Advertisement

ಕರ್ನಾಟಕ ಅರಣ್ಯ ಪ್ರದೇಶ ಶೇ. 33ಕ್ಕೆ ಹೆಚ್ಚಿಸಲು ಯತ್ನ 

05:21 PM Aug 19, 2018 | |

ನರೇಗಲ್ಲ: ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ವನ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಸಕ್ತ ಆಯವ್ಯಯದಲ್ಲಿ ಹಸಿರು ಕರ್ನಾಟಕ ಆಂದೋಲನವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ ಎಂದು ರೋಣ ಉಪ ವಲಯ ಅರಣ್ಯಾಧಿಕಾರಿ ಎಸ್‌. ರಂಗಣ್ಣವರ ಹೇಳಿದರು. ಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆ ಗದಗ, ಪಟ್ಟಣ ಪಂಚಾಯತ್‌ ನರೇಗಲ್‌, ಗ್ರೀನ್‌ ಆರ್ಮಿ ತಂಡ, ಸರಕಾರಿ ಪ್ರೌಢಶಾಲೆ, ಪಿಯು ಕಾಲೇಜು ಹಾಗೂ ಪದವಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಹಸಿರು ಕರ್ನಾಟಕ ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಇಲಾಖೆಯಿಂದ ಪೂರೈಸಲಾಗುತ್ತದೆ. ಈ ಕಾರ್ಯಕ್ರಮದಡಿ ಸಣ್ಣಪುಟ್ಟ ಬೋಳು ಗುಡ್ಡಗಳು, ಗೋಮಾಳಗಳು, ಸರಕಾರಿ ಜಮೀನುಗಳು, ಸರಕಾರಿ ಇಲಾಖೆಯ ಕಚೇರಿ ಬಯಲು ಆವರಣ, ಶಾಲಾ-ಕಾಲೇಜು ಆವರಣ, ರೈತರ ಜಮೀನು, ಉದ್ಯಾನವನ ಮತ್ತು ಹಂತ ಹಂತವಾಗಿ ಮನೆಗಳ ಅಂಗಳಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು, ಶಾಲಾ ಕಾಲೇಜುಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಬೇಕಾಗಿದೆ. ಕರ್ನಾಟಕ ಅರಣ್ಯ ಪ್ರದೇಶವನ್ನು ಶೇ. 33ಕ್ಕೆ ಹೆಚ್ಚಿಸಲು ಹಾಗೂ ಗದಗ ಜಿಲ್ಲೆಯಲ್ಲಿ ಕೇವಲ ಶೇ. 7ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇದ್ದು, ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾಗಿದೆ ಎಂದರು.

ಪದವಿ ಪ್ರಾಚಾರ್ಯ ಬಸವರಾಜ ಬಳಗಾನೂರಮಠ ಮಾತನಾಡಿ, ಮಾನವ ಸಂಕುಲದ ಅಭಿವೃದ್ಧಿಗೆ ಪರಿಸರ ಉಳಿಸಿ ಬೆಳೆಸುವುದು ಅವಶ್ಯವಾಗಿದೆ. ನಾವಿಂದು ಕೇರಳ, ಕೊಡಗು, ಹಾಸನದಲ್ಲಿನ ಅತೀವೃಷ್ಟಿಯಿಂದಾಗಿ ಆಗುತ್ತಿರುವ ಜಲಪ್ರಳಯ, ಭೂಕುಸಿತ ಹಾಗೂ ಉತ್ತರ ಕರ್ನಾಟಕದಲ್ಲಿನ ಭೀಕರ ಬರಗಾಲ, ಅಂತರ್ಜಲ ಕುಸಿತ, ಹೆಚ್ಚುತ್ತಿರುವ ತಾಪಮಾನ ಪರಿಸರದ ನಾಶಕ್ಕೆ ಕಾರಣವಾಗಿದೆ. ಆದ್ದರಿಂದ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದರು.

ಪಪಂ ಆರೋಗ್ಯ ನಿರೀಕ್ಷಕ ಎನ್‌.ಎಂ. ಹಾದಿಮನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಿಡ ಮರ ಬೆಳೆಸಿ ಹಸಿರೀಕರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈ ಅಭಿಯಾನದ ಮೂಲದ ಆಗಬೇಕಿದೆ. ಶಾಲಾ ಶಿಕ್ಷಕರಿಗೆ ಈ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಸಿ ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಪಿಯು ಪ್ರಾಚಾರ್ಯ ಎನ್‌.ಎಂ. ಪವಾಡಿಗೌಡರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್‌.ಬಿ. ನಿಡಗುಂದಿ, ಎಸ್‌.ಸಿ.ಗುಳಗೊಣ್ಣವರ, ಎಸ್‌.ಎನ್‌. ಚಕ್ರಸಾಲಿ, ಕೆ. ಶಿವುಕುಮಾರ, ಕೆ.ಎಚ್‌. ಅಂಜನಮೂರ್ತಿ, ಶಿವುಕುಮಾರ ಹಿರೆಹಾಳ, ಶಿವು ಕೊಪ್ಪದ, ಸಂತೋಷ ಮಣ್ಣೋಡ್ಡರ, ನಿಂಗಪ್ಪ ಮಡಿವಾಳ, ಎಂ.ಎಚ್‌. ಕಾತರಕಿ ಹಾಗೂ ಶಾಲಾ ಕಾಲೇಜಿನ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಗ್ರೀನ್‌ ಆರ್ಮಿ ತಂಡದ ಸದಸ್ಯರು ಇದ್ದರು.

Advertisement

ಹಸಿರು ಕರ್ನಾಟಕ ಅಭಿಯಾನದಡಿ ನರೇಗಲ್ಲ ಪಟ್ಟಣದಲ್ಲಿ 900 ಸಸಿಗಳನ್ನು ಸರ್ಕಾರಿ ಶಾಲಾ ಕಾಲೇಜಿನ ಆವರಣದಲ್ಲಿ, ಹಿರೇಕೆರೆ ದಂಡೆಯ ಮೇಲೆ, ಎಸ್‌.ಡಬ್ಲೂ ಲೇಯವುಟ್‌ ಇತರೆ ಖಾಲಿ ಜಾಗಗಳಲ್ಲಿ ನೆಡಲಾಗುತ್ತದೆ. ಇಲಾಖೆಯವರು ಒದಗಿಸುವ ಸಸಿಗಳನ್ನು ರೈತರು ನೆಟ್ಟು ಪೋಷಿಸಿದ್ದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹ ಧನವನ್ನೂ ನೀಡಲಾಗುವುದು.
ಎಸ್‌. ರಂಗಣ್ಣವರ,
ಉಪವಲಯ ಅರಣ್ಯಾಧಿಕಾರಿ ರೋಣ

Advertisement

Udayavani is now on Telegram. Click here to join our channel and stay updated with the latest news.

Next