Advertisement

ಕಸಾಪ ಕಟ್ಟಿಸಿದ್ದು ಸರ್‌ಎಂವಿ, ಮಹಾರಾಜರಲ್ಲ

06:00 AM Feb 11, 2018 | Team Udayavani |

ಮುಂಬೈ: ಮೈಸೂರಿನ ಅರಸನಾಗಿದ್ದ ಟಿಪ್ಪುಸುಲ್ತಾನ್‌ ಕನ್ನಡದ ವಿರೋಧಿಯಾಗಿದ್ದ. ಆತ ಕನ್ನಡದ ಬದಲಿಗೆ ಪಾರ್ಸಿ ಭಾಷೆಯನ್ನು ಬೆಳಿಸಿದ ಎಂದು  ಪ್ರಸಿದ್ಧ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು. ಇದಷ್ಟೇ ಅಲ್ಲ, ಕಸಾಪ ರಚಿಸಿದ್ದು ಮೈಸೂರು ಮಹಾರಾಜರಲ್ಲ, ಸರ್‌ ಎಂ.ವಿಶ್ವೇಶ್ವರಯ್ಯ ಎಂದೂ ಹೇಳಿದರು.

Advertisement

ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಹಳೆಯ ಮೈಸೂರು ಪ್ರಾಂತ್ಯದಲ್ಲಿ ಟಿಪ್ಪು ಆಳ್ವಿಕೆ ಸಂದರ್ಭದಲ್ಲಿ ಎಲ್ಲ ಆಡಳಿತವೂ ಪರ್ಷಿಯನ್‌ನಲ್ಲೇ ನಡೆಯುತ್ತಿತ್ತು. ಬ್ರಿಟಿಷರು ಬಂದ ಮೇಲೆ ಇದು ಇಂಗ್ಲಿಷ್‌ಗೆ ಬದಲಾಯಿತು. ಹಾಗಾಗಿ, ಟಿಪ್ಪು ಕನ್ನಡ ವಿರೋಧಿಯಾಗಿದ್ದ ಎಂದು ಹೇಳಿದರು.

ಹಳೆಯ ಮೈಸೂರು ಭಾಗದಲ್ಲಿ ಅಂದು ಜನಪ್ರತಿನಿಧಿಗಳಿಂದ ಕೂಡಿದ ವಿಧಾನ ಪರಿಷತ್ತು, ಆಡಳಿತ ನಡೆಸಲು ಕನ್ನಡ ಬಳಕೆಯಲ್ಲಿ ಇರಲಿಲ್ಲ. ಅಂದಿನ ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಮರಾಠಿ ಮಿ]ತ ಕನ್ನಡ ಮಾತನಾಡುತ್ತಿದ್ದರು. ಅದಕ್ಕಾಗಿ ಡಿವಿಜಿ ಕನ್ನಡ ಬಳಕೆಗೆ ಒಂದು ಸಮಿತಿ ರಚಿಸಲು ಸೂಚಿಸಿದರು. ಅವರ ಸೂಚನೆಯಂತೆ ವಿಶ್ವೇಶ್ವರಯ್ಯ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಎಚ್‌.ವಿ. ನಂಜುಂಡಯ್ಯ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಿದರು. 

ಜಯಚಾಮರಾಜೇಂದ್ರ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ತನ್ನು ಮಹಾರಾಜರು ಕಟ್ಟಿಸಿದ್ದರು ಎಂಬ ತಪ್ಪು ಅಭಿಪ್ರಾಯ ಇದೆ. ಅದನ್ನು ಬದಲಾಯಿಸಬೇಕು ಎಂದು ಭೈರಪ್ಪ ಅಭಿಪ್ರಾಯಪಟ್ಟರು.ಅದೇ ರೀತಿ, ಮೈಸೂರು ವಿವಿಯನ್ನೂ ವಿಶ್ವೇಶ್ವರಯ್ಯ ಆರಂಭಿಸಿದ್ದು, ಅಲ್ಲಿಯೂ ವಿಶ್ವೇಶ್ವರಯ್ಯ ಅವರ ಹೆಸರು ಮರೆಮಾಚಲಾಗಿದೆ. ಕೆಲವು ಲೇಖಕರು ವಿಶ್ವೇಶ್ವರಯ್ಯ ಮೀಸಲಾತಿ ವಿರೋಧಿಯಾಗಿದ್ದರು ಎಂದು ಹೇಳುತ್ತಾರೆ. ಅವರು ಮೀಸಲಾತಿ ವಿರೋಧಿಯಾಗಿರಲಿಲ್ಲ. ವಿಶ್ವೇಶ್ವರಯ್ಯ ಮಹಾರಾಷ್ಟ್ರದಲ್ಲಿ ಓದಿ ಇಲ್ಲಿಯೇ ಉದ್ಯೋಗ ಮಾಡಿ ಹೆಸರು ಮಾಡಿದ ನಂತರ ಮೈಸೂರು ಅರಸರು ಅವರನ್ನು ಕರೆಸಿಕೊಂಡರು. ಕೆಲಸ ಮಾಡಿದವರನ್ನು ನೆನೆಯದಿದ್ದರೆ ನಮಗೆ ನಷ್ಟವಾಗಲಿದೆ ಎಂದು ಹೇಳಿದರು.

Advertisement

ವಿಶ್ವೇಶ್ವರಯ್ಯ ಕರ್ನಾಟಕದ ದೊಡ್ಡ ಐಕಾನ್‌ ಗುಜರಾತಿನವರು ಅವರ ಫೋಟೋ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಅವರ ಪ್ರತಿಮೆ ಇದೆ. ಕರ್ನಾಟಕದಲ್ಲಿ ಅವರು ಮಾಡಿದ ಕೆಲಸ ಮರೆಮಾಚಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಯಾರು ಕಟ್ಟಿದ್ದಾರೆ ಎನ್ನುವುದು ಜನತೆಗೆ ತಿಳಿಸುವ ಪ್ರಯತ್ನ ಆಗಬೇಕು ಎಂದು ಹೇಳಿದರು.

ಉತ್ಸವಮೂರ್ತಿ ಊರಾಡಿದಷ್ಟು
ಸಾಹಿತಿಗಳ ಬರವಣಿಗೆ ಬಗ್ಗೆ ಮಾತನಾಡಿದ ಡಾ.ಎಸ್‌.ಎಲ್‌. ಭೈರಪ್ಪ, “ಉತ್ಸವ ಮೂರ್ತಿ ಊರಾಡಿದಷ್ಟು ಮೂಲ ದೇವರ ಮಹಿಮೆ ಕಡಿಮೆಯಾಗುತ್ತದೆ’ ಎಂದರು. ತಾವು ಬಾಲಕರಿದ್ದಾಗ ತಮ್ಮ ಊರಿನಲ್ಲಿ ಗಂಗಾಧರೇಶ್ವರನ ದೇವರ ಎರಡು ದೇವಸ್ಥಾನಗಳಿದ್ದವು. ಮೂಲ ದೇವರು ಕಲ್ಲಿನ ಮೂರ್ತಿಯಾಗುತ್ತು. ಅದು ಊರಿನ ಹೊರಗೆ ಇತ್ತು. ಆ ದೇವಸ್ಥಾನಕ್ಕೆ ಬಾಗಿಲು ಇರಲಿಲ್ಲ. ಅದರಂತೆ ಊರಲ್ಲಿ ಉತ್ಸವಮೂರ್ತಿ ಮಾಡಿ ಅದಕ್ಕೆ ಬೆಳ್ಳಿ ಬಂಗಾರದಿಂದ ಅಲಂಕಾರ ಮಾಡುತ್ತಿದ್ದರು. ಅಲ್ಲದೇ ಪ್ರತಿ ವರ್ಷ ಏಳು ಊರಿಂದ ಹಣ ಸಂಗ್ರಹಿಸಿ ಅದ್ದೂರಿ ಜಾತ್ರೆ ಮಾಡುತ್ತಿದ್ದರು.

ಕೆಲವು ಯುವಕರು ಜಾತ್ರೆಯನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಲು ಇನ್ನಷ್ಟು ಹಳ್ಳಿಗಳಿಂದ ಹಣ ಸಂಗ್ರಹಿಸುವ ಯೋಜನೆ ಹಾಕಿದ್ದರು. ಅದಕ್ಕೆ ಮಠದ ಸ್ವಾಮೀಜಿ ಬೇಡ ಎಂದು ನಿರಾಕರಿಸಿ ಉತ್ಸವಮೂರ್ತಿ ಊರಾಡಿದರೆ ಮೂಲ ದೇವರ ಮಹಿಮೆ ಕಡಿಮೆಯಾಗುತ್ತದೆ ಎಂದು ಹೆಳಿದ್ದರು. ಅದರ ಅರ್ಥ ಕೇಳಿದರೆ ಸ್ವಾಮೀಜಿ, “ದೊಡ್ಡವನಾದ ಮೇಲೆ ನಿನಗೆ ತಿಳಿಯುತ್ತದೆ’ ಎಂದು ಹೇಳಿದ್ದರು.

ತಾವು ಕಾಲೇಜು ಮುಗಿಸಿ ದೆಹಲಿ, ಮುಂಬೈನಲ್ಲಿ ಕೆಲಸ ಮಾಡಿ ವಾಪಸ್‌ ಮೈಸೂರಿಗೆ ಬಂದಾಗ, ಎಲ್ಲ ಊರುಗಳಲ್ಲಿಯೂ ತಮ್ಮನ್ನು ಭಾಷಣ ಮಾಡಲು ಕರೆದು, ಮೈಸೂರು ಪೇಟ ತೊಡಿಸಿ ಗೌರವಿಸುವರು. ಅದು ಖುಷಿ ಕೊಟ್ಟು ಬರೆಯುವುದು ಬಿಟ್ಟು ಬರೀ ಭಾಷಣಗಳಿಗೆ ಹೋಗತೊಡಗಿದೆ. ಆಗ ಸಣ್ಣವನಿದ್ದಾಗ ನಮ್ಮೂರಿನ ಸ್ವಾಮೀಜಿ ಹೇಳಿದ ಮಾತು ನೆನಪಾಯಿತು.

ನಾನು ಬರೆಯುವುದನ್ನು ಬಿಟ್ಟು ಬರೀ ಭಾಷಣ ಮಾಡಿದ್ದು ನನ್ನೊಳಗಿನ ಮೂಲ ಬರವಣಿಗೆ ಮಾಯವಾಗತೊಡಗಿತು ಎನಿಸಿತು. ಆ ಮೇಲೆ ಭಾಷಣಗಳಿಗೆ ಹೋಗಬಾರದು ಎಂದು ನಿರ್ಧರಿಸಿದ್ದೆ ಎಂದು ಹೇಳಿ ಸಮ್ಮೇಳನದಲ್ಲಿ ಪಾಲ್ಗೊಂಡವರೆಲ್ಲ ನಗೆಗಡಲಲ್ಲಿ ಮುಳುಗುವಂತೆ ಮಾಡಿದರು. ಸೃಜನಶೀಲ ಬರಹಗಾರ ಭಾಷಣ ಮಾಡಬಾರದು. ಭಾಷಣ ಮಾಡಿದರೆ, ಅವನ ಸೃಜನಶೀಲತೆ ಸತ್ತು ಹೋಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಬರಹಗಾರ ಒಂದೆಡೆ ನಿಂತರೆ ಅವನ ಸಾಹಿತ್ಯಕ್ಕೆ ಜಡ್ಡು ಹಿಡಿಯುತ್ತದೆ. ರಾಜ್ಯದಲ್ಲಿಯೇ ಇದ್ದು, ಬರೆದ ಸಾಹಿತಿಗಳ ಸಾಹಿತ್ಯ ಹಾಗೂ ರಾಜ್ಯದ ಹೊರಗೆ ತಿರುಗಾಡಿ ಬರೆದ ಸಾಹಿತ್ಯಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ನಾನು ಮೊದಲೆರಡು ಕಾದಂಬರಿಗಳನ್ನು ರಾಜ್ಯದಲ್ಲಿದ್ದುಕೊಂಡು ಬರೆದೆ, ಆಮೇಲೆ ಕಾದಂಬರಿಗೆ ವಿಷಯವೇ ಇಲ್ಲದಂತಾಯಿತು.

ಮುಂಬೈ, ದೆಹಲಿ ಹಾಗೂ ಗುಜರಾತಿಗೆ ಹೋಗಿ ಬಂದನಂತರ ಸಾಹಿತ್ಯಕ್ಕೆ ಸಾಕಷ್ಟು ಮಾಹಿತಿಗಳು ದೊರೆತವು. ನನ್ನ ಸಾಹಿತ್ಯವನ್ನು ದೇಶದ ಯಾವುದೇ ಭಾಗದ ಜನರು ಓದಿದವರು ನನ್ನ ಕಥೆ ಎನ್ನುವಂತೆ ನನ್ನ ಸಾಹಿತ್ಯ ಮೂಡಿಬಂದಿದೆ ಎಂದು ಹೇಳಿದರು.

ಆಲಸಿಗಳಿಗೆ ಜಾಗವಿಲ್ಲ
ಮುಂಬೈಯಲ್ಲಿ ಸಮಗ್ರ ಭಾರತದ ಚಿತ್ರಣ ಸಿಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿ, ದೇಶದ ತೆರಿಗೆದಾರರಿಂದ ಬೆಳೆದರೆ, ಮುಂಬೈ ಶ್ರಮಿಕರಿಂದ ನಿರ್ಮಾಣವಾಗಿದೆ. ಸಾಹಿತಿಗಳು ಹೊರನಾಡ ಕನ್ನಡಿಗರಾದಷ್ಟು ಹೆಚ್ಚು ಬೆಳೆಯುತ್ತೇವೆ. ರಾಜ್ಯದಲ್ಲಿರುವ ಸಾಹಿತಿಗಳು, ರಾಜಕಾರಣಿಗಳ ಹಾಗೆಯೇ  ತಮ್ಮ ಹಳ್ಳಿ ಮತ್ತು ಜಾತಿಯನ್ನು ಬಿಟ್ಟು ಹೊರಗೆ ಬರುವುದಿಲ್ಲ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

ಹೊರನಾಡ ಕನ್ನಡಿಗರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ ಒಂದು ವಿಶ್ವವಾಗಿದೆ. ಮುಂಬೈಯಲ್ಲಿ ಜಾತಿ ಮುಖ್ಯವಾಗುವುದಿಲ್ಲ. ಕೆಲಸ ಮುಖ್ಯವಾಗಿತ್ತು ಎಂದರು. ಮುಂಬಯಿಗೆ ಕರಾವಳಿ ಕನ್ನಡಿಗರು ಹೆಚ್ಚಾಗಿದ್ದಾರೆ. ಅವರು ದುಡಿಯಲು ಬಂದವರು, ನೌಕರಿಗಾಗಿ ಬಂದವರಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ದುಡಿಯುವವರಲ್ಲಿ ಆತ್ಮಾಭಿಮಾನ ಇದೆ. ದುಡಿಯಲು ಬಂದವರು ತಮ್ಮ ವ್ಯಾಪಾರದ ಮೂಲಕ ನಾಡಿನ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಾರೆ.

ಗುಜರಾತಿಗಳೂ ವ್ಯಾಪಾರಿ ಮನೋಭಾವದವರಾಗಿದ್ದಾರೆ. ಅವರು ಲಂಡನ್‌, ನ್ಯೂಯಾರ್ಕ್‌ನಲ್ಲಿಯೂ ತಮ್ಮ ಮೂರನೇ ತಲೆಮಾರಿನವರೂ ಮಾತೃಭಾಷೆ ಜೀವಂತವಾಗಿಟ್ಟಿದ್ದಾರೆ. ಕನ್ನಡಿಗರು ಮಾತ್ರ ರಾಜ್ಯ ಬಿಟ್ಟು ಬಂದ ಮೇಲೆ ಮನೆಯಲ್ಲಿಯೂ ಮಕ್ಕಳೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದುಡಿಯುವವರಿಗೆ ಮುಂಬಯಿ  ಮಾದರಿಯಾಗಬೇಕು. ನಾವು ಕಷ್ಟ ಪಟ್ಟು ದುಡಿಯದಿದ್ದರೆ ಬೆಳೆಯುವುದಿಲ್ಲ. ಕಷ್ಟ ಪಡುವುದರಲ್ಲಿ ಕರಾವಳಿ ಜನರು ಮಾದರಿಯಾಗಿದ್ದಾರೆ. ಅಲ್ಲಿ ಉತ್ತಮ ಶಿಕ್ಷ$ಣ ಮತ್ತು ಶಿಸ್ತು ಬದ್ದ ಜೀವನ ಕಲಿಸಿಕೊಡಲಾಗುತ್ತದೆ. ಒಳನಾಡು ಕರ್ನಾಟಕದಲ್ಲಿ ಗಲಾಟೆ ಮತ್ತು ರಾಜಕೀಯ ಮಾಡುವುದರಲ್ಲಿಯೇ ಕಳೆಯುತ್ತೇವೆ ಎಂದರು.

ಮನು ಬಳಿಗಾರರ ಸ್ಪಷ್ಟನೆ
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯನ್ನು ಮಹಾರಾಜರ ಬದಲು ವಿಶ್ವೇಶ್ವರಯ್ಯ ಸ್ಥಾಪನೆ ಮಾಡಿದ್ದು ಜನತೆಗೆ ತಿಳಿಸಬೇಕೆಂದು ಎಸ್‌.ಎಲ್‌. ಭೈರಪ್ಪ ಹೇಳಿರುವುದಕ್ಕೆ ಸಭೆಯಲ್ಲಿಯೇ ಸ್ಪಷ್ಟನೆ ನೀಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ, ವಿಶ್ವೇಶ್ವರಯ್ಯ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಮಹಾರಾಜರಿಗೆ ಪ್ರಸ್ತಾವನೆ ನೀಡಿರಬಹುದು. ಅದನ್ನು ಮಹಾರಾಜರು ಒಪ್ಪದಿದ್ದರೆ ಅದು ಸ್ಥಾಪನೆಯಾಗುತ್ತಿರಲಿಲ್ಲ ಎಂದರು.  ಯಾವ ಸರ್ಕಾರದ ಅವಧಿಯಲ್ಲಿ ಯೋಜನೆ ಜಾರಿಗೆ ಬರುತ್ತದೆಯೋ ಅವರ ಹೆಸರನ್ನು ಹೇಳುವುದು ರೂಢಿ, ಮಹಾರಾಜರ ಜತೆಗೆ ವಿಶ್ವೇಶ್ವರಯ್ಯ ಅವರೂ ಇದರ ರೂವಾರಿಗಳು ಎಂದು ಹೇಳಬಹುದು ಎಂದೂ ಅವರು ಸ್ಪಷ್ಟಪಡಿಸಿದರು.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next