Advertisement

ಕಾಪು ಗ್ರಾ.ಪಂ ಚುನಾವಣೆ: ಅಂತಿಮ ಹಂತದ ಸಿದ್ಧತೆ, ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ

07:41 PM Dec 26, 2020 | Mithun PG |

ಕಾಪು: ನೂತನ ತಾಲೂಕು ರಚನೆಯಾದ ಬಳಿಕ ನಡೆಯಲಿರುವ ಮೊತ್ತ ಮೊದಲ ಗ್ರಾಮ ಪಂಚಾಯತ್ ಚುನಾವಣೆಗೆ ಕಾಪು ತಾಲೂಕು ಸಜ್ಜಾಗಿದ್ದು, ದಂಡತೀರ್ಥ ವಿದ್ಯಾ ಸಂಸ್ಥೆಗಳ ಆವರಣದಲ್ಲಿನ ಮಸ್ಟರಿಂಗ್ ಕೇಂದ್ರದಲ್ಲಿ ಅಂತಿಮ ಹಂತದ ಸಿದ್ದತೆಗಳು ನಡೆದವು.

Advertisement

ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್  ಮಾತನಾಡಿ, ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಗ್ರಾಮ ಪಂಚಾಯತ್‌ಗೆ ಪ್ರಥಮ ಹಂತದಲ್ಲಿ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಮೂರು ತಾಲೂಕುಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ನಾಲ್ಕು ಲಕ್ಷಕ್ಕೂ ಮಿಕ್ಕಿದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು ಕಾಪು ತಾಲೂಕಿನಲ್ಲಿ 290, ಕುಂದಾಪುರ ತಾಲೂಕಿನಲ್ಲಿ 554 ಮತ್ತು ಕಾರ್ಕಳ ತಾಲೂಕಿನಲ್ಲಿ 399 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಕಾಪು-10, ಕುಂದಾಪುರ 24 ಮತ್ತು ಕಾರ್ಕಳ 31 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 2708 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಹೇಳಿದರು.

ಕೋವಿಡ್ ರೋಗಿಗಳಿಗೆ ಸಂಜೆ 4 ಗಂಟೆಗೆ ಮತದಾನಕ್ಕೆ ಅವಕಾಶ:

ಕೋವಿಡ್ ರೋಗಿಗಳಿಗೆ ಸಂಜೆ 4 ಗಂಟೆಯ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಗೆ ತುತ್ತಾಗಿರುವ ಮತದಾರ, ಅಭ್ಯರ್ಥಿಗಳು ಇದ್ದಲ್ಲಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸೂಚಿಸಲಾಗಿದ್ದು, ರವಿವಾರ ಬೆಳಗ್ಗೆಯವರೆಗೂ ಮಾಹಿತಿ ನೀಡಲು ಅವಕಾಶವಿದೆ. ಈ ಬಗ್ಗೆ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದಲ್ಲಿ ಮತದಾನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಭಯ ಮುಕ್ತವಾಗಿ ಜನ ಮತದಾನದಲ್ಲಿ ಭಾಗವಹಿಸಬೇಕು. ಮತಗಟ್ಟೆ ಸಿಬ್ಬಂದಿ ಹಾಗೂ ಮತದಾರರು ಕೂಡಾ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ನೀಡಿದರು.

Advertisement

ಕಾಪು ತಹಶೀಲ್ದಾರ್ ರಶ್ಮಿ ಅವರು ಮಸ್ಟರಿಂಗ್ ಕೇಂದ್ರದ ಬಗ್ಗೆ ಮಾಹಿತಿ ನೀಡಿ, ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಥಮ ಬಾರಿಗೆ ಕಾಪು ತಾಲೂಕು ಕೇಂದ್ರದಲ್ಲೇ ಮಸ್ಟರ್‍ಟಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರವನ್ನು ಸಿದ್ಧಪಡಿಸಲಾಗಿದೆ. ಕಾಪು ತಾಲೂಕಿನಲ್ಲಿ 16 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯಲಿದ್ದು, 650 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 140 ಮತಗಟ್ಟೆಗಳಿದ್ದು, 11 ಅತೀ ಸೂಕ್ಷ್ಮ, 52 ಸೂಕ್ಷ್ಮ ಮತಗಟ್ಟೆಗಳಿವೆ. 627 ಪೋಲಿಂಗ್ ಸಿಬಂದಿಗಳು, 150ಕ್ಕೂ ಅಧಿಕ ಮಂದಿ ಪೊಲೀಸ್ ಸಿಬಂದಿಗಳು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದರು.

ಚುನಾವಣಾ ವೀಕ್ಷಕ ದಿನೇಶ್, ನೋಡಲ್ ಅಧಿಕಾರಿ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಉಪತಹಶೀಲ್ದಾರ್ ಅಶೋಕ್, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ ಅವರು ಮಸ್ಟರಿಂಗ್ ಕೇಂದ್ರದಲ್ಲಿ ಉಪಸ್ಥಿತರಿದ್ದು, ಮತಗಟ್ಟೆಗೆ ತೆರಳುವ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಸೂಕ್ತ ತರಬೇತಿ ನೀಡಿ, ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next