Advertisement

ಬೀದರ್‌ನಲ್ಲಿ ಲೋಕಸಮರಕ್ಕೆ ರಾಹುಲ್‌ ಕಹಳೆ

06:00 AM Aug 14, 2018 | Team Udayavani |

ಬೀದರ್‌: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಲೋಕಸಭೆ ಚುನಾವಣೆಗೆ ರಾಜ್ಯದಿಂದ ರಣಕಹಳೆ ಮೊಳಗಿಸಿದ್ದಾರೆ. ಮೋದಿ ವಿರುದ್ಧ ರಫೇಲ್‌ ಡೀಲ್‌ ಫಿರಂಗಿ ಮುಂದಿ ಟ್ಟು ತಾಕತ್ತಿದ್ದರೆ ನನ್ನ ಜತೆ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಎಸೆದಿದ್ದಾರೆ.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ನ ಜನಧ್ವನಿ ಕಾರ್ಯಕಮದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರಾಹುಲ್‌ ಗಾಂಧಿ, ರಫೇಲ್‌ ಯುದ್ಧ ವಿಮಾನ ತಯಾರಿಕೆ ಸಂಬಂಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಾರಿ ಭ್ರಷ್ಟಾಚಾರ ಎಸಗಿ ಈಗ ಮೌನಕ್ಕೆ ಶರಣಾಗಿದೆ. ಸದನದಲ್ಲಿ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡಿಲ್ಲ. ತಪ್ಪು ಎಸಗಿದ್ದರಿಂದಲೇ ನನ್ನ ಜತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ಪ್ರತಿಷ್ಠಿತ, ಕರ್ನಾಟಕದ ಹಿಂದುಸ್ಥಾನ ಏರೋನಾಟಿಕಲ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ರಫೆಲ್‌ ಯುದ್ಧ ವಿಮಾನ ತಯಾರಿಕೆಗೆ ಹೆಸರುವಾಸಿಯಾದ ಸಂಸ್ಥೆ. ಸುಮಾರು 70 ವರ್ಷಗಳ ಇತಿಹಾಸ ಇರುವ ಈ ಸಂಸ್ಥೆ ತಯಾರಿಸುತ್ತಿದ್ದ ವಿಮಾನಗಳ ಗುತ್ತಿಗೆ ರದ್ದುಗೊಳಿಸಿದ ಮೋದಿ ಸರ್ಕಾರ ಉದ್ಯಮಿ ಅನಿಲ ಅಂಬಾನಿ ಸಹಭಾಗಿತ್ವದ ಫ್ರಾನ್ಸ್‌ ಮೂಲದ ಕಂಪನಿಗೆ ಗುತ್ತಿಗೆ ನೀಡಿ ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ. ಗುತ್ತಿಗೆ ನೀಡುವ 10 ದಿನಗಳ ಮುಂಚೆ ಹುಟ್ಟಿಕೊಂಡ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದ ಯುವಕರ ನೌಕರಿಗೆ ಕತ್ತರಿ ಬಿದ್ದಿದೆ. ಎಚ್‌ಎಎಲ್‌ನಲ್ಲಿ ವಿಮಾನಗಳು ತಯಾರಾಗುತ್ತಿದ್ದರೆ ಸಾವಿರಾರು ಏರೋನಾಟಿಕಲ್‌ ಎಂಜಿನಿಯರ್‌ಗಳಿಗೆ ಉದ್ಯೋಗ ದೊರೆಯುತ್ತಿತ್ತು. ಈ ಕುರಿತು ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದರು.

ಹಿಂದಿನ ಯುಪಿಎ ಸರ್ಕಾರದ ಅವ ಧಿಯಲ್ಲಿ ಎಚ್‌ಎಎಲ್‌ ಪ್ರತಿ ವಿಮಾನ ತಯಾರಿಸಲು 526 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು. 124 ವಿಮಾನ ಖರೀದಿಸಲು ಗುತ್ತಿಗೆ ನೀಡಲಾಗಿತ್ತು. ಆದರೆ, ಗುತ್ತಿಗೆ ರದ್ದುಗೊಳಿಸಿ ಅಂಬಾನಿ ಸಹಭಾಗಿತ್ವದ ಕಂಪನಿಗೆ ನೀಡಿದ್ದು, ಅದೇ ವಿಮಾನಕ್ಕೆ 1,600 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ದೇಶದ ಅತಿ ದೊಡ್ಡ ಹಗರಣ. ಈ ಬಗ್ಗೆ ನಾನು ಲೋಕಸಭೆಯಲ್ಲಿ ಸುದೀರ್ಘ‌ವಾಗಿ ಭಾಷಣ ಮಾಡಿ ಈ ಒಪ್ಪಂದದ ಹಿಂದಿರುವ ಮರ್ಮವಾದರೂ ಏನು ಎಂದು ಪರಿಪರಿಯಾಗಿ ಕೇಳಿದರೂ ಪ್ರಧಾನಿ ಮೋದಿ ಮಾತ್ರ ತುಟಿ ಬಿಚ್ಚಿಲ್ಲ ಎಂದರು.

ಇತ್ತೀಚೆಗೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರ ನ್‌ ಅವರನ್ನು ಭೇಟಿಯಾಗಿದ್ದೆ. ರಫೇಲ್‌ ವಿಮಾನ ಒಪ್ಪಂದದ ಬಗ್ಗೆ ಚರ್ಚಿಸಿದ್ದು, ಈ ಒಪ್ಪಂದದ ವಿಷಯವನ್ನು ಬಹಿರಂಗಗೊಳಿಸಲು ಏನಾದರೂ ಅಡ್ಡಿಗಳಿವೆಯೇ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಹಾಗೇನಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನು ಸಹ ಈ ಒಪ್ಪಂದದ ವಿವರ ತಿಳಿಯಬಹುದಾಗಿದೆ ಎಂದು ಸ್ಪಷ್ಟಪಡಿಸಿದರು. ಇದಾದ ಬಳಿಕವೂ ಈ ಒಪ್ಪಂದದ ವಿವರ ಬಹಿರಂಗಗೊಳಿಸುವಂತೆ ನಾನು ಪ್ರಧಾನಿ ಹಾಗೂ ರಕ್ಷಣಾ ಸಚಿವರನ್ನು ಕೇಳುತ್ತಲೇ ಇದ್ದೇನೆ. ಆದರೆ, ಅವರಿಂದ ಬರೀ ಮೌನ ಮುಂದುವರಿದಿದೆ. ನನಗೆ ಗೊತ್ತಿದೆ. ಅವರು ಬಾಯಿ ಬಿಚ್ಚುವುದಿಲ್ಲ. ಏಕೆಂದರೆ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಪ್ಪು ಮಾಡದವರು ಕಣ್ಣು ಕಣ್ಣು ಸೇರಿಸಿ ಮಾತಾಡುತ್ತಾರೆ. ಆದರೆ ನಾನು ಲೋಕಸಭೆಯಲ್ಲಿ ಪ್ರಧಾನಿಗಳ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದರೂ ಪ್ರಧಾನಿ ಮಾತ್ರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರದೆ ಹಿಂದೆ, ಮುಂದೆ, ಅತ್ತ-ಇತ್ತ ನೋಡುತ್ತಿದ್ದರು. ಏಕೆಂದರೆ ಅವರು ದೇಶದ ಹಣ ಕೊಳ್ಳೆ ಹೊಡೆಯುವ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ಅವರಲ್ಲೂ ಅಳುಕಿದೆ ಎಂದರು.

Advertisement

ಸುಳ್ಳು ಹೇಳುವವರ ಸರ್ಕಾರವನ್ನು ಕಳೆದ ನಾಲ್ಕೂವರೆ ವರ್ಷಗಳಿಂದ ದೇಶದ ಜನರು ಸಹಿಸಿಕೊಂಡು ಬಂದಿದ್ದಾರೆ. 2019ರಲ್ಲಿ ಹೊಸ ಸರ್ಕಾರದ ಅಗತ್ಯವಿದೆ. ನುಡಿದಂತೆ ನಡೆಯುವ ಸರ್ಕಾರ ಬೇಕಿದೆ. ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಮೂಲಕ ಸಣ್ಣ ವ್ಯಾಪಾರಿಗಳನ್ನು ಸದೆಬಡಿಯುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಇಂಥ ತೆರಿಗೆಯಿಂದ ದೊಡ್ಡ ದೊಡ್ಡ ಉದ್ಯಮಿಗಳಿಗಷ್ಟೇ ಲಾಭವಾಗುತ್ತಿದೆ. ಸಣ್ಣ ವ್ಯಾಪಾರಿಗಳು ಉದ್ಯೋಗ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಂಗ್ರೆಸ್‌ ಸರ್ಕಾರ ಅ ಧಿಕಾರಕ್ಕೆ ಬಂದರೆ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಸಂಪೂರ್ಣ ರದ್ದು ಮಾಡಿ ಸಾಧಾರಣ ತೆರಿಗೆ ನೀತಿ ಜಾರಿಗೆ ತರಲಾಗುವುದು. ಆ ಮೂಲಕ ಸಣ್ಣ ವ್ಯಾಪಾರಿಗಳನ್ನು ಮತ್ತೆ ಹಳಿಗೆ ತರುತ್ತೇವೆ ಎಂದರು.

ಕೇಳಲು ಮಾತ್ರ ಇಂಪು:
ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ನಾರಾ ಕೇಳಲು ಮಾತ್ರ ಇಂಪಾಗಿದೆ. ಆದರೆ, ವಾಸ್ತವದಲ್ಲಿ ಏನಾಗುತ್ತಿದೆ? ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಿಹಾರದಲ್ಲಿ ಬಿಜೆಪಿಗೆ ಸೇರಿದ ನಾಯಕನೊಬ್ಬ ಹಲವಾರು ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇವರಿಗೆಲ್ಲ ಕಾನೂನಿನ ಭಯವಿಲ್ಲವೇ? ಇಂಥ ಘಟನೆಗಳು ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಮೋದಿ ಮಾತ್ರ ಬಾಯಿ ಬಿಚ್ಚಿ ಇಂತಹ ಘಟನೆಗಳಿಗೆಲ್ಲ ಪ್ರತಿಕ್ರಿಯೆ ನೀಡುವುದಿಲ್ಲ. ಚಿಕ್ಕ ಮಕ್ಕಳ ಮೇಲೆ ಕೂಡ ಅತ್ಯಾಚಾರ ನಡೆಯುತ್ತಿರುವುದು ನೋವು ತಂದಿದೆ ಎಂದರು.

15 ಶ್ರೀಮಂತರಿಗೆ ಮಾತ್ರ ಪ್ರಧಾನಿ!
ಪ್ರಧಾನಿ ಮೋದಿ ದೇಶದ 15 ಶ್ರೀಮಂತರಿಗೆ ಮಾತ್ರ ಪ್ರಧಾನಿಗಳಾಗಿದ್ದಾರೆ. ಹಾಗಾಗಿ ಮೋದಿ ಸರ್ಕಾರದ ನೀತಿಗಳು ಉದ್ಯಮಿಗಳ ಪರವಾಗಿರುತ್ತವೆ. ಯಾವತ್ತೂ ಬಡವರ, ಹಿಂದುಳಿದವರ, ದಲಿತರ ಪರವಾದ ಯಾವ ಸುಧಾರಣೆ ಕ್ರಮಗಳನ್ನು ಸಹ ಮೋದಿ ಸರ್ಕಾರ ಮಾಡಿಲ್ಲ. ದೇಶದ ಶ್ರೀಮಂತ ಉದ್ಯಮಿಗಳ 2.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವ ಮೋದಿ ಸರ್ಕಾರಕ್ಕೆ ದೇಶದ ಅನ್ನದಾತನ ಸಾಲ ಮನ್ನಾ ಮಾಡಲು ಆಗುತ್ತಿಲ್ಲ. ಇದನ್ನು ದೇಶದ ಜನರು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಯುವ ಜನರು ಸರ್ಕಾರದ ಕಾರ್ಯವೈಖರಿ ಗಮನಿಸಬೇಕು ಎಂದು ರಾಹುಲ್‌ ಹೇಳಿದರು.

ಸ್ಥಾವರ ಲಿಂಗ ಕಾಣಿಕೆ
ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಅವರಿಗೆ ತಲೆಗೆ ರುಮಾಲು ಸುತ್ತಿ ಸನ್ಮಾನಿಸಲಾಯಿತು. ನೆನಪಿನ ಕಾಣಿಕೆಯಾಗಿ ಸ್ಥಾವರ ಲಿಂಗ ನೀಡಿ ಗೌರವಿಸಲಾಯಿತು.

ಕೇಂದ್ರ ರೈತರ ಸಾಲ ಮನ್ನಾ ಮಾಡಲಿ
ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ? ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕೂಡ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದರೆ ಕೂಡಲೇ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಿ ತೋರಿಸಲಿ. ಕೃಷಿ ಉತ್ಪನಗಳಿಗೆ ಬೆಂಬಲ ಬೆಲೆ(ಎಂಎಸ್‌ಪಿ) ಹೆಸರಿನಲ್ಲಿ ಕೇಂದ್ರ ಸರ್ಕಾರ ಒಟ್ಟಾರೆ 10 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ, ಕರ್ನಾಟಕ ರಾಜ್ಯ ಒಂದೇ ಕೇಂದ್ರದ ಎಂಎಸ್‌ಪಿಯ ಮೂರು ಪಟ್ಟು ಹಣ ರೈತರ ಸಾಲ ಮನ್ನಾ ಮಾಡಿದೆ.
– ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next