ ಅರ್ಥಗಾರರ ಅಥವಾ ಪಾತ್ರಧಾರಿಗಳ ಸಂಭಾಷಣೆಯೆಡೆಗೆ ಗಮನ ನೀಡುತ್ತಲೇ ಇರಬೇಕು. ಇಲ್ಲವಾದಲ್ಲಿ ಅರ್ಥಗಾರಿಕೆ ಹಾಗೂ ಹಾಡು ಒಂದಕ್ಕೊಂದು ಸಂಬಂಧವಿಲ್ಲವಾಗಿ ಇಡೀ ಪ್ರಸಂಗವೇ ನೀರಸವಾಗಬಹುದು. ಅಂಥ ಹಾದಿಯಲ್ಲಿ ಕಾವ್ಯಶ್ರೀ ದಿಟ್ಟವಾಗಿ ಸಾಗುತ್ತಿದ್ದಾಳೆ.

400ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕಾವ್ಯಶ್ರೀ ಹಾಡುಗಾರಿಕೆ ಮಾಡಿದ್ದಾಳೆ. ಭಾಗವತಿಗೆಯ ಕ್ಷೇತ್ರವನ್ನು ಆಯ್ದುಕೊಂಡು ಯಕ್ಷಗಾನದಲ್ಲಿ ಹೆಸರು ಮಾಡಿದವರು ಕೆಲವೇ ಕೆಲವರು. ನವರಸಗಳಿಗೆ ಜೀವತುಂಬಿ ಹಾಡುವವರಷ್ಟೇ ಇಲ್ಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಲು ಸಾಧ್ಯ. 

Advertisement

ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. ರೌದ್ರ, ಭೀಭತ್ಸ, ಶಾಂತ, ಶೃಂಗಾರ, ಹಾಸ್ಯ, ಕರುಣ, ವೀರ, ಭಯಾನಕ, ಅದ್ಭುತ ರಸಗಳನ್ನು ಸಂದರ್ಭಕನುಗುಣವಾಗಿ, ಆಕರ್ಷಕವಾಗಿ ಪ್ರಸ್ತುತಪಡಿಸುತ್ತಾಳೆ. ಹಗಲು ಶಾಲೆಯಲ್ಲಿ ಕಲಿಕೆ, ರಾತ್ರಿ ಯಕ್ಷಗಾನ ಕಲಾ ಸೇವೆಯನ್ನು ಮಾಡಿಕೊಂಡು ಬಂದಿರುವ ಈಕೆ ಸ್ನಾತಕೋತ್ತರ ಪದವಿಯನ್ನು ಪಡೆದಾಕೆ. ಉಪನ್ಯಾಸಕಿಯಾಗಿ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗದಲ್ಲಿ ತೊಡಗುವ ಬದಲು, ಕಲೆಯನ್ನು ಅಪ್ಪಿಕೊಂಡು ಯಶಸ್ಸು ಕಂಡಿದ್ದಾಳೆ. ತೆಂಕು ತಿಟ್ಟಿನಲ್ಲಿ ಈಕೆ ಪ್ರವೀಣೆ.

ರಾತ್ರಿ ಇಡೀ ನಿದ್ದೆ ಬಿಟ್ಟು ಯಕ್ಷಗಾನದಲ್ಲಿ ತೊಡಗುವುದು, ಹಗಲಲ್ಲಿ ಸ್ವಲ್ಪ ನಿದ್ದೆ, ಮತ್ತೆ ತಾಳಮದ್ದಲೆ, ಮತ್ತೆ ಪುನಃ ರಾತ್ರಿಯ ಪ್ರದರ್ಶನಕ್ಕೆ ತಯಾರಾಗುವ ಈಕೆಯ ಛಾತಿ ಅಭಿನಂದನಾರ್ಹ. ಅಂದಹಾಗೆ, ಈಕೆ ಭಾಷಾ ಶುದ್ಧತೆಯಿಂದಲೂ ಸೆಳೆಯವ ಹುಡುಗಿ. ಮೂಲ್ಕಿಯ ಭವ್ಯಶ್ರೀ ಮಕ್ಕಳ ಮೇಳ, ಸುಳ್ಯದ ಮಕ್ಕಳ ಮೇಳ, ವಿಟ್ಲದ ಮಾಣಿಲ ಮೇಳದಲ್ಲಿ ಪ್ರದರ್ಶನ ಕೊಟ್ಟಿರುವ ಕಾವ್ಯಶ್ರೀ, ಕಟೀಲು, ಸುಂಕದಕಟ್ಟೆ, ಪೆರ್ಡೂರು ಮತ್ತು ಬಾಚುಕೆರೆ ಮೇಳಗಳಲ್ಲೂ ಭಾಗವತಿಕೆಯಲ್ಲಿ ಪಾಲ್ಗೊಂಡಿದ್ದಾಳೆ.
 
ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next