Advertisement

ಕಾನ್ಶಿರಾಮ್‌ ಆದರ್ಶ ಪಾಲಿಸಿ

07:38 AM Mar 16, 2019 | |

ದೇವನಹಳ್ಳಿ: ಬಹುಜನ ಸಮಾಜ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಕಾನ್ಶಿರಾಮ್‌ ಅವರು ಹೇಳಿದಂತೆ ಮಾತಿಗಿಂತ ಕೆಲಸ ಮಾಡಿ ತೋರಿಸು ಆಗ ಆ ಕೆಲಸಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂಬ ಮಾತನ್ನು ಬಿಎಸ್‌ಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲಿಸಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಎನ್‌.ಮಹೇಶ್‌ ತಿಳಿಸಿದರು. 

Advertisement

ನಗರದ ಗಿರಿಯಮ್ಮ ವೃತ್ತದಲ್ಲಿರುವ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬಹುಜನ ಸಮಾಜ ಪಾರ್ಟಿ ಸಂಸ್ಥಾಪಕ ಕಾನ್ಶಿರಾಮ್‌ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಹುಜನ ದಿವಸ್‌ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 

ಮತದಾನದ ಅರಿವು: ಕಾರ್ಯಕರ್ತರು ಇತಿಹಾಸ ಮತ್ತು ನಾಯಕರ ಕೊಡುಗೆಗಳನ್ನು ತಿಳಿದುಕೊಳ್ಳಬೇಕು. ಕಾನ್ಶಿರಾಮ್‌ ಅವರು ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶಕ್ತಿಯಾಗಿದ್ದರು. ಕಾನ್ಶಿರಾಮ್‌ ಅವರು ನಾಲ್ಕು ಸಾವಿರ ಮೀಟರ್‌ ದೂರ ಸೈಕಲ್‌ನಲ್ಲಿ ತೆರಳಿ ಗ್ರಾಮ ಗ್ರಾಮಗಳಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದ್ದರು. ಹಣಕ್ಕೆ ತಮ್ಮ ಮತವನ್ನು ಮಾರಿಕೊಳ್ಳಬೇಡಿ ಎನ್ನುವ ಮೂಲಕ ಜಾಗೃತಿ ಮೂಡಿಸಿದವರು. ಡಾ. ಬಿ.ಆರ್‌.ಅಂಬೇಡ್ಕರ್‌ ನಿಮಗೆ ಮತದಾನದ ಹಕ್ಕು ನೀಡಿದ್ದಾರೆ. ಮತದಾನದ ಹಕ್ಕು ಪವಿತ್ರವಾಗಿದೆ. ಮತದಾನದಿಂದ ಇಡೀ ಸಮಾಜದ ಬದಲಾವಣೆ ಸಾಧ್ಯ ಎಂಬುದು ಅವರ ವಾದವಾಗಿತ್ತು ಎಂದು ಹೇಳಿದರು.

ಬಡವರಿಗೆ ಕೈ ಏನು ಮಾಡಿದೆ?: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬಡವರ ಉದ್ಧಾರ ಕಾಂಗ್ರೆಸ್‌ನಿಂದ ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ಬಡವರಿಗೆ ಯೋಜನೆಗಳನ್ನು ಏಕೆ ರೂಪಿಸಲಿಲ್ಲ. ಇನ್ನೂ ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ ಹೊರತು ಮೇಲ್ಮಟ್ಟಕ್ಕೆ ಹೋಗಿಲ್ಲ. ಬಡವರ ಸಂಕಷ್ಟ ಹಾಗೂ ಸಮಸ್ಯೆ ಗಳು ಇನ್ನೂ ಪರಿಹಾರವಾಗಿಲ್ಲ ಎಂದರು.

ಬಿಜೆಪಿ ಶ್ರೀಮಂತರ ಪಕ್ಷ: ಬಿಜೆಪಿ ಶ್ರೀಮಂತರ ಪಕ್ಷವಾಗಿದ್ದು, ಉದ್ಯಮಿಗಳು, ಬಂಡವಾಳಶಾಹಿಗಳು ಇತರೆ ವರ್ಗದ ಜನರಿಗೆ ಅನುಕೂಲ ಮಾಡುತ್ತಿದೆ. ರೈತರ ಹಾಗೂ ಬಡವರ ಬಗ್ಗೆ ಕಾಳಜಿಯಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಡಾ.ಸಿ.ಎಸ್‌.ದ್ವಾರಕನಾಥ್‌ರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಬೇಕು. 17 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದ ಎಸ್‌ಸಿ, ಎಸ್‌ಟಿ ನಿರ್ಣಾಯಕ ಮತಗಳು ಇಲ್ಲಿವೆ. ಹಾಗಾಗಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. 

Advertisement

ಬಿಎಸ್‌ಪಿ ಬೆಂಬಲಿಸಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ದ್ವಾರಕನಾಥ್‌ ಮಾತನಾಡಿ, ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಈ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ತಮ್ಮನ್ನು ಬಂಬಲಿಸಬೇಕು. ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಸಿಗಬೇಕು. ಜಲವಂತ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಕಾರ್ಯಕರ್ತರು ಪ್ರತಿ ಬೂತ್‌ನಲ್ಲೂ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

ಈ ವೇಳೆ ರಾಜ್ಯ ಬಿಎಸ್‌ಪಿ ಅಧ್ಯಕ್ಷ ಪ್ರೊ.ಹರಿರಾಮ್‌, ಜಿಲ್ಲಾ ಉಸ್ತುವಾರಿ ನಂದಿಗುಂದ ಪಿ.ವೆಂಕಟೇಶ್‌, ರಾಜ್ಯ ಬಿಎಸ್‌ಪಿ ಕಾರ್ಯದರ್ಶಿಗಳಾದ ಈರಣ್ಣ ಮೌರ್ಯ, ಭಾಸ್ಕರ್‌ ಶೆಟ್ಟಿ , ಪುರುಷೋತಮ್‌, ಕೆ.ಸಿ.ನಾಗರಾಜ್‌, ಬಿಎಸ್‌ಪಿ ಜಿಲ್ಲಾಧ್ಯಕ್ಷ ಮುನಿಕೃಷ್ಣ,  ತಾಲೂಕು ಅಧ್ಯಕ್ಷ ಬಂಗಾರಪ್ಪ, ಜಿಲ್ಲಾ ಖಜಾಂಚಿ ಕೋರಮಂಗಲ ನರಸಿಂಹರಾಜು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜಿಲ್ಲಾ ಸಂಯೋಜಕ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ದಾಸ್‌, ಜಿಲ್ಲಾ ಬಿಎಸ್‌ಪಿ ಮಹಿಳಾ ಘಟಕದ ಅಧ್ಯಕ್ಷೆ ರಮಾದೇವಿ, ಮುಖಂಡ ಡಿಆರ್‌ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next