Advertisement

Karnataka; ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಧನ ಕೇಳಿದ ರಾಜ್ಯ ಸರ್ಕಾರ

07:48 PM Oct 25, 2023 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷ ಖಾರಿಫ್‌ ಹಂಗಾಮಿನಲ್ಲಿ ಬರದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಬುಧವಾರ ಕೇಂದ್ರದಿಂದ 17,901.73 ಕೋಟಿ ರೂ. ಬರ ಪರಿಹಾರ ಧನ ಕೇಳಿದೆ.

Advertisement

ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಮೂವರು ಸಚಿವರು ಬರ ನಿರ್ವಹಣೆ ಕುರಿತ ಕರ್ನಾಟಕ ಸಂಪುಟ ಉಪ ಸಮಿತಿಯ ಸದಸ್ಯರೂ ಆಗಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, “ನಾವು ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಒಟ್ಟು 17, 901.73 ಕೋಟಿ ರೂ.ಗಳ ಬರ ಪರಿಹಾರವನ್ನು ಕೋರಿದ್ದೇವೆ. ಆದಷ್ಟು ಬೇಗ ಹಣ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 22 ರ ವೇಳೆಗೆ, ಒಟ್ಟಾರೆಯಾಗಿ ರಾಜ್ಯವು ಶೇ 26 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ, ಇದರಿಂದಾಗಿ ಖಾರಿಫ್ ಹಂಗಾಮಿನಲ್ಲಿ ಸುಮಾರು 45.55 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ 216 ತಾಲೂಕುಗಳನ್ನು ಬರ ಎಂದು ಘೋಷಿಸಲಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದರು.

17,901 ಕೋಟಿ ಅಂದಾಜು ಬರ ಪರಿಹಾರ ನಿಧಿಯಲ್ಲಿ, 90 ದಿನಗಳಿಂದ ಬರಗಾಲದಿಂದ ಜೀವನೋಪಾಯಕ್ಕೆ ತೀವ್ರವಾಗಿ ತೊಂದರೆಗೀಡಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರವು ಮೊದಲ ಬಾರಿಗೆ 12,577 ಕೋಟಿ ರೂಪಾಯಿಗಳನ್ನು ಅನಪೇಕ್ಷಿತ ಪರಿಹಾರವಾಗಿ ಬೇಡಿಕೆ ಇಟ್ಟಿದೆ ಎಂದು ಕಂದಾಯ ಸಚಿವರು ಹೇಳಿದರು.

Advertisement

ಈ ವರ್ಷ ಖಾರಿಫ್ ಹಂಗಾಮಿನಲ್ಲಿ (ಜುಲೈ-ಜೂನ್) ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ 4414.29 ಕೋಟಿ ರೂ., ಪಶು ಆಹಾರಕ್ಕಾಗಿ ರೂ 355 ಕೋಟಿ ಮತ್ತು ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ನೆರವು ನೀಡಲು 554 ಕೋಟಿ ರೂ. ಕೇಳಲಾಗಿದೆ ಎಂದರು.

ಪರಿಹಾರ ನಿಧಿ ಮಂಜೂರು ಮಾಡುವಾಗ ರಾಜ್ಯದ ಜನಸಂಖ್ಯೆಯ ಶೇ.70 ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಇತ್ತೀಚಿನ ಸಂಖ್ಯೆಯನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next