Advertisement

ಕಲಾಸೇವೆಗೆ ಸಂದ ಗೌರವ 

04:52 PM Dec 10, 2018 | Team Udayavani |

ಬನಹಟ್ಟಿ: ಸಂಬಾಳ ವಾದನವನ್ನು ಉಸಿರಾಗಿಸಿಕೊಂಡಿರುವ ನಾವಲಗಿ ಗ್ರಾಮದ ಮಲ್ಲಪ್ಪ ಬಾಳಪ್ಪ ಹೂಗಾರ ಅವರಿಗೆ ರಾಜ್ಯ ಸರ್ಕಾರದ ಕೊಡಮಾಡುವ 2018ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 47 ವರ್ಷಗಳಿಂದ ಸಂಬಾಳ ವಾದನದ ಕಲೆಯಲ್ಲಿ ತೊಡಗಿಸಿಕೊಂಡಿರುವ ಮಲ್ಲಪ್ಪ ಹೂಗಾರ ಅವರಿಗೆ ತಂದೆ ಬಾಳಪ್ಪ ಅವರಿಂದ ಬಳುವಳಿಯಾಗಿ ಬಂದ ಕಲೆಯನ್ನು ಈಗಲೂ ಮುಂದುವರಿಸಿಕೊಂಡು ಬರುವ ಜೊತೆಗೆ ಅದನ್ನು ಮುಂದಿನ ಪೀಳಿಗೆಗೆ ಕಲಿಸುತ್ತಿದ್ದಾರೆ.

Advertisement

ಹದಿನೈದನೇ ವಯಸ್ಸಿನಲ್ಲಿ ಸಂಬಾಳ ವಾದನ ನುಡಿಸಲು ಆರಂಭಿಸಿದ ಅವರು, ತಮ್ಮ 62 ವಯಸ್ಸಿನಲ್ಲಿ ಸಂಬಾಳವನ್ನು ಹೆಗಲಿಗೆ ಏರಿಸಿ ನುಡಿಸಲು ನಿಂತರೆ ಅದರಲ್ಲಿ ತಲ್ಲೀನರಾಗುತ್ತಾರೆ ಮತ್ತು ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ. ಈ ವಯಸ್ಸಿನಲ್ಲಿಯೂ ಅವರ ಸಾಂಬಳ ವಾದನ ಕೇಳಲು ಜನ ಸಾಗವೇ ಸೇರುತ್ತದೆ. ಸಂಬಾಳ ವಾದನವೇ ಅವರ ಉಸಿರು ಮತ್ತು ಬದುಕಾಗಿದೆ. ವರ್ಷದ ವಿವಿಧ ಕಡೆಗಳಲ್ಲಿ ಸಂಬಾಳ ವಾದನದ ಕಲೆ ಪ್ರದರ್ಶನ ಮಾಡುತ್ತಿದ್ದಾರೆ.

ಬನಹಟ್ಟಿಯಲ್ಲಿ 1980ರಲ್ಲಿ ನಡೆದ 9ನೇ ಅಖಿಲ ಭಾರತ ಕರ್ನಾಟಕ ಜಾನಪದ ಸಮ್ಮೇಳನ, ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ, ಕೇರಳದ ಕೊಚ್ಚಿ, ಶ್ರೀಶೈಲದ ಮಲ್ಲಿಕಾರ್ಜುನ ದೇವರ ಜಾತ್ರೆ, ಕರಾವಳಿ ಉತ್ಸವ, ಮೈಸೂರು ದಸರಾ, ನಾಡಿನ ಪ್ರಮುಖ ಉತ್ಸವ, ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಮೆರವಣಿಗೆಯ ಸಂದರ್ಭದಲ್ಲಿ, ಕೃಷ್ಣ ದೇವರಾಯನ ಐದು ನೂರನೇ ವರ್ಷಚಾರಣೆ ಸಂದರ್ಭದಲ್ಲಿ ಕಲೆ ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದಿದ್ದಾರೆ. 1986ರಲ್ಲಿ ದೆಹಲಿಯಲ್ಲಿ ನಡೆದ ಅಪನಾ ಉತ್ಸವ ಕಾರ್ಯಕ್ರಮದಲ್ಲಿ ಅಂದಿನ ರಾಷ್ಟ್ರಪತಿ ಡಾ| ಶಂಕರ ದಯಾಳ ಶರ್ಮಾ, ಮಾಜಿ ಪ್ರಧಾನಿ ರಾಜೀವ ಗಾಂಧಿ, ದಿ| ಪಿ.ವಿ. ನರಸಿಂಹರಾವ್‌, ಕಾಂಗ್ರೆಸ್‌ ಮುಖಂಡೆ ಸೋನಿಯಾ ಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜಿ.ಎಚ್‌. ಪಟೇಲ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳ ಎದುರು ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಗಾನಯೋಗಿ ಪುಟ್ಟರಾಜ ಗವಾಯಿಗಳು, ಇಂಚಲದ ಶಿವಾನಂದ ಭಾರತಿ, ಗದುಗಿನ ಲಿ| ತೋಂಟದ ಸಿದ್ಧಲಿಂಗ ಸ್ವಾಮೀಜಿ, ಧಾರವಾಡದ ಮೃತ್ಯುಂಜಯ ಸ್ವಾಮೀಜಿ, ಇಳಕಲ್‌ದ ಲಿ| ಡಾ| ವಿಜಯಮಹಾಂತೇಶ ಸ್ವಾಮೀಜಿ ಸೇರಿದಂತೆ ನಾಡಿನ ಹಲವಾರು ಸ್ವಾಮೀಜಿಗಳ ಮುಂದೆ ಪ್ರದರ್ಶನ ಮಾಡಿದ್ದಾರೆ. ಸಂಬಾಳ ವಾದನದ ಕಲೆ ಮೆಚ್ಚಿ ಸಂಬಾಳ ಭಾಸ್ಕರ ಮತ್ತು ಬ್ರಹ್ಮಶ್ರೀ ಪ್ರಶಸ್ತಿಗಳು ಬಂದಿವೆ. ಮಲ್ಲಪ್ಪ ಹೂಗಾರ ಅವರಿಗೆ ಪ್ರಶಸ್ತಿ ಬಂದಿರುವುದು ನಿಜಕ್ಕೂ ಪ್ರಶಸ್ತಿ ಮೌಲ್ಯ ಹೆಚ್ಚಾಗಿದೆ.

ಮನೆಯಲ್ಲಿಯ ಪರಂಪರೆಯನ್ನು ಮಲ್ಲಪ್ಪ ಮುಂದುವರಿಸಿಕೊಂಡು ಬಂದಿದ್ದಾರೆ. ಕಲೆಗಾಗಿ ತಮ್ಮ ಜೀವನ ಸಮರ್ಪಣೆ ಮಾಡಿಕೊಂಡಿದ್ದಾರೆ. ಬಡತನದಲ್ಲಿಯೇ ಸಂಬಾಳ ವಾದನ ನುಡಿಸುತ್ತ ಇಂದು ಸಂಬಾಳ ವಾದನದ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಅವರೊಬ್ಬ ಸಂಬಾಳ ವಾದನದ ಶ್ರೇಷ್ಠ ಕಲಾವಿದರು.
 ಮಲ್ಲಪ್ಪ ಗಣಿ, ಜಾನಪದ ಕಲಾವಿದ

Advertisement

ಮಲ್ಲಪ್ಪ ಅವರು ನಾಡಿನ ಶ್ರೇಷ್ಠ ಸಂಬಾಳ ಕಲಾವಿದರಲ್ಲಿ ಒಬ್ಬರು, ಬಾಲ್ಯದಿಂದಲೇ ಸಂಬಾಳ ಕಲೆ ಕರಗತ ಮಾಡಿಕೊಂಡವರು. ನಾಡಿನ ಗ್ರಾಮ, ನಗರ, ಖಾಸಗಿ ಕಾರ್ಯಕ್ರಮ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ವಿಮರ್ಶಕರು ಹಾಗೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರು ಎಲ್ಲ ತಾಳಗಳಲ್ಲಿ ಪ್ರವೀಣರಾಗಿದ್ದಾರೆ.
 ಸಿದ್ಧರಾಜ ಪೂಜಾರಿ, ಹಿರಿಯ ಸಾಹಿತಿ

ಪ್ರಶಸ್ತಿ ದೊರಕಿರುವುದು ಖುಷಿ ತಂದಿದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸರಕಾರ ಕೈಗೊಂಡರೆ ಕಲೆ ಮತ್ತು ಕಲಾವಿದರು ಇನ್ನಷ್ಟು ಶ್ರೀಮಂತರಾಗುತ್ತಾರೆ.
. ಮಲ್ಲಪ್ಪ ಬಾಳಪ್ಪ ಹೂಗಾರ
  ಪ್ರಶಸ್ತಿ ವಿಜೇತರು.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next