Advertisement

ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ

09:24 PM Oct 16, 2022 | Team Udayavani |

ಶ್ರೀನಗರ:“ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ. ಎಲ್ಲ ಕಾಶ್ಮೀರಿ ಪಂಡಿತರನ್ನೂ ಭಯೋತ್ಪಾದಕರು ಕೊಂದು ಹಾಕುತ್ತಾರೆ.

Advertisement

ಹೀಗೆಂದು ಹೇಳಿದ್ದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಶನಿವಾರ ಉಗ್ರರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಪುರನ್‌ ಕೃಷನ್‌ ಭಟ್‌ ಅವರ ಸಹೋದರಿ ನೀಲಂ.

56 ವರ್ಷದ ಕೃಷನ್‌ ಅವರ ಅಂತ್ಯಕ್ರಿಯೆ ಭಾನುವಾರ ಜಮ್ಮುವಿನಲ್ಲಿ ನೆರವೇರಿದೆ. ಈ ವೇಳೆ ಭಾವೋದ್ವೇಗಕ್ಕೊಳಗಾಗಿ ಮಾತನಾಡಿದ ನೀಲಂ, “ನಮ್ಮ ನೆರೆಹೊರೆಯಲ್ಲಿರುವ ಮುಸ್ಲಿಮರಿಗೂ ನಮ್ಮನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಉಗ್ರರು ಎಲ್ಲ ಕಾಶ್ಮೀರಿ ಪಂಡಿತರನ್ನು ಕೊಲ್ಲಲು ಹೊಂಚು ಹಾಕಿ ಕಾಯುತ್ತಿದ್ದಾರೆ.

ಹೀಗಾಗಿ, ಎಲ್ಲರೂ ಕಣಿವೆ ಬಿಟ್ಟು ಹೋಗಿ ಎಂದು ನಾನು ಬೇಡಿಕೊಳ್ಳುತ್ತೇನೆ’ ಎಂದು ಗೋಗರೆದಿದ್ದಾರೆ. ಕೃಷನ್‌ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ, ಸ್ಥಳೀಯ ಮುಸ್ಲಿಂ ನೆರೆಹೊರೆಯವರೂ ಅವರ ಮನೆಗೆ ಧಾವಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಇಸ್ಲಾಂಗೆ ವಿರುದ್ಧ:
ಇದೇ ವೇಳೆ, ಕೃಷನ್‌ ಅವರ ಹತ್ಯೆಯು ಭೀಕರ ಹಾಗೂ ಖಂಡನೀಯ ಎಂದು ಹೇಳಿರುವ ಕಣಿವೆಯ ಮುಸ್ಲಿಂ ಧಾರ್ಮಿಕ ಮುಖಂಡರು, “ಇಂಥ ಕೃತ್ಯಗಳು ಇಸ್ಲಾಂನ ಮೂಲ ಆಶಯಗಳಿಗೆ ವಿರುದ್ಧವಾದದ್ದು’ ಎಂದು ಹೇಳಿದ್ದಾರೆ. ಒಬ್ಬ ಅಮಾಯಕನನ್ನು ಕೊಲ್ಲುವುದು ಇಡೀ ಮಾನವತೆಯನ್ನೇ ಹತ್ಯೆ ಮಾಡಿದ್ದಕ್ಕೆ ಸಮ. ಇಂಥದ್ದನ್ನು ಇಸ್ಲಾಂ ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಇಮಾಮ್‌ಗಳು ಮತ್ತು ಖತೀಬರು ಹೇಳಿದ್ದಾರೆ.

Advertisement

ಕಾಶ್ಮೀರದಲ್ಲಿ ಮೊಂಬತ್ತಿ ಮೆರವಣಿಗೆ
ಭಾನುವಾರ ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಲ್ಲಿ ಕೃಷನ್‌ ಹತ್ಯೆ ಖಂಡಿಸಿ ಮೊಂಬತ್ತಿ ಮೆರವಣಿಗೆಗಳು ನಡೆದಿವೆ. ಶ್ರೀನಗರ, ಬಾರಾಮುಲ್ಲಾ, ಬಂಡಿಪೋರಾ, ಅನಂತ್‌ನಾಗ್‌, ಕುಲ್ಗಾಂ, ಕುಪ್ವಾರಾ, ಗಂದೇರ್‌ಬಾಲ್‌ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ಮೌನ ಪ್ರತಿಭಟನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next